Chandu Gowda: ನಟಿಸುವ ಪಾತ್ರ ಯಾವುದೇ ಆಗಿರಲಿ, ಭಿನ್ನತೆ ಮುಖ್ಯ ಅನ್ನೋ ನಟ ಚಂದು ಗೌಡ
ಬೆಂಗಾಲಿ ಧಾರಾವಾಹಿಯ ಕಥೆ ಆಧಾರಿತ ಕನ್ನಡ ರಿಮೇಕ್ ಧಾರಾವಾಹಿ 'ಕಥೆಯೊಂದು ಶುರುವಾಗಿದೆ' ಮೂಲಕ ಮತ್ತೆ ತಮ್ಮ ಕನ್ನಡ ಕಿರುತೆರೆ ಜರ್ನಿಯನ್ನು ಪ್ರಾರಂಭಿಸಿದ್ದಾರೆ. ನಟ ಚಂದು ಗೌಡ ಅವರು. ಮೂರು ವರ್ಷಗಳ ಕಾಲ ಕನ್ನಡ ಕಿರುತೆರೆಯಿಂದ ದೂರ ಇದ್ದ ಈ ನಟ ಈಗ ಮತ್ತೆ ಕನ್ನಡ ಕಿರುತೆರೆಗೆ ವಾಪಸ್ ಆಗಿರುವುದು ಕಿರುತರೆ ಪ್ರಿಯರಿಗೆ ವೀಕ್ಷಕರಿಗೆ ಬಹಳ ಖುಷಿ ತಂದಿದೆ. 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ಸೂರಜ್ ಹೂಗಾರ್ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದಾಗ ಆ ಜಾಗಕ್ಕೆ ಬಂದವರೇ ಚಂದು ಗೌಡ. 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ನಾಯಕ ಚಂದು ಆಗಿ ನಟಿಸಿದ್ದ ಚಂದು ಗೌಡ ಇದೀಗ ಮೂರು ವರ್ಷದ ನಂತರ ಮತ್ತೆ ಕನ್ನಡ ಕಿರುತೆರೆಯಲ್ಲಿ ಯುವರಾಜ್ ಬಹದ್ದೂರ್ ಆಗಿ ಸೀರಿಯಲ್ ವೀಕ್ಷಕರನ್ನು ರಂಜಿಸುತ್ತಿದ್ದಾರೆ.
ಚಂದು ಗೌಡ ಅವರಿಗೆ ಚಾಲೆಂಜಿಗ್ ಆಗಿರುವಂತಹ ಪಾತ್ರಗಳಲ್ಲಿ ಅಭಿನಯಿಸುವುದು ಎಂದರೆ ತುಂಬಾ ಇಷ್ಟ. ಯುವರಾಜ್ ಬಹದ್ದೂರ್ ಪಾತ್ರ ಸಿಕ್ಕಾಗ ಆರಂಭದಲ್ಲಿ ಕೊಂಚ ಕನ್ಫ್ಯೂಷನ್ ಇತ್ತು. ನಂತರ ನಿರ್ದೇಶಕರೊಂದಿಗೆ ಮಾತನಾಡಿ ಒಪ್ಪಿಕೊಂಡರು. ಇದು ತುಂಬಾ ಒಳ್ಳೆಯ ಪಾತ್ರ ಎಂದು ಸ್ವತಃ ಚಂದು ಅವರ ಅರಿವಿಗೆ ಬಂದ ಮೇಲೆ ಅದರ ಕಡೆಗೆ ಗಮನ ಹರಿಸಿದರು. ಜೊತೆಗೆ ತಯಾರಿಯನ್ನು ಮಾಡಿಕೊಂಡಿದ್ದಾರ.

ಪಾತ್ರದಲ್ಲಿ ಭಿನ್ನತೆ ಮುಖ್ಯ
ತೆಲುಗಿನ 'ತ್ರಿನಯಿನಿ' ಧಾರಾವಾಹಿಯ ಜೊತೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಥೆಯೊಂದು ಶುರುವಾಗಿದೆ'ಯಲ್ಲಿಯೂ ನಾಯಕನಾಗಿ ನಟಿಸುತ್ತಿರುವ ಚಂದು ಗೌಡ ಏಕಕಾಲಕ್ಕೆ ಎರಡು ಭಾಷೆಯ ಕಿರುತೆರೆಯಲ್ಲಿ ನಟನಾ ಕಂಪನ್ನು ಪಸರಿಸುತ್ತಿರುವ ಹ್ಯಾಂಡ್ ಸಮ್ ನಟ. ಅಂದ ಹಾಗೇ ಚಂದು ಗೌಡ ಯಾವತ್ತಿಗೂ ನಾಯಕನ ಪಾತ್ರ ಬೇಕು ಎಂದು ಪಟ್ಟು ಹಿಡಿದು ಕುಳಿತವರಲ್ಲ. ಬದಲಿಗೆ ಯಾವುದೇ ಪಾತ್ರ ಸಿಕ್ಕಿದರೂ ಪರವಾಗಿಲ್ಲ, ನಟಿಸುವ ಪಾತ್ರದಲ್ಲಿ ವಿಭಿನ್ನತೆ ಬೇಕು ಎಂಬುದೇ ಅವರ ನಿಲುವು. ಹಾಗಾಗಿ ಮತ್ತೆ ನಟಿಸುವುದಲಕ್ಕೆ ಒಪ್ಪಿಕೊಂಡ ಚಂದು ಗೌಡ ಸದ್ಯ ಸೀರಿಯಲ್ ವೀಕ್ಷಕರ ಪಾಲಿಗೆ ಪ್ರೀತಿಯ ಯುವರಾಜ!
ಯುವರಾಜ್ ಬಹದ್ಧೂರ್ ಪಾತ್ರಕ್ಕೆ ಜೀವ ತುಂಬುವ ಮೊದಲು ಕೊಂಚ ತಯಾರಿಗಳನ್ನು ಮಾಡಿಕೊಂಡಿದ್ದರು ನಟ ಚಂದು ಗೌಡ. ಧಾರಾವಾಹಿಯ ಮೂಲ ಬೆಂಗಾಲಿ ಕಥೆ ಆದ್ದರಿಂದ ಅದಕ್ಕೆ ಸರಿಹೊಂದುವ ಒಂದಷ್ಟು ಡೈಲಾಗ್ ಡೆಲಿವರಿ, ಬಟ್ಟೆ ಬರೆ, ಲುಕ್ ಇತ್ಯಾದಿ ತಯಾರಿಗಳನ್ನು ಕೂಡಾ ಚಂದು ಅವರು ನಡೆಸಿದ್ದರು. ಯುವರಾಜ್ ಬಹುದ್ದೂರ್ ಅವರನ್ನು ಕಾಪಿ ಮಾಡಲು ಹೋಗುವ ಮೊದಲು ಚಂದು ಅವರು ಅವರದೇ ಆದ ರೀತಿಯಲ್ಲಿ ಒಂದಷ್ಟು ಪ್ಲಾನ್ ಮಾಡಿಕೊಂಡ ನಂತರ ಯುವರಾಜ್ ಆಗಿ ಬದಲಾದರು.

ಟೈಮ್ ಮ್ಯಾನೇಜ್ಮೆಂಟ್ ತುಂಬಾ ಮುಖ್ಯ
ತೆಲುಗಿನ "ತ್ರಿನಯಿನಿ" ಹಾಗೂ ಕನ್ನಡದ "ಕಥೆಯೊಂದು ಶುರುವಾಗಿದೆ" ಎರಡು ಧಾರಾವಾಹಿಯೂ ಮುಖ್ಯವಾದ ಪಾತ್ರವನ್ನು ಮಾಡುತ್ತಿರುವುದರಿಂದ ಹೆಚ್ಚು ಓಡಾಟಗಳು ಇರುತ್ತದೆ. ಶೂಟಿಂಗ್ ನಿಮಿತ್ತ ಬೆಂಗಳೂರು ಹೈದರಾಬಾದ್ಗೆ ಒಡಾಡುವ ಕಾರಣ ಫ್ಯಾಮಿಲಿಗೆ ಸಮಯ ನೀಡಲಾಗದ ಪರಿಸ್ಥಿತಿ ಅವರದು. ಅದರಲ್ಲೂ ಬೇಸರದ ವಿಚಾರವೆಂದರೆ ಆರು ತಿಂಗಳ ಪುಟ್ಟ ಕೂಸಿಗೂ ಹೆಚ್ಚು ಸಮಯ ಕೊಡಲು ಅವರಿಂದ ಸಾಧ್ಯವಾಗುತ್ತಿಲ್ಲ. ಪತ್ನಿ ಹಾಗೂ ತಾಯಿ ಮಗುವನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಇನ್ನು ಚಂದು ಸಮಯ ಸಿಕ್ಕಾಗಲೆಲ್ಲಾ ಮಗುವಿನ ಜೊತೆ ಸಮಯ ಕಳೆಯುತ್ತಾರೆ. ಟೈಮ್ ಮ್ಯಾನೇಜ್ಮೆಂಟ್ ಒಂದಷ್ಟು ಕಿರಿಕಿರಿ ಕೊಡುವುದು ಬಿಟ್ಟರೆ ಎರಡು ಧಾರವಾಹಿಗಳು ಚಂದು ಗೌಡ ಅವರಿಗೆ ಸಂತೃಪ್ತಿ ನೀಡಿದೆ.
ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲಿಯೂ ಮೋಡಿ
ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲಿಯೂ ನಟನಾ ಛಾಪನ್ನು ಮೂಡಿಸಿರುವ ಚಂದು ಗೌಡ "ರಾಬರ್ಟ್", "ಕೃಷ್ಣ ಗಾರ್ಮೆಂಟ್ಸ್", " ಕುಷ್ಕ", "ಅಟೆಂಪ್ಟ್ ಟು ಮರ್ಡರ್" ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ "ಪ್ಲಾಟ್ ನಂ 9", "ದ್ವಿಪಾತ್ರ", " ಬರ್ಬರಿಕಾ"ಸಿನಿಮಾಗಳಲ್ಲಿಯೂ ಇವರು ಬಣ್ಣ ಹಚ್ಚಿದ್ದು ಅದು ತೆರೆ ಕಾಣಬೇಕಿದೆ.


Click it and Unblock the Notifications











