ರಿಯಾಲಿಟಿ ಶೋ ಮೂಲಕ ಮೋಡಿ ಮಾಡಿದ ಚಂದನ್ ಕಿರುತೆರೆ ನಂತರ ಮತ್ತೆ ಸಿನಿಮಾದಲ್ಲಿ ಬ್ಯುಸಿ
ಚಂದನ್ ಕುಮಾರ್.. ರಿಯಾಲಿಟಿ ಶೋ ಮೂಲಕ ಕಿರುತೆರೆಯ ನಂಟು ಬೆಳೆಸಿಕೊಂಡ ಹ್ಯಾಂಡ್ಸಮ್ ಹುಡುಗ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪ್ಯಾಟೆ ಮಂದಿ ಕಾಡಿಗ್ ಬಂದ್ರು' ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಚಂದನ್ ಕುಮಾರ್ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದು ಧಾರಾವಾಹಿಯ ಮೂಲಕ.
ಬರೋಬ್ಬರಿ ದಶಕಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ರಾಧಾ ಕಲ್ಯಾಣ'ದಲ್ಲಿ ನಾಯಕ ವಿಶಾಲ್ ಭಾರಧ್ವಾಜ್ ಆಗಿ ನಟಿಸಿದ ಚಂದನ್ ಕುಮಾರ್ ಆ ಪಾತ್ರದ ಮೂಲಕ ಸೀರಿಯಲ್ ವೀಕ್ಷಕರ ಮನ ಸೆಳೆದರು. ಎರಡು ವರ್ಷಗಳ ಕಾಲ ವಿಶಾಲ್ ಆಲಿಯಾಸ್ ವಿಶು ಆಗಿ ಅಭಿನಯಿಸಿದ್ದ ಚಂದನ್ ಕುಮಾರ್ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಚಂದುವಾಗಿ.

'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಚಂದು ಆಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಚಂದನ್ ಕುಮಾರ್ ಒಂದು ವರ್ಷಗಳ ನಂತರ ಕಾರಣಾಂತರಗಳಿಂದ ಆ ಪಾತ್ರದಿಂದ ಹೊರಬಂದಿದ್ದರು. ತದ ನಂತರ 'ತಕಧಿಮಿತ' ಡ್ಯಾನ್ಸಿಂಗ್ ರಿಯಾಲಿಟಿ ಶೋ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಚಂದನ್ ಕುಮಾರ್ ಕಿರುತೆರೆಯಲ್ಲಿ ಮಗದಷ್ಟು ಜನಪ್ರಿಯತೆ ಗಿಟ್ಟಿಸಿಕೊಳ್ಳಲು ಕಾರಣ ಬಿಗ್ ಬಾಸ್.
ಹೌದು, ಬಿಗ್ ಬಾಸ್ ಸೀಸನ್ 3 ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದ ಚಂದನ್ ಕುಮಾರ್ ಆ ಸೀಸನ್ನ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಎರಡು ರಿಯಾಲಿಟಿ ಶೋಗಳಲ್ಲಿ ಮೋಡಿ ಮಾಡಿದ ಚಂದನ್ ತದ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರ್ವ ಮಂಗಲ ಮಾಂಗಲ್ಯೇ' ಧಾರಾವಾಹಿಯಲ್ಲಿ ನಾಯಕ ಮಹಾಶಂಕರ ನಾಗಿ ನಟಿಸಿ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದರು.
ತೆಲುಗಿನ ಸ್ಟಾರ್ ಮಾ ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿದ್ದ 'ಸಾವಿತ್ರಮ್ಮಗಾರಿ ಅಬ್ಬಾಯಿ'ಯಲ್ಲಿ ನಾಯಕ ಬಾಲರಾಜು ಆಗಿ ಬಣ್ಣ ಹಚ್ಚಿದ ಚಂದನ್ ಕುಮಾರ್ ಮನೋಜ್ಞ ನಟನೆಯ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ನೋಡಿ ಮಾಡಿದರು. ಮೂರು ವರ್ಷಗಳ ಕಾಲ ಬಾಲರಾಜು ಆಗಿ ತೆಲುಗು ಕಿರುತೆರೆಯಲ್ಲಿ ಮಿಂಚಿದ ಚಂದನ್ ಕುಮಾರ್ ಕನ್ನಡ ಕಿರುತೆರೆಗೆ ಮರಳಿದ್ದು ರಿಯಾಲಿಟಿ ಶೋಗಾಗಿ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಕ್ಕು ವಿಥ್ ಕಿರಿಕ್ಕು' ಶೋವಿನಲ್ಲಿ ಭಾಗವಹಿಸಿದ ಚಂದನ್ ಕುಮಾರ್ ಆ ಶೋವಿನ ವಿನ್ನರ್ ಆಗಿ ಹೊರಹೊಮ್ಮಿದರು. ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮರಳಿ ಮನಸ್ಸಾಗಿದೆ' ಧಾರಾವಾಹಿಯಲ್ಲಿ ಎಸ್ ಪಿ ವಿಕ್ರಾಂತ್ ಆಗಿ ಗಮನ ಸೆಳೆದ ಚಂದನ್ ಕುಮಾರ್ ತೆಲುಗಿನ ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಶ್ರೀಮತಿ ಶ್ರೀನಿವಾಸ್' ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.
'ಮರಳಿ ಮನಸ್ಸಾಗಿದೆ' ಧಾರಾವಾಹಿ ಮುಕ್ತಾಯಗೊಂಡು ವರ್ಷ ಒಂದು ಕಳೆದಿದೆ. ಸದ್ಯ ಯಾವುದೇ ಧಾರಾವಾಹಿಯಲ್ಲಾಗಲೀ, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರದ ಚಂದನ್ ಕುಮಾರ್ ಸದ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೌದು, 'ಲೈಫು ಇಷ್ಟೇನೆ' ಸಿನಿಮಾ ಮೂಲಕ ಹಿರಿತೆರೆಗೆ ಹಾರಿದ ಚಂದನ್ ಕುಮಾರ್ ಮುಂದೆ 'ಪರಿಣಯ', 'ಕಟ್ಟೆ', 'ಎರಡೊಂದ್ಲಾ ಮೂರು', 'ಲವ್ ಯೂ ಆಲಿಯಾ', 'ಬೆಂಗಳೂರು 560023', 'ಪ್ರೇಮ ಬರಹ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು 'ಶ್ರೀಕೃಷ್ಣ @ಜೀಮೈಲ್ ಡಾಟ್ ಕಾಂ' ಹಾಗೂ ಈ ವರ್ಷ ತೆರೆಕಂಡ 'ಗೌರಿ' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು 'ಫ್ಲರ್ಟ್' ಎನ್ನುವ ಸಿನಿಮಾದಲ್ಲಿ ನಾಯಕನಾಗಿ ಚಂದನ್ ಕುಮಾರ್ ಅಭಿನಯಿಸಲಿದ್ದು ಮುಂದಿನ ವರ್ಷ ಫೆಬ್ರವರಿಯಲ್ಲಿ ಸಿನಿಮಾ ರಿಲೀಸ್ ಆಗಲಿದೆ.


Click it and Unblock the Notifications











