TRP Rating: 'ಕ್ರಾಂತಿ' Vs 'ಕಬ್ಜ': ಜಿದ್ದಾ ಜಿದ್ದಿನ ಪೈಪೋಟಿಯಲ್ಲಿ ಗೆದ್ದಿದ್ಯಾರು?
ಇತ್ತೀಚೆಗೆ ಒಂದೇ ದಿನ ಒಂದೇ ಸಮಯಕ್ಕೆ ಕನ್ನಡದ 2 ದೊಡ್ಡ ಸಿನಿಮಾಗಳು ಟಿವಿಯಲ್ಲಿ ಪ್ರಸಾರವಾಗಿದ್ದವು. ದರ್ಶನ್ ನಟನೆಯ 'ಕ್ರಾಂತಿ' ಹಾಗೂ ಉಪೇಂದ್ರ, ಸುದೀಪ್ ಜೋಡಿಯ 'ಕಬ್ಜ' ಸಿನಿಮಾಗಳು ಜುಲೈ 16, ಭಾನುವಾರ ಸಂಜೆ 6 ಗಂಟೆಗೆ ವರ್ಲ್ಡ್ ಪ್ರೀಮಿಯರ್ ಆಗಿತ್ತು. ಸಹಜವಾಗಿಯೇ ಯಾವ ಚಿತ್ರಕ್ಕೆ ಹೆಚ್ಚು TRP ಸಿಗಬಹುದು ಎನ್ನುವ ಲೆಕ್ಕಾಚಾರ ನಡೆದಿತ್ತು.
ಜನವರಿ 26ಕ್ಕೆ ಬಿಡುಗಡೆಯಾಗಿದ್ದ ವಿ. ಹರಿಕೃಷ್ಣ ನಿರ್ದೇಶನದ 'ಕ್ರಾಂತಿ' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಂದ 'ಕಬ್ಜ' ಫಲಿತಾಂಶ ಕೂಡ ಇದೇ ರೀತಿ ಇತ್ತು. ದರ್ಶನ್ 'ಕ್ರಾಂತಿ' ಚಿತ್ರಕ್ಕೆ ಅಭಿಮಾನಿಗಳೇ ದೊಡ್ಡಮಟ್ಟದಲ್ಲಿ ಪ್ರಚಾರ ಮಾಡಿದ್ದರು. ಇನ್ನು ಆರ್. ಚಂದ್ರು ನಿರ್ದೇಶನದ 'ಕಬ್ಜ' ಚಿತ್ರದಲ್ಲಿ ಉಪ್ಪಿ, ಕಿಚ್ಚನ ಜೊತೆ ಶಿವಣ್ಣ ಕೂಡ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಿತ್ತು.

ಈ ಎರಡು ಸಿನಿಮಾಗಳು ಥಿಯೇಟರ್ನಲ್ಲಿ ತೆರೆಕಂಡು ತಿಂಗಳು ಕಳೆಯುವ ಮುನ್ನ ಓಟಿಟಿಗೆ ಬಂದಿದ್ದವು. ಎರಡು ಸಿನಿಮಾಗಳು ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಿತ್ತು. ಜುಲೈ 16ರಂದು ಉದಯ ಟಿವಿಯಲ್ಲಿ 'ಕ್ರಾಂತಿ' ಸಿನಿಮಾ ಪ್ರಸಾರವಾದರೆ ಅದೇ ಸಮಯಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಕಬ್ಜ' ಖದರ್ ಶುರುವಾಗಿತ್ತು.ಇದೀಗ ಎರಡು ಸಿನಿಮಾಗಳ TRP ರೇಟಿಂಗ್ ಹೊರಬಿದ್ದಿದೆ.
'ಕಬ್ಜ' ಎದುರು ಗೆದ್ದ 'ಕ್ರಾಂತಿ'!
ಸದ್ಯ ಜುಲೈ 3ನೇ ವೀಕೆಂಡ್ TRP ರೇಟಿಂಗ್ ಲೆಕ್ಕ ಸಿಕ್ಕಿದ್ದು 'ಕ್ರಾಂತಿ' ಸಿನಿಮಾ ಧೂಳೆಬ್ಬಿಸಿದೆ. ಮೊದಲ ಟಿವಿ ಪ್ರಸಾರದಲ್ಲಿ ಚಿತ್ರಕ್ಕೆ 9.8 ಟಿವಿಆರ್ ಸಿಕ್ಕಿದೆ. ಇದನ್ನು ಕೇಳಿ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಓಟಿಟಿ ಟ್ರೆಂಡ್ ಹೆಚ್ಚಾದಮೇಲೆ ಜನ ಟಿವಿಯಲ್ಲಿ ಸಿನಿಮಾ ನೋಡುವ ಪ್ರಮಾಣ ಕಮ್ಮಿ ಆಗಿದೆ. ಆದರೆ ಸ್ಟಾರ್ ನಟರ ಸಿನಿಮಾಗಳು ಆ ಮಾತನ್ನು ಸುಳ್ಳಾಗಿಸುತ್ತದೆ. 'ಕ್ರಾಂತಿ' ಸಿನಿಮಾ ಕೂಡ ಒಳ್ಳೆ TRP ಪಡೆದಿದ್ದು 'ಕಬ್ಜ'ಗಿಂತ ದರ್ಶನ್ ಚಿತ್ರವನ್ನೇ ಹೆಚ್ಚು ಜನ ನೋಡಿದ್ದಾರೆ ಎಂದು ಸಾಬೀತು ಮಾಡಿದೆ.
'ಕಬ್ಜ' ಚಿತ್ರಕ್ಕೆ 3.1 TVR
ಅದೇ ದಿನ ಅದೇ ಸಮಯಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ 'ಕಬ್ಜ' ಸಿನಿಮಾ ಕೇವಲ 3.1 TVR ಸಾಧಿಸಿದೆ. ಒಟ್ಟಾರೆ ಈ ನೆಕ್ ಟು ನೆಕ್ ಫೈಟ್ನಲ್ಲಿ 'ಕ್ರಾಂತಿ'ಗಿಂತ 'ಕಬ್ಜ' ಬಹಳ ಹಿಂದೆ ಉಳಿದಿದೆ. ಆರ್. ಚಂದ್ರು KGF ರೇಂಜ್ನಲ್ಲಿ ಈ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದರು. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ಅದ್ಧೂರಿಯಾಗಿ ಮೂಡಿಬಂದಿತ್ತು. ಆದರೆ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಸಿನಿಮಾ ವಿಫಲವಾಗಿತ್ತು.
ಸರ್ಕಾರಿ ಶಾಲೆಗಳ 'ಕ್ರಾಂತಿ'
'ಯಜಮಾನ' ಸಿನಿಮಾ ಬಳಿಕ ಅದೇ ಕಾಂಬಿನೇಷನ್ನಲ್ಲಿ ಬಂದ ಸಿನಿಮಾ 'ಕ್ರಾಂತಿ'. ಈ ಆಕ್ಷನ್ ಎಂಟರ್ಟೈನರ್ ಚಿತ್ರದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿಗತಿ ಬಗ್ಗೆ ಚರ್ಚಿಸಲಾಗಿತ್ತು. ರಚಿತಾ ರಾಮ್ ನಾಯಕಿಯಾಗಿ ಮಿಂಚಿದ್ರೆ, ರವಿಚಂದ್ರನ್, ಉಮಾಶ್ರೀ, ಮುಖ್ಯಮಂತ್ರಿ ಚಂದ್ರುರಂತಹ ಅನುಭವಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದರು. ಎಲ್ಲಾ ಕಮರ್ಷಿಯಲ್ ಅಂಶಗಳ ಜೊತೆಗೆ ಒಂದೊಳ್ಳೆ ಸಂದೇಶ ಚಿತ್ರದಲ್ಲಿತ್ತು. ಹಾಗಾಗಿಯೇ ವೀಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ವೀಕ್ಷಿಸಿದ್ದಾರೆ.
ಗ್ಯಾಂಗ್ಸ್ಟರ್ ಡ್ರಾಮಾ 'ಕಬ್ಜ'
KGF ಸಿನಿಮಾದಿಂದ ಪ್ರೇರಣೆಗೊಂಡು ಆರ್. ಚಂದ್ರು ಕೊಟ್ಟಿಕೊಟ್ಟ ಗ್ಯಾಂಗ್ಸ್ಟರ್ ಸಿನಿಮಾ 'ಕಬ್ಜ'. ಬಹುಕೋಟಿ ವೆಚ್ಚದ ಈ ಪೀರಿಯಡ್ ಆಕ್ಷನ್ ಚಿತ್ರದಲ್ಲಿ ಉಪ್ಪಿ ಅರ್ಕೇಶ್ವರ ಎನ್ನುವ ಗ್ಯಾಂಗ್ಸ್ಟರ್ ಆಗಿ ಅಬ್ಬರಿಸಿದ್ದರು. ಪೊಲೀಸ್ ಆಫೀಸರ್ ಭಾರ್ಗವ್ ಭಕ್ಷಿ ಪಾತ್ರದಲ್ಲಿ ಕಿಚ್ಚ ಸುದೀಪ್ ಮಿಂಚಿದ್ದರು. ಇನ್ನು ಕ್ಲೈಮ್ಯಾಕ್ಸ್ನಲ್ಲಿ ಸಿದ್ದಾಂತ್ ಆಗಿ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಗೆಸ್ಟ್ ಅಪಿಯರೆನ್ಸ್ ಚಿತ್ರಕ್ಕೆ ಪ್ಲಸ್ ಆಗಿತ್ತು.


Click it and Unblock the Notifications











