Lakshmibaramma: ಮಗಳು ಕೇಳಿದ್ರು ಮದುವೆ ಮಾಡ್ತಿಲ್ಲ ಕಾವೇರಿ; ಮಗನ 2ನೇ ಮದುವೆಗ್ಯಾಕೆ ಹಠ?
'ಲಕ್ಷ್ಮೀಬಾರಮ್ಮ' ಧಾರಾವಾಹಿಯ ಕಾವೇರಿಯನ್ನ ಕಂಡರೆ ಅದೆಷ್ಟೋ ಹೆಣ್ಣು ಮಕ್ಕಳಿಗೆ ಕೋಪ ನೆತ್ತಿಗೆ ಹತ್ತುತ್ತದೆ. ಯಾಕಂದ್ರೆ ಒಬ್ಬ ತಾಯಿಯಾಗಿ ತನ್ನ ಸಂಸಾರ ಚೆನ್ನಾಗಿರಬೇಕು ಎಂದುಕೊಳ್ಳುವುದಕ್ಕಿಂತ ಸಂಸಾರ ಹಾಳಾದರೂ ಸರಿ, ಎಷ್ಟು ಮದುವೆಯಾದರೂ ಸರಿ ಸೊಸೆಯಾದವಳು ನನ್ನ ಮಾತನ್ನೇ ಕೇಳಬೇಕು ಅಂತ ಹಠ ಮಾಡುವವಳು ಕಾವೇರಿ.
ಕಶ್ಯಪ ಫ್ಯಾಮಿಲಿಯಲ್ಲಿ ಸದ್ಯಕ್ಕೆ ಜಗಳ ಆಗ್ತಾ ಇರೋದೆ ಕಾವೇರಿಯಿಂದ. ಅವಳ ಸ್ವಾರ್ಥದಿಂದ. ಯಾವಾಗಲೂ ನನ್ನ ಪುಟ್ಟ ನನ್ನ ಪುಟ್ಟ ಎನ್ನುವ ಕಾವೇರಿ ಮನಸ್ಸಾರೆ ಮಗನ ಖುಷಿಯನ್ನ ಬಯಸಿದವಳೇ ಅಲ್ಲ. ತನ್ನ ಸ್ವಾರ್ಥಕ್ಕೆ ಪ್ರೀತಿ ಎಂಬ ನಾಟಕ ಮಾಡ್ತಿದ್ದಾಳೆ ಅಷ್ಟೇ. ಅದಕ್ಕೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಕೀರ್ತಿಯನ್ನ ದೂರ ಮಾಡಿದ್ಲು, ಈಗ ಪ್ರೀತಿಯಾಗ್ತಿರೋ ಲಕ್ಷ್ಮೀಯನ್ನು ದೂರ ಮಾಡುವುದಕ್ಕೆ ಹೊರಟಿದ್ದಾಳೆ.

2ನೇ ಮದುವೆಗೆ ವೈಷ್ಣವ್ ಒಪ್ಪಿಗೆ
ಕಾವೇರಿ ಎಷ್ಟೇ ಹೇಳಿದರೂ ಲಕ್ಷ್ಮೀ ಕೇಳುತ್ತಿಲ್ಲ. ವೈಷ್ಣವ್ ಮತ್ತೆ ಮದುವೆಗೆ ಒಪ್ಪಿರುವುದಕ್ಕೆ ಸಾಧ್ಯವೇ ಇಲ್ಲ ಎಂಬ ಆತ್ಮವಿಶ್ವಾಸ. ಆದರೆ ಮನೆಯವರೆಲ್ಲರ ಮುಂದೆ ಲಕ್ಷ್ಮೀಗೆ ಬೇಸರ ಮಾಡಿದ ವೈಷ್ಣವ್, ಪರೋಕ್ಷವಾಗಿ ಮದುವೆಗೆ ಒಪ್ಪಿದ್ದನ್ನ ಹೇಳಿದ್ದಾನೆ. ನಾನು ಇವತ್ತು ಈ ಸ್ಥಾನದಲ್ಲಿರೋದಕ್ಕೆ ಅಮ್ಮನೇ ಕಾರಣ, ಅವರ ಮಾತನ್ನ ಮೀರುವುದಿಲ್ಲ ಎಂದು ಹೇಳಿದ್ದಾನೆ. ಇದರಿಂದ ಲಕ್ಷ್ಮೀಗೆ ಕಣ್ಣೀರು ಹಾಕುವುದನ್ನು ಬಿಟ್ಟು ಬೇರೆ ದಾರಿಯೇ ಇಲ್ಲದಂತೆ ಆಗಿದೆ.
ಲಕ್ಷ್ಮೀಗೆ ಮತ್ತೊಂದು ಅವಕಾಶ
ಅದೇ ಸಮಯಕ್ಕೆ ಸಾಮೂಹಿಕ ವಿವಾಹ ಆರ್ಗನೈಸೇಶನ್ ಮಾಡಿದ್ದವರು ಬಂದರು. ವೈಷ್ಣವ್ಗೆ ದಂಪತಿ ಸಮೇತ ಬರುವಂತೆ ತಿಳಿಸಿದಾಗ, ಕಾವೇರಿ ಅದನ್ನು ತಡೆಯುವುದಕ್ಕೆ ನೋಡಿದಳು. ಆದರೂ ವೈಷ್ಣವ್ ಅದಕ್ಕೆ ಒಪ್ಪಿದ್ದಾನೆ. ಆದರೆ ಇದು ಲಕ್ಷ್ಮೀಯ ಮನಸ್ಸಲ್ಲಿ ಬೇಸರವನ್ನ ಮೂಡಿಸಿದೆ. ಇಲ್ಲಿ ಗಂಡ ಹೆಂಡತಿ ಸಂಬಂಧಕ್ಕೆ ಅಕ್ಕಿ ಕಾಳು ಹಾಕಿ, ಅಲ್ಲಿ ಬೇರೆಯವರ ಸಂಸಾರ ಚೆನ್ನಾಗಿರಲಿ ಅಂತ ಅಕ್ಷತೆ ಹಾಕುವುದಕ್ಕೆ ಹೊರಟಿದ್ದೀರಿ. ಚೆನ್ನಾಗಿದೆ ಈ ಸನ್ನಿವೇಶ ಎಂದು ಮನಸ್ಸಲ್ಲಿಯೇ ಕೊರಗಿದ್ದಾಳೆ. ಆದರೂ ವೈಷ್ಣವ್ ಹಾಗೂ ಲಕ್ಷ್ಮೀ ನಡುವಿನ ವೈಮನಸ್ಸನ್ನ ದೂರ ಮಾಡಲು ಮತ್ತೊಂದು ಅವಕಾಶ ಸಿಕ್ಕಂತೆ ಆಗಿದೆ.
ಮದುವೆ ಮಾಡೆಂದ ನಿಧಿ
ಇತ್ತ ನಿಧಿ ಒಂದು ಹುಡುಗನನ್ನ ಲವ್ ಮಾಡ್ತಾ ಇದ್ದಾಳೆ. ಅವನನ್ನೇ ಮದುವೆಯಾಗಬೇಕೆಂದು ಬಯಸಿದ್ದಾಳೆ. ಅಮ್ಮನ ಮುಂದೆ ಹೋಗಿ ನಾನು ಮದುವೆಯಾಗ್ತೀನಿ ಅಂದ್ರೆ, ಕೋಪದಲ್ಲಿದ್ದ ಕಾವೇರಿ, ನಿಂಗೆ ನಾನು ಮದುವೆ ಮಾಡಿಸಲ್ಲ ಸುಮ್ಮನೆ ಹೋಗು ಎಂದು ಕೈಯಲ್ಲಿದ್ದ ಸಾಮೂಹಿಕ ವಿವಾಹದ ಮಾಹಿತಿಯ ಪೇಪರ್ ಎಸೆದು ಹೋಗಿದ್ದಾಳೆ.

ವೈಷ್ಣವ್ ಮನಸ್ಸು ಬದಲಾಗುತ್ತಾ?
ಸಾಮೂಹಿಕ ವಿವಾಹದ ಮಾಹಿತಿ ತಿಳಿದ ವಿಧಿ, ಅಮ್ಮನಿಗೆ ಸವಾಲು ಹಾಕಿದ್ದು, ನಾನು ಮದುವೆ ಹೇಗೆ ಆಗಬೇಕೆಂಬುದು ಗೊತ್ತಿದೆ ಎಂದು ಸಾಮೂಹಿಕ ವಿವಾಹಕ್ಕೆ ಹೋಗಲು ಪ್ಲ್ಯಾನ್ ಮಾಡಿದಂತೆ ಇದೆ. ಅದೇ ಕಾರ್ಯಕ್ರಮಕ್ಕೆ ಅಣ್ಣ ಅತ್ತಿಗೆಯೂ ಹೋಗುತ್ತಿದ್ದು, ಈಗ ಅಮ್ಮನಿಲ್ಲದೆ ಅಣ್ಣ ಅತ್ತಿಗೆಯ ಆಶೀರ್ವಾದ ಪಡೆದು ವಿಧಿ ಮದುವೆಯಾಗಲಿದ್ದಾಳೆ ಎನಿಸುತ್ತದೆ. ಇದಾದ ಮೇಲಾದರೂ ವೈಷ್ಣವ್ಗೆ ತನ್ನ ಸ್ವಾರ್ಥದ ಅಮ್ಮನ ಬಗ್ಗೆ ಅರಿವು ಮೂಡಬಹುದು. ತನ್ನ ಪ್ರೀತಿ ವಿಚಾರದಲ್ಲಿ ಕಾವೇರಿ ಮಾಡಿದ ಅನ್ಯಾಯ, ಲಕ್ಷ್ಮೀ ವಿಚಾರದಲ್ಲಿ ನಡೆದುಕೊಳ್ಳುತ್ತಿರುವ ರೀತಿಯೂ ವೈಷ್ಣವ್ ಗೆ ಅರ್ಥವಾಗಬಹುದು. ಇನ್ಮೇಲಾದರೂ ಅಮ್ಮನ ತಾಳಕ್ಕೆ ಕುಣಿಯದೆ ತನ್ನ ಪ್ರೀತಿಯನ್ನು ಕಾಪಾಡಿಕೊಳ್ಳಲಿ ಎಂಬುದೇ ವೀಕ್ಷಕರ ಒತ್ತಾಯ.


Click it and Unblock the Notifications











