BBK12: ಬಿಗ್ಬಾಸ್ ಮನೆಯಲ್ಲಿರುವ ಗಿಲ್ಲಿ ನಟ ವಿರುದ್ಧ ದೂರು
ಬಿಗ್ಬಾಸ್ ಕನ್ನಡ ಸೀಸನ್ 12 ಇದೀಗ 50 ದಿನ ಪೂರೈಸಿದೆ. ಮನೆಯಲ್ಲಿರುವ ಗಿಲ್ಲಿ ನಟ ಎಲ್ಲರ ಗಮನ ಸೆಳೆದಿದ್ದಾರೆ. ಇದೀಗ ಆತನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ಈ ಹಿಂದೆ ಅಶ್ವಿನಿ ಗೌಡ ವಿರುದ್ಧ ವಕೀಲರೊಬ್ಬರು ದೂರು ನೀಡಿದ್ದು ಗೊತ್ತೇಯಿದೆ.
ಸ್ಪರ್ಧಿಗಳ ಬಿಗ್ಬಾಸ್ ಮನೆಯೊಳಗೆ ಇರುವಾಗ ಅವರ ವಿರುದ್ಧ ದೂರು ದಾಖಲಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ಹುಲಿ ಉಗುರು ಪ್ರಕರಣ ಭಾರೀ ಸದ್ದು ಮಾಡಿತ್ತು. ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನವಾಗಿತ್ತು. ಕನ್ನಡ ಸಿನಿಮಾ ತಾರೆಯರ ಮನೆಯಲ್ಲಿ ಹುಲಿ ಉಗುರು ಹುಡುಕಾಟ ನಡೆದಿತ್ತು. ಇನ್ನು ಅಖಿಲ ಕರ್ನಾಟಕ ಬೋವಿ ಸಮಾಜದವರು ಬಿಗ್ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡ ವಿರುದ್ಧ ದೂರು ನೀಡಿದ್ದು ಸುದ್ದಿಯಾಗಿತ್ತು.

10 ದಿನಗಳ ಹಿಂದೆ ಗಿಲ್ಲಿ ನಟ ಮೇಲೆ ರಿಷಾ ಗೌಡ ಹಲ್ಲೆ ಮಾಡಿದ್ದು ಗೊತ್ತೇಯಿದೆ. ಈ ವಿಚಾರ ಭಾರೀ ಸದ್ದು ಮಾಡಿತ್ತು. ಆಕೆಯನ್ನು ಮನೆಯಿಂದ ಎಲಿಮಿನೇಟ್ ಮಾಡಿ ಹೊರಗೆ ಕಳಿಸಬೇಕು ಎಂದು ಕೆಲವರು ಆಗ್ರಹಿಸಿದ್ದರು. ಆದರೆ ಎಚ್ಚರಿಕೆ ಮಾತ್ರ ನೀಡಿ ಆಕೆಗೆ ಮತ್ತೊಂದು ಅವಕಾಶ ಕೊಡಲಾಗಿತ್ತು. ರಿಷಾ ಬಟ್ಟೆಯಲ್ಲಿ ವಾಶ್ರೂಮ್ ಬಳಿ ಇಟ್ಟಿದ್ದಕ್ಕೆ ಇಬ್ಬರ ನಡುವೆ ಕಿರಿಕ್ ಆಗಿತ್ತು.
ಗಿಲ್ಲಿ ಮಾಡಿದ್ದು ಕೂಡ ತಪ್ಪು ಎಂದು ಕಿಚ್ಚ ಸುದೀಪ್ ಚಾಟಿ ಬೀಸಿದ್ದರು. ಮಹಿಳೆಯರ ಬಟ್ಟೆಗಳನ್ನು ಮುಟ್ಟುವುದು ತಪ್ಪು. ನನ್ನದೇ ಮನೆಯಲ್ಲಿ ಹೆಣ್ಣಮಕ್ಕಳ ಬಟ್ಟೆ, ವಸ್ತುಗಳನ್ನು ನಾನು ಮುಟ್ಟಲು ಮುಜುಗರ ಪಡ್ತೀನಿ. ಹಾಗಿರುವಾಗ ನೀವು ರಿಷಾ ಗೌಡ ಅವರ ಬಟ್ಟೆ ತೆಗೆದು ಅಲ್ಲಿ ಹಾಕಿದ್ದು ತಪ್ಪು ಎಂದು ಸುದೀಪ್ ತಿವಿದಿದ್ದರು. ಇದೇ ವಿಚಾರವಾಗಿ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ರಿಷಾ ಬಟ್ಟೆ ವಾಶ್ರೂಮ್ನಲ್ಲಿ ಇಟ್ಟಿದ್ದು ಮಾತ್ರವಲ್ಲ ಮಹಿಳೆಯರ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆಯೋಗಕ್ಕೆ ದೂರು ನೀಡಲಾಗಿದೆಯಂತೆ. ಈ ಬಗ್ಗೆ ಬಿಗ್ಬಾಸ್ ಫುಟೇಜ್ ಪರಿಶೀಲನೆ ನಡೆಸಲಾಗಿದೆ. ಮೇಲ್ನೋಟಕ್ಕೆ ಯಾವುದೇ ಸಾಕ್ಷ್ಯ ಸಿಗದ ಕಾರಣ ಆಯೋಗದ ಲೀಗಲ್ ಟೀಮ್ ಅಭಿಪ್ರಾಯ ಪಡೆಯಲು ಮುಂದಾಗಿದ್ದಾರೆ ಎನ್ನಲಾಗ್ತಿದೆ.
ಅವತ್ತು ಬಕೆಟ್ ವಿಚಾರಕ್ಕೆ ಗಿಲ್ಲಿ ಹಾಗೂ ರಿಷಾ ಕಿರಿಕ್ ಮಾಡಿಕೊಂಡಿದ್ದರು. ರಿಷಾ ಎದ್ದು ಸ್ನಾನಕ್ಕೆ ಹೋಗಿದ್ದರು. ಆಗ ಗಿಲ್ಲಿ ಮಾತನಾಡಿ ರಿಷಾ ಬಕೆಟ್ ಕೊಡಲ್ವಾ? ಕೊಡದಿದ್ದರೆ ಏನು ಮಾಡಬೇಕೋ ನನಗೆ ಗೊತ್ತು ಎಂದಿದ್ದರು. ಸ್ವಲ್ಪ ಹೊತ್ತಾದರೂ ರಿಷಾ ಪ್ರತಿಕ್ರಿಯಿಸದೇ ಇದ್ದಾಗ ತಾಳ್ಮೆ ಕಳೆದುಕೊಂಡ ಗಿಲ್ಲಿ ಆಕೆಯ ಸೂಟ್ಕೇಸ್ನಲ್ಲಿದ್ದ ಬಟ್ಟೆಗಳನ್ನು ತಂದು ಬಾತ್ ರೂಮ್ ಏರಿಯಾದಲ್ಲಿ ಸುರಿದಿದ್ದರು.
ಸ್ನಾನ ಮುಗಿಸಿ ಹೊರಗೆ ಬಂದ ರಿಷಾ ಗೌಡ ತಮ್ಮ ಬಟ್ಟೆಗಳನ್ನು ಗಿಲ್ಲಿ ಕೆಳಗೆ ಹಾಕಿದ್ದಕ್ಕೆ ಕೆಂಡಾಮಂಡಲವಾಗಿದ್ದರು. ಕೋಪದಲ್ಲಿ ಕೂಗಾಡಿದ್ದರು. ಆವೇಶನದಲ್ಲಿ ಗಿಲ್ಲಿಗೆ ಬಲವಾಗಿ ಹೊಡೆದಿದ್ದರು. ಇದು ಮೇಲ್ನೋಟಕ್ಕೆ ಹಲ್ಲೆ ರೀತಿ ಇರಲಿಲ್ಲ. ಕೋಪದಲ್ಲಿ ರಿಷಾ ವರ್ತಿಸಿದಂತೆ ಇತ್ತು. ಅಲ್ಲಿಗೆ ಸುಮ್ಮನಾಗದೇ ಮತ್ತೆ ಬಿಗ್ ರೂಮ್ ಬಳಿ ಇಬ್ಬರೂ ಕೂಗಾಡಿ ಕಿರುಚಾಡಿದ್ದರು. ಯಾರೊಬ್ಬರು ಜಗಳ ಬಿಡಿಸಲು ಬರಲಿಲ್ಲ. ರಕ್ಷಿತಾ ಮಾತ್ರ ಇಬ್ಬರನ್ನು ಸಮಾಧಾನಪಡಿಸಲು ನೋಡಿದ್ದರು.
ಬಿಗ್ಬಾಸ್ ಮನೆಯಲ್ಲಿ ತಮ್ಮಾ ಕಾಮಿಡಿ ಮೂಲಕ ಗಿಲ್ಲಿ ಸುದ್ದಿಯಲ್ಲಿದ್ದಾರೆ. ಸಹ ಸ್ಪರ್ಧಿಗಳ ಕಾಲೆಳೆಯುತ್ತಾ, ಕಾವು ಕಾವು ಎಂದು ಕಾವ್ಯಾ ಅವರನ್ನು ರೇಗಿಸುತ್ತಾ ಮನರಂಜನೆ ಉಣಬಡಿಸುತ್ತಿದ್ದಾರೆ. ತಮ್ಮನ್ನು ಕೆಣಕಿದವರೆಗೆ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡುತ್ತಿದ್ದಾರೆ. ವೀಕೆಂಡ್ ಎಪಿಸೋಡ್ಗಳಲ್ಲಿ ಕೂಡ ಸುದೀಪ್ ಮುಂದೆ ತಮಾಷೆ ಮಾಡಿ ಗಮನ ಸೆಳೆಯುತ್ತಿದ್ದಾರೆ.


Click it and Unblock the Notifications











