'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಟ ಚಂದ್ರಶೇಖರ್ ಸಿದ್ದಿ ನೇಣಿಗೆ ಶರಣು
ಚಂದನವನಕ್ಕೆ ಮತ್ತೊಂದು ಆಘಾತ ಎದುರಾಗಿದೆ. 'ಕಾಮಿಡಿ ಕಿಲಾಡಿಗಳು' ಶೋನಲ್ಲಿ ಗುರ್ತಿಸಿಕೊಂಡಿದ್ದ ನಟ ಚಂದ್ರಶೇಖರ್ ಸಿದ್ದಿ ನೇಣು ಬಿಗಿದುಕೊಂಡು ಕೊನೆಯುಸಿರೆಳೆದಿದ್ದಾರೆ. ಖಿನ್ನತೆಯಿಂದ ಆತ ಆತ್ಮಹತ್ಯೆಗೆ ಶರಣಾಗಿರುವುದಾಗಿ ವರದಿಯಾಗಿದೆ.
ಕೆಲ ಧಾರಾವಾಹಿಗಳಲ್ಲಿ ಕೂಡ ಸಣ್ಣಪುಟ್ಟ ಪಾತ್ರಗಳಲ್ಲಿ ಚಂದ್ರಶೇಖರ್ ಸಿದ್ದಿ ನಟಿಸಿದ್ದರು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಮನಳ್ಳಿಯ ಸಿದ್ದಿ ಜನಾಂಗದ ಚಂದ್ರಶೇಖರ್ ನೀನಾಸಂನಲ್ಲಿ ತರಬೇತಿ ಪಡೆದಿದ್ದರು. ಹೆಚ್ಚು ಅವಕಾಶಗಳು ಸಿಗದೇ ಇದ್ದಾಗ ಯಲ್ಲಾಪುರದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದರು.

ಚಂದ್ರಶೇಖರ್ ಸಿದ್ದಿ ತನ್ನ ಪತ್ನಿ ಜೊತೆ ಕೆಲಸಕ್ಕೆ ಹೋಗಿದ್ದ ವೇಳೆ ಕಾಡಿಗೆ ತೆರಳಿ ನೇಣುಬಿಗಿದುಕೊಂಡಿದ್ದಾರೆ. ಜನ ನನ್ನ ನೋಡಿ ಆಡಿಕೊಳ್ಳುತ್ತಾರೆ, ಈ ಜೀವನವೇ ಬೇಡ ಎಂದು ಚಂದ್ರಶೇಖರ್ ಮಾನಸಿಕವಾಗಿ ನೊಂದಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆದಿದ್ದರು. ಇದೀಗ ಏಕಾಏಕಿ ದುಡುಕಿ ನಿರ್ಧಾರ ಕೈಗೊಂಡು ಮಡದಿ ಹಾಗೂ ಮಗುವನ್ನು ಅಗಲಿದ್ದಾರೆ.
3 ವರ್ಷದ ಮಗನ ಬಳಿ "ನಾನು ಇನ್ನು ಮರಳಿ ಬರುವುದಿಲ್ಲ" ಎಂದು ಹೇಳಿ ಚಂದ್ರಶೇಖರ್ ಸಿದ್ದಿ ಕಾಡಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಬಣ್ಣದಲೋಕದಲ್ಲಿ ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಆರ್ಥಿಕವಾಗಿ ಸ್ಥಿರತೆ ಇರುವುದಿಲ್ಲ. ಅದೇ ಕಾರಣಕ್ಕೆ ಕೆಲವರು ಬಹಳ ಬೇಗ ಬಣ್ಣದಲೋಕದಿಂದ ದೂರಾಗಿ ಬಿಡುತ್ತಾರೆ.
ಕೆಲವರು ಬಣ್ಣದಲೋಕದ ಮೋಹಕ್ಕೆ ಬಿದ್ದು ಅವಕಾಶಗಳು ಸಿಗದೇ ಇದ್ದಾಗ ಮಾನಸಿಕವಾಗಿ ನೊಂದುಕೊಳ್ಳುತ್ತಾರೆ. ಏಕಾಏಕಿ ಸಿಕ್ಕ ಜನಪ್ರಿಯತೆ ಬಳಿಕ ಅವಕಾಶಗಳನ್ನು ತಂದುಕೊಡದೇ ಇದ್ದಾದ ಮಾನಸಿಕರವಾಗಿ ಜರ್ಜರಿತರನ್ನಾಗಿ ಮಾಡಿಬಿಡುತ್ತದೆ. ರಿಯಾಟಲಿ ಶೋಗಳಲ್ಲಿ ದಿಢೀರನೆ ಗೆದ್ದವರು ಬಳಿಕ ಕಾಣಿಯಾಗಿದ್ದಾರೆ. ಇತ್ತೀಚೆಗೆ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.
ಚಂದ್ರಶೇಖರ್ ಸಿದ್ಧಿ ಕೌಟುಂಬಿಕ ಕಲಹದಿಂದಲೂ ನಿಂದಿದ್ದರೂ ಎನ್ನಲಾಗ್ತಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆಪ್ತರು ಚಂದ್ರಶೇಖರ್ ಸಿದ್ಧಿ ಅಗಲಿಕೆಗೆ ಕಂಬನಿ ಮಿಡಿಯುತ್ತಿದ್ದಾರೆ.


Click it and Unblock the Notifications











