ದೈವಕೋಲದ ಅನುಕರಣೆ ಮಾಡಿ ಅಪಮಾನ; ಧಾರಾವಾಹಿ ತಂಡದ ವಿರುದ್ಧ ಪೊಲೀಸರಿಗೆ ದೂರು
ದೈವಾರಾಧನೆ ನಮ್ಮ ನೆಲದ ಸಂಸ್ಕೃತಿ, ಯಾವುದೇ ಕಾರಣಕ್ಕೂ ಅದಕ್ಕೆ ಅವಮಾನ ಮಾಡಬೇಡಿ ಎಂದು ಈ ಹಿಂದೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮನವಿ ಮಾಡಿದ್ದರು. 'ಕಾಂತಾರ' ಚಿತ್ರದಲ್ಲಿ ಪಂಜುರ್ಲಿ ಹಾಗೂ ಗುಳಿಗ ದೈವಗಳ ವಿಚಾರವನ್ನು ರಿಷಬ್ ತೆರೆಗೆ ತಂದಿದ್ದರು. ಬಳಿಕ ದೈವವನ್ನು ಇನ್ಸ್ಟಾ ರೀಲ್ಸ್ಗಾಗಿ, ಮನರಂಜನೆಗಾಗಿ ಬಳಸಿಕೊಳ್ಳುವವರ ಸಂಖ್ಯೆ ಹೆಚ್ಚಾಯಿತು.
ಇತ್ತೀಚೆಗೆ ಕೆಲ ಮನರಂಜನಾ ಕಾರ್ಯಕ್ರಮಗಳಲ್ಲಿ ಕಿರುತೆರೆ ಧಾರಾವಾಹಿಗಳಲ್ಲಿ ಸಹ ದೈವಾರಾಧನೆಯನ್ನು ತೋರಿಸುವ ಪ್ರಯತ್ನ ನಡೀತಿದೆ. ಸದ್ಯ ಖಾಸಗಿ ವಾಹಿನಿಯ ಕಿರುತೆರೆ ಧಾರಾವಾಹಿಯಲ್ಲಿ ದೈವಾರಾಧನೆ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಪ್ರೊಮೊ ರಿಲೀಸ್ ಆಗಿದೆ. ಆದರೆ ಈಗ ಅದನ್ನು ನಿಲ್ಲಿಸುವಂತೆ ಪೊಲೀಸರಿಗೆ ದೂರು ನೀಡಲಾಗಿದೆ.

ಖಾಸಗಿ ವಾಹಿನಿಯಲ್ಲಿ 'ಕಾವೇರಿ ಕನ್ನಡ ಮೀಡಿಯಂ' ಧಾರವಾಹಿ ಪ್ರಸಾರ ಆಗುತ್ತಿದೆ. ಇದೇ ಧಾರಾವಾಹಿಯಲ್ಲಿ ದೈವಾರಾಧನೆಯ ಪ್ರದರ್ಶನವನ್ನು ತೋರಿಸಲಾಗುತ್ತಿದೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಧಾರಾವಾಹಿ ತಂಡದ ವಿರುದ್ಧ ದೈವಾರಾಧಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತುಳುನಾಡ ದೈವಾರಾಧನೆ ಸಂರಕ್ಷಣಾ ಸಂಸ್ಥೆಯಿಂದ ಪೊಲೀಸರಿಗೆ ದೂರು ನೀಡಲಾಗಿದೆ. ಮಂಗಳೂರು ನಗರ ಪೊಲೀಸ್ ಕಮೀಷನರ್ ಮತ್ತು ಪಾಂಡೇಶ್ವರ ಠಾಣೆಗೆ ದೂರು ಸಲ್ಲಿಸಲಾಗಿದೆ.
ದೈವಾರಾಧನೆ ಚಿತ್ರೀಕರಣ ತಡೆಯುವಂತೆ ಜೊತೆಗೆ ಈಗಾಗಲೇ ಚಿತ್ರೀಕರಣ ಮಾಡಿರುವುದನ್ನು ಪ್ರಸಾರ ಮಾಡಬಾರದು ಎಂದು ಆಗ್ರಹಿಸಲಾಗಿದೆ. ದೈವದ ವೇಷಭೂಷಣ ತೊಟ್ಟು ದೈವಾರಾಧನೆಗೆ ಅಪಮಾನ ಮಾಡಿದ್ದಾರೆ. ಚದ್ಮವೇಷದಂತೆ ದೈವದ ವೇಷ ತೊಟ್ಟು ನಂಬಿಕೆಗೆ ಅವಮಾನ ಎಸಗಲಾಗಿದೆ. ದೈವಾರಾಧನೆ ಮಾಡುವ ಸಮುದಾಯದವರಿಗೂ ಅನ್ಯಾಯ ಆಗುತ್ತಿದೆ. ಹಿಂದೂ ಧಾರ್ಮಿಕ ನಂಬಿಕೆಗಳನ್ನು ಘಾಸಿ ಮಾಡಿದ ಧಾರವಾಹಿ ತಂಡದ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ದೂರಿನಲ್ಲಿ ಏನಿದೆ?
ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಹಾಸ್ಯ ಕಲಾವಿದ, ನಿರೂಪಕ ಪ್ರಶಾಂತ್ ಸಿಕೆ ಎನ್ನುವವರು ಕನ್ನಡ ಧಾರವಾಹಿ ಒಂದಕ್ಕೆ ದೈವದ ವೇಷಭೂಷಣ ತೊಟ್ಟು, ದೈವ ಕೋಲದ ಅನುಕರಣೆ ಮಾಡುವ ಮೂಲಕ ನಮ್ಮ ನಂಬಿಕೆಗಳಿಗೆ ಧಕ್ಕೆ ತಂದಿದ್ದಾರೆ. ಅಷ್ಟೇ ಅಲ್ಲದೆ ವಾದ್ಯಕೋಶಗಳ ನುಡಿಸುವವರಿಗೆ ದೈವಸ್ಥಾನದಲ್ಲಿ ಕೋಲ ಇದೆ ಎಂದು ಸುಳ್ಳು ಹೇಳಿ ಕರೆದುಕೊಂಡು ಹೋಗಿರುತ್ತಾರೆ ಮತ್ತು ಇದೊಂದು ವರ್ಗವನ್ನು ಮೂಲೆ ಗುಂಪಾಗಿಸುವ ಪ್ರಯತ್ನವಾಗಿದೆ.

ದೈವಾರಾಧನೆಗೆ ಇಂತದ್ದೇ ಜಾತಿ ಜನಾಂಗದವರು ನಡೆಸುವಂತಹ ಕಟ್ಟುಪಾಡುಗಳಿವೆ. ಅದನ್ನು ಮೀರಿ ಇನ್ನಿತರು ಮಾಡುವಂತಿಲ್ಲ. ಆದರೆ ಈಗ ಇದೊಂದು ಛದ್ಮವೇಷದಂತೆ ಪ್ರತಿಯೊಬ್ಬರು ವೇಷ ಹಾಕಿಕೊಂಡು ಹಣ ಮಾಡುತ್ತಿದ್ದಾರೆ. ಮತ್ತು ದೈವರಾಧನೆಯನ್ನು ನಿಂದಿಸುತ್ತಿದ್ದಾರೆ. ಸಾರ್ವಜನಿಕವಾಗಿ ದೈವದ ವೇಭೂಷಣ ತೊಟ್ಟು ಅಣಕಿಸುವ ಪ್ರದರ್ಶನ ನೀಡುವುದರಿಂದ ಇತರ ಸಮುದಾಯದವರೂ ಕೂಡಾ ಇದರಿಂದ ಪ್ರೇರಣೆ ಪಡೆದು ಪರಂಪರೆ ಒಪ್ಪಿತವಲ್ಲದ ಸಮುದಾಯಗಳು ದೈವ ನರ್ತನ ಮಾಡುವ ಪ್ರಸಂಗ ಕಂಡು ಬರುತ್ತಿದೆ. ಇದರಿಂದ ಮೂಲ ಕಸುಬುದಾರಿಗೂ ಅನ್ಯಾಯವಾಗುತ್ತಿದೆ.
ದೈವಕೋಲ ಕಟ್ಟುವ ಜನಾಂಗವು ಪರಿಶಿಷ್ಟ ವರ್ಗದವರು ಆಗಿರುವುದರಿಂದ ಸದರಿ ಆರೋಪಿಗಳ ವಿರುದ್ಧ ದಲಿತ ದೌರ್ಜ್ಯನ್ಯ ಪ್ರಕರಣ, ಜನಾಂಗೀಯ ನಿಂದನೆ ಜೊತೆ ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಅಪಚಾರಗಳನ್ನು ಅವಮಾನಿಸಿದ ಬಗ್ಗೆ ಪ್ರಕರಣ ದಾಖಲಿಸಬೇಕೆಂದು ಕೋರಿಕೊಳ್ಳುತ್ತಿದ್ದೇವೆ. ಅದೇ ರೀತಿ ಮುಂದಿನ ದಿನಗಳಲ್ಲಿ ಸಿನಿಮಾ, ನಾಟಕ, ಯಕ್ಷಗಾನ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ದೈವದ ವಿಡಂಬನೆಯಾದಲ್ಲಿ ಕಾನೂನಿನ ಮೂಲಕವೇ ಹೋರಾಡುವ ಎಚ್ಚರಿಕೆಯನ್ನು ಈ ಮೂಲಕ ನೀಡುತ್ತಿದ್ದೇವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


Click it and Unblock the Notifications











