ರಾಜದೀಪ್ ಬಗಲಿಗೆ ಈಟಿವಿ ಕನ್ನಡ ನ್ಯೂಸ್ ಚಾನೆಲ್
ಉಡುಪಿ, ಆಗಸ್ಟ್ 1: 'ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ವಿಪರೀತ ಮಾರ್ಪಾಡುಗಳನ್ನು ಕಾಣುತ್ತಿವೆ. ಮಾಧ್ಯಮ ಸಂಸ್ಥೆಗಳ ಸಂಖ್ಯೆ ವಿಪರೀತವಾಗುತ್ತಿವೆ. ಆದರೆ ಗುಣಮಟ್ಟ ಹೇಳಿಕೊಳ್ಳುವಂತಹುದಲ್ಲ' ಎಂದು ಹಿರಿಯ ಪತ್ರಕರ್ತ, ಸಿಎನ್ಎನ್-ಐಬಿಎನ್ ನ್ಯೂಸ್ ಚಾನೆಲ್ ಮುಖ್ಯ ಸಂಪಾದಕ ರಾಜದೀಪ್ ಸರ್ದೇಸಾಯಿ ಹೇಳಿದ್ದಾರೆ.
ಮಣಿಪಾಲ ವಿವಿ ಸ್ಕೂಲ್ ಆಫ್ ಕಮ್ಯುನಿಕೇಷನ್ ವಿದ್ಯಾರ್ಥಿಗಳ ಜತೆ ಬುಧವಾರ ಬೆಳಗ್ಗೆ ನಡೆಸಿದ ಸಂವಾದದ ವೇಳೆ ರಾಜದೀಪ್ ಈ ಅಭಿಪ್ರಾಯ ವ್ಯಕ್ತಪಡಿಸಿದರು. ನಾವಿರುವ ಸಮಾಜದಲ್ಲಿ ಇಂದು ಅಸಹನೆ ಹೆಚ್ಚುತ್ತಿದೆ. ಪರಸ್ಪರ ಅಪನಂಬಿಕೆಯಿಂದ ಸಮಾಜ ಇಬ್ಭಾಗವಾಗುತ್ತಿದೆ. ಪತ್ರಕರ್ತ ಇದನ್ನು ಜನರಿಗೆ ಎತ್ತಿ ತೋರಿಸುವ ಕೆಲಸ ಮಾಡಬೇಕಾಗಿದೆ ಎಂದು ಅವರು ಕಿವಿಮಾತು ಹೇಳಿದರು.

ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದ್ದೇವೆ- ರಾಜದೀಪ್ ವಿಷಾದ
ಪತ್ರಕರ್ತನಿಗೆ ಅತೀ ಮುಖ್ಯವಾಗಿ ಬೇಕಾಗಿರುವುದು ವಿಶ್ವಾಸಾರ್ಹತೆ. ಒಬ್ಬ ಓದುಗ, ವೀಕ್ಷಕನ ಮನೋದೃಷ್ಟಿಯಲ್ಲಿ ನೀವು ಯಾವತ್ತೂ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳದಂತೆ ವರದಿ ಮಾಡುವುದು ಮುಖ್ಯ. ಆದರೆ ಇಂದಿನ ದಿನಗಳಲ್ಲಿ ಸುದ್ದಿಯನ್ನು ವೈಭವೀಕರಿಸುವ ಭರದಲ್ಲಿ ನಾವು ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದ್ದೇವೆ ಎಂದು ರಾಜದೀಪ್ ವಿಷಾದ ವ್ಯಕ್ತಪಡಿಸಿದರು.

ಮಾಧ್ಯಮಎಂಬುದು 20-ಟ್ವೆಂಟಿ ಪಂದ್ಯವಲ್ಲ
ಪತ್ರಕರ್ತನ ಪಾಲಿಗೆ ಪ್ರತಿದಿನವೂ ಹೊಸ ದಿನವಾಗಿರುತ್ತದೆ. ಪ್ರತಿದಿನವೂ ಹೊಸ ಸವಾಲುಗಳನ್ನು ಎದುರಿಸಲು ಸಿದ್ಧನಾಗಿರಬೇಕು. ಅದರೊಂದಿಗೆ ಆತ ನೈತಿಕತೆಯ ಎಲ್ಲೆ ಮೀರಬಾರದು. ಮಾಧ್ಯಮಎಂಬುದು 20-ಟ್ವೆಂಟಿ ಪಂದ್ಯವಲ್ಲ ಎಂಬ ಅರಿವು ಆತನಿಗಿರಬೇಕು ಎಂದವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಜನಪರ ಕಾರ್ಯಕ್ರಮಗಳಿಗೆ ಪ್ರಾಯೋಜಕರೇ ಸಿಗುವುದಿಲ್ಲ
ಜನಸಾಮಾನ್ಯರಿಗೆ ಬೇಕಾದ ಕಾರ್ಯಕ್ರಮಗಳನ್ನು ಈಗಲೂ ಪ್ರಸಾರ ಮಾಡಲಾಗುತ್ತದೆ. ಆದರೆ ಅದು ಹೆಚ್ಚು ಜನರ ಗಮನ ಸೆಳೆಯುವುದಿಲ್ಲ. ಉದಾಹರಣೆಗೆ ತಮ್ಮ ಐಬಿಎನ್ ಚಾನೆಲಿನಲ್ಲಿ ಈಗ ಪಶ್ಚಿಮ ಘಟ್ಟದ ಅಳಿವು-ಉಳಿವಿನ ಬಗ್ಗೆ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಆದರೆ ಅದಕ್ಕೆ ನಮಗೆ ಪ್ರಾಯೋಜಕರೇ ಸಿಗುವುದಿಲ್ಲ ಎಂದು ಸಖೇದ ಆಶ್ಚರ ವ್ಯಕ್ತಪಡಿಸಿದರು.

ಈಟಿವಿ-ಕನ್ನಡ ಖರೀದಿಗೆ ರಾಜದೀಪ್ :
ಪ್ರತಿಯೊಂದು ಪ್ರಾದೇಶಿಕ ಭಾಷೆಯಲ್ಲೂ ಗುಣ ಮಟ್ಟದ ಚಾನೆಲ್ ಆರಂಭಿಸಬೇಕೆಂಬುದು ನಮ್ಮ ಬಯಕೆ. ಈಟಿವಿ-ಕನ್ನಡ ಖರೀದಿಗೆ ಪ್ರಯತ್ನ ಮುಂದುವರಿದಿದೆ. ಆದರೆ ಸರಕಾರದಿಂದ ಇನ್ನೂ ಒಪ್ಪಿಗೆ ಸಿಕ್ಕಿಲ್ಲ ಎಂದು ತಿಳಿಸಿದರು. ಎಸ್ಒಸಿ ನಿರ್ದೇಶಕ ಪ್ರೊ. ವರದೇಶ್ ಹಿರೇಗಂಗೆ ಸ್ವಾಗತಿಸಿ, ರಾಜ್ದೀಪ್ ಅವರ ಪರಿಚಯ ಮಾಡಿದರು. ಮಣಿಪಾಲ ವಿವಿ ಸಾರ್ವಜನಿಕ ಸಂಪರ್ಕ ನಿರ್ದೇಶಕ ಅಲೆಕ್ಸ್ ಚಾಂಡಿ ಉಪಸ್ಥಿತರಿದ್ದರು.


Click it and Unblock the Notifications











