ಕಾಮಿಡಿ ಕಿಲಾಡಿ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆಗೆ ಕಾರಣವೇನು? ಪತ್ನಿ ಹೇಳಿದ್ದೇನು ?
ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರ ಅಲ್ಲ. ಸಮಸ್ಯೆಗಳನ್ನು ಎದುರಿಸಿ ಬದುಕುವ ಶಕ್ತಿ ಹೊಂದಬೇಕು. ಸಮಸ್ಯೆ ಬಂದಾಗ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಆದರೆ ವಿಶ್ವದೆಲ್ಲೆಡೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ.
ಹಿಂದೊಮ್ಮೆ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ಇದು ಸಾಮಾಜಿಕ ಸಮಸ್ಯೆ ಎಂದು ಕೂಡ ಹೇಳಿದೆ. ಪ್ರತಿ 100 ಜನರಲ್ಲಿ 70 ಜನ ಪುರುಷರೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಎಂದು ಎನ್ಸಿಆರ್ಬಿ { ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ } ಕೂಡ ವರದಿ ನೀಡಿದೆ.

ಇಷ್ಟೇ ಅಲ್ಲದೇ ಶೇಕಡಾ 36 % ಮಹಿಳೆಯರು ಆತ್ಮಹತ್ಯೆಗೆ ಪ್ರಯತ್ನ ಮಾಡುತ್ತಾರೆ ಎಂದು ಹೇಳಿದೆ. ಆತ್ಮಹತ್ಯೆ ಮಾಡಿಕೊಳ್ಳುವುದರಲ್ಲಿ ಪುರುಷರು ಮತ್ತು ಆತ್ಮಹತ್ಯೆಗೆ ಪ್ರಯತ್ನಿಸುವರಲ್ಲಿ ಮಹಿಳೆಯರು ಮುಂದಿರುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ.
ಜೀವನದಲ್ಲಿ ನಾನಾ ಸಮಸ್ಯೆಗಳಿಂದ ಬೇಸತ್ತು, ತಾಳ್ಮೆಯ ಕೊರತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವರ ಸಂಖ್ಯೆ ಈಗೀಗ ಹೆಚ್ಚಾಗುತ್ತಿದೆ. ಇದಕ್ಕೆ ಚಂದ್ರಶೇಖರ ಸಿದ್ದಿ ಆತ್ಮಹತ್ಯೆ ಪ್ರಕರಣ ಸದ್ಯದ ಮತ್ತೊಂದು ಉದಾಹರಣೆ.
ಹೌದು..ಎಲ್ಲರಿಗೆ ಗೊತ್ತಿರುವಂತೆ ಬಾಳಿ ಬದುಕಬೇಕಿದ್ದ, ಕಾಮಿಡಿ ಕಿಲಾಡಿ ಮೂಲಕ ಹೆಸರು ಕೀರ್ತಿ ಗಳಿಸಿದ್ದ ಚಂದ್ರಶೇಖರ ಸಿದ್ದಿ ತಮ್ಮ ಪತ್ನಿ ಮತ್ತು ಮಗು ಬಗ್ಗೆ ಆಲೋಚನೆಯನ್ನು ಮಾಡದೇ ಎದ್ದು ನಡೆದಿದ್ದಾರೆ.

ಇವರ ಈ ಆತ್ಮಹತ್ಯೆಯ ನಿರ್ಧಾರದ ಹಿಂದಿನ ಕಾರಣ ಅವರಿಗೆ ಗೊತ್ತಾದರೂ ಚಂದ್ರಶೇಖರ್ ಸಿದ್ದಿಯ ಸಾವಿನ ಸುತ್ತ ಹಲವು ಮಾತುಗಳು ಸದ್ಯ ಕೇಳಿ ಬರುತ್ತಿವೆ.
ಕೆಲವರು ಚಂದ್ರಶೇಖರ್ ಸಿದ್ದಿ ಮಾನಸಿಕ ಖಿನ್ನತೆಗೊಳಗಾಗಿದ್ದರು ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಅವಕಾಶಗಳ ಕೊರತೆ ಸಿದ್ದಿ ಪ್ರಾಣವನ್ನು ಬಲಿ ಪಡೆಯಿತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹೀಗಿರುವಾಗ ಇದೀಗ ಚಂದ್ರಶೇಖರ್ ಸಿದ್ದಿಯವರ ಪತ್ನಿ ಕಮಲಾಕ್ಷಿ ತಮ್ಮ ಪತಿಯ ಸಾವಿನ ಕುರಿತು ಮಾತನಾಡಿದ್ದಾರೆ.
ಈ ಕುರಿತು ''ಪಬ್ಲಿಕ್ ಟಿವಿ'' ಜೊತೆ ಮಾತನಾಡಿರುವ ಚಂದ್ರಶೇಖರ್ ಸಿದ್ದಿ ಅವರ ಪತ್ನಿ ಕಮಲಾಕ್ಷಿ, ''ನಾವು ಭಟ್ಟರ ಮನೆಯಲ್ಲಿ ಕೆಲಸಕ್ಕೆ ಇದ್ವಿ ಅಲ್ಲಿ ಎಲ್ಲ ಸರಿ ಇತ್ತು, ಅವತ್ತು ಬೆಳಗ್ಗೆ ಎಲ್ಲಾ ಚೆನ್ನಾಗಿಯೇ ಮಾತನಾಡಿದ್ದರು. ನಾನೇ ದೋಸೆ ಮಾಡಿಕೊಟ್ಟೆ, ಬೆಳಗ್ಗೆ 8 ಗಂಟೆಗೆ ಕೆಲಸಕ್ಕೆ ಹೋಗ್ತಿದ್ದರು, ಅವತ್ತು ಕೂಡ ತೋಟದ ಕೆಲಸಕ್ಕೆ ಹೋದರು'' ಎಂದು ಹೇಳಿದ್ದಾರೆ.
ಮುಂದುವರೆದು ''ನಾನು ನನ್ನ ಮಗನನ್ನು ಶಾಲೆಗೆ ಕಳುಹಿಸಿ, 10ಕ್ಕೆ ಎಂದಿನಂತೆ ಅಂಗನವಾಡಿಯಲ್ಲಿ ಕೆಲಸ ಮಾಡುತ್ತೇನೆ, ಅವತ್ತು ಕೂಡ ನಾನು ಹೋಗಿದ್ದೇ, ನಮಗೆ ಅಲ್ಲಿಯೇ ಭಟ್ಟರ ಮನೆಯಲ್ಲಿ ಒಂದು ರೂಮ್ ಕೂಡ ಕೊಟ್ಟಿದ್ದಾರೆ. ನಾವು ಅಲ್ಲಿಯೇ ಅಡುಗೆ ಮಾಡಿಕೊಳ್ಳುತ್ತೇವೆ, ಅವತ್ತು ಮಧ್ಯಾಹ್ನ 1.30ರ ಸಮಯಕ್ಕೆ ಮಗನನ್ನು ಸ್ಕೂಲಿನಿಂದ ಕರೆದುಕೊಂಡು ಬರಲು ನಾನು ಮನೆಗೆ ಬಂದೆ, ಆದರೆ ಅವರು, ನಾನೇ ಹೋಗ್ತಿನಿ ಎಂದರು. ನಿಮಗೆ ಸುಸ್ತಾಗಿದೆ ಎಂದು ಕೇಳಿದರೂ ಕೇಳಲಿಲ್ಲ ಅವರು ಬಟ್ಟೆ ಬದಲಾಯಿಸಿಕೊಂಡು ಹೊರಟರು. 2 ಗಂಟೆಗೆ ಸುಮಾರಿಗೆ ಮಗನನ್ನು ಶಾಲೆಯಿಂದ ಕರೆದುಕೊಂಡು ಬಂದರು'' ಎಂದು ಹೇಳಿದ್ದಾರೆ. ಅವತ್ತು ಬೆಳಗ್ಗೆಯಿಂದಲೂ ಏನೋ ಒಂದು ಥರ ನೆಗೆಟಿವಿಟಿ ಯೋಚನೆ ಬರ್ತಿದೆ ಎಂದು ಹೇಳ್ತಿದ್ದರು ಎಂದು ಕೂಡ ಹೇಳಿದ್ದಾರೆ. ಯಾವ ಸಮಸ್ಯೆ ಕೂಡ ಇರಲಿಲ್ಲ ಸರಿಯಾಗಿಯೇ ಇದ್ದರು ಎಂದು ಹೇಳಿದ್ದಾರೆ.
ಇನ್ನು ಮನೆ ಅಂದ ಮೇಲೆ ಸರಸ ವಿರಸ ಇದ್ದಿದ್ದೇ. ಈ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರವನ್ನು ನೀಡಿರುವ ಕಮಲಾಕ್ಷಿ ''ಆರು ತಿಂಗಳ ಹಿಂದೆ ಅವರಿಗೇನಾಗಿತ್ತು ಗೊತ್ತಿಲ್ಲ. ನನಗೆ ಮೋಸ ಮಾಡ್ತಿಯಾ ನೀನು, ಬೇರೆಯವರು ನನಗೆ ಮೋಸ ಮಾಡ್ತಾರೆ. ನೀನು ನನ್ನ ಬಿಟ್ಟು ಬೇರೆಯವರ ಜೊತೆಗೆ ಹೋಗ್ತಿಯಾ' ಅಂತೆಲ್ಲಾ ಹೇಳುತ್ತಿದ್ದರು. ಆ ಟೈಮ್ನಲ್ಲಿ ನನಗೆ ಚೆನ್ನಾಗಿ ಹೊಡೆದಿದ್ದರು ಕೂಡ. ಕೊನೆಗೆ ಇದು ಬೇಡವೇ ಬೇಡ ಎಂದು ನನ್ನ ತಂದೆ ಮನೆಗೆ ನಾನು ಹೊರಟುಹೋಗಿದ್ದೆ. ನಂತರ ಕೆಲ ದಿವಸಗಳ ನನ್ನ ಕರೆದುಕೊಂಡು ಹೋಗಲು ಬಂದರು. ಆಗ ನಾನು, ಮೊದಲು ನೀವು ಸರಿಯಾಗಿ, ಟೆನ್ಷನ್ ಕಡಿಮೆ ಮಾಡಿಕೊಳ್ಳಿ ಎಂದು ಹೇಳಿ ಕಳುಹಿಸಿದ್ದೆ'' ಎಂದು ಕಮಲಾಕ್ಷಿ ಹೇಳಿದ್ದಾರೆ. ಆಗಾಗ ಸ್ವಲ್ಪ ಕುಡಿತ ಇದ್ರು ಅಷ್ಟೇ ಅದು ಬಿಟ್ಟರೆ ಏನೂ ಇರಲಿಲ್ಲ ಎಂದು ಹೇಳಿದ್ದಾರೆ ಕಮಲಾಕ್ಷಿ.
ಇನ್ನುಳಿದಂತೆ ಆಗಲೇ ಹೇಳಿದಂತೆ ಚಂದ್ರಶೇಖರ್ ಸಿದ್ದಿ ಬಣ್ಣದ ಲೋಕದಲ್ಲಿ ಅವಕಾಶ ಸಿಗದೇ, ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡರು ಎನ್ನುವ ವಾದವನ್ನು ಕೆಲವರು ಮಾಡುತ್ತಿದ್ದಾರೆ. ಈ ಕುರಿತು ಕೂಡ ಮಾತನಾಡಿರುವ ಅವರ ಪತ್ನಿ ಕಮಲಾಕ್ಷಿ ''ಅಕ್ಟೋಬರ್ನಲ್ಲಿ ನೀನಾಸಂ ಆರಂಭವಾಗುತ್ತೆ, ನೀನು ಬಾ, ಅಲ್ಲೇ ಸೇರಿಕೋ.. ಮಗನನ್ನು ಅಲ್ಲೇ ಸ್ಕೂಲಿಗೆ ಸೇರಿಸೋಣ ಎಂದೆಲ್ಲಾ ಏನೇನೋ ನನಗೆ ಹೇಳುತ್ತಿದ್ದರು'' ಎಂದು ಹೇಳಿದ್ದಾರೆ. '' ಅವಕಾಶ ಇರಲಿಲ್ಲ ನಾನು ಆ ಕುರಿತು ಜಾಸ್ತಿ ಅವರ ಬಳಿ ಚರ್ಚೆ ಮಾಡುತ್ತಿರಲಿಲ್ಲ ಆದರೆ ನಾನು ಬೆಳೆಯಬೇಕು, ಅವಕಾಶಗಳು ಬೇಕು ಎಂದು ಹೇಳುತ್ತಿದ್ದರು'' ಎಂದು ಕಮಲಾಕ್ಷಿ ಹೇಳಿದ್ದಾರೆ.


Click it and Unblock the Notifications











