ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿರುವ ದರ್ಶಕ್ ಗೌಡ; ಯಾವ ಧಾರಾವಾಹಿ ಗೊತ್ತಾ?
ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರುವ ಈ ಹುಡುಗ ಬದುಕು ರೂಪಿಸಿಕೊಂಡಿದ್ದು ಕಿರುತೆರೆಯಲ್ಲಿ. ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ಈ ಹ್ಯಾಂಡ್ ಸಮ್ ನಟನ ಹೆಸರು ದರ್ಶಕ್ ಗೌಡ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬೆಟ್ಟದ ಹೂ' ಧಾರಾವಾಹಿಯಲ್ಲಿ ನಾಯಕ ಪತ್ರಕರ್ತ ರಾಹುಲ್ ಆಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ದರ್ಶಕ್ ಗೌಡ ಇದೀಗ ವರ್ಷಗಳ ನಂತರ ಮತ್ತೆ ಕನ್ನಡ ಕಿರುತೆರೆಗೆ ಮರಳುತ್ತಿದ್ದಾರೆ.
ಹೌದು, ಸನ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ ತಮಿಳು ಧಾರಾವಾಹಿ 'ಸಿಂಗಪೆಣ್ಣೆ' ಯಲ್ಲಿ ಅಭಿನಯಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ನಟನಾ ಛಾಪನ್ನು ಪಸರಿಸುತ್ತಿದ್ದಾರೆ ದರ್ಶಕ್ ಗೌಡ. ಸದ್ಯ ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ದರ್ಶಕ್ ಅವರು ಇದೀಗ ಹೊಸ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ.

ಉದಯ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಅನುಪಲ್ಲವಿ' ಯಲ್ಲಿ ನಾಯಕನಾಗಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಕನ್ನಡ ಕಿರುತೆರೆಗೆ ಮರಳಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪದ್ಮಾವತಿ' ಧಾರಾವಾಹಿಯಲ್ಲಿ ನಟಿಸುವ ಮೂಲಕ ನಟನೆಯ ನಂಟು ಬೆಳೆಸಿಕೊಂಡ ದರ್ಶಕ್ ಗೌಡ ಮೊದಲ ಧಾರಾವಾಹಿಯಲ್ಲಿಯೇ ಖಳನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿದ್ದ ದರ್ಶಕ್ ಗೌಡ ನಂತರ ತಮಿಳಿನ 'ಅರುಂಧತಿ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಣ್ಮಣಿ' ಧಾರಾವಾಹಿಯಲ್ಲಿ ನಾಯಕನಾಗಿ ಕಮಾಲ್ ಮಾಡಿದ್ದ ದರ್ಶಕ್ ಗೌಡ ಅಲ್ಲೂ ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ನಂತರ 'ಕಾವ್ಯಾಂಜಲಿ', 'ಬೆಟ್ಟದ ಹೂ' ಧಾರಾವಾಹಿಗಳಲ್ಲಿ ನಟಿಸಿರುವ ದರ್ಶಕ್ ಗೌಡ ಪರಭಾಷೆಯ ಕಿರುತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸಿದ್ದರು.

ಅಸಲಿಗೆ ದರ್ಶಕ್ ಅವರಿಗೆ ಕಿರುತೆರೆಗಿಂತಲೂ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಇರಾದೆ ತುಂಬಾ ಇತ್ತು. ಆದರೆ ಸಿಕ್ಕಿದ ಸಣ್ಣ ಪುಟ್ಟ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಹಂತಹಂತವಾಗಿ ಮೇಲೆ ಬರಬೇಕು ಎಂಬ ನಿರ್ದೇಶಕರೊಬ್ಬರ ಕಿವಿಮಾತು ದರ್ಶಕ್ ಅವರು ಕಿರುತೆರೆಗೆ ಕಾಲಿಡುವಂತೆ ಮಾಡಿತು. ಕಿರುತೆರೆಗೆ ಆಡಿಶನ್ ನೀಡುವ ನಿರ್ಧಾರ ಮಾಡಿದ ದರ್ಶಕ್ ಮೊದಲ ಹಂತದಲ್ಲಿ ಆಯ್ಕೆಯಾಗಿರಲಿಲ್ಲ. ಬದಲಿಗೆ ಒಂದಷ್ಟು ಆಡಿಶನ್ಗಳನ್ನು ಅಟೆಂಡ್ ಮಾಡಿದ ಬಳಿಕ ಧಾರಾವಾಹಿಗೆ ಆಯ್ಕೆಯಾದರು.
ಇನ್ನು ನಟನೆಯ ಹೊರತಾಗಿ ದರ್ಶಕ್ ಅವರಿಗೆ ಫೋಟೋಗ್ರಫಿ ಹವ್ಯಾಸವೂ ಹೌದು. ತುಂಬಾ ಸಮಯದ ಮೊದಲು ದರ್ಶಕ್ ಅವರ ಸ್ನೇಹಿತನೊಬ್ಬ ಕಿರುಚಿತ್ರ ಮಾಡಲು ಮುಂದಾದಾಗ ಕ್ಯಾಮೆರಾಮ್ಯಾನ್ ಆಗಿ ಕಾಣಿಸಿಕೊಂಡಿದ್ದರು ದರ್ಶಕ್. ಇಡೀ ಕಿರುಚಿತ್ರವನ್ನು ಸ್ವತಃ ದರ್ಶಕ್ ಅವರೇ ನಿರ್ದೇಶನ ಮಾಡಿದ ಕಾರಣ ಕ್ಯಾಮೆರಾಮ್ಯಾನ್ನ ಶ್ರಮ ಸವಾಲು ಇದೆಲ್ಲವೂ ಇವರಿಗೆ ಅರ್ಥವಾಯಿತು. ಕ್ಯಾಮೆರಾಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ಸ್ವತಃ ದರ್ಶಕ್ ಅವರು ಒಬ್ಬರೇ ನಿಭಾಯಿಸಬೇಕಾದ ಕಾರಣ ಆರಂಭದಲ್ಲಿ ಕೊಂಚ ಕಷ್ಟವಾಗಿತ್ತಾದರೂ ನಂತರ ಎಲ್ಲವನ್ನು ಇವರು ಕಲಿತುಕೊಂಡರು.
ಕಿರುತೆರೆಯ ಹೊರತಾಗಿ ಸಾಮಾಜಿಕ ಹಾಗೂ ಪರಿಸರ ಕಳಕಳಿರುವಂತಹ ಡಾಕ್ಯುಮೆಂಟರಿ 'ನಿಶಾಚರ'ದಲ್ಲಿ ಮುಖ್ಯ ಪಾತ್ರದಲ್ಲಿ ನಟ ದರ್ಶಕ್ ಗೌಡ ಅಭಿನಯಿಸಿದ್ದಾರೆ. ಪಶ್ಚಿಮ ಘಟ್ಟದ 'ಸ್ಲೆಂಡರ್ ಲಾರಿಸ್' ಎಂಬ ಪ್ರಾಣಿಯ ಬಗೆಗಿನ ಡಾಕ್ಯುಮೆಂಟರಿ ಇದಾಗಿದ್ದು, ಈ ಪ್ರಾಣಿ ಅಳಿವಿನಂಚಿನಲ್ಲಿದೆ. ಅದೇ ಕಾರಣದಿಂದ ಈ ಪ್ರಾಣಿಯ ಬಗ್ಗೆ ಅರಿವು ಮೂಡಿಸುವಂತಹ ಡಾಕ್ಯುಮೆಂಟರಿಯಲ್ಲಿ ನಟ ದರ್ಶಕ್ ಗೌಡ ಅವರು ನಟಿಸಿದ್ದಾರೆ.
ಇನ್ನು ಹಿರಿತೆರೆಯಲ್ಲಿಯೂ ನಟಿಸುವ ಇರಾದೆ ಹೊಂದಿರುವ ದರ್ಶಕ್ ಗೌಡ ಅವರು ಉತ್ತಮ ಸಿನಿಮಾ ಹಾಗೂ ಪಾತ್ರಕ್ಕಾಗಿ ಕಾಯುತ್ತಿದ್ದಾರೆ. ಅವರು ಬಯಸಿದಂತೆ ಉತ್ತಮ ಕಥೆ ಹಾಗೂ ಪಾತ್ರ ದೊರೆತರೆ ದರ್ಶಕ್ ಗೌಡ ಅವರು ಹಿರಿತೆರೆಯಲ್ಲಿಯೂ ನಾಯಕನಾಗಿ ನಟಿಸುವ ಸಮಯ ದೂರವಿಲ್ಲ.


Click it and Unblock the Notifications











