ಎಲ್ಲರೂ ಅದನ್ನೇ ಮಾಡೋದು ; ಹೊಂದಾಣಿಕೆ ಮಾಡಿಕೊಂಡರೆ 7 ಲಕ್ಷ , ನಟಿಗೆ ಶಾಕಿಂಗ್ ಆಫರ್ ನೀಡಿದ ಸೌತ್ ಸಿನಿಮಾ ಟೀಮ್
ಬೆಳ್ಳಿತೆರೆ ಇರಲಿ.. ಕಿರುತೆರೆ ಇರಲಿ.. ಹೆಸರು, ಕೀರ್ತಿಯ ಬೆನ್ನತ್ತಿ ಬರುವ ಹಲವಾರು ಚೆಲುವೆಯರು, ಇಲ್ಲಿನ.. ಕಾಮಾಂಧರ ಕಣ್ಣಿಗೆ ಬಿದ್ದೇ ಬೀಳುತ್ತಾರೆ. ಮುಗ್ದತೆಯನ್ನೇ ಬಳಸಿಕೊಂಡು ಹಲವರು ಇಲ್ಲಿ ಹಲವರನ್ನು ಮಂಚಕ್ಕೇರುವಂತೆ ಆಮಂತ್ರಣ ಪತ್ರಿಕೆಯನ್ನು ನೀಡುತ್ತಾರೆ. ಕೆಲವರು ಈ ಖೆಡ್ಡಾಗೆ ಗೊತ್ತಿದ್ದು ಗೊತ್ತಿಲ್ಲದೆಯೋ ಬೀಳುತ್ತಾರೆ.
ಇನ್ನೂ ಕೆಲವರು ''ಹಾಸಿಗೆ ಹಂಚಿಕೊಂಡರಷ್ಟೇ ಇಲ್ಲಿ ಅವಕಾಶ'' ಎಂಬ ಕಹಿ ಸತ್ಯವನ್ನು ಅರಿತು ''ರಾಜಿ'' ಮಾಡಿಕೊಳ್ಳುತ್ತಾರೆ. ಮತ್ತೂ ಕೆಲವರು ಅವಕಾಶ ಸಿಗದಿದ್ದರೂ ಚಿಂತೆ ಇಲ್ಲ ಎಂದು ಇಂತಹ ಕುಕೃತ್ಯವನ್ನು ಎಡಗಾಲಿನಲ್ಲಿ ಒದ್ದು ಬರುತ್ತಾರೆ.

ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಹೀಗೆ.. ಆ ಇಂಡಸ್ಟ್ರೀ ಈ ಇಂಡಸ್ಟ್ರೀ ಅಂತ ಅಲ್ಲ.ಎಲ್ಲ ಚಿತ್ರೋದ್ಯಮಗಳಲ್ಲಿ ಬಹುತೇಕ ಈ ಕಥೆ ಒಂದೇ. ಒಂದರ್ಥದಲ್ಲಿ ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ. ಉದಾಹರಣೆಗೆ ಲವಿನಾ ಟಂಡನ್.
ಹೌದು, ಲವಿನಾ ಟಂಡನ್.. ಹಿಂದಿ ಕಿರುತೆರೆ ಮತ್ತು ಬೆಳ್ಳಿತೆರೆಯ ಚೆಲುವೆ. ''ತುಮ್ ಬಿನ್ ಜಾವೂ ಕಹಾ'' ಧಾರಾವಾಹಿಯ ಮೂಲಕ ಬಾಲ ನಟಿಯಾಗಿ ಬಂದ ಲವಿನಾ ಆ ನಂತರ ''ನಾಗಿನ್''.. ''ಬಾಲ್ ವೀರ್''.. ''ಯಹಾನ್ ಮೇ ಘರ್ ಘರ್ ಖೇಲಿ''.. ''ಚಂದ್ರ ನಂದಿನಿ''.. ''ಹೀರೋ ಭಕ್ತಿ ಹೀ ಶಕ್ತಿ ಹೈ'' ಧಾರಾವಾಹಿಗಳಲ್ಲಿ ಅಭಿನಯಿಸಿದರು.
2013ರಿಂದ 2015ರವರೆಗೆ ಕಿರುತೆರೆಯಲ್ಲಿ ಪ್ರಸಾರವಾದ ಜೋಧಾ ಅಕ್ಬರ್ ಧಾರಾವಾಹಿ ಇವರಿಗೆ ಅಪಾರ ಹೆಸರು ತಂದು ಕೊಡ್ತು. ಅಕ್ಬರನ ಮೊದಲ ಪತ್ನಿ 'ರುಕಯ್ಯಾ ಸುಲ್ತಾನ್ ಬೇಗಂ' ಪಾತ್ರವನ್ನು ಸೊಗಸಾಗಿ ನಿರ್ವಹಿಸಿದ್ದರು ಲವಿನಾ ಟಂಡನ್. ಇಂಥಾ ಲವಿನಾ ಟಂಡನ್ ಸದ್ಯ ತಮ್ಮ ಕಹಿ ಅನುಭವ ಹಂಚಿಕೊಂಡಿದ್ಧಾರೆ. ಹೊಂದಾಣಿಕೆ ಮಾಡಿಕೊಂಡರೆ 7 ಲಕ್ಷ ಹಣ ಕೊಡುವುದಾಗಿ ದಕ್ಷಿಣದವರು ನನಗೆ ಆಫರ್ ಮಾಡಿದ್ದರು ಎಂದಿದ್ಧಾರೆ.
''ಜೋಶ್ ಟಾಕ್ಸ್'' ವೇದಿಕೆಯಲ್ಲಿ ಈ ಕುರಿತು ಮಾತನಾಡಿರುವ ಲವಿನಾ ದಕ್ಷಿಣ ಭಾರತದಿಂದ ನನಗೊಂದು ಅವಕಾಶ ಬಂದಿತ್ತು ಎಂದಿದ್ಧಾರೆ. ಅಲ್ಲಿನ ಕಾಸ್ಟಿಂಗ್ ಡೈರೆಕ್ಟರ್ ಒಬ್ಬರು ನನಗೆ ಕರೆ ಮಾಡಿದ್ದರು ಎಂದು ಹೇಳಿರುವ ಲವಿನಾ ಪಾತ್ರ ಇಷ್ಟವಾದಲ್ಲಿ 5 ಲಕ್ಷ ಸಂಭಾವನೆ ಕೊಡುವುದಾಗಿ ಹೇಳಿದರು, ಆದರೆ ಹೊಂದಾಣಿಕೆ ಮಾಡಿಕೊಂಡರೆ 7 ಲಕ್ಷ ಕೊಡುವುದಾಗಿ ಹೇಳಿದರು ಎಂದು ಆ ದಿನವನ್ನು ಮೆಲುಕು ಹಾಕಿದ್ಧಾರೆ.

ನಾನು ಕೂಡಲೇ ಈ ಆಫರ್ ರಿಜೆಕ್ಟ್ ಮಾಡಿದೆ ಎಂದು ಹೇಳಿದೆ ಎಂದಿರುವ ಲವಿನಾ, ಇಂತಹ ಕೆಲಸವನ್ನೆಲ್ಲಾ ನಾನು ಮಾಡುವುದಿಲ್ಲ ಎಂದು ಅವರ ಮುಖಕ್ಕೆ ಹೊಡೆದಂತೆ ಹೇಳಿದೆ ಎಂದಿದ್ಧಾರೆ. ಇನ್ಮುಂದೆ ಇಂತಹ ಕೆಲಸಕ್ಕೆಲ್ಲಾ ನನಗೆ ಫೋನ್ ಮಾಡಬೇಡಿ, ಏನಾದರೂ ಒಳ್ಳೆಯ ಕೆಲಸ ಮತ್ತು ಅವಕಾಶ ಇದ್ದರೆ ಮಾತ್ರ ಫೋನ್ ಮಾಡಿ ಎಂದು ನಾನು ಅವರಿಗೆ ಖಡಕ್ ಎಚ್ಚರಿಕೆಯನ್ನು ಕೂಡ ನೀಡಿದೆ ಎಂದು ಹೇಳಿದ್ಧಾರೆ.
ಇದೇ ಸಮಯದಲ್ಲಿ ತಮಗೆ ಬಂದ ಮತ್ತೊಂದು ಆಫರ್ ಕುರಿತು ಕೂಡ ಮಾತನಾಡಿರುವ ಲವಿನಾ, ಇಲ್ಲಿ ಪಲ್ಲಂಗಕ್ಕೇರಿದರೆ ಅವಕಾಶ, ಎಲ್ಲರೂ ಹಾಗೇ ಮಾಡುತ್ತಾರೆ ಎಂದು ಆ ವ್ಯಕ್ತಿ ಹೇಳಿದ, ಆಗ ನಾನು ನನಗ್ಯಾವ ಆಸಕ್ತಿಯೂ ಕೂಡ ಇದರಲ್ಲಿ ಇಲ್ಲ ಎಂದೆ ಎಂದು ಹೇಳಿದ್ದಾರೆ. ಇಲ್ಯಾರು ಬಲವಂತ ಮಾಡಲ್ಲ ಎಂದಿದ್ಧಾರೆ.
ಸದ್ಯ ಲವಿನಾ ಅವರ ಈ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಲವರು ಲವಿನಾ ಅವರ ನೇರ ನುಡಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ಧಾರೆ. ಚಿತ್ರರಂಗದಲ್ಲಿ ಈ ಹೊಂದಾಣಿಕೆ ಸಂಸ್ಕ್ರತಿಗೆ ಕೊನೆ ಯಾವಾಗ ಎಂದು ಕಿಡಿ ಕಾರುತ್ತಿದ್ಧಾರೆ.


Click it and Unblock the Notifications