Weekend with Ramesh: ವಿದ್ಯಾರ್ಥಿ ನಾಯಕನ ಆಯ್ಕೆಗಾಗಿ ಸಿಎಂ ಎಂಟ್ರಿ: ಮೆಜೆಸ್ಟಿಕ್ ಬಂದ್
ಡಿ. ಕೆ. ಶಿವಕುಮಾರ್ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ, ಟ್ರಬಲ್ ಶೂಟರ್, ಕನಕಪುರ ಬಂಡೆ ಎಂದು ಹೆಸರನ್ನ ಮಾಡಿದ್ದಾರೆ. ರಾಜ್ಯಶಾಸ್ತ್ರದಲ್ಲಿ ಎಂಎ ಪದವಿ ಪಡೆದಿರುವ ಶಿವಕುಮಾರ್ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸುವವರೆಗೂ ತಮ್ಮ ರಾಜಕೀಯ ಜೀವನದಲ್ಲಿ ದೊಡ್ಡ ಹೋರಾಟವನ್ನೇ ನಡೆಸಿಕೊಂಡು ಬಂದಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿಯೇ ಹಲವಾರು ಹುದ್ದೆಗಳನ್ನು ಅಲಂಕರಿಸಿದ ಕೀರ್ತಿ ಡಿಕೆಶಿ ಅವರಿಗೆ ಸಲ್ಲುತ್ತದೆ.
ವಿದ್ಯಾರ್ಥಿ ಸಂಘಟನೆಯಲ್ಲಿ ತೊಡಗಿಸಿಕೊಂಡ ಡಿ.ಕೆ.ಶಿವಕುಮಾರ್ ಅವರು 1982ರಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ರಾಜಕೀಯ ಪ್ರವೇಶ ಮಾಡಿದರು. 1989ರಲ್ಲಿ ಸಾತನೂರು ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿ ಬಹಳ ಕಿರಿಯ ವಯಸ್ಸಿನ ಶಾಸಕರಾಗಿ ವಿಧಾನಸೌಧ ಪ್ರವೇಶ ಮಾಡಿದರು.
1999ರಲ್ಲಿ ಎಸ್. ಬಂಗಾರಪ್ಪ ಅವಧಿಯಲ್ಲಿ ಬಂಧಿಖಾನೆ ಸಚಿವರಾಗಿ ಮೊದಲ ಬಾರಿ ಮಂತ್ರಿಯಾದರು.

ನಾಲ್ಕು ದಶಕಗಳ ಸುದೀರ್ಘ ರಾಜಕಾರಣದಲ್ಲಿ 4 ಬಾರಿ ಸಚಿವರಾಗಿ 8 ಬಾರಿ ಶಾಸಕರಾಗಿ 2020ರಿಂದ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ. ಈಗ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರದ ಉಸ್ತುವಾರಿ ಸಚಿವರಾಗಿ ತಮ್ಮ ಹುದ್ದೆಯನ್ನು ಅಲಂಕರಿಸಿದ್ದಾರೆ. ಡಿ.ಕೆ. ಶಿವಕುಮಾರ್ರವರಿಗೆ ರಾಜಕೀಯ ಆಸಕ್ತಿ ಅವರು ಪ್ರಾಥಮಿಕ ಶಾಲೆಯಲ್ಲಿ ಇದ್ದಾಗಲೇ ಬೆಳೆದಿತ್ತು.

ಕಾರ್ಮೆಲ್ ಪ್ರೌಢಶಾಲೆಗೆ ಎಂಟ್ರಿ
ನ್ಯಾಷನಲ್ ಪಬ್ಲಿಕ್ ಸ್ಕೂಲ್ನಿಂದ ಡಿ. ಕೆ ಶಿವಕುಮಾರ್ ಅವರಿಗೆ ಟಿಸಿ ಕೊಟ್ಟು ಗೋಪಾಲ ಕೃಷ್ಣ ಎಂಬ ಪ್ರಿನ್ಸಿಪಾಲರು ಕಳುಹಿಸಿದ್ದರು. ನಂತರ ಕಾರ್ಮಲ್ ಪ್ರೌಢಶಾಲೆಗೆ ಸೇರಿಕೊಂಡ ಡಿ. ಕೆ ಶಿವಕುಮಾರ್ ಅವರು ಅಲ್ಲಿ ನಡೆದ ಎಲೆಕ್ಷನ್ನಲ್ಲಿ ನಿಂತು ಜಯಭೇರಿ ಬಾರಿಸಿದರು. ಆದರೆ ಅಲ್ಲಿ ಡಿ. ಕೆ ಶಿವಕುಮಾರ್ ಅವರನ್ನು ಬ್ಲಾಕ್ ಮಾಡಿ ಅವರ ಪ್ರತಿಸ್ಪರ್ಧಿ ಆರತಿ ಪಾತಕ್ ಹೆಸರನ್ನು ವಿಜಯಶಾಲಿ ಎಂದು ಅನೌನ್ಸ್ ಮಾಡಲಾಗಿತ್ತು. ನಂತರ ಡಿ. ಕೆ ಶಿವಕುಮಾರ್ ಅವರಿಗಾಗಿ ಹೊಸ ಹುದ್ದೆಯನ್ನು ಕೊಡಲಾಗಿತ್ತು. ಸ್ಫೋರ್ಟ್ಸ್ ಸೆಕ್ರೆಟರಿ ಆಗಿ ಡಿಕೆಶಿ ಅವರನ್ನು ನೇಮಕ ಮಾಡಲಾಗಿತ್ತು.
ಸ್ಟೂಡೆಂಟ್ ಯೂನಿಯನ್ ಎಲೆಕ್ಷನ್ಗೆ ನಿಲ್ಲದ ಡಿಕೆಶಿ
ವಿದ್ಯಾವರ್ಧಕ ಸಂಘದಲ್ಲಿ ಸ್ಟುಡೆಂಟ್ ಯೂನಿಯನ್ ಎಲೆಕ್ಷನ್ಗೆ ಡಿ.ಕೆ.ಶಿವಕುಮಾರ್ ಅವರಿಗೆ ನಿಲ್ಲುವುದಕ್ಕೆ ಚಾನ್ಸ್ ಸಿಗಲಿಲ್ಲ. ಆಗ ಜೊತೆಗಾರ ಕೃಷ್ಣ ದೇಶಪಾಂಡೆಯನ್ನು ಡಿಕೆಶಿ ಎಲೆಕ್ಷನ್ಗೆ ನಿಲ್ಲಿಸಿ ಭಾಷಣವನ್ನು ಮಾಡಿ ಗೆಲ್ಲಿಸಿದ್ರು. ಅಂದೇ ಡಿ. ಕೆ ಶಿವಕುಮಾರ್ ಅವರ ಕ್ಯಾಲಿಬರ್ ವಿದ್ಯಾರ್ಥಿಗಳಿಗೆ ಗೊತ್ತಾಗಿತ್ತು. ಅದಕ್ಕಾಗಿಯೇ ನನಗೆ ಸಪೋರ್ಟ್ ಮಾಡಿದರು ಎಂದು ಡಿಕೆಶಿ ವೀಕೆಂಡ್ ವಿತ್ ರಮೇಶ್ ಶೋನಲ್ಲಿ ತಿಳಿಸಿದ್ದಾರೆ.
ಏಳನೇ ತರಗತಿಯಿಂದ ಭಾಷಣ ಶುರು
ಡಿ. ಕೆ. ಶಿವಕುಮಾರ್ ಅವರಿಗೆ ಏಳನೇ ತರಗತಿ ಇದ್ದಾಗಲೇ ಭಾಷಣ ಮಾಡುವ ಹುಚ್ಚು ಹೆಚ್ಚಾಗಿತ್ತು. ಭಾಷಣ ಮಾಡುವುದಕ್ಕೆ ಐಸ್ ಕ್ಯಾಂಡಿ ಮಾರುತ್ತಿದ್ದ ಕೆಂಚ ಭಾಷಣವನ್ನು ಬರೆದುಕೊಡುತ್ತಿದ್ದನು. ಸ್ಟೂಡೆಂಟ್ ಯೂನಿಯನ್ ಎಲೆಕ್ಷನ್ನಲ್ಲಿ ಪ್ರತಿ ರೂಮಿಗೂ ಹೋಗಿ ಡಿ. ಕೆ ಶಿವಕುಮಾರ್ ಭಾಷಣವನ್ನು ಮಾಡಿ ಗೆಲ್ಲಿಸಿ ಕೊಂಡು ಬರುತ್ತಿದ್ದರು. ರೈತನಾ ಅಥವಾ ಸೈನಿಕನಾ ಎಂಬ ಡಿಬೇಟ್ನಲ್ಲಿ ರೈತನ ಪರವಾಗಿ ಮಾತನಾಡಿದ ಡಿಕೆಶಿ ಮೊದಲ ಬಹುಮಾನ ಪಡೆದರು.
ಸ್ಟುಡೆಂಟ್ ಯೂನಿಯನ್ ಎಲೆಕ್ಷನ್
ನಾನು ಸ್ಟುಡೆಂಟ್ ಯೂನಿಯನ್ ಎಲೆಕ್ಷನ್ನಲ್ಲಿ ಗೆದ್ದಾಗ ಇಡೀ ಮೆಜೆಸ್ಟಿಕ್ ಬಂದ್ ಆಗಿತ್ತು ಎಂದು ಡಿ.ಕೆ.ಶಿವಕುಮಾರ್ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಆಗ ವಿದ್ಯಾರ್ಥಿ ಸಂಘದ ಎಲೆಕ್ಷನ್ ಇದ್ದಾಗ ರಾಜ್ಯದ ಮಂತ್ರಿಗಳು, ರೌಡಿಗಳು ಸಹ ಈ ಚುನಾವಣೆಯಲ್ಲಿ ಭಾಗಿಯಾಗಿ ತಮ್ಮವರನ್ನು ಗೆಲ್ಲಿಸಿಕೊಳ್ಳಲು ಬರುತ್ತಿದ್ದರು ಎಂದು ಡಿಕೆಶಿ ತಿಳಿಸಿದ್ದಾರೆ. ಶ್ರೀಜಗದ್ಗುರು ರೇಣುಕಾಚಾರ್ಯ ಕಾಲೇಜಿನಲ್ಲಿ ಇದ್ದಾಗ ಎಲೆಕ್ಷನ್ ನಡೆದಾಗ ನಾನು ವಿನ್ ಆಗಿದ್ದೆ ಎಂದು ಡಿಕೆಶಿ ವಿವರಿಸಿದ್ದಾರೆ.
ಎಲ್ಲೇ ಹೋದರೂ ಭಯದ ವಾತಾವರಣ
ಮುಖ್ಯಮಂತ್ರಿ ದೇವರಾಜು ಅರಸು , ಗುಂಡೂರಾವ್ ಇವರೆಲ್ಲರೂ ಸಹ ಕಾಲೇಜಿನ ಎಲೆಕ್ಷನ್ಗೆ ತಲೆದೂರಿಸಿದ್ದರು. ನಾನು ಗೆದ್ದಾಗ ಎಂ. ಡಿ. ನಟರಾಜು ಮನೆಗೆ ನನ್ನನ್ನು ಕಿಡ್ನ್ಯಾಪ್ ಮಾಡಿ ಕರೆದುಕೊಂಡು ಹೋಗಿದ್ದರು. ಇಷ್ಟೇ ಅಲ್ಲದೇ ನಾನು ಮೆಜೆಸ್ಟಿಕ್ನ ನವಯುಗ, ಆರ್. ಆರ್, ಅನ್ನಪೂರ್ಣ ಹೋಟೆಲ್ಗೆ ಊಟಕ್ಕೆ ಹೋದಾಗ ಭಯದ ವಾತಾವರಣ ಇತ್ತು. ಸ್ಟುಡೆಂಟ್ ಎಲೆಕ್ಷನ್ನಲ್ಲಿ ರೌಡಿಗಳು ಎಲ್ಲ ಒಂದೊಂದು ಗುಂಪಿಗೆ ಸಪೋರ್ಟ್ ಮಾಡೋಕೆ ಬರೋರು. ಹೋಟೆಲ್ನವರು ಭಯದಿಂದ ನನಗೆ ಊಟ ಹಾಸ್ಟೆಲ್ಗೆ ಕಳಿಸುತ್ತಿದ್ದರು ಎಂದು ಹಳೆಯ ನೆನಪು ಮೆಲುಕು ಹಾಕಿದರು.


Click it and Unblock the Notifications











