ತೆಲುಗು ಬಿಗ್ಬಾಸ್ ವಿರುದ್ಧ ಸಿಪಿಐ ಮುಖಂಡ ಆಕ್ರೋಶ: ವೇಶ್ಯಾಗೃಹಕ್ಕೆ ಹೋಲಿಕೆ!
ಬಿಗ್ಬಾಸ್ ರಿಯಾಲಿಟಿ ಶೋ ಬಗ್ಗೆ ಮೊದಲಿನಿಂದಲೂ ಆಕ್ಷೇಪಣೆಗಳು ಇದ್ದೇ ಇವೆ. ಬಿಗ್ಬಾಸ್ ಆರಂಭವಾದಾಗ ದೊಡ್ಡ ಪ್ರಮಾಣದಲ್ಲಿ ವಿರೋಧ ಎದುರಾಗಿತ್ತು, ಬಳಿಕ ಇದು ತುಸು ಕಡಿಮೆಯಾಯಿತಾದರೂ ಈಗಲೂ ಆಗೊಮ್ಮೆ-ಈಗೊಮ್ಮೆ ಕೆಲವರು ಶೋ ಅನ್ನು ಖಂಡಿಸಿ ಮಾತನಾಡುತ್ತಿರುತ್ತಾರೆ.
ಇದೀಗ ಆಂಧ್ರದ ಸಿಪಿಐ ಮುಖಂಡ ನಾರಾಯಣ ಅವರು ತೆಲುಗು ಬಿಗ್ಬಾಸ್ ಬಗ್ಗೆ ಆಕ್ಷೇಪ ಎತ್ತಿದ್ದು, ಒಟ್ಟಾರೆ ಬಿಗ್ಬಾಸ್ ಶೋ ಅನ್ನು ರದ್ದು ಮಾಡಬೇಕು ಎಂದಿದ್ದಾರೆ ಅಲ್ಲದೆ, ಬಿಗ್ಬಾಸ್ ಮನೆಯನ್ನು ವೇಶ್ಯಾಗೃಹಕ್ಕೆ ಹೋಲಿಸಿ ಮಾತನಾಡಿದ್ದಾರೆ.
ಅಣ್ಣ-ತಮ್ಮಂದಿರಲ್ಲದೆ, ಅಕ್ಕ-ತಂಗಿಯರಲ್ಲದ, ಗಂಡ-ಹೆಂಡತಿಯರಲ್ಲದ ಒಟ್ಟಾರೆ ಏನೊಂದೂ ಸಂಬಂಧವಿಲ್ಲದವರನ್ನು ಒಂದು ಮನೆಯಲ್ಲಿ, ಒಂದು ಕೋಣೆಯಲ್ಲಿ ಇರಲು ಬಿಡುವುದು ಅದು ಹೇಗೆ ಸರಿಯಾಗುತ್ತದೆ. ಸಭ್ಯ ಸಮಾಜ ಈ ಶೋ ಅನ್ನು ವಿರೋಧಿಸಬೇಕು ಇದು ಒಳ್ಳೆಯ ಸಂಪ್ರದಾಯ ಅಲ್ಲ. ಅಂಥಹಾ ಮನೆಯೊಳಕ್ಕೆ ತಮ್ಮ ಮಕ್ಕಳನ್ನು ಪೋಷಕರು ಅದು ಹೇಗೆ ಕಳಿಸುತ್ತಾರೋ ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ ನಾರಾಯಣ.

ಪರಸ್ಪರ ಪರಚಯವೇ ಇಲ್ಲದ ಯುವಕ ಯುವತಿಯರನ್ನು ಒಟ್ಟಿಗೆ ಬದುಕಲು ಬಿಡುವುದು ಬ್ರಾತಲ್ ಹೌಸ್ ಮಾದರಿಯಂತೆ. ವೇಶ್ಯಾಗೃಹಕ್ಕೆ ಹೋಗಿ ಬರುವವರು ಹೆಮ್ಮೆಯಿಂದ ಹೊರಗೆ ಬರಲು ಸಾಧ್ಯವೇ? ಆ ಮನೆಯಲ್ಲಿ ಕಲಿಯಲು ಏನೂ ಇಲ್ಲ ಎಂದು ನಾರಾಯಣ ಪ್ರಶ್ನೆ ಮಾಡಿದ್ದಾರೆ.
ಮತ್ತೊಂದು ವೀಡಿಯೋದಲ್ಲಿ, ಶೋ ನಿರೂಪಕ ನಾಗಾರ್ಜುನ ಅವರನ್ನು ಕೆಣಕಿರುವ ನಾರಾಯಣ, ''ನಾಗಣ್ಣ, ನಾಗಣ್ಣ, ಈ ಬಿಗ್ಬಾಸ್ ಶೋನಲ್ಲಿ ನೀವು ಮದುವೆಯಾದವರಿಗೆ ಲೈಸೆನ್ಸ್ ಕೊಟ್ಟಿದ್ದೀರಿ, ಶೋಭನ ಕೋಣೆ ಅರೇಂಜ್ ಮಾಡಿದ್ದೀರಿ. ಆದರೆ ಮದುವೆಯಾಗದವರ ಕತೆ ಏನು? ಆ ನೂರು ದಿನ ಅವರು ಅಲ್ಲಿ ಏನು ಮಾಡುತ್ತಾರೆ ಸ್ವಲ್ಪ ವಿವರಿಸಿ'' ಎಂದಿದ್ದಾರೆ ನಾರಾಯಣ.
ಬಿಗ್ಬಾಸ್ ತೆಲುಗು ಸೀಸನ್ 6 ಕಳೆದ ವಾರವಷ್ಟೆ ಪ್ರಾರಂಭವಾಗಿದೆ. ಶೋ ಅನ್ನು ನಟ ನಾಗಾರ್ಜುನ ನಿರೂಪಣೆ ಮಾಡುತ್ತಿದ್ದಾರೆ. ಶೋ ಒಳ್ಳೆಯ ಟಿಆರ್ಪಿ ಗಳಿಸಿಕೊಳ್ಳುತ್ತಿದೆ.


Click it and Unblock the Notifications











