ಎನ್ನ ಕಾಲೇ ಕಂಬ, ದೇಹವೇ ದೇಗುಲ, ತಮಗೆ ತಾವೇ ಪೂಜೆ ಮಾಡಿಕೊಂಡ ಚೈತ್ರಾ ಕುಂದಾಪುರ...!
ಹಿಂದೂತ್ವವನ್ನು ಕಣ ಕಣದಲ್ಲಿ ತುಂಬಿಕೊಂಡು, ಕರಾವಳಿಯ ಫೈರ್ ಬ್ರ್ಯಾಂಡ್ ಎಂದೇ ಕರುನಾಡಿನೆಲ್ಲೆಡೆ ಹೆಸರುವಾಸಿಯಾದವರು ಚೈತ್ರಾ ಕುಂದಾಪುರ. ಮಂಗಳೂರಿನ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪಡೆದು ಆ ನಂತರ ನಿರೂಪಕಿಯಾಗಿ ಕೆಲಸವನ್ನು ಮಾಡಿದ ಚೈತ್ರಾ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮತಿಯ ಸದಸ್ಯೆ ಕೂಡ ಆಗಿದ್ದವರು. ಇನ್ನೂ ಪ್ರೇಮ ಪಾಶ ಎಂದ ಕೃತಿಯ ಲೇಖಕಿ ಕೂಡ ಹೌದು ಚೈತ್ರಾ ಕುಂದಾಪುರ.
ಇಂಥಾ ಚೈತ್ರಾ ಕುಂದಾಪುರ ಸದ್ಯ ಬಿಗ್ ಬಾಸ್ ಮನೆಯಲ್ಲಿ ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ ಎಂಬಂತೆ ತಮಗೆ ತಾವೇ ಪೂಜೆಯನ್ನು ಮಾಡಿಕೊಂಡಿದ್ದಾರೆ. ಸಹಜವಾಗಿ ಚೈತ್ರಾ ಕುಂದಾಪುರ ಅವರ ಈ ವರ್ತನೆ ಕಂಡು ಬಿಗ್ ಬಾಸ್ ಮನೆಯಲ್ಲಿರುವ ಸ್ಫರ್ಧಿಗಳು ಬೆಚ್ಚಿ ಬಿದ್ದಿದ್ದಾರೆ. ಅದರಲ್ಲಿಯೂ ಶಿಶಿರ್ ತಬ್ಬಿಬ್ಬಾಗಿ ನಿಂತುಕೊಂಡಿದ್ದಾರೆ.

ಸದ್ಯಕ್ಕೆ ಚೈತ್ರಾ ಕುಂದಾಪುರ ಅವರ ಈ ಪೂಜೆ ಟ್ರೋಲಿಗರಿಗೆ ಆಹಾರವೂ ಆಗಿದೆ. ಈ ತರಹದ ಪೂಜೆ ಹಿಂದೆ ಒಳ್ಳೆಯ ಉದ್ದೇಶ ಇದೆಯಾ ಎನ್ನುವ ಚರ್ಚೆಯನ್ನು ಹುಟ್ಟು ಹಾಕಿದೆ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಕೂಡ ನಡೆಯುತ್ತಿದೆ. ಕೆಲವರು ಇದ್ಯಾವ ತರ ಪೂಜೆ ಎಂದು ಪ್ರಶ್ನೆಯನ್ನು ಕೇಳಿದ್ದರೆ, ಇನ್ನೂ ಕೆಲವರು ಉಪೇಂದ್ರ ಅಭಿನಯಿಸಿ ನಿರ್ದೇಶಿಸಿದ ಎ ಚಿತ್ರವನ್ನು ನೆನಪು ಮಾಡಿಕೊಂಡಿದ್ದಾರೆ. ಐ ಆಮ್ ಗಾಡ್, ಗಾಡ್ ಈಸ್ ಗ್ರೇಟ್ ಎಂದು ಚೈತ್ರಾ ತಮಗೆ ತಾವೇ ಪೂಜೆಯನ್ನು ಮಾಡಿಕೊಂಡಿದ್ದಾರೆ ಎಂದು ಕಾಲೆಳೆಯುತ್ತಿದ್ದಾರೆ. ಲೇಡಿ ಉಪೇಂದ್ರ ಎಂಬ ಬಿರುದನ್ನು ಕೂಡ ಕೊಡುತ್ತಿದ್ದಾರೆ. ಇನ್ನೂ ಕೆಲವರು ಚೈತ್ರಾ ಕುಂದಾಪುರ ತಮ್ಮ ದೃಷ್ಟಿಯನ್ನು ತೆಗೆದುಕೊಂಡಿರಬಹುದು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಅಂದ್ಹಾಗೇ ಚೈತ್ರಾ ಕುಂದಾಪುರ ದೈವ ಭಕ್ತೆ. ದೇವಿಯ ಪ್ರೇರಣೆಯಿಂದನೇ ಬಿಗ್ ಬಾಸ್ ಮನೆಗೆ ಬಂದಿರುವುದಾಗಿ ಖುದ್ದು ಚೈತ್ರಾ ಕುಂದಾಪುರ ಈ ಹಿಂದೆ ಹೇಳಿಕೊಂಡಿದ್ದರು.
ಇನ್ನೂ.. ಬಿಗ್ ಬಾಸ್ ಮನೆಯಲ್ಲಿ ಆಗಾಗ ಜಪ ತಪ ಧ್ಯಾನ ಮಾಡುವ ಚೈತ್ರಾ ಕುಂದಾಪುರ ನವರಾತ್ರಿಯ ಸಮಯದಲ್ಲಿ ತಪ್ಪದೇ ಉಪವಾಸವನ್ನು ಮಾಡುತ್ತಾರೆ. ಆದರೆ, ಕಳೆದ ವರ್ಷ ಬಿಜೆಪಿ ಟಿಕೆಟ್ ವಂಚನೆ ಪ್ರಕರಣದಲ್ಲಿ ಚೈತ್ರಾ ಜೈಲಿನಲ್ಲಿದ್ದರು. ಈ ಹಿನ್ನೆಲೆ ಉಪವಾಸ ಮಾಡಲಾಗದೇ ಪರಿತಪಿಸಿದ್ದರು. ನಾನು ಎಲ್ಲವನ್ನೂ ಕಳೆದುಕೊಂಡೆ ನಾನು ನಿಜವಾಗಿ ತಪ್ಪು ಮಾಡಿಲ್ಲ ಅಂತ ನಿನಗೆ ಗೊತ್ತಿದ್ದರೆ ಮತ್ತೊಮ್ಮೆ ನನಗೆ ವೇದಿಕೆ ಕಲ್ಪಿಸು ಎಂದು ದೇವಿ ಬಳಿ ಚೈತ್ರಾ ಕುಂದಾಪುರ ಪ್ರಾರ್ಥನೆಯನ್ನು ಮಾಡಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಖುದ್ದು ಚೈತ್ರಾ ಈ ಮಾತುಗಳನ್ನು ಹೇಳಿದ್ದರು. ಬಿಗ್ ಬಾಸ್ ಮನೆಯಲ್ಲಿ ನವರಾತ್ರಿ ಹಬ್ಬವನ್ನು ಆಚರಿಸಿ ನಾನು ಒಂದೈನೂರು ಅಥವಾ ಒಂದು ಸಾವಿರ ಜನರ ಮುಂದೆ ಭಾಷಣ ಮಾಡಬಹುದು ಎಂದು ಅಂದುಕೊಂಡಿದ್ದೆ ಆದರೆ ತಾಯಿ ನನಗೆ ಇಷ್ಟು ದೊಡ್ಡ ವೇದಿಕೆ ಕೊಡುತ್ತಾಳೆ ಎಂದು ನಾಣು ಅಂದುಕೊಂಡಿರಲಿಲ್ಲ ಎಂದು ಕೂಡ ಹೇಳಿದ್ದರು. ಬಿಗ್ ಬಾಸ್ ಅವಕಾಶ ತಮಗೆ ಸಿಕ್ಕಿದ್ದಕ್ಕೆ ಖುಷಿಯನ್ನು ಕೂಡ ವ್ಯಕ್ತಪಡಿಸಿದ್ದರು
ಇನ್ನುಳಿದಂತೆ ಈ ವಾರಾಂತ್ಯದಂದು ಚೈತ್ರಾ ಕುಂದಾಪುರ ಅವರ ಈ ಪೂಜೆಯ ಕುರಿತು ಚರ್ಚೆ ಮಾಡುವ ಸಾಧ್ಯತೆ ಇದೆ. ಪೂಜೆಯ ಹಿಂದಿನ ಉದ್ದೇಶವನ್ನು ಕೇಳುವ ಸಾಧ್ಯತೆ ಇದೆ. ಆಗ ಚೈತ್ರಾ ಹೇಳಿದಾಗಲೇ ಈ ಪೂಜೆಯ ರಹಸ್ಯ ಬಯಲಾಗಲಿದೆ. ಇನ್ನು. ಚೈತ್ರಾ ಕುಂದಾಪುರ ಅವರಿಗೆ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗುವ ಯೋಗ ಇನ್ನೂ ಕೂಡಿ ಬಂದಿಲ್ಲ. ಹನುಮಂತನ ಲೀಲೆಯಿಂದ ಚೈತ್ರಾ ಕುಂದಾಪುರ ಕ್ಯಾಪ್ಟನ್ ರೇಸ್ನಿಂದ ಹೊರಗುಳಿದಿದ್ದಾರೆ.


Click it and Unblock the Notifications











