twitter
    For Quick Alerts
    ALLOW NOTIFICATIONS  
    For Daily Alerts

    ಧಾರಾವಾಹಿಗಳ ಶೂಟಿಂಗ್ ಅಷ್ಟು ಸುಲಭವಲ್ಲ: ಸವಾಲುಗಳು ಹೇಗಿವೆ ಗೊತ್ತೇ?

    |

    ಹೊಸ ಸಂಚಿಕೆಗಳಿಲ್ಲದೆ ಬೇಸರಗೊಂಡಿರುವ ಧಾರಾವಾಹಿ ಪ್ರಿಯರು ನಿಟ್ಟುಸಿರುಬಿಡುತ್ತಿದ್ದಾರೆ. ಅತ್ತೆ ಸೊಸೆ ಜಗಳ, ಅವರಿವರ ಲವ್ ಸ್ಟೋರಿ, ಮನೆಯಲ್ಲಿಯೇ ವಿಲನ್‌ಗಳು, ಇದೆಲ್ಲವೂ ಸೀರಿಯಲ್ ಪ್ರಿಯರ ನಿತ್ಯದ ಚರ್ಚೆಯ ವಿಷಯಗಳಾಗಿದ್ದವು. ಕೊರೊನಾ ವೈರಸ್ ಲಾಕ್‌ಡೌನ್ ಕಾರಣದಿಂದ ಧಾರಾವಾಹಿಗಳ ಕಥೆಗಳು ಮುಂದೆ ಸಾಗದೆ ಹಿಂದೆ ಸಾಗಿದ್ದವು. ಈಗ ಮತ್ತೆ ಕಥೆಗಳು ಮುಂದುವರಿಯುವ ದಿನಗಳು ಸಮೀಪಿಸಿವೆ. ಧಾರಾವಾಹಿ ಅಭಿಮಾನಿಗಳಿಗೆ ಇದು ಖುಷಿ ನೀಡಿದೆ.

    Recommended Video

    ಮತ್ತೆ ಒಂದಾದ ಜೊತೆ ಜೊತೆಯಲಿ ತಂಡ ಶೂಟಿಂಗ್ ನಲ್ಲಿ ಭಾಗಿ | Anirudh | JotheJotheyali | Serial Shooting Resumed

    ಆದರೆ ಧಾರಾವಾಹಿಗಳ ಸ್ವರೂಪ ಈ ಹಿಂದೆ ಇದ್ದಂತೆ ಇರುವುದಿಲ್ಲ. ತುಂಬಿಕೊಂಡ ಮನೆಯಲ್ಲಿನ ಕಥೆಗಳು, ರಸ್ತೆ, ಮಾರುಕಟ್ಟೆ, ಮದುವೆ ಸಮಾರಂಭಗಳಂತಹ ಸನ್ನಿವೇಶಗಳು ಇನ್ನು ಮುಂದೆ ಕಾಣಿಸುವುದಿಲ್ಲ. ಒಮ್ಮೆ ಪರದೆ ಮೇಲೆ ಇಬ್ಬರಿಗಿಂತ ಹೆಚ್ಚು ಕಲಾವಿದರು ಪ್ರತ್ಯಕ್ಷವಾಗೊಲ್ಲ. ಇನ್ನು ಅನೇಕ ಪಾತ್ರಗಳು ಕಾಣಿಸಿಕೊಳ್ಳದೆಯೂ ಇರಬಹುದು. ಇವುಗಳೆಲ್ಲ ವೀಕ್ಷಕರಿಗೆ ಬೇಸರ ಮೂಡಿಸಬಹುದು. ಆದರೆ ಧಾರಾವಾಹಿ ತಂಡಗಳಿಗೂ ಇದು ಶ್ರಮದ ಕೆಲಸ. ಈ ಅನಿವಾರ್ಯತೆಯ ಸವಾಲುಗಳನ್ನು ಧಾರಾವಾಹಿ ತಂಡಗಳು ಎದುರಿಸಬೇಕಿದೆ. ಮುಂದೆ ಓದಿ...

    ಹಲವು ಸವಾಲು, ನಿರ್ಬಂಧಗಳ ನಡುವೆ ಧಾರಾವಾಹಿ ಚಿತ್ರೀಕರಣ ಇಂದಿನಿಂದ ಶುರು ಹಲವು ಸವಾಲು, ನಿರ್ಬಂಧಗಳ ನಡುವೆ ಧಾರಾವಾಹಿ ಚಿತ್ರೀಕರಣ ಇಂದಿನಿಂದ ಶುರು

    ಧಾರಾವಾಹಿ ತಂಡದ ಮೇಲೆ ಹೆಚ್ಚಿನ ಒತ್ತಡ

    ಧಾರಾವಾಹಿ ತಂಡದ ಮೇಲೆ ಹೆಚ್ಚಿನ ಒತ್ತಡ

    ಈ ಮುಂಚೆ ಚಾನೆಲ್‌ಗಳ ನಡುವೆ ಪೈಪೋಟಿ ಇತ್ತು. ಆ ಪೈಪೋಟಿಯ ಹೊರೆಯನ್ನು ಹೆಚ್ಚು ಹೊರಬೇಕಾಗಿದ್ದು ಧಾರಾವಾಹಿಗಳ ನಿರ್ದೇಶಕರು. ಇಷ್ಟೊಂದು ಚಾನೆಲ್‌ಗಳ ಧಾರಾವಾಹಿಗಳ ಭರಾಟೆಯ ಮಧ್ಯೆ ತಮ್ಮ ಧಾರಾವಾಹಿಗೆ ಟಿಆರ್‌ಪಿ ತಂದುಕೊಡುವಂತೆ ಅವುಗಳನ್ನು ನಿರ್ದೇಶಿಸಬೇಕಿತ್ತು. ನಿರ್ಮಾಪಕರೂ ಈ ಒತ್ತಡದಲ್ಲಿದ್ದರು. ಈಗ ಆ ಸವಾಲು ದುಪ್ಪಟ್ಟಾಗಿದೆ. ಧಾರಾವಾಹಿ ಚಿತ್ರೀಕರಣ ಸ್ಥಳದಲ್ಲಿ ಎಲ್ಲರ ಆರೋಗ್ಯ ಮತ್ತು ಸುರಕ್ಷತೆ ಕಾಪಾಡುವ ಜವಾಬ್ದಾರಿ ಅವರ ಮೇಲಿದೆ. ಹಾಗೆಯೇ ಕಥೆಯಲ್ಲಿ ಅನಿವಾರ್ಯ ಬದಲಾವಣೆಗಳನ್ನು ಮಾಡಿಕೊಂಡು ಸೀಮಿತ ತಂಡದೊಂದಿಗೆ ಕೆಲಸ ಮಾಡುವ ಸವಾಲು ಎದುರಾಗಿದೆ.

    ಸವಾಲಿನ ಮೇಲೆ ಸವಾಲು

    ಸವಾಲಿನ ಮೇಲೆ ಸವಾಲು

    'ಧಾರಾವಾಹಿಯೇ ಒಂದು ಚಾಲೆಂಜಿಂಗ್. ಅದಕ್ಕೆ ಕೊರೊನಾ ಸೇರಿ ಸವಾಲಿನ ಮೇಲೆ ಸವಾಲು ಆಗುತ್ತಿದೆ. ಮೊದಲು ಒಳ್ಳೆಯ ಸೀರಿಯಲ್ ಮೂಲಕ ಜನರ ಮನಸು ಗೆಲ್ಲಬೇಕು ಎಂಬುದು ಇತ್ತು. ಈಗ ಎಲ್ಲರ ಆರೋಗ್ಯ ಕಾಪಾಡಿಕೊಂಡು ಜನರ ಮನಸು ಗೆಲ್ಲಬೇಕಿದೆ. ಸರ್ಕಾರ, ಆರೋಗ್ಯ ಇಲಾಖೆ, ಟೆಲಿವಿಷನ್ ಅಸೋಸಿಯೇಷನ್ ಮತ್ತು ಚಾನೆಲ್‌ ನೀಡಿರುವ ಮಾರ್ಗದರ್ಶಿಗಳನ್ನು ಪಾಲಿಸಬೇಕು. ಸೆಟ್‌ಗೆ ಕಾಲಿಡುವ ಮುಂಚೆ ಗೇಟ್ ಹೊರಗೆ ನಿಲ್ಲಬೇಕು. ಪ್ರತಿಯೊಬ್ಬರೂ ದೇಹದ ಉಷ್ಣತೆಯ ಪರೀಕ್ಷೆಗೆ ಒಳಗಾಗಬೇಕು. ತಪಾಸಣೆ ಮಾಡಿದ ಸಮಯ, ಅವರ ವಿಳಾಸ ಮುಂತಾದ ಎಲ್ಲ ವಿವರಗಳನ್ನು ಲೆಡ್ಜರ್‌ನಲ್ಲಿ ಬರೆದು ಚಾನೆಲ್‌ಗೆ ನೀಡಬೇಕು.

    ಕಲಾವಿದರು, ತಂತ್ರಜ್ಞರನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಬೇಕು. ಸ್ಥಳವನ್ನೂ ಸ್ಯಾನಿಟೈಸ್ ಮಾಡಬೇಕು. ಗ್ಲೌಸ್, ಮಾಸ್ಕ್, ತಲೆಗೆ ಸುರಕ್ಷಾ ಕವಚ ಎಲ್ಲ ಧರಿಸಬೇಕು. ಚಿತ್ರೀಕರಣ ಸ್ಥಳದ ಮೂಲೆ ಮೂಲೆಯಲ್ಲೂ ಸ್ಯಾನಿಟೈಸ್ ಸ್ಟ್ಯಾಂಡ್ ಇರಿಸಬೇಕು. ಶೌಚಾಲಯ ಶುದ್ಧವಾಗಿಟ್ಟುಕೊಳ್ಳಬೇಕು. ಪ್ರತಿಯೊಬ್ಬರೂ 3-6 ಅಡಿ ಅಂತರ ಕಾಪಾಡಿಕೊಳ್ಳಬೇಕು. ಆಕಸ್ಮಿಕವಾಗಿ ಒಬ್ಬರನ್ನೊಬ್ಬರು ಸ್ಪರ್ಶಿಸಿದರೆ ಕೂಡಲೇ ಸ್ಯಾನಿಟೈಸ್ ಮಾಡಿಕೊಳ್ಳಬೇಕು' ಎಂದು ಚಿತ್ರೀಕರಣದ ಸಮಯದಲ್ಲಿ ಇರುವ ಜವಾಬ್ದಾರಿಗಳನ್ನು 'ಜೊತೆ ಜೊತೆಯಲಿ' ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್ 'ಫಿಲ್ಮಿ ಬೀಟ್‌'ಗೆ ವಿವರಿಸಿದರು.

     ಸೋಮವಾರದಿಂದ ಧಾರಾವಾಹಿಗಳ ಚಿತ್ರೀಕರಣ ಆರಂಭ: ಎಲ್ಲೆಲ್ಲಿ ಹೇಗೆ? ಸೋಮವಾರದಿಂದ ಧಾರಾವಾಹಿಗಳ ಚಿತ್ರೀಕರಣ ಆರಂಭ: ಎಲ್ಲೆಲ್ಲಿ ಹೇಗೆ?

    ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೇವೆ

    ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೇವೆ

    'ಹೊರರಾಜ್ಯಗಳಿಂದ ಕೆಲಸಕ್ಕೆ ಹುಡುಗರನ್ನು ತೆಗೆದುಕೊಳ್ಳುತ್ತಿಲ್ಲ. ಊರಿಗೆ ಹೋಗಿದ್ದ ಹುಡುಗರು 14 ದಿನಗಳ ಹಿಂದೆಯೇ ವಾಪಸ್ ಬಂದಿದ್ದರು. ಸೆಟ್‌ಅನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿ, ಅವರಿಗೆ ಗ್ಲೌಸ್, ಮಾಸ್ಕ್ ಕೊಟ್ಟಿದ್ದೇವೆ. ಪ್ರವೇಶದ ಆರಂಭದಲ್ಲಿಯೇ ಎಲ್ಲರ ಟೆಂಪರೇಚರ್ ಪರೀಕ್ಷಿಸುತ್ತೇವೆ. ಹೈಜನಿಕ್ ಆಹಾರ ನೀಡುತ್ತೇವೆ. ಕಡಿಮೆ ಕಲಾವಿದರು. ತಂತ್ರಜ್ಞರನ್ನು ಇಟ್ಟುಕೊಂಡಿದ್ದೇವೆ. ಅವರಿಗೆಲ್ಲ 3 ಲಕ್ಷದವರೆಗೂ ಕೋವಿಡ್ ಕವರ್ ವಿಮೆ ಮಾಡಿದ್ದೇವೆ. ನಮಗೂ ಭಯ ಇರುತ್ತದೆ. ಹಾಗಾಗಿ ಎಲ್ಲ ಅಗತ್ಯ ಎಚ್ಚರಿಕೆ ಕ್ರಮ ತೆಗೆದುಕೊಂಡಿದ್ದೇವೆ' ಎಂದು 'ನನ್ನರಸಿ ರಾಧೆ' ಧಾರಾವಾಹಿ ನಿರ್ದೇಶಕ ವಿನೋದ್ ಧೋಂಡಲೆ ತಿಳಿಸಿದರು.

    ಕಡಿಮೆ ಕಲಾವಿದರು, ತಂತ್ರಜ್ಞರು

    ಕಡಿಮೆ ಕಲಾವಿದರು, ತಂತ್ರಜ್ಞರು

    'ಚಿತ್ರೀಕರಣದ ವೇಳೆ ಹೆಚ್ಚು ಜನರು ಸೇರದಂತೆ ನೋಡಿಕೊಳ್ಳುತ್ತಿದ್ದೇವೆ. ಒಂದು ಫ್ರೇಮ್‌ನಲ್ಲಿ ಇಬ್ಬರು ಕಲಾವಿದರು ಮಾತ್ರ ಬರಬಹುದು. ಕಡಿಮೆ ಕಲಾವಿದರನ್ನು ಬಳಸಲು ಅನುಕೂಲವಾಗುವಂತೆ ಕಥೆಯಲ್ಲಿ ಬದಲಾವಣೆ ಮಾಡಿಕೊಟ್ಟಿದ್ದಾರೆ, ಹಾಗೆಯೇ ಹೆಚ್ಚು ಕಲಾವಿದರನ್ನು ಬಳಸುವ ದೃಶ್ಯಗಳನ್ನು ಅವಾಯ್ಡ್ ಮಾಡಿದ್ದೇವೆ. ಬೆಳಿಗ್ಗೆ ಬೇಗ ಶುರು ಮಾಡಿ ಸಂಜೆ ಆರು ಗಂಟೆಗೆ ಶೂಟಿಂಗ್ ಮುಗಿಸುತ್ತೇವೆ' ಎಂದು ಅವರು ವಿವರಿಸುತ್ತಾರೆ.

    ಧಾರಾವಾಹಿ ಶೂಟಿಂಗ್ ಮಾಡಲು ಈ ನಿಯಮಗಳನ್ನು ಪಾಲಿಸಲೇಬೇಕುಧಾರಾವಾಹಿ ಶೂಟಿಂಗ್ ಮಾಡಲು ಈ ನಿಯಮಗಳನ್ನು ಪಾಲಿಸಲೇಬೇಕು

    ವ್ಯವಸ್ಥೆ ಮಾಡಿದ್ದೇವೆ

    ವ್ಯವಸ್ಥೆ ಮಾಡಿದ್ದೇವೆ

    ಕಲಾವಿದರು, ತಂತ್ರಜ್ಞರು ಬೇರೆ ತಂಡಗಳಲ್ಲಿ ಕೆಲಸ ಮಾಡುವಂತಿಲ್ಲ. ಹೀಗಾಗಿ ಹೆಚ್ಚುವರಿ ಕಲಾವಿದರನ್ನು ಬಳಸಿಕೊಳ್ಳುತ್ತಿಲ್ಲ. ಮುಖ್ಯ ಕಲಾವಿದರು ಮಾತ್ರವೇ ಇರಲಿದ್ದಾರೆ. ಅವರಿಗೆ ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಸಹಾಯಕ ಹುಡುಗರು, ತಂತ್ರಜ್ಞರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದೇವೆ. ಅವರು ಊರಿಗೆ ಹೋಗಿ ಬರುವುದು, ಬೇರೆ ಕಡೆ ಶೂಟಿಂಗ್‌ಗೆ ಹೋಗುವುದು ಮುಂತಾದ ಚಟುವಟಿಕೆಗಳನ್ನು ನಿರ್ಬಂಧಿಸಿದ್ದೇವೆ ಎಂದು ಅವರು ತಿಳಿಸಿದರು.

    ಪ್ರತಿಯೊಂದೂ ಸ್ಯಾನಿಟೈಸ್

    ಪ್ರತಿಯೊಂದೂ ಸ್ಯಾನಿಟೈಸ್

    ಸ್ಥಳದಲ್ಲಿ ಬಳಸುವ ಲೈಟ್ಸ್, ಜನರೇಟರ್ ಪ್ರತಿಯೊಂದನ್ನೂ ಸ್ಯಾನಿಟೈಸ್ ಮಾಡುತ್ತಿದ್ದೇವೆ. ಊಟ ಕೂಡ ಹೊರಗಡೆಯಿಂದ ತರಿಸುತ್ತಿಲ್ಲ. ಸ್ಥಳದಲ್ಲಿಯೇ ಸಿದ್ಧಪಡಿಸಿ ಬಫೆ ವ್ಯವಸ್ಥೆಯಲ್ಲಿ ನೀಡುತ್ತಿದ್ದೇವೆ. ಕೆಲವರು ಮನೆಯಿಂದಲೇ ಊಟ ತಂದಿದ್ದಾರೆ. ಇನ್ನು ಕೆಲವರು ತಟ್ಟೆ, ಲೋಟಗಳನ್ನು ತಂದಿದ್ದಾರೆ. ಅವುಗಳನ್ನು ಬಿಸಿ ನೀರಲ್ಲಿ ತೊಳೆಯಲಾಗುತ್ತದೆ ಎನ್ನುತ್ತಾರೆ ಆರೂರು ಜಗದೀಶ್.

    ಧಾರಾವಾಹಿ ಎಳೆಯುವುದನ್ನು ಬಿಟ್ಟಿದ್ದೇವೆ

    ಧಾರಾವಾಹಿ ಎಳೆಯುವುದನ್ನು ಬಿಟ್ಟಿದ್ದೇವೆ

    ಈಗ ಕಾಂಪಿಟೇಷನ್ ಹೆಚ್ಚಾಗಿದೆ. ಅದರ 'ಜೊತೆ ಜೊತೆಯಲಿ' ಕೊರೊನಾ ಕೂಡ ಬಂತು. ಸ್ಕ್ರಿಪ್ಟ್‌ಗಳಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಎಲ್ಲವನ್ನೂ ಮನೆಯೊಳಗೆ, ಲಾನ್ ಆವರಣದಲ್ಲಿಯೇ ಚಿತ್ರೀಕರಿಸಬೇಕು. ಸಹ ಕಲಾವಿದರನ್ನು ಬಳಸಿಕೊಳ್ಳುವಂತಿಲ್ಲ. ಇದರಿಂದ ಅನೇಕ ಮಿತಿಗಳು ಇವೆ. ಹಾಗೆಂದು ಮೇಕಿಂಗ್ ವಿಚಾರದಲ್ಲಿ ರಾಜಿಯಾಗುತ್ತಿಲ್ಲ. ಈ ಹಿಂದೆ ಧಾರಾವಾಹಿಗಳೆಂದರೆ ಎಳೆಯುವುದು ಎಂದಾಗಿತ್ತು. ಈಗ ನಿರೂಪಣೆ ಬದಲಾಗಿದೆ. ಎಳೆಯುವುದನ್ನು ಬಿಟ್ಟಿದ್ದೇವೆ. ವೇಗವಾಗಿ ಕಥೆ ಸಾಗುತ್ತವೆ. ಜತೆಗೆ ನಾಟಕೀಯ ತಿರುವುಗಳನ್ನು ನೀಡಬೇಕು. ಜನರಲ್ಲಿ ಕುತೂಹಲ ಮೂಡಿಸುವ-ಉಳಿಸುವ ಸವಾಲು ಇದೆ ಎನ್ನುತ್ತಾರೆ ಅವರು.

    ಹಳ್ಳಿಗೆ ಹೋದವರು ವಾಪಸ್ ಬರೊಲ್ಲ ಎನ್ನುತ್ತಿದ್ದಾರೆ

    ಹಳ್ಳಿಗೆ ಹೋದವರು ವಾಪಸ್ ಬರೊಲ್ಲ ಎನ್ನುತ್ತಿದ್ದಾರೆ

    ಧಾರಾವಾಹಿ ಉದ್ಯಮದ ಮತ್ತೊಂದು ದುರ್ಗತಿಯನ್ನೂ ಅವರು ವಿವರಿಸುತ್ತಾರೆ. ಇಲ್ಲಿ ಎಲ್ಲರಿಗೂ ಕೆಲಸ ಸಿಗುತ್ತಿಲ್ಲ. ಈಗಾಗಲೇ ಸುಮಾರು 20-24 ಧಾರಾವಾಹಿಗಳು ರಾತ್ರೋರಾತ್ರಿ ನಿಂತು ಹೋಗಿವೆ. ಚಾನೆಲ್‌ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಒಂದು ಚಾನೆಲ್ ಸಂಪೂರ್ಣವಾಗಿ ಮುಚ್ಚಲು ಮುಂದಾಗಿದೆ. ಹಾಗೆಯೇ ಈ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದ ಅನೇಕರು ಹಳ್ಳಿಗಳಿಗೆ ವಾಪಸ್ ಹೋಗಿದ್ದಾರೆ. ಊರಲ್ಲೇ ಬೇಕಾದರೂ ಸಾಯುತ್ತೇವೆ, ಮತ್ತೆ ಬೆಂಗಳೂರಿಗೆ ಬರೊಲ್ಲ ಎನ್ನುತ್ತಿದ್ದಾರೆ. ಆರ್ಥಿಕತೆಯ ಸಂಕಷ್ಟ ಎಲ್ಲರಿಗೂ ತಟ್ಟಿದೆ. ಇದೆಲ್ಲದರ ನಡುವೆ ನಾವು ಬದುಕನ್ನು ಹೊಸದಾಗಿ ಕಟ್ಟಿಕೊಳ್ಳಬೇಕಾಗಿದೆ.

    ಪ್ರಕೃತಿ ಎಲ್ಲವನ್ನೂ ತಿಳಿಸಿದೆ

    ಪ್ರಕೃತಿ ಎಲ್ಲವನ್ನೂ ತಿಳಿಸಿದೆ

    ಮುಂಚಿನ ರೀತಿ ಇಲ್ಲಿ ಯಾರೂ ಡಿಮ್ಯಾಂಡ್ ಮಾಡುವಂತಿಲ್ಲ. ಏಕೆಂದರೆ ಕೆಲಸವೇ ಇಲ್ಲ. ತುಂಬಾ ತೊಂದರೆಯಲ್ಲಿದ್ದೇವೆ. ಪ್ರಕೃತಿ ಒಂದು ಸಲ ತಿರುಗಿ ಬಿದ್ದರೆ ಏನಾಗುತ್ತದೆ ಎಂಬುದಕ್ಕೆ ಕೊರೊನಾ ಸಾಕ್ಷಿ. ನಾವು ಎಲ್ಲಿದ್ದೇವೆ ಎಂಬುದು ನಮಗೆ ಗೊತ್ತಿರಲಿಲ್ಲ. ಅದನ್ನು ಪ್ರಕೃತಿ ತೋರಿಸಿದೆ. ಇದೇ ಬದುಕು, ಹೀಗೇ ಇರಬೇಕು. ನಾಳೆ ನಾವು ಸಾಯುತ್ತೇವೆ ಎಂಬ ಯೋಚನೆ ಇಲ್ಲದೆ ಹಣ ಮಾಡುವುದಷ್ಟೇ ಜೀವನ ಎಂದುಕೊಂಡಿದ್ದವರಿಗೆ ಬದುಕಿನ ವಾಸ್ತವ ಮುಖ ತೋರಿಸಿದೆ. ಶ್ರೀಮಂತನಿಗೂ, ಮಧ್ಯಮವರ್ಗದವನಿಗೂ, ಬಡವನಿಗೂ ವ್ಯತ್ಯಾಸವಿಲ್ಲ. ತಾನು ಎಲ್ಲರಿಗೂ ಒಂದೇ ಎಂದು ಪ್ರಕೃತಿ ಹೇಳಿದೆ. ಇದೆಲ್ಲದರ ನಡುವೆ ನಾವು ನಿಂತಲ್ಲಿಂದ ಮುಂದುವರಿಸುವುದಲ್ಲ, ಪ್ರತಿಯೊಂದನ್ನೂ ಹೊಸದಾಗಿ ಆರಂಭಿಸಬೇಕಿದೆ. ಮನರಂಜನಾ ಕ್ಷೇತ್ರವೂ ಇದರಿಂದ ಹೊರತಲ್ಲ ಎಂದು ಅವರು ಹೇಳಿದರು.

    English summary
    Serial directors and producers are facing many challenges after coronavirus lockdown.
    Monday, May 25, 2020, 13:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X