ಆನಂದ್ ಗುರೂಜಿಗೆ ದಿವ್ಯಾ ವಸಂತ್ ಬ್ಲ್ಯಾಕ್ ಮೇಲ್; " ಮೋಸ ಮಾಡೋಕೆ ಬರಲ್ಲ" ಎಂದ ಭಾವಿ ಪತಿ
ಖಾಸಗಿ ಸುದ್ದಿ ವಾಹಿನಿಯ ನಿರೂಪಕಿಯಾಗಿದ್ದ ದಿವ್ಯಾ ವಸಂತ ಮತ್ತೊಮ್ಮೆ ವಿವಾದದಲ್ಲಿ ಸಿಕ್ಕಿಕೊಂಡಿದ್ದಾರೆ. ಖ್ಯಾತ ಜ್ಯೋತಿಷಿ ಆನಂದ್ ಗುರೂಜಿ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ದೂರನ್ನು ದಾಖಲಿಸಿದ್ದರು. ಆನಂದ್ ಗುರೂಜಿಯನ್ನು ದಿವ್ಯಾ ವಸಂತ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿತ್ತು. ಈ ಸಂಬಂಧ ದಿವ್ಯಾ ವಸಂತ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ದಿವ್ಯಾ ವಸಂತ ಮೇಲೆ ಆನಂದ್ ಗುರೂಜಿ ಗಂಭೀರ ಆರೋಪ ಮಾಡಿದ್ದಾರೆ. 2024, ಆಗಸ್ಟ್ ತಿಂಗಳಿನಿಂದ ಅಶ್ಲೀಲ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಿದ್ದರು. ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರೂ ಬ್ಲ್ಯಾಕ್ಮೇಲ್ ಮಾಡುವುದನ್ನು ಕೃಷ್ಣಮೂರ್ತಿ ಹಾಗೂ ದಿವ್ಯಾ ವಸಂತ ಮುಂದುವರೆಸಿದ್ದರೆಂದು ಆರೋಪ ಮಾಡಲಾಗಿತ್ತು.

ದಿವ್ಯಾ ವಸಂತ ಮೇಲೆ ಮತ್ತೆ ಗಂಭೀರ ಆರೋಪ ಆರೋಪ ಬರುತ್ತಿದ್ದಂತೆ ಭಾವಿ ಪತಿ ಸಚಿನ್ ಅಖಾಡಕ್ಕೆ ಇಳಿದಿದ್ದಾರೆ. ತನ್ನ ಪ್ರೇಯಸಿ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ದಿವ್ಯಾ ವಸಂತ ಬೇರೆಯವರನ್ನು ಮೋಸ ಹೋಗುತ್ತಾರೆಯೇ ವಿನ: ಮೋಸ ಮಾಡುವುದಿಲ್ಲ. ಸುಮ್ಮನೆ ಹೆಣ್ಣು ಹುಡುಗಿಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಸುಮ್ಮನೆ ಕೆಲವರು ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಹನಿಟ್ರ್ಯಾಪ್ ಮಾಡಿದ್ದಾಳೆ. ಅಷ್ಟು ದುಡ್ಡು ಮಾಡಿದ್ದಾರೆ ಅಂತಾರೆ. ಅವರಿಗೆ ದುಡ್ಡು ಕೇಳುವ ಧೈರ್ಯವೇ ಇಲ್ಲ ಎಂದು ಭಾವಿ ಪತಿ ಸಚಿನ್ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ನಂಬಿ ಮೋಸ ಹೋಗುತ್ತಾಳೆ.. ಮೋಸ ಮಾಡಲ್ಲ
"ನನಗೆ ಗೊತ್ತಿರುವುದು ಒಂದೇ. ಅವಳು ಬೇರೆಯವರನ್ನು ನಂಬಿ ಮೋಸ ಹೋಗುತ್ತಾಳೆ. ಮೋಸ ಮಾಡುವಂತಹ ಬುದ್ದಿಯೆಲ್ಲ ಇಲ್ಲ. ನನಗೆ ಪರಿಚಯವಾಗಿ ಸುಮಾರು ಐದು ವರ್ಷ ಆಯ್ತು. ಅಂದಿನಿಂದ ನೋಡುತ್ತಿದ್ದೇನೆ. ಮೋಸ ಮಾಡಿ ದುಡ್ಡು ತಿನ್ನಬೇಕು ಎನ್ನುವ ಮೈಂಡ್ ಸೆಟ್ಟೇ ಇಲ್ಲ. ಒಬ್ಬರಿಗೆ ಮೋಸ ಮಾಡಬೇಕು ಅನ್ನೋದು ಗೊತ್ತಿಲ್ಲ. ಅದು ಬರೋದೂ ಇಲ್ಲ. ಅದು ಏನಕ್ಕೆ ಇವಳನ್ನು ಟಾರ್ಗೆಟ್ ಮಾಡುತ್ತಿದ್ದಾರೋ ನನಗಂತೂ ಗೊತ್ತಾಗುತ್ತಿಲ್ಲ. ಫೇಮಸ್ ಇದ್ದಾಳೆ ಅಂತಾನೇ ಕೆಲವರು ಬಾಯಿಗೆ ಬಂದಂತೆ ಮಾತಾಡಿಕೊಂಡು, ಅವರಿಗೆ ಇಷ್ಟ ಬಂದಂತೆ ಗ್ಯಾಂಗ್ ಅಂತೆಲ್ಲ ಮಾತಾಡಿಕೊಳ್ಳುತ್ತಿದ್ದಾರೆ. ಸತ್ಯಾಸತ್ಯತೆ ಏನು ಅನ್ನೋದು ಎಲ್ಲರಿಗೂ ಗೊತ್ತು. ಆದರೂ, ಯಾಕೆ ಹೀಗೆ ಮಾಡುತ್ತಿದ್ದಾರೋ ಗೊತ್ತಿಲ್ಲ." ಎನ್ನುತ್ತಾರೆ ಸಚಿನ್.
"ಇದರ ಹಿಂದೆ ಯಾರೋ ಇದ್ದಾರೆ"
"ಇದರ ಹಿಂದೆ ಯಾರೋ ಒಬ್ಬರು ಇದ್ದಾರೆ. ಅವರು ಬೇಕು ಅಂತಾನೇ ಮಾಡಿಸುತ್ತಿದ್ದಾರೆ. ಅಷ್ಟು ತಿಳುವಳಿಕೆ ಇಲ್ವಾ? ಇವಳಿಗೆ ಫ್ರೂಫ್ ಸಿಕ್ಕಿದೆ ಮಾತಾಡುತ್ತಿದ್ದಾಳೆ. ಇವಳು ದುಡ್ಡು ಕೇಳಿದ್ದು, ಕಾರು ಅಡ್ಡ ಹಾಕಿರೋದು, ಬೆದರಿಸಿ ಮಾತಾಡಿರುವುದಕ್ಕೆ ಸಾಕ್ಷಿನೇ ಇಲ್ಲ. ಪ್ರೂಫ್ ಇದ್ದರೆ ಬಿಡಿ ಒಪ್ಪಿಕೊಳ್ಳುತ್ತೇನೆ. ಸುಮ್ಸುಮ್ಮನೆ ಬಾಯಿಗೆ ಬಂದಂತೆ ಮಾತಾಡುತ್ತಾರೆ. ನಾನು ಹಳ್ಳಿಯಿಂದ ಬಂದಿದ್ದು. ಹಳ್ಳಿ ಜನಕ್ಕೆ ಇಂತಹದ್ದನ್ನು ಏನಾದರೂ ತೋರಿಸಿದರೆ, ಅದನ್ನು ನಿಜ ಅಂದು ನಂಬಿ ಬಿಡುತ್ತಾರೆ. ನಮ್ಮ ಅಪ್ಪ ಅಮ್ಮ ಇರುತ್ತಾರೆ. ಅವರಿಗೆ ನೋಡು ನೋಡು ಅಂತ ತೋರಿಸೋದು ಮಾಡುತ್ತಾರೆ. ನ್ಯೂಸ್ ಚಾನೆಲ್ನಲ್ಲಿ ಲೈವ್ ನೋಡಿ ಫೋನ್ ಮಾಡಿದ್ದರು. ನನಗೆ ನೂರೆಂಟು ಟೆನ್ಷನ್. ಬೆಂಗಳೂರಿಗೆ ಬಂದು ಎಷ್ಟು ಕಷ್ಟಪಡ್ತೀವಿ ಅನ್ನೋದು ನಿಮಗೂ ಗೊತ್ತು. ಸಾಲ ಅದು ಇದೂ ಅಂತ ನೂರೆಂಟು ಟೆನ್ಷನ್. ಸಾಲದ್ದಕ್ಕೆ ಇದು ಬೇರೆ. ಊರಿಂದ ಬೇರೆ, ಸೊಸೆಯಾಗುವವಳು ಈ ರೀತಿ ಮಾತಾಡುತ್ತಿದ್ದಾರೆ ಅಂತಾರೆ. ಅವರಿಗೆ ಉತ್ತರ ಕೊಡಬೇಕು. ಪಬ್ಲಿಕ್ಗೂ ಉತ್ತರ ಕೊಡಬೇಕು. ನನಗೆ ಗೊತ್ತು 100ಗೆ 1000 ಪರ್ಸೆಂಟ್ ಹೇಳ್ತೀನಿ. ತಪ್ಪು ಮಾಡುವಂತಹ ಹುಡುಗಿ ಅಲ್ಲ ಅವಳು. ಮುಂದೆನೂ ಮಾಡಲ್ಲ." ಎನ್ನುತ್ತಾರೆ.
ಮನೆ, ಕಾರು ಸಾಲವಿದೆ
"ನಾವು ನ್ಯೂಸ್ ಚಾನೆಲ್ ಬೇಡ ಅಂತಾನೇ ಇದ್ವಿ. ಆರಾಮಾಗಿ ಬ್ಲಾಗ್ ಮಾಡಿಕೊಂಡು ಇದ್ವಿ. ಆಮೇಲೆ ಅವಳು ಕೊನೆಯಲ್ಲಿ ಹೀಗಿದ್ದರೆ ಆಗಲ್ಲ. ಎಲ್ಲಿ ಸೋತಿದ್ದೀನಿ ಅಲ್ಲೇ ಬೆಳೆಯಬೇಕು. ಮತ್ತೆ ಮೀಡಿಯಾಗೆ ಹೋಗುತ್ತೇನೆ ಅಂದಾಗ ಆಫರ್ ಬಂತು. ಮನೆ, ಕಾರು ಎಲ್ಲದರ ಸಾಲವಿದೆ. ಮನೆಯಲ್ಲಿ ಕೂತು ಯೂಟ್ಯೂಬ್ ಮಾಡುವುದರಿಂದ ಎಷ್ಟು ಬರುತ್ತೆ. ಕೆಲಸಕ್ಕೆ ಹೋಗುತ್ತೇನೆ ಅಂದರು ಸರಿ ಹೋಗಮ್ಮ ಅಂದೆ." ಎಂದು ಮತ್ತೆ ನ್ಯೂಸ್ ಆಂಕರಿಂಗ್ಗೆ ಹೋಗಿದ್ದರ ಬಗ್ಗೆ ಕ್ಲಾರಿಟಿಕೊಟ್ಟಿದ್ದಾರೆ.
ಅಕೌಂಟ್ನಲ್ಲಿ ಮೈನಸ್ ಬ್ಯಾಲೆನ್ಸ್
"ಜನ ಅಂದುಕೊಳ್ಳುತ್ತಾರೆ. ಹನಿಟ್ರ್ಯಾಪ್ ಮಾಡಿದ್ದಾಳೆ. ಅಷ್ಟು ದುಡ್ಡು ಮಾಡಿದ್ದಾರೆ, ಇಷ್ಟು ದುಡ್ಡು ಮಾಡಿದ್ದಾರೆ ಅಂತಾರೆ. ಇವತ್ತೂ ಬ್ಯಾಂಕ್ ಅಕೌಂಟ್ ನಾನು ಓಪನ್ ಮಾಡಿ ತೋರಿಸುತ್ತೇನೆ. ಎಷ್ಟು ಮೈನಸ್ ಬ್ಯಾಲೆನ್ಸ್ ಇದೆ ಅಂತ ನಮಗೆ ಮಾತ್ರ ಗೊತ್ತು. ದಿನಕ್ಕೆ ಲೋನ್ ವಿಚಾರಕ್ಕೆ ಎಷ್ಟು ಬಾರಿ ಕಾಲ್ ಮಾಡುತ್ತಾರೆ ಅನ್ನೋದು ನಮಗೆ ಮಾತ್ರ ಗೊತ್ತು. ಯಾವಾಗಲೂ ಆ ಹುಡುಗಿ ಮೊಬೈಲ್ ಅನ್ನು ಸೈಲೆಂಟ್ ಆಗಿ ಇಟ್ಟುಕೊಂಡಿರುತ್ತೆ. ಅಷ್ಟು ಕಾಟ ಕೊಡುತ್ತಾರೆ. ಏನಿಲ್ಲ ಅಂದರೂ ದಿನಕ್ಕೆ 150 ಕಾಲ್ ಬರುತ್ತೆ." ಎನ್ನುತ್ತಾರೆ.
ಎರಡು ವರ್ಷದಿಂದ ಲವ್ ಮಾಡ್ತಿದ್ದೀನಿ
"ಅವಳು ಏನು ಅಂತ ನನಗೆ ಅರ್ಥ ಆಗುತ್ತೆ. ಆದರೆ, ರಿಲೇಷನ್ಗಳು ಮಾತಾಡುತ್ತಾರೆ. ನಮ್ಮ ಮುಂದೆ ಏನೂ ಮಾತಾಡುವುದಿಲ್ಲ. ನಮ್ಮ ಹಿಂದೆ ಮಾತಾಡುತ್ತಾರೆ ಅನ್ನೋದು ನಮಗೆ ಗೊತ್ತು. ಅವರಿಗೆ ಸತ್ಯಾಸತ್ಯತೆ ಬೇಕಾಗಿಲ್ಲ. ಮದುವೆ ಆಗುತ್ತಿರುವ ಹುಡುಗಿ ಹಂಗಂತೆ, ಹಿಂಗಂತೆ. ಹಂಗೆ ಮಾಡುತ್ತಿದ್ದಳಂತೆ ಅಂತಾರೆ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಇಷ್ಟೆಲ್ಲ ಆದ್ಮೇಲೂ ನಾನು ಜೊತೆಯಲ್ಲಿ ಇರುತ್ತಿರಲಿಲ್ಲ. ಅವಳ ಬೆನ್ನುಲುಬಾಗಿ ನಿಲ್ಲುವುದಕ್ಕೆ ಆಗುತ್ತಿರಲಿಲ್ಲ. ಅವರ ಮಾತಿಗೆ ಕಿವಿ ಕೊಟ್ಟಿದ್ದರೆ, ಅವತ್ತೆ ಬಿಟ್ಟು ಹೋಗಬಹುದಿತ್ತು. ಎರಡು ವರ್ಷದಿಂದ ಲವ್ ಮಾಡಿದ್ದೀನಿ. ಮುಂದೆನೂ ಲವ್ ಮಾಡುತ್ತೇನೆ. ಮದುವೆ ಆದ್ಮೇಲೂ ಲವ್ ಮಾಡುತ್ತಿರುತ್ತೇನೆ. ಅವಳನ್ನು ಯಾವತ್ತೂ ಬಿಟ್ಟುಕೊಡುವುದಿಲ್ಲ." ಎಂದು ಸಚಿನ್ ಹೇಳುತ್ತಾರೆ.
ಅಪ್ಪ ಮಗಳಿಗೆ ಸಂಬಂಧ ಕಟ್ಟಿದರು
"ಅವಳು ಯಾವುದೇ ಕಾರಣಕ್ಕೂ ತಪ್ಪು ಮಾಡಲ್ಲ. ಅಪ್ಪ ಮಗಳಿಗೆ ಸಂಬಂಧ ಕಟ್ಟಿದರು. ಏನೇನೋ ಮಾಡಿದರು. ರಾಸಲೀಲೆ ಹಂಗೆ ಹಿಂಗೆ ಅಂತ ಬಾಯಿಗೆ ಬಂದಂಗೆ ಹಾಕಿದರು. ಅಪ್ಪ ಅಂತ ಅವರು ಎಷ್ಟು ಪ್ರೀತಿ ಮಾಡುತ್ತಿದ್ದರು. ಮಗಳು ಅಂತ ಅವರು ಎಷ್ಟು ಪ್ರೀತಿ ಮಾಡುತ್ತಿದ್ದರು ಅಂತ ನನಗೆ ಗೊತ್ತು. ಆತರ ಇದ್ದಿದ್ದರೆ, ನಾನು ಯಾಕೆ ಮದುವೆ ಆಗುತ್ತಿದ್ದೆ. ನಮ್ಮ ಮನೆಯಲ್ಲಿ ಬಿಡುತ್ತಿದ್ದರೇ? ಜನರಿಗೆ ತಲೆ ಕೆಡಿಸಿಕೊಳ್ಳುವುದಕ್ಕೆ ಆಗಲ್ಲ. ಜೀವನ ಹೇಗೆ ಬರುತ್ತೋ ಹಾಗೆ ನಡೆದುಕೊಂಡು ಹೋಗುತ್ತೇನೆ." ಎನ್ನುತ್ತಾರೆ.
ಹೆದರು ಪುಕ್ಕಲಿ
"ದುಡ್ಡು ಕೇಳುವಷ್ಟು ಧೈರ್ಯ ಇಲ್ಲ ಅವಳಿಗೆ. ಹೆದರು ಪುಕ್ಕಲಿ. ಅವಳು ಹಾಗೆ ಮಾತಾಡುತ್ತಾಳೆ ಅಷ್ಟೇ. ಅಷ್ಟು ಧೈರ್ಯ ಎಲ್ಲಿ ಬರುತ್ತೆ. ಇದ್ದರೆ ನೀವು ಪ್ರೂಫ್ ತೋರಿಸಿ, ಆ ಮೇಲೆ ಮಾತಾಡಿ ಅಂತ ಹೇಳುತ್ತೇನೆ ಅಷ್ಟೇ. ಒಬ್ಬಳು ಹೆಣ್ಣು ಮಗಳಿಗೆ ನೋವು ಕೊಡುವುದಕ್ಕೆ ಹೋಗಬೇಡಿ. ಬಾಯಿಗೆ ಬಂದಂತೆ ಮಾತಾಡುವುದಕ್ಕೆ ಹೋಗಬೇಡಿ." ಎಂದು ಸಚಿನ್ ಹೇಳಿದ್ದಾರೆ. ಸದ್ಯ ಮತ್ತೆ ನ್ಯೂಸ್ ಚಾನೆಲ್ ಒಂದರ ಮಾಜಿ ನಿರೂಪಕಿ ವಿವಾದದಲ್ಲಿ ಸಿಕ್ಕಿಕೊಂಡಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಇದೇ ವಿಚಾರಕ್ಕೆ ದೊಡ್ಡ ಮಟ್ಟಕ್ಕೆ ಸುದ್ದಿನೂ ಆಗಿತ್ತು. ಸದ್ಯ ಈ ಪ್ರಕರಣ ಇನ್ಯಾವ ಹಂತಕ್ಕೆ ಹೋಗುತ್ತೋ ಗೊತ್ತಿಲ್ಲ.


Click it and Unblock the Notifications











