'ಅಮೃತಧಾರೆ'ಯ ಛಾಯಾ ಸಿಂಗ್ಗೂ 'ಲಕ್ಷ್ಮಿ ನಿವಾಸ'ದ ಭಾವನಾ ಪಾತ್ರಕ್ಕೂ ಏನೋ ಲಿಂಕ್.. ಏನದು?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಲಕ್ಷ್ಮಿ ನಿವಾಸ'ವೂ ಒಂದು. ತುಂಬು ಕುಟುಂಬದ ಕಥಾ ಹಂದರವನ್ನೊಳಗೊಂಡಿರುವ 'ಲಕ್ಷ್ಮಿ ನಿವಾಸ' ಧಾರಾವಾಹಿಯು ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದಿದೆ. ಅಂದ ಹಾಗೇ 'ಲಕ್ಷ್ಮಿ ನಿವಾಸ' ಧಾರಾವಾಹಿಯು ಈಗಾಗಲೇ ನಾನ್ನೂರಕ್ಕೂ ಹೆಚ್ಚಿನ ಸಂಚಿಕೆ ಪೂರೈಸಿದ್ದು ಪ್ರತಿ ಸಂಚಿಕೆಯನ್ನು ಕಿರುತೆರೆ ವೀಕ್ಷಕರು ಖುಷಿಯಿಂದ ವೀಕ್ಷಿಸುತ್ತಿದ್ದಾರೆ.
ಅಂದ ಹಾಗೇ ಇದರ ನಡುವೆ ಸಂತಸದ ಸುದ್ದಿಯೊಂದು ಹೊರಬಂದಿದೆ. ಅದೇನೆಂದರೆ 'ಲಕ್ಷ್ಮಿನಿವಾಸ' ಧಾರಾವಾಹಿಯು ತಮಿಳಿಗೆ ರಿಮೇಕ್ ಆಗುತ್ತಿದೆ. ಜೀ ತಮಿಳು ವಾಹಿನಿಯಲ್ಲಿ 'ಗಟ್ಟಿಮೇಳಂ' ಎನ್ನುವ ಹೆಸರಿನಲ್ಲಿ 'ಲಕ್ಷ್ಮಿನಿವಾಸ' ಧಾರಾವಾಹಿಯು ರಿಮೇಕ್ ಗೊಂಡು ಪ್ರಸಾರವಾಗಲಿದೆ. ಈಗಾಗಲೇ ಜೀ ತಮಿಳು ವಾಹಿನಿಯೂ ಧಾರಾವಾಹಿಯ ಪ್ರೋಮೋವೊಂದನ್ನು ಕೂಡಾ ಬಿಡುಗಡೆ ಮಾಡಿದೆ.

'ಲಕ್ಷ್ಮಿನಿವಾಸ' ಧಾರಾವಾಹಿಯಲ್ಲಿ ದಿಶಾ ಮದನ್ ಅವರು ಹಿರಿಮಗಳು ಭಾವನಾ ಆಗಿ ಅಭಿನಯಿಸುತ್ತಿದ್ದಾರೆ. ಅದೇ ತಮಿಳಿನ ರಿಮೇಕ್ ಧಾರಾವಾಹಿಯಲ್ಲಿ ಹಿರಿಮಗಳು ತುಳಸಿಯಾಗಿ ಛಾಯಾ ಸಿಂಗ್ ಅವರು ಕಾಣಿಸಿಕೊಂಡಿದ್ದಾರೆ. ಧಾರಾವಾಹಿಯ ಪ್ರೋಮೋದಲ್ಲಿ ಅವರು ಮದುವಣಗಿತ್ತಿಯಂತೆ ಅಲಂಕಾರಗೊಂಡಿದ್ದು ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಮೃತಧಾರೆ' ಧಾರಾವಾಹಿಯಲ್ಲಿ ನಾಯಕಿ ಭೂಮಿಕಾ ಆಗಿ ಅಭಿನಯಿಸುತ್ತಿರುವ ಛಾಯಾ ಸಿಂಗ್ ಇದೀಗ 'ಗಟ್ಟಿಮೇಳಂ' ಧಾರಾವಾಹಿಯಲ್ಲಿಯೂ ಪ್ರಮುಖ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಅಂದ ಹಾಗೇ ಛಾಯಾ ಸಿಂಗ್ ತಮಿಳು ಧಾರಾವಾಹಿಯಲ್ಲಿ ನಟಿಸುತ್ತಿರುವುದು ಇದು ಮೊದಲೇನಲ್ಲ. ಸನ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ನಾಗಮ್ಮ' ಧಾರಾವಾಹಿಯಲ್ಲಿ ನಾಗಮ್ಮ ಆಗಿ ನಟಿಸುವ ಮೂಲಕ ತಮಿಳು ಕಿರುತೆರೆಗೆ ಛಾಯಾ ಸಿಂಗ್ ಕಾಲಿಟ್ಟರು.
ಮುಂದೆ 'ರನ್', 'ಪೂವೇ ಉನಕಾಗ', 'ನಮ್ಮ ಮಧುರೈ ಸಿಸ್ಟರ್ಸ್' ಹೀಗೆ ಮೂರು ನಾಲ್ಕು ತಮಿಳು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದರ ಹೊರತಾಗಿ ತೆಲುಗು ಧಾರಾವಾಹಿಯಲ್ಲಿ ಈಕೆ ಕಮಾಲ್ ಮಾಡಿದ್ದಾರೆ. ಹೌದು, ತೆಲುಗಿನ 'ಕಾಂಚನಾಗಂಗಾ' ಧಾರಾವಾಹಿಯಲ್ಲಿ ನಟಿಸಿರುವ ಈಕೆ ಜೆಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಆನು ಆನೇ ನೇನು' ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ.
'ಸರೋಜಿನಿ' ಧಾರಾವಾಹಿಯ ಮೂಲಕ ಕಿರುತೆರೆಯ ನಂಟು ಬೆಳೆಸಿಕೊಂಡ ಛಾಯಾ ಸಿಂಗ್ 'ಪ್ರೇಮ ಕಥೆಗಳು' ಹಾಗೂ 'ನಂದಿನಿ' ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. 'ನಂದಿನಿ' ಧಾರಾವಾಹಿಯ ಬಳಿಕ ಕನ್ನಡ ಕಿರುತೆರೆಯಿಂದ ದೂರವಿದ್ದ ಈಕೆ 'ಅಮೃತಧಾರೆ' ಧಾರಾವಾಹಿಯ ಭೂಮಿಕಾಳಾಗಿ ಮತ್ತೆ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದು, ಈಕೆಯ ಕಂ ಬ್ಯಾಕ್ ವೀಕ್ಷಕರಿಗೆ ಸಂತಸವನ್ನೇ ನೀಡಿದೆ.
ಏಕಕಾಲಕ್ಕೆ ಕನ್ನಡ ಹಾಗೂ ತಮಿಳು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಛಾಯಾ ಸಿಂಗ್ ಅವರ ನಟನಾ ಪಯಣ ಶುರುವಾಗಿದ್ದು ಹಿರಿತೆರೆಯಿಂದ. 'ಮುನ್ನುಡಿ' ಸಿನಿಮಾದಲ್ಲಿ ಉನ್ನೀಸಾ ಆಗಿ ನಟಿಸುವ ಮೂಲಕ ಹಿರಿತೆರೆಗೆ ಕಾಲಿಟ್ಟ ಈಕೆ ಮತ್ತೆ ಹಿಂತಿರುಗಿ ನೋಡಿದ್ದಿಲ್ಲ. 'ಚಿಟ್ಟೆ', 'ತುಂಟಾಟ', 'ಬಲಗಾಲಿಟ್ಟು ಒಳಗೆ ಬಾ', 'ಪ್ರೀತಿಸಲೇಬೇಕು', 'ರೌಡಿ ಅಳಿಯ', 'ಸಖ ಸಖಿ', 'ಆಕಾಶಗಂಗೆ', 'ಮಫ್ತಿ', 'ಭೈರತಿ ರಣಗಲ್' ಹೀಗೆ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದರ ಹೊರತಾಗಿ ತಮಿಳು, ಮಲಯಾಳಂ ಮತ್ತೆ ತೆಲುಗು ಸಿನಿಮಾದಲ್ಲಿ ನಟಿಸಿರುವ ಈಕೆ ಚರ್ತುಭಾಷಾ ಸಿನಿಮಾ ತಾರೆ ಹೌದು.
'ಸಿಂಪ್ಲಿ ಕೈಲಾಸಂ' ಎನ್ನುವ ವೆಬ್ ಸಿರೀಸ್ನಲ್ಲಿ ನಟಿಸಿರುವ ಈಕೆ ಜೀ ಕನ್ನಡ ವಾಹಿನಿಯ ಪ್ರಸಾರವಾಗುತ್ತಿದ್ದ 'ಹಾಲು ಜೇನು' ಕಾರ್ಯಕ್ರಮದ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು.


Click it and Unblock the Notifications










