ಇದೇ ಅಕ್ಟೋಬರ್ 23ರಂದು ಬೃಂದಾವನ ಧಾರಾವಾಹಿ ಆರಂಭ: ಗೀತಾ ಸೀರಿಯಲ್ ಮುಕ್ತಾಯ..!
ಕನ್ನಡದ ಕಿರುತೆರೆ ಲೋಕದಲ್ಲಿ ರಾಮ್ ಜಿ ಹಲವಾರು ಪ್ರಯೋಗಗಳನ್ನು ಮಾಡುತ್ತಲೇ ಜನರ ಮನಸ್ಸನ್ನು ಗೆದ್ದವರು. ಇವರ ನಿರ್ದೇಶನದ ಧಾರಾವಾಹಿಗಳೆಲ್ಲವೂ ಸಹ ಸಕ್ಸಸ್ ಕಂಡು ಇವರಿಗೆ ಒಳ್ಳೆಯ ಹೆಸರನ್ನು ತಂದು ಕೊಟ್ಟಿದೆ. ಇನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿ ಸಹ ಇವರ ನಿರ್ದೇಶನದಲ್ಲಿಯೇ ಬಂದಿದ್ದು, ಅದೇ ರೀತಿ ಈಗ ಬೃಂದಾವನ ಧಾರಾವಾಹಿ ತೆರೆಗೆ ಬರುತ್ತಿದೆ. ಇದಕ್ಕಾಗಿ ಗೀತಾ ಸೀರಿಯಲ್ ಅನ್ನು ಮುಗಿಸಲಾಗಿದೆ. ಅದೇ ಸಮಯದಲ್ಲಿ ಬೃಂದಾವನ ಹೊಸ ಧಾರಾವಾಹಿ ರಾಮ್ಜಿ ನಿರ್ದೇಶನದಲ್ಲಿ ಬರುತ್ತಿದೆ.
ಪುಟ್ಟಗೌರಿ ಮದುವೆ, ರಂಗನಾಯಕಿ, ನಾಗಿಣಿ-2, ಗೀತಾ, ರಾಣಿ, ಮಂಗಳಗೌರಿ ಮದುವೆ ಈ ಎಲ್ಲಾ ಧಾರಾವಾಹಿಗಳನ್ನು ಸಹ ಕೆ.ಎಸ್.ರಾಮ್ ಜಿ ನಿರ್ದೇಶನ ಮಾಡಿದ್ದಾರೆ. ಈಗ ಒಂದು ದೊಡ್ಡ ಕುಟುಂಬದ ಬೃಂದಾವನ ಧಾರಾವಾಹಿಯನ್ನು ನಿರ್ದೇಶನ ಮಾಡಿದ್ದಾರೆ. ಈ ಬಾರಿ ವಿಭಿನ್ನ ಕಥೆಯನ್ನ ಹೇಳುವ ಧಾರಾವಾಹಿಯನ್ನು ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಬೃಂದಾವನ ಧಾರಾವಾಹಿ ಪ್ರೋಮೋದಲ್ಲೇ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ಯೋಗರಾಜ್ ಭಟ್ಟರ ಧ್ವನಿಯ ಮೂಲಕವೇ ಕೂಡು ಕುಟುಂಬದ ಪರಿಚಯವನ್ನು ಮಾಡಿಸಲಾಗಿದೆ.

ಇದು ಅವಿಭಕ್ತ ಕುಟುಂಬದ ಅಪರೂಪದ ಕಥೆಯಾಗಿದ್ದು ಮೊಮ್ಮಗನಿಗೆ ಹುಡುಗಿ ಹುಡುಕುವುದೇ ಇಲ್ಲಿ ಕಥೆಯ ಮೂಲ ಉದ್ದೇಶವಾಗಿದೆ, ಜಾತಕದ 36 ಗಣ ಕೂಡೋದು ಮುಖ್ಯ ಅಲ್ಲ ಮನೆಯ 36 ಜನ ಒಪ್ಪಿದ ಅವಳಷ್ಟೇ ಈ ಮನೆಯ ಸೊಸೆ ಎಂಬ ಡೈಲಾಗ್ನೊಂದಿಗೆ ಬಂದ ಪ್ರೋಮೋ ಸಾಕಷ್ಟು ಕುತೂಹಲವನ್ನ ಹುಟ್ಟಿಹಾಕಿದ್ದು ಈಗ ತೆರೆಗೆ ಬರಲು ಸಿದ್ಧವಾಗಿದೆ. ಎಲ್ಲರಿಗೂ ಸಹ ಈ ಧಾರಾವಾಹಿ ಯಾವಾಗ ಪ್ರಸಾರ ಕಾಣುತ್ತದೆ ಎಂದು ಕುತೂಹಲ ಇತ್ತು. ಅದಕ್ಕೆ ಈಗ ಕಾಲ ಕೂಡಿ ಬಂದಿದ್ದು ಟೈಮ್ ಹಾಗೂ ಡೇಟ್ನ್ನು ರಿವೀಲ್ ಮಾಡಿದ್ದು ಇದೆ ಅಕ್ಟೋಬರ್ 23 ರಂದು ರಾತ್ರಿ 8 ಗಂಟೆಗೆ ತೆರೆಗೆ ಬರಲಿದೆ.
ಮುಕ್ತಾಯದ ಹಂತಕ್ಕೆ ಬಂದ ಗೀತಾ, ಹೊಸ ಕಥೆ ಹೊತ್ತು ತಂದ ರಾಮ್ ಜಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿ ಜನವರಿ 6, 2020 ರಿಂದ ಪ್ರಸಾರ ಆರಂಭಿಸಿತು. ಇಲ್ಲಿಯವರೆಗೆ 995 ಎಪಿಸೋಡ್ಗಳನ್ನು ಮುಕ್ತಾಯಗೊಳಿಸಿ ಸಾವಿರದತ್ತ ದಾಪುಗಾಲು ಇಟ್ಟಿದ್ದು ಸಾವಿರ ಸಂಚಿಕೆಯನ್ನು ಮುಗಿಸಿ ಮುಕ್ತಾಯವನ್ನು ಕಾಣಲಿದೆ. ಈಗಾಗಲೇ ಭಾನುಮತಿಯ ಎಲ್ಲಾ ಸಂಚು ವಿಜಿಗೆ ತಿಳಿದಿದ್ದು ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಭಾನುಮತಿ ವಿದೇಶಕ್ಕೆ ಹಾರುವ ಪ್ಲಾನ್ ಮಾಡಿದ್ದು ಇದಕ್ಕೆ ವಿಜಿ ಫುಲ್ ಸ್ಟಾಪ್ ಇಟ್ಟಿದ್ದಾನೆ. ಕೊನೆಗೆ ಭಾನುಮತಿಯನ್ನ ಲಾಕ್ ಮಾಡಬೇಕು ಎಂದು ವಿಜಿ ಚಕ್ರವ್ಯೂಹವನ್ನು ಏರ್ಪಡಿಸಿದ್ದು ಬ್ಯಾಂಕ್ ಅಕೌಂಟ್ ಎಲ್ಲವನ್ನು ಸಹ ಲಾಕ್ ಮಾಡಿಸಿದ್ದಾನೆ.
ರಾಮ್ ಜೀ ನಿರ್ದೇಶನದಲ್ಲೇ ಗೀತಾ ಧಾರಾವಾಹಿ ಪ್ರಸಾರ ಕಾಣುತ್ತಿತ್ತು. ಈಗ ಗೀತಾ ಧಾರಾವಾಹಿಯನ್ನು ಮುಕ್ತಾಯದ ಹಂತಕ್ಕೆ ತಂದಿದ್ದು ಅದೇ ಹೊತ್ತಿನಲ್ಲಿ ಹೊಸ ಧಾರಾವಾಹಿ ಬೃಂದಾವನ ಬರುತ್ತಿದೆ. ಇಲ್ಲೂ ಸಹ ಹಿರಿಯ ಕಲಾವಿದರ ದಂಡಿದೆ. ಹೊಸ ಹೊಸ ಬಾಲಪ್ರತಿಭೆಗಳಿಗೂ ಸಹ ಅವಕಾಶವನ್ನು ಕೊಡಲಾಗಿದೆ. ರಾಮ್ ಜಿ ಬಳಿ ಗೀತಾ ಧಾರಾವಾಹಿಯನ್ನು ಎಷ್ಟು ಎಳೆಯುತ್ತೀರಾ ಸಾಕು ಒಂದು ಮುಕ್ತಿಯನ್ನು ಕೊಡಿ ಎಂದು ಪ್ರೇಕ್ಷಕರು ಕೇಳುತ್ತಿದ್ದರು.ಅದಕ್ಕೆ ಒಂದು ಉತ್ತಮವಾದ ಅಂತ್ಯವನ್ನು ನೀಡುವ ಮೂಲಕ ಹೊಸ ಧಾರಾವಾಹಿ ಆರಂಭಿಸಿದ್ದಾರೆ.

ದೊಡ್ಡಮನೆ, ಸಣ್ಣತಪ್ಪು, 3 ಗಂಟು ಏನಿದರ ಅರ್ಥ?
ಅಮ್ಮಮ್ಮನ ನಿರ್ಧಾರದ ಆಯ್ಕೆ ತಪ್ಪಾಗುತ್ತಾ..?
ಕನ್ನಡತಿ ಧಾರಾವಾಹಿ ಮೂಲಕ ಅಮ್ಮಮ್ಮನ ಖ್ಯಾತಿ ಪಡೆದ ಚಿತ್ಕಲಾ ಬಿರಾದಾರ್ ಅವರು ಈಗ ದೊಡ್ಡ ಮನೆಯ ಒಡೆತಿಯಾಗಿ ಮತ್ತೆ ಪಾದಾರ್ಪಣೆ ಮಾಡಿದ್ದಾರೆ. ಮೊಮ್ಮಗನಿಗೆ ಮದುವೆ ಮಾಡಬೇಕು ಎಂಬುದು ಸುಧಾಮೂರ್ತಿ(ಚಿತ್ಕಲಾ ಬಿರಾದಾರ್) ಆಸೆಯಾಗಿದೆ. ಹುಡುಗಿ ವಿಷಯದಲ್ಲಿ ಅಮ್ಮಮ್ಮನ ಆಯ್ಕೆ ತಪ್ಪಾಗುತ್ತಾ ಅಥವಾ ಹುಡುಗನಿಗೆ ಕಳಿಸಿದ ಫೋಟೋ ತಪ್ಪಾಗಿ ಕಳುಹಿಸಲಾಗಿದ್ಯಾ ಎಂಬ ಸಾರಾಂಶವನ್ನು ದೊಡ್ಡ ಮನೆ, ಸಣ್ಣ ತಪ್ಪು, ಮೂರು ಗಂಟು ಎಂಬುದರ ಅರ್ಥವೇನೋ ಎಂದು ಪ್ರೇಕ್ಷಕರು ಅಂದುಕೊಂಡಿದ್ದಾರೆ.
ಕನ್ನಡತಿ ಧಾರಾವಾಹಿಯಲ್ಲಿ ಅಮ್ಮಮ್ಮನ ನಿರ್ಧಾರ ಸರಿಯಾಗಿ ಇರುತ್ತಿತ್ತು. ಈಗ ಬೃಂದಾವನ ಧಾರಾವಾಹಿಯಲ್ಲಿ ಮನೆಯ ಒಡತಿಯಾಗಿರುವ ಸುಧಾಮೂರ್ತಿಯವರು ಯಾವ ರೀತಿ ಅಭಿನಯ ಮಾಡಿದ್ದಾರೆ ಎಂದು ಅವರ ಅಭಿಮಾನಿಗಳು ಕಾಯುತ್ತಾ ಇದ್ದಾರೆ. ಹೊಸ ಸೀರಿಯಲ್ ಬೃಂದಾವನ ಧಾರಾವಾಹಿಯು ಉತ್ತಮವಾಗಿ ಮೂಡಿ ಬರಲಿ ಎಂಬುದೇ ಪ್ರೇಕ್ಷಕರ ಆಶಯ.


Click it and Unblock the Notifications











