ಉದಯ ಕಾಮಿಡಿಯಲ್ಲಿ ಪಂಚುಗಳ ಮಿಂಚು 'ಕಾಮಿಡಿ ಜಂಕ್ಷನ್'
ಹಾಸ್ಯಕ್ಕೆ ಮೀಸಲಾದ ಉದಯ ಕಾಮಿಡಿ ಚಾನಲ್ ಮೊದಲಿನಿಂದಲೂ ಸದಭಿರುಚಿಯ ಹಾಸ್ಯವನ್ನು ಉಣಬಡಿಸುತ್ತಾ ಬಂದಿದೆ. ಈಗ ಮತ್ತೊಂದು ಹಾಸ್ಯ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲು ಉದಯ ಕಾಮಿಡಿ ವಾಹಿನಿ ಸಿದ್ಧವಾಗಿದೆ. ಅದೇ 'ಕಾಮಿಡಿ ಜಂಕ್ಷನ್'.
ಹಾಸ್ಯ ವೈವಿಧ್ಯ ಇರುವ ಅರ್ಧ ಗಂಟೆಯ ಈ ಕಾರ್ಯಕ್ರಮ 'ಪಂಚುಗಳ ಮಿಂಚು' ಎಂದರೆ ತಪ್ಪಿಲ್ಲ. ನಾನ್ ಸ್ಟಾಪ್ ನಗೆ ತುಂಬಿರುವ ಈ ಶೋ ನೃತ್ಯ, ಹಾಡು, ಗೇಮು, ಪ್ರಹಸನ ಮುಂತಾದ ಮಸಾಲೆ ಒಳಗೊಂಡ ಅಪರೂಪದ ಕಾಮಿಡಿ ಸರಕಿನ ಬ್ಯಾಸ್ಕೆಟ್.
ಸಾವಿರಾರು ಎಪಿಸೋಡುಗಳಿಗೆ ಹಾಸ್ಯ ಸಂಭಾಷಣೆ ಬರೆದಿರುವ ನಗೆ ಸಾಹಿತಿ ಎಂ.ಎಸ್.ನರಸಿಂಹಮೂರ್ತಿ ಈ ಕಾರ್ಯಕ್ರಮದ ಬರವಣಿಗೆಯ ಹೊಣೆ ಹೊತ್ತಿದ್ದಾರೆ. ಜೊತೆಗೆ ಸ್ಟ್ಯಾಂಡಪ್ ಕಾಮಿಡಿ ನೀಡಿ ರಂಜಿಸಲಿದ್ದಾರೆ.

'ನಮಸ್ಕಾರ ಕಣಣ್ಣೋ' ಎಂಬ ಡೈಲಾಗ್ ಖ್ಯಾತಿಯ 'ಮಾರಮ್ಮನ ಡಿಸ್ಕ್' ಓನರ್ ಟೆನ್ನಿಸ್ ಕೃಷ್ಣ ಮೊದಲ ಬಾರಿಗೆ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಮನೆಯ ಯಜಮಾನನಾಗಿ 'ವಿಶ್ವ'ನ ಪಾತ್ರಕ್ಕೆ ಮೆರುಗು ನೀಡಿದ್ದಾರೆ. ವಿಶ್ವ-ವಿಶಾಲೂ ದಂಪತಿಗೆ ಲೈಲಾ ಎಂಬ ಮುದ್ದಾದ ಮಗಳು. ವಿಶ್ವ ಚಿತ್ರನಟಿಯೊಬ್ಬಳನ್ನು ಮದುವೆ ಆಗಬೇಕೆಂದು ಕನಸು ಕಂಡಿದ್ದ. ವಿಶಾಲೂ ಕ್ರಿಕೆಟ್ ಪಟುವನ್ನು ಕೈ ಹಿಡಿಯಲು ಹಾತೊರೆದಿದ್ದಳು. ಆದರೆ ಬ್ರಹ್ಮ ಹಾಕಿದ ಗಂಟು ಎಡವಟ್ಟಾಗಿ ವಿಶ್ವ-ವಿಶಾಲೂ ಜೋಡಿಯಾದರು.
ತಮ್ಮ ಕನಸುಗಳನ್ನು ಮಗಳ ಮೂಲಕ ಸಾಕಾರ ಮಾಡಿಕೊಳ್ಳಬೇಕೆಂದು ಸಿನಿಮಾ ಅಥವಾ ಕ್ರೀಡಾರಂಗದ ಅಳಿಯನನ್ನು ತರುವ ಅವಿರತ ಪ್ರಯತ್ನ ಈ ಶೋನಲ್ಲಿ ನಗೆಯ ಮಹಾಪೂರವನ್ನೇ ಹರಿಸಲಿದೆ.
ಚಿತ್ರನಟ ಮಿಮಿಕ್ರಿ ಗೋಪಿ ವಿವಿಧ ವೇಷಗಳಲ್ಲಿ ಕಾಣಿಸಿಕೊಂಡು ಪ್ರಚಲಿತ ವಿದ್ಯಮಾನಗಳ ಬಗ್ಗೆ ಹೊಸ ಬಗೆಯ ವ್ಯಾಖ್ಯಾನ ನೀಡಲಿದ್ದಾರೆ.
ಚಲನಚಿತ್ರ ನಟಿ ಸನಾತನಿ ಮೊದಲ ಬಾರಿಗೆ ನಿರೂಪಕಿಯಾಗಿ ನೃತ್ಯ ಮತ್ತು ಜೋಕುಗಳ ಮೂಲಕ ಹೊಸ ಪಾತ್ರದಲ್ಲಿ ನಗೆಯನ್ನ ಹಂಚಲಿದ್ದಾರೆ.
ಉದಯ ಕಾಮಿಡಿ ಚಾನಲ್ ನ ಹಾಸ್ಯ ಕಲಾವಿದರಾದ ಕೆಂಪೇಗೌಡ, ಶ್ರೀಕಂಠ, ಸ್ಮೈಲ್ ಶಶಿ, ಹರೀಶ್, ಕೃಷ್ಣ ವಿವಿಧ ಪಾತ್ರಗಳಲ್ಲಿ ರಂಜಿಸಿದ್ದಾರೆ. ಅನೇಕ ಹೊಸ ಮುಖಗಳನ್ನು ಮೊದಲ ಬಾರಿಗೆ ಇಲ್ಲಿ ಪರಿಚಯಿಸಲಾಗಿದೆ. ಈ ಬಗ್ಗೆ ಮಾತಾಡುತ್ತಾ, ''ನಾವು ನೀಡಿರುವ ಅನೇಕ ಹೊಚ್ಚ ಹೊಸ ಹಾಸ್ಯ ಕಾರ್ಯಕ್ರಮಗಳಲ್ಲಿ ಇದು ಭಿನ್ನವಾಗಿ ನಿಲ್ಲುತ್ತದೆ ಹಾಗೂ ವೀಕ್ಷಕರಿಗೆ ಭರಪೂರ ಮನರಂಜನೆಯನ್ನು ನೀಡುತ್ತದೆ'' ಎಂಬುದು ಉದಯ ಕಾಮಿಡಿ ವಾಹಿನಿಯ ಮುಖ್ಯಸ್ಥರಾದ ಭುವನ್ ಶಾಸ್ತ್ರಿ ಅಭಿಪ್ರಾಯ.
ಪಂಚುಗಳ ಮಿಂಚನ್ನು ಹೊತ್ತುಕೊಂಡು 'ಕಾಮಿಡಿ ಜಂಕ್ಷನ್' ಇದೇ ಜೂನ್ 16 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ಬೆಳಗ್ಗೆ 8.30ಕ್ಕೆ ಉದಯ ಕಾಮಿಡಿ ಚಾನಲ್ ನಲ್ಲಿ ಪ್ರಸಾರವಾಗಲಿದೆ.


Click it and Unblock the Notifications











