Ramachari: ಕೊನೆಗೂ ಗೆದ್ದ ಚಾರು: ಸೊಸೆ -ಮಗನ ಮೇಲೆ ಇನ್ನೂ ನಾರಾಯಣ ಆಚಾರ್ಯರಿಗೆ ಸಿಟ್ಟು..?!
ರಾಮಾಚಾರಿಯಲ್ಲಿ ಅಡುಗೆ ಘಮ ಸದ್ದು ಮಾಡುತ್ತಿದೆ. ವೈಶಾಖ ಮಾಡಿದ್ದ ಪ್ಲಾನ್ ಎಲ್ಲವೂ ಸಹ ವೈಶಾಖಗೆ ಉಲ್ಟಾ ಹೊಡೆದಿದೆ. ಕೋದಂಡ ಹೇಳಿದಂತೆ ವೈಶಾಖ ಮಾಡುತ್ತಿರುವ ಕೆಲಸವೆಲ್ಲವೂ ಸಹ ಚಾರುಗೆ ಗೆಲುವು ತಂದು ಕೊಡುತ್ತಿವೆ. ಚಾರು ಮನೆಯವರಿಗೆ ಇನ್ನಷ್ಟು ಹತ್ತಿರವಾಗುವಂತೆ ಮಾಡುತ್ತಿವೆ. ವೈಶಾಖ ಊಟವನ್ನೆಲ್ಲಾ ಹಾಳು ಮಾಡಿ ಮಳ್ಳಿಯ ಹಾಗೆ ಇದ್ದಳು. ನಾರಾಯಣ ಆಚಾರ್ಯರು ಚಾರುಗೆ ಬೈದು ಅವಳ ಮೇಲೆ ಮತ್ತಷ್ಟು ಸಿಟ್ಟು ಮಾಡಿಕೊಳ್ಳಲಿ ಎಂಬುವುದು ವೈಶಾಖಳ ಪ್ಲಾನ್ ಆಗಿತ್ತು. ಅವರು ಬೈದ ಮೇಲೆ ಚಾರುವನ್ನ ಮನೆ ಬಿಟ್ಟು ಹೊರಗಡೆ ಕಳುಹಿಸಿದರೆ ಆಯಿತು ಎಂದು ಅಂದುಕೊಂಡಿದ್ದಳು.
ಆದರೆ, ಚಾರು ಇದ್ಯಾವುದಕ್ಕೂ ಸಹ ಆಸ್ಪದವನ್ನ ಕೊಡಲೇ ಇಲ್ಲ. ವೈಶಾಖ ಮೇಲೆ ಯಾವಾಗಲೂ ಒಂದು ಕಣ್ಣಿಟ್ಟಿರುವ ಚಾರು ತನ್ನ ಬುದ್ಧಿವಂತಿಕೆಯಿಂದ ಊಟವನ್ನೆಲ್ಲ ಬೇರೆ ಕಡೆ ಎತ್ತಿಟ್ಟಿದ್ದಳು. ಅದನ್ನೇ ಮನೆಯವರೆಲ್ಲರಿಗೂ ಸಹ ಬಡಿಸಿ ಊಟ ತುಂಬಾ ಚೆನ್ನಾಗಿದೆ ಎಂದು ನಾರಾಯಣ ಆಚಾರ್ಯರೇ ಹೊಗಳುವ ರೀತಿ ಮಾಡಿದ್ದಾಳೆ. ನಾರಾಯಣ ಆಚಾರ್ಯರು ಊಟ ಚೆನ್ನಾಗಿದೆ ಎಂದು ಹೊಗಳಿದರೆ ವೈಶಾಖ ಗೆ ಬೇಸರವಾಗಿದೆ. ಊಟ ಮುಗಿಸಿ ಎದ್ದವಳೇ ಅಲ್ಲಿಂದ ಓಡಿ ಹೋಗಿದ್ದಾಳೆ.

ಇನ್ನು ವೈಶಾಖ ನಾನು ಅಡುಗೆಯನ್ನೆಲ್ಲ ಹಾಳು ಮಾಡಿದ್ದೆ ಅದು ಯಾವ ರೀತಿ ಇದೆಲ್ಲವೂ ಆಯಿತು ಎಂದು ಯೋಚನೆ ಮಾಡಿದ್ದಾಳೆ. ಕೊನೆಗೆ ಚಾರು ಹಿತ್ತಲಿಗೆ ಬಂದು ಅಕ್ಕ ನೀನು ಚಾಪೆ ಕೆಳಗೆ ತೂರಿದರೆ ನಾನು ರಂಗೋಲಿಯ ಕೆಳಗೆ ತೂರುತ್ತೇನೆ. ನೀನು ಇಂತಹ ಕಿತಾಪತಿಯನ್ನು ಮಾಡುತ್ತೀಯ ಎಂದೇ ನಾನು ಅಡುಗೆಯನ್ನ ಎತ್ತಿ ಬೇರೆ ಕಡೆಗೆ ಇಟ್ಟಿದ್ದೆ. ನೀನು ಹಾಳು ಮಾಡಲಿ ಎಂದು ಸ್ವಲ್ಪ ಅಡುಗೆಯನ್ನು ಅಲ್ಲಿ ಇಟ್ಟಿದ್ದೆ ಎಂದು ಹೇಳಿದ್ದಾಳೆ. ಚಾರು ಮಾತನ್ನ ಕೇಳಿದ ವೈಶಾಖಗೆ ಶಾಕ್ ಆಗಿದೆ.
ಮನೆಯವರ ಮನಸು ಗೆದ್ದ ಚಾರು! ಹೆಂಡತಿಯನ್ನು ಹೊಗಳಿದ ಚಾರಿ!!
ಮನೆಯವರಿಗೆ ರುಚಿಯಾದ ಅಡುಗೆಯನ್ನು ಮಾಡಿ ಬಡಿಸಿದ ಚಾರು ಎಲ್ಲರ ಮನಸು ಗೆದ್ದಿದ್ದಾಳೆ. ಇನ್ನೂ ರಾಮಾಚಾರಿ ಹೆಂಡತಿಯನ್ನು ಮೊದಲ ಬಾರಿಗೆ ಮುಕ್ತಕಂಠದಿಂದ ಹಾಡಿ ಹೊಗಳಿದ್ದಾನೆ. ತರಲೆ, ತುಂಟಾಟ ಎಲ್ಲವನ್ನೂ ಬಿಟ್ಟರೆ ನೀವೊಂದು ಅದ್ಭುತ ಎಂದು ಹೊಗಳಿದ್ದಾನೆ. ತುಂಟಾಟದ ಮಾತುಗಳನ್ನು ಆಡುತ್ತಾ ಶ್ರದ್ಧೆಯಿಂದ ಅಡುಗೆಯ ಕೆಲಸವನ್ನು ಮಾಡಿದ್ದೀರಾ ಎಂದು ಹೇಳಿದ್ದಾನೆ. ರಾಮಾಚಾರಿಯ ಹೊಗಳಿಕೆಯನ್ನು ಕೇಳಿದ ಚಾರುಗೆ ಖುಷಿಯಾಗಿದೆ. ಅತ್ತಿಗೆಗೆ ಯಾವುದೇ ಶಿಕ್ಷೆ ಕೊಡದೆ ಎಲ್ಲರೂ ಒಗ್ಗಟ್ಟಾಗಿ ಇರೋಣ ಎಂದು ಹೇಳಿದ್ದಿರಿ ಎಂದಿದ್ದಾನೆ.
ಇನ್ನೂ ರಾಮಾಚಾರಿ ಬಳಿ ಚಾರು ಭಾವುಕಳಾಗಿ ಮಾತನಾಡಿದ್ದಾಳೆ. ನನಗೆ ಈ ಮನೆ ಹಾಗೂ ನಿನ್ನ ಬಿಟ್ಟು ಹೋಗೋಕೆ ಆಗೋದಿಲ್ಲ. ಅದಕ್ಕೆ ಅನ್ನಪೂರ್ಣೇಶ್ವರಿ ದೇವಿಯ ಬಳಿ ಬೇಡಿಕೊಂಡು ಶ್ರದ್ಧೆಯಿಂದ ಅಡುಗೆ ಮಾಡಿದೆ ಅಡುಗೆ ತುಂಬಾ ಚೆನ್ನಾಗಿ ಆಯ್ತು ಎಂದಿದ್ದಾಳೆ. ಇದೇ ವೇಳೆ ರಾಮಾಚಾರಿ ಬಳಿ ತುಂಟಾಟವನ್ನು ಆಡುತ್ತ ಇದೇ ಖುಷಿಗೆ ಏನಿಲ್ವಾ ಎಂದು ಕೇಳಿದ್ದಾಳೆ. ರಾಮಾಚಾರಿ ಕೋಪದಿಂದ ನಿಮಗೆ ಗೊತ್ತಾಗೋದಿಲ್ಲ ಸಂಸ್ಕಾರ ಕಲಿಯಿರಿ ಎಂದು ಸಿಡುಕಿದ್ದಾನೆ.

ಮಗನ ಮೇಲೆ ಇನ್ನೂ ಇಳಿಯದ ನಾರಾಯಣ ಆಚಾರ್ಯ ಸಿಟ್ಟು!
ನಾರಾಯಣ ಆಚಾರ್ಯರ ಬಳಿ ಬಂದಂತಹ ಜಾನಕಿ ಅವರು ಚಾರು ಎಂತಹ ಒಳ್ಳೆಯ ಮನಸಿನ ಹುಡುಗಿ ಎಂದು ಹೇಳಿದ್ದಾರೆ. ಇಂದು ಚಾರುವೇ ಅಡುಗೆಯನ್ನ ಮಾಡಿ ಎಲ್ಲರಿಗೂ ಬಡಿಸಿದಳು. ಇದೇ ವೇಳೆ ಸೋತ ವೈಶಾಖಗೆ ಶಿಕ್ಷೆ ಕೊಡದೆ. ಎಲ್ಲರೂ ಒಗ್ಗಟ್ಟಾಗಿ ಇರೋಣ ಎಂದು ಹೇಳಿದಳು ಎಂದು ನಾರಾಯಣ ಆಚಾರ್ಯರ ಬಳಿ ಜಾನಕಿ ಹೇಳಿದ್ದಾರೆ. ಆದರೆ ಚಾರುವನ್ನು ಹೊಗಳುತ್ತಿರುವುದು ನಾರಾಯಣ ಆಚಾರ್ಯರಿಗೆ ಇಷ್ಟವಾಗುತ್ತಿಲ್ಲ. ಮನೆಯ ಒಗ್ಗಟ್ಟನ್ನು ಹೊಡೆದವರು ಒಗ್ಗಟ್ಟಿನ ಬಗ್ಗೆ ಮಾತನಾಡುತ್ತಾರಾ, ಗೋಮುಖ ವ್ಯಾಘ್ರಗಳ ಬಗ್ಗೆ ಈ ರೀತಿ ಮಾತನಾಡಬೇಡ ಎಂದು ಜಾನಕಿಗೆ ಎಚ್ಚರಿಸಿದ್ದಾರೆ.
ಅದೆಲ್ಲ ದೊಡ್ಡ ವಿಷಯವೇ ಅಲ್ಲ ಎಂದಾಗ ವೈಶಾಖ ಯಾರ ಸಹಾಯವನ್ನು ತೆಗೆದುಕೊಳ್ಳದಂತೆ ಷರತ್ತು ವಿಧಿಸಿದ್ದಳು ಎಂದು ಜಾನಕಿ ಹೇಳುವಾಗ ನಾರಾಯಣ ಆಚಾರ್ಯರು ಕೋಪದಿಂದ ಎದ್ದು ನಿಂತಿದ್ದಾರೆ. ನನಗೆ ಆಗದವರ ವಿಷಯವನ್ನು ನನ್ನ ಬಳಿ ಹೇಳಬೇಡ ನನಗೆ ಕೇಳುವುದಕ್ಕೆ ಇಷ್ಟವಾಗುವುದಿಲ್ಲ ಎಂದು ಜಾನಕಿಯ ಮೇಲೆ ರೇಗಿದ್ದಾರೆ. ಗಂಡನ ಆರ್ಭಟ ಕಂಡ ಜಾನಕಿ ಏನೂ ಮಾತನಾಡದೆ ಸುಮ್ಮನೆ ನಿಂತು ಬಿಡುತ್ತಾರೆ.


Click it and Unblock the Notifications











