Nanna devru: ಇಷ್ಟು ಬೇಗ 'ನನ್ನ ದೇವ್ರು' ಕಥೆ ಮುಗೀತಾ? ಶೃತಿ ನಾಯ್ಡು ಧಾರಾವಾಹಿಗೆ ಅಂಥದ್ದೇನಾಯ್ತು?
ಕಲರ್ಸ್ ಕನ್ನಡದಲ್ಲಿ 'ನನ್ನ ದೇವ್ರು' ಎಂಬ ಧಾರಾವಾಹಿ ಮೂಡಿ ಬರುತ್ತಾ ಇದೆ. ಅದ್ಭುತ ಕಲಾವಿದರ ಬಳಗ ಈ ಧಾರಾವಾಹಿಯಲ್ಲಿ ಇದೆ. ಬೇರೆಲ್ಲೊ ಅದ್ಭುತವಾದ ಜೀವನ ಕಟ್ಟಿಕೊಳ್ಳಬಹುದು ಎಂದು ಬಯಸುತ್ತಿದ್ದ, ಸಚ್ಚಿದಾನಂದನಿಗೆ ತನ್ನ ಹೆಂಡತಿ ಶಾರದಾ ಕಣ್ಣು ತೆರೆಸಿದ್ದಳು.
ಊರಿನ ಮಂದಿಯ ನಡುವೆ ಬದುಕಬೇಕು, ಊರಿನ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂಬುದನ್ನು ತಿಳಿ ಹೇಳಿದ್ದಳು. ಆ ಬಳಿಕ ಸಚ್ಚಿದಾನಂದ ನಡೆದುಕೊಂಡ ರೀತಿಗೆ ಇಡೀ ಊರಿಗೆ ಧಣಿಗಳಾಗಿ ಬದಲಾಗಿ ಬಿಟ್ಟ.

ತಾನೂ ಅತಿಯಾಗಿ ಪ್ರೀತಿಸುತ್ತಿದ್ದ ಶಾರದೆಯನ್ನು ಕಳೆದುಕೊಂಡ. ಶಾರದೆ ಹೋದ ಮೇಲೆ ಮೌನಕ್ಕೆ ಜಾರಿದ್ದ ಸಚ್ಚಿದಾನಂದನನ್ನು ನಗಿಸಿದ್ದು, ಮನಸ್ಸು ಹಗುರ ಮಾಡಿದ್ದು ಮಯೂರಿ ಮಾತ್ರ. ಈಗಷ್ಟೇ ಇಬ್ಬರ ನಡುವಿನ ಬಾಂಧವ್ಯ ಗಟ್ಟಿಯಾಗುತ್ತಿದೆ. ಹೀಗಿರುವಾಗ ಧಾರಾವಾಹಿ ಇಷ್ಟಕ್ಕೆ ನಿಲ್ಲಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
47 ಸಂಚಿಕೆ ಕಂಪ್ಲೀಟ್
ಆರಂಭದಲ್ಲಿ ಕಥೆ ಅದ್ಭುತವಾಗಿಯೇ ಟೇಕಾಫ್ ಆಗಿತ್ತು. ಆದರೆ ಅದ್ಯಾಕೋ ಏನೋ ದಿನಕಳೆದಂತೆ ಕಥೆಯಲ್ಲಿ ಸತ್ವವೇ ಇಲ್ಲದಂತೆ ಆಯಿತು. ಸಾಧಾರಣ ಮಾತು, ಅದೇ ಸಮಾಧಾನ ಮಾಡುವ ದೃಶ್ಯಗಳು, ಅದೇ ಕಿತಾಪತಿ. ಬೇರೆ ಟ್ವಿಸ್ಟ್ಗಳನ್ನೇ ನೀಡದೆ ಕಳೆದ ಕೆಲವು ದಿನಗಳಿಂದ ಧಾರಾವಾಹಿ ನೋಡುಗರನ್ನು ಸೆಳೆಯುವುದರಲ್ಲಿ ಹಿಂದೆ ಉಳಿದು ಬಿಟ್ಟಿದೆ ಎಂಬ ಮಾತಿದೆ.

ಧಾರಾವಾಹಿ ನಿಲ್ಲಲು ಕಾರಣವೇನು?
'ನನ್ನ ದೇವ್ರು' ಧಾರಾವಾಹಿ ಶೃತಿ ನಾಯ್ಡು ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಾ ಇತ್ತು. ಶೃತಿ ನಾಯ್ಡು ಮಾಡುತ್ತಿದ್ದಂತ ಧಾರಾವಾಹಿಯಾಗಲಿ, ಸಿನಿಮಾವಾಗಲಿ ಎಲ್ಲಿಯೂ ಅರ್ಧಕ್ಕೆ ನಿಂತಿರಲಿಲ್ಲ. ಜೊತೆಗೆ ನೋಡುಗರ ನಾಡಿ ಮಿಡಿತ ಅರಿತಿದ್ದ ಶೃತಿ ನಾಯ್ಡು ಬಳಗ ಒಂದೊಳ್ಳೆ ಸ್ಟೋರಿಯನ್ನೇ ನೀಡುತ್ತಿತ್ತು. ಆದರೆ ಇದೀಗ 'ನನ್ನ ದೇವ್ರು' ಧಾರಾವಾಹಿ ಅರ್ಧಕ್ಕೆ ನಿಲ್ಲುತ್ತಿದೆ. ಎಷ್ಟು ವೇಗವಾಗಿ ಹೆಸರು ಮಾಡಿತೋ ಅಷ್ಟೇ ವೇಗದಲ್ಲಿ ನಿಲ್ಲುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಸದ್ಯ ಸಮಯ ಬದಲಾವಣೆ
ಸದ್ಯಕ್ಕೆ 'ನನ್ನ ದೇವ್ರು' ಧಾರಾವಾಹಿ ಪ್ರಸಾರದ ಸಮಯವನ್ನು ಬದಲಾಯಿಸಿದೆ. ಕಲರ್ಸ್ ಕನ್ನಡದಲ್ಲಿ 'ದೃಷ್ಟಿ ಬೊಟ್ಟು' ಎಂಬ ಹೊಸದೊಂದು ಧಾರಾವಾಹಿ ಶುರುವಾಗುತ್ತಿದೆ. ರಕ್ಷ್ ಅವರ ನಿರ್ಮಾಣದಲ್ಲಿ ಬರುತ್ತಿರುವ ಧಾರಾವಾಹಿ ಇದಾಗಿದೆ. ವಿಜಯ್ ಸೂರ್ಯ ಕಲರ್ಸ್ ಕನ್ನಡಕ್ಕೆ ಬಹಳ ದಿನಗಳ ಬಳಿಕ ಬರುತ್ತಿರುವ ಧಾರಾವಾಹಿ. ಸಂಜೆ 6.30ಕ್ಕೆ 'ಮನೆ ದೇವ್ರು' ಧಾರಾವಾಹಿ ಬರ್ತಾ ಇತ್ತು. ಈಗ ಸಂಜೆ 6 ಗಂಟೆಗೆ ಸಮಯ ಬದಲಾವಣೆ ಮಾಡಲಾಗಿದೆ. ಟಿಆರ್ಪಿ ಅಂದುಕೊಂಡಂತೆ ಬರುತ್ತಿಲ್ಲ, ಹೀಗಾಗಿ ಸ್ಟಾಪ್ ಮಾಡಲಾಗುತ್ತಿದೆ ಎಂಬ ಮಾತಿದೆ. ಕೆಲವು ದಿನಗಳವರೆಗೆ ಪ್ರಸಾರ ಮಾಡಿ, ತದ ನಂತರ ನಿಲ್ಲಿಸಲಾಗುತ್ತದೆ ಎನ್ನಲಾಗಿದೆ.
ಎಲ್ಲರ ಮನಸ್ಸು ಗೆದ್ದಿದ್ದ ಮಯೂರಿ
'ಅಶ್ವಿನಿ ನಕ್ಷತ್ರ' ಖ್ಯಾತಿಯ ಮಯೂರಿ ಈ ಧಾರಾವಾಹಿ ಮೂಲಕ ಕಮ್ ಬ್ಯಾಕ್ ಮಾಡಿದ್ದರು. 'ನನ್ನ ದೇವ್ರು' ಧಾರಾವಾಹಿಯಲ್ಲಿ ಮಯೂರಿ ಅವರ ಪಾತ್ರವೇನೋ ಅದ್ಭುತವಾಗಿತ್ತು. ಅದೇ ಮುಗ್ಧತೆ, ಅದೇ ಮಾತುಗಳು. ಎಷ್ಟು ಸಲ ನೋಡೊದರು ಮಯೂರಿಯವರು ಮತ್ತೆ ಮತ್ತೆ ಇಷ್ಟವಾಗುತ್ತಿದ್ದರು. ಆದರೆ ಕಥೆಯಲ್ಲಿ ಟ್ವಿಸ್ಟ್ ಇಲ್ಲದೇ, ಯಾವುದೇ ಗಟ್ಟಿ ಪಾತ್ರಗಳನ್ನು ನೀಡದೆ ಇರುವ ಕಾರಣ ಜನ ನೋಡುವುದನ್ನು ಕಡಿಮೆ ಮಾಡಿದರು. ಈಗ ಟಿಆರ್ಪಿ ಇಲ್ಲ ಅಂತ ಧಾರಾವಾಹಿಯನ್ನು ನಿಲ್ಲಿಸುತ್ತಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications











