ಎರಡು ಜಾಹೀರಾತುಗಳ ವಿರುದ್ಧ ನೆಟ್ಟಿಗರು ಗರಂ: ಅಂಥಹದ್ದೇನಿದೆ ಅದರಲ್ಲಿ?
ಸಿನಿಮಾಗಳ ರೀತಿಯಲ್ಲಿಯೇ ಜಾಹಿರಾತುಗಳು ಸಹ ಆಗಾಗ್ಗೆ ವಿವಾದಕ್ಕೆ ಈಡಾಗುತ್ತಿರುತ್ತವೆ. ಈ ಹಿಂದೆ ಹಲವು ಜಾಹೀರಾತುಗಳು ಆಕ್ರೋಶಕ್ಕೆ ಈಡಾಗಿದ್ದಿದೆ. ಇದೀಗ ಹೊಸದಾಗಿ ಎರಡು ಹೊಸ ಜಾಹಿರಾತುಗಳು ನೆಟ್ಟಿಗರಿಂದ ವಿರೋಧ ಎದುರಿಸಿವೆ. ಅದರಲ್ಲಿ ಒಂದು ಜಾಹೀರಾತನ್ನು ಹಿಂಪಡೆಯಲಾಗಿದೆ.
ಭಾರತದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಡಾಬರ್ ಸಂಸ್ಥೆಯು ಫೆಮ್ ಎನ್ನುವ ಪ್ರಾಡಕ್ಟ್ಗಾಗಿ ಜಾಹೀರಾತೊಂದನ್ನು ಕೆಲವು ದಿನಗಳ ಹಿಂದೆ ಹೊರತಂದಿತ್ತು. ಆ ಜಾಹೀರಾತಿಗೆ ನೆಟ್ಟಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಜಾಹಿರಾತಿನಲ್ಲಿ ಕರ್ವಾಚೌತ್ ಆಚರಣೆಯ ಬಗ್ಗೆ ತೋರಿಸಲಾಗಿತ್ತು. ಸಾಮಾನ್ಯವಾಗಿ ಕರ್ವಾಚೌತ್ ಅನ್ನು ಉತ್ತರದ ಕೆಲವು ರಾಜ್ಯಗಳಲ್ಲಿ ಪತ್ನಿಯು ಪತಿಗಾಗಿ ಮಾಡುತ್ತಾಳೆ. ಉಪವಾಸವಿದ್ದು ಸಂಜೆ ಜರಡಿಯ ಮೂಲಕ ಚಂದ್ರನನ್ನು ನೋಡಿ ಅದೇ ಜರಡಿಯ ಮೂಲಕ ಪತಿಯನ್ನು ನೋಡುತ್ತಾಳೆ. ನಂತರ ಪತಿಯು ಪತ್ನಿಗೆ ನೀರು ಕುಡಿಸಿ ಉಪವಾಸ ಅಂತ್ಯವಾಗುವಂತೆ ಮಾಡುತ್ತಾನೆ.
ಆದರೆ ಡಾಬರ್ ಹೊರತಂದಿದ್ದ ಜಾಹೀರಾತಿನಲ್ಲಿ ಇಬ್ಬರು ಮಹಿಳೆಯರು ಪರಸ್ಪರರಿಗಾಗಿ ಕರ್ವಾಚೌತ್ ಇಟ್ಟಿರುತ್ತಾರೆ. ಇಬ್ಬರೂ ಒಬ್ಬರನ್ನೊಬ್ಬರು ಜರಡಿಯ ಮೂಲಕ ನೋಡಿ ಪರಸ್ಪರರಿಗೆ ನೀರು ಕುಡಿಸುತ್ತಾರೆ. ಇಬ್ಬರೂ ಲೆಸ್ಬಿಯನ್ಸ್ (ಸಲಿಂಗಿ) ಆಗಿದ್ದು ಪರಸ್ಪರ ವಿವಾಹವಾಗಿರುತ್ತಾರೆ. ''ನಿಮ್ಮ ಮುಖ ಇಷ್ಟು ಹೊಳೆಯುತ್ತಿದ್ದಾಗ ಪ್ರಪಂಚದ ಯೋಚನೆ ಏಕೆ ಬದಲಾಗಲಾರದು'' ಎಂಬ ಟ್ಯಾಗ್ಲೈನ್ ಜಾಹಿರಾತಿಗಿದೆ.

ಸ್ಪಷ್ಟನೆ ನೀಡಿದ ಡಾಬರ್
ಈ ಜಾಹಿರಾತಿನ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ನೆಟ್ಟಿಗರು, ಇದು ಹಿಂದು ಧರ್ಮಕ್ಕೆ ಅಪಮಾನ ಎಂದಿದ್ದಾರೆ. ಕೊನೆಗೆ ಅಕ್ಟೋಬರ್ 25 ರಂದು ತನ್ನ ಟ್ವಿಟ್ಟರ್ ಖಾತೆಯ ಮೂಲಕ ಸ್ಪಷ್ಟನೆ ನೀಡಿದ ಡಾಬರ್ ಸಂಸ್ಥೆ, ಜಾಹಿರಾತನ್ನು ಹಿಂಪಡೆಯುವುದಾಗಿ ಹೇಳಿದೆ. ''ಯಾರ ಭಾವನೆಗಳಿಗೂ ಧಕ್ಕೆ ತರುವುದು ನಮ್ಮ ಉದ್ದೇಶವಾಗಿರಲಿಲ್ಲ'' ಎಂದಿದೆ.

ಸಭ್ಯಸಾಚಿ ಜಾಹೀರಾತು
ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿರುವ ಮತ್ತೊಂದು ಜಾಹೀರಾತು ಸಭ್ಯಸಾಚಿ ಆಭರಣಗಳದ್ದು. ಉಡುಪು ಮತ್ತು ಆಭರಣಗಳನ್ನು ಮಾರಾಟ ಮಾಡುವ ಸಭ್ಯಸಾಚಿ ಇತ್ತೀಚೆಗೆ ಡಿಸೈನರ್ ಮಂಗಳಸೂತ್ರದ ಜಾಹೀರಾತೊಂದನ್ನು ಬಿಡುಗಡೆ ಮಾಡಿದೆ. ಪೋಸ್ಟರ್ ಮಾದರಿಯ ಜಾಹೀರಾತು ಇದಾಗಿದ್ದು, ಇಬ್ಬರು ಮಹಿಳೆಯರು ಅರೆಬೆತ್ತಲಾಗಿ ಮಂಗಳಸೂತ್ರಗಳನ್ನು ಧರಿಸಿ ಪುರುಷನೊಂದಿಗೆ ಸರಸದಲ್ಲಿ ತೊಡಗಿರುವ ಚಿತ್ರಗಳು ಪೋಸ್ಟರ್ನಲ್ಲಿವೆ. ಇದು ರಾಯಲ್ ಬೆಂಗಾಲ್ ಮಂಗಳಸೂತ್ರವಾಗಿದೆ ಎಂದು ಸಬ್ಯಸಾಚಿ ತನ್ನ ಜಾಹಿರಾತಿನಲ್ಲಿ ಹೇಳಿದೆ.

ಒಳ ಉಡುಪಿನ ಜಾಹೀರಾತು ಎಂದ ನೆಟ್ಟಿಗರು
ಈ ಜಾಹೀರಾತಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಇದು ಹಿಂದು ಸಂಸ್ಕೃತಿಯ ಮೇಲಿನ ದಾಳಿ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಮಂಗಳಸೂತ್ರದ ಜಾಹೀರಾತಲ್ಲ ಬದಲಿಗೆ ಒಳ ಉಡುಪಿನ ಜಾಹೀರಾತು ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಾಳಿಯ ಈ ಜಾಹೀರಾತಿನಲ್ಲಿ ಅಶ್ಲೀಲ ಸಂದೇಶವಿದೆ. ಕೂಡಲೇ ಈ ಜಾಹೀರಾತು ಹಿಂದೆ ಪಡೆಯಿರಿ ಎಂದು ಆಗ್ರಹಿಸಲಾಗಿದೆ.

ತನಿಷ್ಕ್ ಜಾಹೀರಾತಿಗೆ ವಿರೋಧ
ಈ ಹಿಂದೆಯೂ ಭಾರತದಲ್ಲಿ ಹಲವು ಜಾಹಿರಾತುಗಳು ಹೀಗೆ ಬ್ಯಾನ್ ಆಗಿವೆ. ಕೆಲವು ತಿಂಗಳ ಹಿಂದಷ್ಟೆ ತನಿಷ್ಕ್ನ ಜಾಹೀರಾತೊಂದಕ್ಕೆ ಹೀಗೆಯೇ ದೊಡ್ಡ ಮಟ್ಟದ ವಿರೋಧ ಎದುರಾಗಿತ್ತು. ತನಿಷ್ಕ್ನ ಆ ಜಾಹೀರಾತು 'ಲವ್ ಜಿಹಾದ್' ಉತ್ತೇಜನ ನೀಡುತ್ತದೆ ಎಂದು ಹಿಂದು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ನಂತರ ಆ ಜಾಹೀರಾತನ್ನು ಹಿಂಪಡೆಯಲಾಯ್ತು.

ಜಾವೇದ್ ಹಬೀಬ್ ನೀಡಿದ್ದ ಜಾಹೀರಾತು ವಿವಾದ ಎಬ್ಬಿಸಿತ್ತು
ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಜಾವೇದ್ ಹಬೀಬ್ ನೀಡಿದ್ದ ಜಾಹೀರಾತಂತೂ ಭಾರಿ ಆಕ್ರೋಶ ಕೆರಳಿಸಿತ್ತು. ದೇವರುಗಳೂ ನಮ್ಮ ಸಲೂನ್ಗೆ ಬರುತ್ತಾರೆ ಎಂದು ಜಾವೇದ್ ಹಬೀಬ್ ಜಾಹೀರಾತು ನೀಡಿದ್ದರು. ಅದರಲ್ಲಿ ಹಿಂದು ದೇವತೆಗಳು ಸಲೂನ್ನಲ್ಲಿ ಕುಳಿತು ಮೇಕ್ಅಪ್ ಮಾಡಿಕೊಳ್ಳುತ್ತಿರುವ ಕಾರ್ಟೂನ್ ಮಾದರಿಯ ಚಿತ್ರವಿತ್ತು. ವಿರೋಧ ವ್ಯಕ್ತವಾದ ಬಳಿಕ ಈ ಜಾಹೀರಾತನ್ನು ಹಿಂಪಡೆಯಲಾಯ್ತು. ಈ ರೀತಿಯ ಇನ್ನೂ ಹಲವಾರು ಜಾಹೀರಾತುಗಳು ವಿವಾದ ಎಬ್ಬಿಸಿ ನಂತರ ಹಿಂಪಡೆಯಲಾಗಿದೆ.


Click it and Unblock the Notifications











