'ಎದೆ ತುಂಬಿ ಹಾಡುವೆನು' ಗೆದ್ದ ಚಿನ್ಮಯ್ಗೆ ದೊರೆತ ಬಹುಮಾನ ಎಷ್ಟು?
ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ನಡೆಸಿಕೊಡುತ್ತಿದ್ದ 'ಎದೆ ತುಂಬಿ ಹಾಡುವೆನು' ಸಿಂಗಿಂಗ್ ರಿಯಾಲಿಟಿ ಶೋ ಬಹಳ ದೊಡ್ಡ ಯಶಸ್ಸು ಗಳಿಸಿತ್ತು.
ಇದೇ ಹೆಸರಿನ ಸಂಗೀತ ಸ್ಪರ್ಧಾ ಸರಣಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಸವಿನೆನಪಿನಲ್ಲಿ ಪ್ರಾರಂಭವಾಗಿತ್ತು. ಸಂಗೀತ ಸ್ಪರ್ಧೆ ರಿಯಾಲಿಟಿ ಶೋನ ಫೈನಲ್ ಎಪಿಸೋಡ್ ನಿನ್ನೆ ಪ್ರಸಾರವಾಗಿದ್ದು, ಈ ಶೋನ ವಿಜೇತರನ್ನು ಘೋಷಿಸಲಾಗಿದೆ.
ಹಲವು ಉತ್ತಮ ಗಾಯನ ಪ್ರತಿಭೆಗಳು 'ಎದೆ ತುಂಬಿ ಹಾಡುವೆನು' ವೇದಿಕೆ ಮೇಲೆ ಹಾಡು ಹಾಡಿದ್ದು, ಅಂತಿಮವಾಗಿ ಸಂದೇಶ್, ನಾದಿರಾ ಬಾನು, ಕಿರಣ್, ಚಿನ್ಮಯ್, ಸೂರ್ಯಕಾಂತ್, ರಶ್ಮಿ ಧರ್ಮೇಂದ್ರ ಅವರುಗಳು ಗ್ರ್ಯಾಂಡ್ ಫಿನಾಲೆ ರೇಸ್ನಲ್ಲಿ ಉಳಿದುಕೊಂಡಿದ್ದರು. ಮೊದಲ ಹಂತದಲ್ಲಿ ರಶ್ಮಿ ಧರ್ಮೇಂದ್ರ ಮತ್ತು ಸೂರ್ಯಕಾಂತ್ ಅವರುಗಳು ಶೋನಿಂದ ಹೊರಬಿದ್ದರು. ಉಳಿದವರ ಮಧ್ಯೆ ಕಠಿಣವಾದ ಸ್ಪರ್ಧೆ ನಡೆಯಿತು.

ಎಸ್.ಬಿ.ಬಾಲಸುಬ್ರಹ್ಮಣ್ಯಂ ಅವರು ಹಾಡಲು ಬಳಸುತ್ತಿದ್ದ ಮೈಕ್ ಅನ್ನು ಫೈನಲಿಸ್ಟ್ ಹಾಡುಗಾರರು ಬಳಸಿದ್ದು ವಿಶೇಷವಾಗಿತ್ತು. ಎಲ್ಲ ಸ್ಪರ್ಧಿಗಳು ಅದ್ಭುತವಾಗಿ ಹಾಡುಗಳನ್ನು ಹಾಡಿದರು, ಅಂತಿಮವಾಗಿ ಬಳ್ಳಾರಿಯ ಚಿನ್ಮಯ್ ಜೋಶಿ ಅವರನ್ನು ವಿಜೇತರೆಂದು ತೀರ್ಪುಗಾರರಾದ ರಾಜೇಶ್ ಕೃಷ್ಣನ್, ರಘು ದೀಕ್ಷಿತ್, ವಿ ಹರಿಕೃಷ್ಣ ಅವರುಗಳು ಘೋಷಿಸಿದರು.
ಬಳ್ಳಾರಿಯ ಕಂಪ್ಲಿಯವರಾದ ಚಿನ್ಮಯ್ ಜೋಶಿ ಅವರಿಗೆ ಟ್ರೋಫಿ ಜೊತೆಗೆ 10 ಲಕ್ಷ ರುಪಾಯಿ ಹಣವನ್ನು ಬಹುಮಾನವಾಗಿ ನೀಡಲಾಗಿದೆ. ಎರಡನೇ ಬಹುಮಾನವನ್ನು ಮಂಗಳೂರಿನ ಸಂದೇಶ್ ಅವರಿಗೆ ನೀಡಲಾಯಿತು. ಸಂದೇಶ್ ಅವರಿಗೆ ಟ್ರೋಫಿ ಹಾಗೂ ಐದು ಲಕ್ಷ ರುಪಾಯಿ ಹಣವನ್ನು ಬಹುಮಾನವಾಗಿ ನೀಡಲಾಯಿತು.
'ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ಮೂರನೇ ಸ್ಥಾನವನ್ನು ಕಿರಣ್ ಅವರು ತಮ್ಮದಾಗಿಸಿಕೊಂಡರು. ಇವರಿಗೆ ಮೂರು ಲಕ್ಷ ರುಪಾಯಿ ಹಣ ಮತ್ತು ಟ್ರೋಫಿ ನೀಡಲಾಯಿತು. ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ನಾದಿರಾ ಬಾನುಗೆ ಒಂದು ಲಕ್ಷ ಹಣ ಹಾಗೂ ಟ್ರೋಫಿ ನೀಡಲಾಯಿತು.
ಗ್ರ್ಯಾಂಡ್ ಫಿನಾಲೆಯಲ್ಲಿ ರಾಜೇಶ್ ಕೃಷ್ಣನ್, ವಿ ಹರಿಕೃಷ್ಣ, ರಘು ದೀಕ್ಷಿತ್ ಜೊತೆಗೆ ಗುರುಕಿರಣ್ ಹಾಗೂ ಎಸ್ಪಿ ಬಾಲಸುಬ್ರಹ್ಮಣ್ಯಂ ಪುತ್ರ ಚರಣ್, ಸಾಧು ಕೋಕಿಲ ಅತಿಥಿಗಳಾಗಿ ಭಾಗವಹಿಸಿದ್ದರು.


Click it and Unblock the Notifications











