'ಮಹಾನಾಯಕ' ಹೊಸ ಪ್ರೋಮೋ ಬಿಡುಗಡೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ
ಕನ್ನಡದಲ್ಲಿ ಅಭೂತಪೂರ್ವ ಯಶಸ್ಸು ಕಂಡ ಧಾರಾವಾಹಿ 'ಮಹಾನಾಯಕ ಅಂಬೇಡ್ಕರ್'. ಈಗ ಅಂಬೇಡ್ಕರ್ ಅವರ ಜೀವನದ ಮತ್ತೊಂದು ಮಜಲನ್ನು ತೋರಿಸಲು ಜೀ ಕನ್ನಡ ಸಿದ್ಧವಾಗಿದೆ. ಇದೇ ಶುಕ್ರವಾರ ಆಗಸ್ಟ್ 20.08.2021 ರಂದು 'ಮಹಾನಾಯಕ ಅಂಬೇಡ್ಕರ್' ಧಾರಾವಾಹಿಯಲ್ಲಿ ಯುವ ಅಂಬೇಡ್ಕರ್ ಕಾಣಿಸಿಕೊಳ್ಳಲಿದ್ದಾರೆ.
ಸೋಮವಾರದಿಂದ ಶುಕ್ರವಾರ ಸಂಜೆ 6 ಗಂಟೆಗೆ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೀ ಕನ್ನಡದ ಅತ್ಯಂತ ಜನಪ್ರಿಯ ಧಾರಾವಾಹಿ "ಮಹಾನಾಯಕ ಅಂಬೇಡ್ಕರ್" ಜೀವನಗಾಥೆ ಅಪಾರ ವೀಕ್ಷಕರನ್ನು ಸೆಳೆದಿದೆ. ಎಲ್ಲರನ್ನೂ ಮೋಡಿ ಮಾಡಿದ ಬಾಲಕ ಭೀಮ ಇನ್ನು ಮುಂದೆ ಯುವಕನಾಗಿ ವೀಕ್ಷಕರ ಮುಂದೆ ಬರಲಿದ್ದಾರೆ. ಅಂಬೇಡ್ಕರ್ ಬದುಕಿನ ಮತ್ತೊಂದು ಮಜಲು ತೆರೆದಿಡುವ ಧಾರಾವಾಹಿಯ ವಿಶೇಷ ಪ್ರೋಮೋವನ್ನು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿದರು
ಜೀ ಕನ್ನಡದಲ್ಲಿ 'ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್' ಧಾರಾವಾಹಿ ಪ್ರಾರಂಭವಾಗಿದ್ದು ಕನ್ನಡ ಕಿರುತೆರೆಯಲ್ಲಿಯೇ ಒಂದು ಸಂಚಲನ ಮೂಡಿಸಿತು. ಈ ಧಾರಾವಾಹಿಯನ್ನು ಇಡೀ ವೀಕ್ಷಕರು ಸಂಭ್ರಮದಿಂದ ಸ್ವಾಗತಿಸಿದರು. ಈ ಧಾರಾವಾಹಿಯನ್ನು ಜನರು ಒಟ್ಟಾಗಿ ಕೂತು ಎಲ್.ಇ.ಡಿ ಸ್ಕ್ರೀನ್ ಗಳಲ್ಲಿ ವೀಕ್ಷಿಸಿದ್ದೇ ಅಲ್ಲದೆ ಈ ಧಾರಾವಾಹಿಯ ಶೀರ್ಷಿಕೆ ಗೀತೆ ಸೂಪರ್ ಹಿಟ್ ಆಯಿತು.

ಶನಿವಾರ ಹಾಗೂ ಭಾನುವಾರ ಮಾತ್ರ ಪ್ರಸಾರವಾಗುತ್ತಿದ್ದ ಈ ಜನಪ್ರಿಯ ಧಾರಾವಾಹಿ ವೀಕ್ಷಕರ ಒತ್ತಾಯಕ್ಕೆ ಮಣಿದು ಜೀ ಕನ್ನಡ ಸೋಮವಾರದಿಂದ ಶುಕ್ರವಾರ ಸಂಜೆ 6 ಗಂಟೆಗೆ ಪ್ರಸಾರ ಮಾಡಿ ದೈನಂದಿನ ಧಾರಾವಾಹಿಯಾಗಿ ಪರಿವರ್ತಿಸಿತು. ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಧಾರಾವಾಹಿಯ ಶೀರ್ಷಿಕೆ ಗೀತೆಯ ಕಾಲರ್ ಟ್ಯೂನ್ ಅನ್ನು ಬಿಡುಗಡೆ ಮಾಡಲಾಗಿದೆ. ಧಾರಾವಾಹಿಯ ಪೋಸ್ಟರ್ ಗಳು ಮಾರುಕಟ್ಟೆಗೆ ಬಂದಿವೆ. ಇವೆಲ್ಲ ಒಂದು ಧಾರಾವಾಹಿಗೆ ಹಿಂದೆಂದೂ ಕಾಣದಂತಹ ಅಭೂತಪೂರ್ವ ಪ್ರತಿಕ್ರಿಯೆಗೆ ಸಾಕ್ಷಿಯಾಗಿದೆ.

ಈ ಧಾರಾವಾಹಿಯ ಜನಪ್ರಿಯತೆ ಕುರಿತು ಜೀ ಕನ್ನಡದ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, "ದೇಶ ಸ್ವಾತಂತ್ರ್ಯ ಪಡೆದ 75ನೇ ವರ್ಷದ ಸಂದರ್ಭದಲ್ಲಿ ಯುವ ಅಂಬೇಡ್ಕರ್ ಅವರ ಜೀವನಗಾಥೆ ಹೇಳುವ ʻಮಹಾನಾಯಕ ಅಂಬೇಡ್ಕರ್ʼ ಧಾರಾವಾಹಿಯ ವಿಶೇಷ ಪ್ರೋಮೋವನ್ನು ನಾಡಿನ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿರುವುದು ನಮಗೆಲ್ಲ ಹೆಮ್ಮೆ. ಅಭೂತಪೂರ್ವ ಯಶಸ್ಸು ನೀಡಿದ ಜೀ ಕನ್ನಡ ವೀಕ್ಷಕರಿಗೆ ನಮ್ಮ ಕೃತಜ್ಞತೆಗಳು. ಮಹಾನಾಯಕನ ಬಾಲ್ಯದ ಜೀವನ, ಅವರ ಹೋರಾಟದ ಬದುಕಿನ ಕಥೆಗೆ ನೀಡಿದಂತಹ ಬೆಂಬಲವನ್ನು ಯುವ ಅಂಬೇಡ್ಕರ್ ಕಥೆಗೂ ನೀಡಿ ಆದರಿಸುತ್ತಾರೆ ಎಂಬ ಭರವಸೆ ನಮ್ಮದು. ಇದೀಗ "ಮಹಾನಾಯಕ ಅಂಬೇಡ್ಕರ್ʼ ರವರ ಜೀವನದ ವಿನೂತನ ವಿವರಗಳು ತೆರೆಯ ಮೇಲೆ ಮೂಡಲಿವೆ." ಎಂದರು.


Click it and Unblock the Notifications











