Shruti Hariharan: ಕಿರುತೆರೆಗೆ ಎಂಟ್ರಿ ಯಾದ ನಟಿ ಶ್ರುತಿ ಹರಿಹರನ್
ನಟಿ ಶ್ರುತಿ ಹರಿಹರನ್ ಕೆಲ ಸಮಯ ಸಿನಿಮಾರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ಮಧ್ಯೆ ಒಂದು ವೆಬ್ ಸಿರೀಸ್ನಲ್ಲಿ ಬಣ್ಣ ಹಚ್ಚಿದ್ದ ಅವರು ಈಗ ಪುನಃ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮಧ್ಯೆ ಕಿರುತೆರೆಗೂ ಶ್ರುತಿ ಹರಿಹರನ್ ಎಂಟ್ರಿ ಕೊಟ್ಟಿದ್ದಾರೆ. 'ಕಾಮಿಡಿ ಗ್ಯಾಂಗ್' ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದಾರೆ. ಇದೊಂದು ಕಾಮಿಡಿ ಶೋ ಆಗಿದ್ದು, ಈ ಶೋ ಏಪ್ರಿಲ್ 16 ರಿಂದ ಅಂದ್ರೆ ನಿನ್ನೆಯಿಂದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
ಶ್ರುತಿ ಹರಿಹರನ್, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಕುರಿ ಪ್ರತಾಪ್ ಕೂಡ ತೀರ್ಪುಗಾರರಾಗಿರುವ ಈ ಶೋನಲ್ಲಿ ಶಿವರಾಜ್ ಕೆ.ಆರ್. ಪೇಟೆ ನಿರೂಪಕರಾಗಿ ಗಮನಸೆಳೆಯಲಿದ್ದಾರೆ. ಈವರೆಗೂ ಹಾಸ್ಯ ನಟರಾಗಿ ಗುರುತಿಸಿಕೊಂಡಿದ್ದ ಶಿವರಾಜ್ ಕೆ.ಆರ್. ಪೇಟೆ ಮೊದಲ ಬಾರಿಗೆ ನಿರೂಪಕರಾಗಿದ್ದಾರೆ. ಜೊತೆಗೆ ನಯನಾ, ಹಿತೇಶ್, ಮಡೆನೂರು ಮನು, ಸೂರ್ಯ ಮುಂತಾದವರು ಕಾಣಿಸಿಕೊಂಡಿದ್ದಾರೆ. ಮೂವರು ಸೂಪರ್ ಆಗಿರುವ ತೀರ್ಪುಗಾರರ ಜೊತೆಗೆ ಆರು ಸಖತ್ ಟೀಮ್ಗಳು ಕಾಮಿಡಿ ಮಾಡಿ, ವೀಕ್ಷಕರನ್ನು ರಂಜಿಸಲಿದ್ದಾರೆ.
ನಟಿ ಶ್ರುತಿ ಹರಿಹರನ್ಗೆ ಇದು ಮೊದಲ ರಿಯಾಲಿಟಿ ಶೋ ಆಗಿದ್ದು, ಕಾರ್ಯಕ್ರಮವನ್ನು ಹೇಗೆ ನಿರ್ವಹಿಸಲಿದ್ದಾರೆ, ಜಡ್ಜ್ ಆಗಿ ಹೇಗಿ ಶೋನಲ್ಲಿ ತೊಡಗಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಕಾಮಿಡಿ ಗ್ಯಾಂಗ್ ನಲ್ಲಿ ಇಲ್ಲ ಎಲಿಮಿನೇಷನ್
'ಕಾಮಿಡಿ ಗ್ಯಾಂಗ್ಸ್' ನಲ್ಲಿ ಎಲಿಮಿನೇಷನ್ ಇರುವುದಿಲ್ಲ. ಈ ಸ್ಕಿಟ್ಗಳಿಗೆ ಸ್ಕೋರ್ ನೀಡಲಾಗುವುದು, ಅಂತಿಮವಾಗಿ ಅಧಿಕ ಅಂಕಗಳನ್ನು ಪಡೆವ ಗ್ಯಾಂಗ್ಗೆ ಗೆಲುವು ಸಿಗಲಿದೆ. ನಿನ್ನೆ ಶುರುವಾದ ಈ ಕಾರ್ಯಕ್ರಮದಲ್ಲಿ ಕಾಮಿಡಿ ಗ್ಯಾಂಗ್ ಹೊಟ್ಟೆ ಹುಣ್ಣಾಗವಂತೆ ನಕ್ಕು ನಲಿಸಿದ್ದಾರೆ. 'ಇಷ್ಟು ದಿನ ಮಾಸ್ಕ್ ಹಿಂದೆ ಅಡಗಿದ್ದ ನಗು ಇನ್ಮುಂದೆ ಅನ್-ಲಿಮಿಟೆಡ್ ಆಗಿ ಈ ಶೋನಲ್ಲಿ ಹೊರಬರಲಿದೆ' ಎಂದು ವಾಹಿನಿ ಹೇಳಿದೆ. ಸ್ಟೇಜ್ನಲ್ಲೂ ಕಾಮಿಡಿ, ಸೆಟ್ನಲ್ಲೂ ಕಾಮಿಡಿ, ತೀರ್ಪುಗಾರರ ಮಾತುಗಳಲ್ಲೂ ಕಾಮಿಡಿ, ನಿರೂಪಕರ ಮಾತೂ ಫುಲ್ ಕಾಮಿಡಿಯಾಗಿರುತ್ತದೆ. ರಾಜ್ಯದ ವಿವಿಧೆಡೆಗಳಿಂದ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅವರಿಗೆ ಪ್ರಹಸನ ಬರೆದು ಕೊಡುವವರು, ಕಾಮಿಡಿಯ ಕಾಗುಣಿತ ತಿದ್ದುವ ಮೆಂಟರ್ಸ್ ಮತ್ತು ಇಡೀ ಕಾರ್ಯಕ್ರಮದ ಹೊಣೆಗಾರಿಕೆ ಹೊತ್ತುಕೊಂಡಿರುವ ಕ್ಯಾಪ್ಟನ್ಸ್- ಇವರುಗಳಿಂದ ಕಾಮಿಡಿ ಗ್ಯಾಂಗ್ಸ್ನಲ್ಲಿ ಹಾಸ್ಯದ ಹಬ್ಬ ಇರಲಿದೆ ಎಂದು ವಾಹಿನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕಾಮಿಡಿ ಗ್ಯಾಂಗ್ಸ್ ಹೆಸರಿನಡಿಯಲ್ಲಿ ಕಾಮಿಡಿ ಶೋ ಆರಂಭ
ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರಲ್ಲೂ ನಾನಾ ಪ್ರತಿಭೆಗಳು ಅಡಕವಾಗಿರುತ್ತವೆ. ಅದರಲ್ಲಿ ನಗಿಸುವ ಕನಸನ್ನು ಕಟ್ಟಿಕೊಂಡವರಿಗೆ ಕಾಮಿಡಿ ಗ್ಯಾಂಗ್ ಉತ್ತಮ ವೇದಿಕೆ ಕಲ್ಪಿಸುತ್ತಿದೆ ಎಂದು ಹಾಸನದ ಪ್ರತಿಭೆ ಹಾಸ್ಯ ನಟರಾದ ಮಡೆನೂರು ಮನು ಮತ್ತು ಸೂರ್ಯ ತಿಳಿಸಿದರು. ಈಗಾಗಲೆ ಜೀ ಕನ್ನಡಲ್ಲಿ ಕಾಮಿಡಿ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಸ್ಟಾರ್ ಸುವರ್ಣ ಕೂಡ ತಮ್ಮ ವೀಕ್ಷಕರಿಗೆ ನಗೆ ಹುಟ್ಟಿಸಲು ಕಾಮಿಡಿ ಗ್ಯಾಂಗ್ಸ್ ಹೆಸರಿನಡಿಯಲ್ಲಿ ಕಾಮಿಡಿ ಶೋ ಮಾಡುತ್ತಿದೆ.

ಗಮನ ಸೆಳೆಯುತ್ತಾರಾ ಶ್ರುತಿ
ಮುಖ್ಯ ಮಂತ್ರಿ ಚಂದ್ರು ಹಾಗೂ ಕುರಿ ಪ್ರತಾಪ್ ಅಂಥಹಾ ಪ್ರಚಂಡ ಮಾತುಗಾರರ ನಡುವೆ ಜಡ್ಜ್ ಆಗಿದ್ದು ಶ್ರುತಿ ಹರಿಹರನ್ ಹೇಗೆ ಗಮನ ಸೆಳೆಯುತ್ತಾರೆ ಎಂಬುದು ಕಾದು ನೋಡಬೇಕಿದೆ. ಶ್ರುತಿಗೂ ಇದು ಮೊದಲ ರಿಯಾಲಿಟಿ ಶೋ ಆಗಿದ್ದು, ಅವರ ಮೇಲೆ ವೀಕ್ಷಕರ ಗಮನ ಇರಲಿದೆ. ಈಗಾಗಲೇ ಕನ್ನಡದ ವಿವಿಧ ಮನೊರಂಜನಾ ಚಾನೆಲ್ಗಳಲ್ಲಿ ಕೆಲವು ಹಾಸ್ಯ ರಿಯಾಲಿಟಿ ಶೋಗಳು ನಡೆಯುತ್ತಿವೆ, ಈ ಮಧ್ಯೆ ಈ ಹೊಸ ಶೋ ಜನಮನ ಗಳಿಸಲಿದೆಯೇ ನೋಡಬೇಕಿದೆ.

ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶ್ರುತಿ
ನಟಿ ಶ್ರುತಿ ಹರಿಹರನ್ ಅವರು ರಕ್ಷಿತ್ ಶೆಟ್ಟಿ ಪರಮ್ವ್ಹಾ ಸ್ಪಾಟ್ಲೈಟ್ ಬ್ಯಾನರ್ನ ಮೊದಲ ಸಿನಿಮಾ 'ಸ್ಟ್ರಾಬೆರಿ'ಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಿವರ್ಸ್ ಸ್ಕ್ರೀನ್ ಪ್ಲೇ ಮಾದರಿಯಲ್ಲಿ ಸಾಗುವ ಸಿನಿಮಾವನ್ನು ಅರ್ಜುನ್ ಲೂವಿಸ್ ನಿರ್ದೇಶಿಸಿದ್ದಾರೆ. ತಾಯಿ ಪ್ರೀತಿಯನ್ನು ಕಳೆದುಕೊಂಡ ಅಮೃತಾ ಎಂಬ ಲೈಂಗಿಕ ಕಾರ್ಯಕರ್ತೆಯೊಬ್ಬಳು ಮತ್ತೊಮ್ಮೆ ಅಂಥ ಪ್ರೀತಿಯ ಭರವಸೆ ಸಿಕ್ಕಾಗ ಕಡಲನ್ನು ಸೇರಲು ಹೊರಟ ನದಿಯಂತೆ ಹೊರಡುವ ಕಥೆಯೇ 'ಸ್ಟ್ರಾಬೆರಿ'. ಇದರಲ್ಲಿ ಅಮೃತಾ ಎಂಬ ಲೈಂಗಿಕ ಕಾರ್ಯಕರ್ತೆಯ ಪಾತ್ರವನ್ನು ಶ್ರುತಿ ಹರಿಹರನ್ ನಿಭಾಯಿಸಿದ್ದಾರೆ. ಇದರ ಜೊತೆಗೆ ಸಂಚಾರಿ ವಿಜಯ್ ಜೊತೆಗೆ 'ಅಂತ್ಯವಿಲ್ಲ ಆರಂಭ' ಸಿನಿಮಾದಲ್ಲಿ ಶ್ರುತಿ ಹರಿಹರನ್ ನಟಿಸಿದ್ದಾರೆ. ಸದ್ಯ ತೆರೆಗೆ ಬರಲು ಈ ಸಿನಿಮಾ ಸಜ್ಜಾಗಿದೆ.


Click it and Unblock the Notifications











