ಕಿರುತೆರೆಯಲ್ಲಿ ತಗಡು, ಗುಮ್ಮಿಸ್ಕೊತ್ತಿಯಾ ಟ್ರೆಂಡ್; ದರ್ಶನ್ ಅಭಿಮಾನಿಗಳು ಏನಂತಾರೆ?
ಸ್ಯಾಂಡಲ್ವುಡ್ನಲ್ಲಿ ತಗಡು, ಗುಮ್ಮಿಸ್ಕೊತ್ತಿಯಾ ಪದಗಳು ಭಾರೀ ಚರ್ಚೆ ಹುಟ್ಟಾಕ್ಕಿರುವುದು ಗೊತ್ತೇಯಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ಗೆ ಕೌಂಟರ್ ಕೊಡುವ ವೇಳೆ ನಟ ದರ್ಶನ್ ಈ ಪದಗಳನ್ನು ಬಳಸಿದ್ದರು. ಇದಕ್ಕೆ ಉಮಾಪತಿ ಶ್ರೀನಿವಾಸ್ ಕೂಡ ಖಡಕ್ ತಿರುಗೇಟು ನೀಡಿದ್ದರು. ಬೆದರಿಸುತ್ತಿದ್ದಾರೆ. ಏನು ಮಾಡುತ್ತಾರೋ ನಾನು ನೋಡ್ತೀನಿ ಎಂದು ಸವಾಲು ಹಾಕಿದ್ದರು.
ನಿರ್ಮಾಪಕನ ಬಗ್ಗೆ ನಟ ದರ್ಶನ್ ಮಾತನಾಡಿದ ರೀತಿ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದರು. ಅಣ್ಣಾವ್ರು ನಿರ್ಮಾಪಕರನ್ನು ಅನ್ನದಾತರು ಎನ್ನುತ್ತಿದ್ದರು. ಆದರೆ ದರ್ಶನ್ ಈ ರೀತಿ ಹೇಳಿದ್ದು ಸರಿಯಲ್ಲ ಎನ್ನುತ್ತಿದ್ದಾರೆ. ಇನ್ನು ದರ್ಶನ್ ಹೇಳಿಕೆ ಸಂಬಂಧ ಪೊಲೀಸ್ ಠಾಣೆಗಳಲ್ಲಿ ದೂರು ಸಹ ದಾಖಲಾಗಿದೆ. ಇನ್ನು ದರ್ಶನ್ -ಉಮಾಪತಿ ವಿವಾದದ ನಡುವೆ ತಗಡು, ಗುಮ್ಮಿಸ್ಕೊತ್ತಿಯಾ ಪದಗಳು ವೈರಲ್ ಆಗಿದ್ದವು.

ಸದ್ಯ ಸ್ಮಾಲ್ ಸ್ಕ್ರೀನ್ನಲ್ಲಿ ತಗಡು, ಗುಮ್ಮಿಸ್ಕೊತ್ತಿಯಾ ಪದಗಳು ಸದ್ದು ಮಾಡುತ್ತಿವೆ. ರಿಯಾಲಿಟಿ ಶೋ ಹಾಗೂ ಧಾರಾವಾಹಿಗಳಲ್ಲಿ ಈ ಪದಗಳ ಬಳಕೆ ಎದ್ದು ಕಾಣಿಸುತ್ತಿದೆ. ದರ್ಶನ್ ಅಭಿಮಾನಿಗಳು ಆ ವಿಡಿಯೋ ಕ್ಲಿಪ್ಗಳನ್ನು ವೈರಲ್ ಮಾಡುತ್ತಿದ್ದಾರೆ. ಟಿಆರ್ಪಿಗಾಗಿ ಇದನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
'ಗಿಚ್ಚಿ ಗಿಲಿಗಿಲಿ- 3' ಶೋ ಸ್ಕಿಟ್ ವೇಳೆ ಹಾಸ್ಯ ಕಲಾವಿದ ತಗಡು, ಗುಮ್ಮಿಸ್ಕೊತ್ತಿಯಾ ಪದ ಬಳಸಿದ್ದಾರೆ. ಅದೇ ರೀತಿ 'ನೀನಾದೆನಾ' ಧಾರಾವಾಹಿಯಲ್ಲಿ ಕೂಡ ಪಾತ್ರಧಾರಿ ತಗಡು ಪದ ಬಳಸಿರುವ ಕಂಡುಬಂದಿದೆ. ದರ್ಶನ್ -ಉಮಾಪತಿ ವಿವಾದದ ಬಳಿಕ ಬೇಕಂತಲೇ ಈ ಪದಗಳನ್ನು ಸೇರಿಸಿಕೊಂಡರಾ? ಅಥವಾ ಇದು ಕಾಕತಾಳಿಯವೋ ಗೊತ್ತಿಲ್ಲ. ಒಟ್ನಲ್ಲಿ ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.
ನಮ್ ಬಾಸ್ ಈ ಪದಗಳನ್ನು ಬಳಸಿದ ಮೇಲೆ ಟ್ರೆಂಡ್ ಆಗುತ್ತಿದೆ, ಟಿಆರ್ಪಿಗಾಗಿ ಸ್ಮಾಲ್ ಸ್ಕ್ರೀನ್ನಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಈಗ ಯಾರು ಈ ಬಗ್ಗೆ ಕೇಸ್ ಹಾಕುತ್ತೀರಾ ಹಾಕಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. 'ಗಿಚ್ಚಿ ಗಿಲಿಗಿಲಿ- 3' ಶೋನಲ್ಲಿ ನಟ ಚಂದ್ರಪ್ರಭಾ ತಗಡು, ಗುಮ್ಮಿಸ್ಕೋಬೇಕಾ ಎಂದು ಹೇಳಿರುವುದು ಗಮನ ಸೆಳೆದಿದೆ. ಕಾರ್ಯಕ್ರಮದ ತೀರ್ಪುಗಾರರಾಗಿದ್ದ ಸೃಜನ್ ಲೋಕೇಶ್, ಶ್ರುತಿ, ತಾರಾ, ಸಾಧು ಕೋಕಿಲ ಕೂಡ ಇದನ್ನು ಕೇಳಿ ನಕ್ಕಿದ್ದಾರೆ.

'ಕಾಟೇರ' ಸಕ್ಸಸ್ ಬೆನ್ನಲ್ಲೇ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಆ ಟೈಟಲ್ ಕೊಟ್ಟಿದ್ದು ಕಥೆ ಬರೆಸಿದ್ದು ನಾನು ಎಂದಿದ್ದರು. ಈ ಬಗ್ಗೆ ಚಿತ್ರದ 50ನೇ ದಿನದ ಸಂಭ್ರಮಾಚರಣೆ ವೇಳೆ ನಟ ದರ್ಶನ್ ಸ್ಪಷ್ಟನೆ ನೀಡಿದ್ದರು. "ಕೆಲವರು ಕಥೆ ನಾನು ಮಾಡಿಸಿದ್ದೆ. ಟೈಟಲ್ ನಾನು ಕೊಟ್ಟೆ ಅಂತ ಹೇಳ್ತಾರೆ. ಅಯ್ಯೋ ತಗಡೇ. ನಿನಗೆ 'ರಾಬರ್ಟ್' ಕಥೆ ಕೊಟ್ಟಿದ್ದೇ ನಾವು. ಯಾಕಂದರೆ ಕೊಟ್ಟಿದ್ದು ಮಾಡಿದ್ದು ಹೇಳಬಾರದು. ಇದೇ ರೀತಿ ಒಂದ್ಸಲ ಸಿಕ್ಕಿಹಾಕಿಕೊಂಡು ಹೇಳಿಸಿಕೊಂಡು ಬುದ್ದಿ ಕಲಿಯಲಿಲ್ಲ, ಅಂದ್ರೆ ನಾವು ಏನು ಹೇಳೋಣ. ಇಂತಹ ಒಳ್ಳೆಯ ಕಥೆ ಯಾಕಪ್ಪಾ ಬಿಟ್ಟೆ ನೀನು?" ಎಂದಿದ್ದರು.
'ಕಾಟೇರ' ಟೈಟಲ್ ಹಾಗೂ ಕಥೆ ಬಗ್ಗೆ ನಿರ್ದೇಶಕರಾದ ಅಯೋಗ್ಯ ಮಹೇಶ್ ಮತ್ತು ತರುಣ್ ಸುಧೀರ್ ಇಬ್ಬರನ್ನು ವೇದಿಕೆ ಕಡೆದು ಸ್ಪಷ್ಟನೆ ಕೊಟ್ಟಿದ್ದರು ದರ್ಶನ್. ಬಳಿಕ ಮಾತು ಮುಂದುವರೆಸಿ "ಯಾಕಪ್ಪಾ, ಬಂದು ಬಂದು ನಮ್ಮ ಬಳಿ ಯಾಕೆ ಗುಮ್ಮಿಸ್ಕೊತ್ತಿಯಾ. ಗುಮ್ಮಿಸ್ಕೊಬೇಡ. ಎಲ್ಲೋ ಇದ್ದೀಯಾ. ಅಲ್ಲೇ ಚೆನ್ನಾಗಿ ಇದ್ದುಬಿಡು. ತಪ್ಪದು" ಎಂದು ದರ್ಶನ್ ಹೇಳಿದ್ದರು.


Click it and Unblock the Notifications











