ಗಿಲ್ಲಿ ನಟರಾಜನಿಗೆ ಟ್ಯಾಲೆಂಟ್ ಇದ್ದರೂ ಅವಕಾಶ ಸಿಗೋದು ತಡವಾಗಿದ್ದೇಕೆ?
ಹಲ್ಲು ಇದ್ದವರಿಗೆ ಕಡಲೆ ಇರಲ್ಲ. ಕಡಲೆ ಇದ್ದವರಿಗೆ ಹಲ್ಲು ಇರಲ್ಲ ಎಂಬ ಮಾತಿದೆ. ಗಿಲ್ಲಿ ನಟನ ಜೀವನದಲ್ಲಿ ಈ ಮಾತು ತುಂಬಾ ಚೆನ್ನಾಗಿ ಒಪ್ಪುತ್ತೆ. ಕಾಮಿಡಿ ಕಿಲಾಡಿಗಳು ಸೀಸನ್ 4ರಲ್ಲಿ ಈಗ ಸೆಲೆಕ್ಟ್ ಆಗಿದ್ದಾರೆ. ಆದರೆ ನಟನ ತಲೆಯಲ್ಲಿ ಅಗಾಧವಾದ ಕಲೆ ತುಂಬಿದೆ. ಆ ಕಲೆಗೆ ಸರಿಯಾದ ಬೆಲೆಯೇ ಸಿಗಲಿಲ್ಲ ಎಂಬ ಬೇಸರ ಆತನಲ್ಲಿ ಇರಲೇ ಇಲ್ಲ. ಮರಳಿ ಯತ್ನವ ಮಾಡು ಮರಳಿ ಯತ್ನವ ಮಾಡು ಎನ್ನುತ್ತಾ ಮುನ್ನುಗ್ಗಿದಾತ ಈ ನಟ. ಅದಕ್ಕೆ ಇಂದು ಆತನ ಪ್ರತಿಭೆಗೆ ತಕ್ಕ ವೇದಿಕೆ ಸಿಕ್ಕಿದೆ.
ಹಳ್ಳಿ ಜನ ಮುಗ್ಧರು ಎಂಬ ಮಾತಿದೆ. ಇರುವವರೆಲ್ಲಾ ಮುಗ್ಧರು ಅಲ್ಲದೆ ಹೋದರೂ, ಯಾರಾದರೂ ಒಬ್ಬರಾದರೂ ಮುಗ್ಧರು ಇದ್ದೇ ಇರುತ್ತಾರೆ. ಆ ಮುಗ್ಧತೆ ಇದೀಗ ನಟನಲ್ಲಿ ಕಾಣಿಸುತ್ತಿದೆ. ತನ್ನ ಪ್ರತಿಭೆ ಏನು ಎಂಬುದನ್ನು ನಟ ತಲೆ ಕೆಡಿಸಿಕೊಂಡಿಲ್ಲ. ಪ್ರಯತ್ನ ಮಾಡಿದರೆ ಮಾಡಬಲ್ಲೆ ಎಂಬುದಷ್ಟೇ ಆತನ ತಲೆಯಲ್ಲಿದೆ.

ಬೆಂಗಳೂರಿಗೆ ಬಂದಿದ್ದೇಗೆ ಗಿಲ್ಲಿ ನಟ?
ಬೆಂಗಳೂರು ಎಂಬುದು ಮಹಾಸಾಗರ. ನೋಡಿದವರನ್ನೆಲ್ಲಾ ಕೈ ಬೀಸಿ ಕರೆಯುತ್ತದೆ. ಆದರೆ ಸಮುದ್ರದ ಆಳಕ್ಕೆ ಇಳಿದಾಗಲೇ ಬಯಸಿದ ಮುತ್ತುಗಳು ಸಿಗುತ್ತವಾ..? ಈಜುವುದಕ್ಕೆ ಬಾರದೆ ಹೋದರೆ ಪರಿಸ್ಥಿತಿ ಏನಾಗುತ್ತದೆ ಎಂಬುದೆಲ್ಲಾ ಗೊತ್ತಾಗುವುದು. ಮಂಡ್ಯದಲ್ಲಿ ಓದಿಕೊಂಡು ಇದ್ದ ನಟ ಹಾಗೋ ಹೀಗೋ ಐಟಿಐ ತನಕ ಶಿಕ್ಷಣನ್ನು ಮುಗಿಸಿದ್ದ. ಆಮೇಲೆ ಬೆಂಗಳೂರು ಕೈಬೀಸಿ ಕರೆದಿದೆ. ಸೀದಾ ಬೆಂಗಳೂರಿಗೆ ಬಂದವನಿಗೆ ಏನು ಮಾಡಬೇಕು ಎಂಬುದೇ ಗೊತ್ತಿರಲಿಲ್ಲ. ಸಿನಿಮಾ, ಸೀರಿಯಲ್ ನೋಡಿ ಪ್ರೇರಣೆ ಹೊಂದಿದ್ದ ನಟರಾಜನಿಗೆ ತಾನೂ ಬೆಂಗಳೂರಿಗೆ ಬಂದು ಏನು ಮಾಡಬೇಕು ಎಂದು ಗೊತ್ತಿಲ್ಲದೆಯೇ ಬಸ್ ಹತ್ತಿ ಬಂದಿದ್ದ.

ಇಂಡಸ್ಟ್ರಿಯಲ್ಲಿ ಸಿಕ್ಕಿದ್ದೇನು..?
ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂತ ಮನಸ್ಸಿ ಮಾಡಿ, ಧೈರ್ಯ ಮಾಡಿ ಮಂಡ್ಯದ ಮಳವಳ್ಳಿಯಿಂದ ಬೆಂಗಳೂರಿಗೆ ಬದಾಯ್ತು. ಬರುವ ತನಕ ಏನು ಮಾಡಬೇಕು ಎಂಬ ಐಡಿಯಾ ಇಲ್ಲ ನಟರಾಜ, ಸ್ನೇಹಿತರ ಸಹಾಯದಿಂದ ಡೈರೆಕ್ಷನ್ ಡಿಪಾರ್ಟ್ಮೆಂಟ್ ಸೇರುತ್ತಾರೆ. ಮೊದಲೇ ಗೊತ್ತಲ್ಲ, ಹಳ್ಳಿಯಿಂದ ಬೆಂಗಳೂರಿಗೆ ಮಕ್ಕಳು ಬಂದರೆ ಮುಗೀತು, ಮಗ ಏನೋ ಸಂಪಾದನೆ ಮಾಡಿಬಿಡುತ್ತಾನೆ ಅಂತ ಮನೆಯವರು, ಓ ಅವನು ಉದ್ಧಾರ ಆಗೋದಾ ಕಣೋ ಅಂತ ಊರವರು ಅಂದುಕೊಂಡು ಬಿಡುತ್ತಾರೆ. ಅವರಿಗೆ ಉತ್ತರ ಕೊಡುವುದಕ್ಕೂ ಆಗುವುದಿಲ್ಲ, ಜವಾಬ್ದಾರಿ ನಿಭಾಯಿಸದೇ ಇರುವುದಕ್ಕೂ ಆಗುವುದಿಲ್ಲ. ಅಂಥದ್ದೇ ಸ್ಥಿತಿಯಲ್ಲಿ ನಟ ಕೂಡ ಸಿಕ್ಕಿ ಬಿದ್ದಿದ್ದ.

ಹಣಕ್ಕಾಗಿ ಸೆಟ್ ಕೆಲಸಕ್ಕೆ ಹೋಗಿದ್ದ ನಟರಾಜ್
ಖಾಸಗಿ ಚಾನೆಲ್ ಒಂದಕ್ಕೆ ಗಿಲ್ಲಿ ನಟ ಸಂದರ್ಶನ ಒಂದನ್ನು ನೀಡಿದ್ದಾರೆ. ಅದರಲ್ಲಿ ತನ್ನ ಲೈಫ್ ಹಿಸ್ಟರಿ ಹೇಳಿದ್ದಾರೆ. ಸಿನಿಮಾ ಇಂಡಸ್ಟ್ರಿಗೆ ಬಂದ ಮೇಲೆ ನಾನು ಏನಾದರೂ ಮಾಡಬೇಕು ಅಂತ ಅನಿಸಿತ್ತು. ಹೀಗಾಗಿ ಡೈರೆಕ್ಷನ್ ಡಿಪಾರ್ಟ್ಮೆಂಟ್ನಲ್ಲಿ ಮಾಡಬಹುದು ಎನಿಸಿ, ಅಲ್ಲಿ ಕೆಲಸಕ್ಕೆ ಸೇರಿಕೊಂಡೆ. ಆದರೆ, ಅಲ್ಲಿ ಹಣ ಸಿಗುತ್ತಾ ಇರಲಿಲ್ಲ. ಆಗ ಸಮಸ್ಯೆ ಆಗಿತ್ತು. ಸಿನಿಮಾ ಇಂಡಸ್ಟ್ರಿ ಬಿಡುವುದಕ್ಕೆ ಇಷ್ಟವಿರದೆ ಸೆಟ್ ಕೆಲಸಕ್ಕೆ ಹೋದೆ. ಆ ಕೆಲಸವನ್ನು ಮಾಡುತ್ತಾ ಮಾಡುತ್ತಾ ಏನೋ ಅಂದುಕೊಂಡು ಏನೋ ಮಾಡುತ್ತಿದ್ದೀನಲ್ಲ ಅಂದುಕೊಂಡೆ. ಯಾವುದನ್ನು ಬಿಡುವುದಕ್ಕೆ ಆಗಲ್ಲ ಎಂದಾಗ ತಾವೂ ಏನಾದರೂ ಮಾಡಬೇಕು ಎಂದುಕೊಂಡು ಸ್ಕ್ರಿಪ್ಟ್ ಗಳನ್ನು ಬರೆಯೋದಕ್ಕೆ ಶುರು ಮಾಡಿ, ಸ್ಕಿಟ್ ಮಾಡುವುದಕ್ಕೆ ಶುರು ಮಾಡಿದೆ. ಹಣ ಸಿಗುತ್ತೆ ಅಂತ ಸೆಟ್ ಹಾಕುವ ಕೆಲಸದಲ್ಲಿಯೇ ಇದ್ದೆ ಎಂದಿದ್ದಾರೆ.

ಸಾಮಾಜಿಕ ಕಳಕಳಿ ಇರುವ ಸ್ಕಿಟ್
ನಿಮಗೆಲ್ಲಾ ಗಿಲ್ಲಿ ನಟ ಎಂದರೆ ಮೂರು ಶಾರ್ಟ್ ಸಿನಿಮಾಗಳು ನೆನಪಾಗಲೇಬೇಕು. ಅದು ಪಕ್ಕಾ ಮಂಡ್ಯ ಸ್ಟೈಲ್ ನಲ್ಲಿ, ನ್ಯಾಚುರಲ್ ಎನಿಸುವಂತ, ಓ ಇದು ನಿಜವಾಗಲೂ ನಡೆದಿದೆ ಎಂದೇ ನಂಬಿದ್ದಂತ ಮೂರು ಶಾರ್ಟ್ ಸಿನಿಮಾಗಳಿವೆ. ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸೂಸೈಡ್ ಮಾಡಿಕೊಂಡಿದ್ದು, ಟಿಕ್ ಟಾಕ್ನಲ್ಲಿ ಹೆಂಡತಿ ಎಷ್ಟರ ಮಟ್ಟಿಗೆ ಅಡಿಕ್ಟ್ ಆಗಿರುತ್ತಾಳೆ. ಆನ್ ಲೈನ್ ಕ್ಲಾಸಿಗೆ ಅಂತ ಮೊಬೈಲ್ ತೆಗೆದುಕೊಟ್ಟರೆ ಮಗಳೂ ಏನೆಲ್ಲಾ ಮಾಡುತ್ತಾಳೆ ಎಂಬ ವಿಚಾರವನ್ನಿಟ್ಟುಕೊಂಡು ಮಾಡಿರುವ ಮೂವಿಗಳು. ಅದು ಪಕ್ಕಾ ಮಂಡ್ಯ ಭಾಷೆ. ಸ್ಕ್ರಿಪ್ಟ್ ಸಂಪೂರ್ಣವಾಗಿ ಗಿಲ್ಲಿ ನಟನದ್ದೇ ಎಂಬುದು ಖುಷಿ ವಿಚಾರ. ಆ ಕಲೆಗೆ ಸಿಕ್ಕ ಅವಕಾಶ ತಡ ಆಯ್ತಲ್ಲ ಅಂತ ಎನಿಸಿದೆ ಇರುವುದಿಲ್ಲ.


Click it and Unblock the Notifications











