ಕಿರುತೆರೆಯ ಜೋಡಿಹಕ್ಕಿಗೆ ಕೂಡಿ ಬಂತು ಕಂಕಣ ಭಾಗ್ಯ, ಮದುವೆಗೆ ರೆಡಿಯಾದ 'ರಾಧಿಕಾ' ಖ್ಯಾತಿಯ ತೇಜಸ್ವಿನಿ-ವಿರಾಟ್
ಪ್ರೀತಿಗೆ ಭಾಷೆಗಳ, ಜಾತಿ ಮತಗಳ ಹಂಗಿಲ್ಲ. ವಯಸ್ಸಿನ ಗಡಿ ಇಲ್ಲ. ಅದು ಮೊದಲ ಮಳೆಯಲ್ಲಿ ಆಗ ತಾನೇ ಮೊಳಕೆಯೊಡೆದು ಹುಟ್ಟಿದ ಪುಟ್ಟ ಗಿಡದಂತೆ ಬೆಳೆಯುತ್ತಾ ಬೆಳೆಯುತ್ತಾ ರೂಪಾಂತರ ಹೊಂದುತ್ತದೆ. ಇಂತಹ ಪ್ರೀತಿಯ ಬಲೆಯಲ್ಲಿ ಚಿತ್ರರಂಗದ ಹಲವು ತಾರೆಯರು ಸಿಲುಕಿದ್ದಾರೆ. ಪ್ರೀತಿ ಎಂದರೆ ಸಂತೋಷ. ಅದರ ಮಾಯೆಯೇ ಅಂತಹದ್ದು ಎನ್ನುವ ಮಾತುಗಳನ್ನಾಡಿದ್ದಾರೆ. ಕೇವಲ ಬೆಳ್ಳಿತೆರೆ ಮಾತ್ರ ಅಲ್ಲ ಕಿರುತೆರೆಯಲ್ಲಿ...
ತಮ್ಮ ಹೃದಯ ಗೆದ್ದ ವ್ಯಕ್ತಿಯನ್ನು ಅಳೆಯಲಾಗದಷ್ಟು.. ಅಂತ್ಯ ಇಲ್ಲದಷ್ಟು.. ಪ್ರೀತಿಸುವ ಅನೇಕರು ಇದ್ದಾರೆ. ಪ್ರೀತಿಯ ಸುಖದ ಕ್ಷಣಗಳನ್ನು ಗುನುಗುತ್ತಿದ್ದಾರೆ. ಆ ಪೈಕಿ ಹಲವರು ಮದುವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇನ್ನು ಕೆಲವರು ತಮ್ಮ ಪ್ರೀತಿಯ ಮೇಲೆ ಮದುವೆಯ ಅಧಿಕೃತ ಮುದ್ರೆಯನ್ನು ಹಾಕುತ್ತಿದ್ದಾರೆ.ಈ ಸಾಲಿಗೆ ಈಗ ತೇಜಸ್ವಿನಿ ಮತ್ತು ವಿರಾಟ್ ಸೇರಿಕೊಳ್ಳುತ್ತಿದ್ದಾರೆ.

ಹೌದು, ತೇಜಸ್ವಿನಿ ಆಚಾರ್ ಮತ್ತು ವಿರಾಟ್ ವತ್ಸಲ್ .. ಕನ್ನಡ ಕಿರುತೆರೆಯ ತಾರೆಯರು. ''ಸೌಭಾಗ್ಯವತಿ'' ಧಾರಾವಾಹಿಯ ಮೂಲಕ ಆಕಸ್ಮಿಕವಾಗಿ ಕಿರುತೆರೆಯನ್ನು ಪ್ರವೇಶ ಮಾಡಿದ ಮೈಸೂರು ಮೂಲದ ತೇಜಸ್ವಿನಿ ಆ ನಂತರ ''ಮಹಾನದಿ'' ಧಾರಾವಾಹಿ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದರು.
ಇದರ ನಡುವೆ ''ಮಧುಬಾಲಾ'' ಧಾರಾವಾಹಿಯಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡ ತೇಜಸ್ವಿನಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ ''ನೀಲಿ''ಯಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಭಕ್ತಿಪ್ರಧಾನ ಧಾರಾವಾಹಿ ''ಶ್ರೀ ಉಧೋ ಉಧೋ ರೇಣುಕ ಯಲ್ಲವ್ವ'' ದಲ್ಲಿ ರೇಣು ಮಹಾರಾಜನ ಮೂರನೇ ಪತ್ನಿ ಇಂದುಮತಿಯಾಗಿ ಬಣ್ಣ ಹಚ್ಚಿದ ತೇಜಸ್ವಿನಿ ಕಾರಣಾಂತರಗಳಿಂದ ಆ ಧಾರಾವಾಹಿಯಿಂದ ಹೊರಬಂದಿದ್ದರು.
ಇನ್ನು ದಾವಣಗೆರೆಯವರಾದ ವಿರಾಟ್ ವತ್ಸಲ್ ''ಕಸ್ತೂರಿ'' ವಾಹಿನಿಯಲ್ಲಿ ನಡೆಯುತ್ತಿದ್ದ ರಿಯಾಲಿಟಿ ಶೋ ನಲ್ಲಿ ಕೊನೆವರೆಗೂ ಪೈಪೋಟಿ ನೀಡಿ ರನ್ನರ್ ಅಪ್ ಆಗಿ ಹೊರ ಬಂದರು. ಈ ರಿಯಾಲಿಟಿ ಶೋ ವಿರಾಟ್ ಅವರಿಗೆ ಬಹಳಷ್ಟು ಖ್ಯಾತಿ ನೀಡಿತು. ಮುಂದೆ ತನ್ನದೇ ಸ್ವಂತ ಡ್ಯಾನ್ಸ್ ಸ್ಕೂಲ್ ಆರಂಭಿಸಿದರು. 7-8 ವರ್ಷ ಡ್ಯಾನ್ಸ್ ಕೋರಿಯೋಗ್ರಾಫರ್ ಆಗಿದ್ದರು. ಹೋಟೆಲ್ ಉದ್ಯಮಕ್ಕೆ ಕೂಡ ಕಾಲಿಟ್ಟಿದ್ದರು.
ಆದರೆ ಕೊರೊನಾ ಇವರ ನೆಮ್ಮದಿಗೆ ಕೊಳ್ಳಿ ಇಟ್ಟಿತ್ತು. ಆರ್ಥಿಕ ಸಂಕಷ್ಟ ಎದುರಾಯ್ತು. ಡ್ಯಾನ್ಸ್ ಸ್ಕೂಲ್ ಕೂಡ ಮುಚ್ಚಬೇಕಾಯ್ತು. ಇದೇ ಸಮಯದಲ್ಲಿ ಮುಂದೇನು ಎಂದು ಯೋಚನೆ ಮಾಡುತ್ತಿದ್ದ ವಿರಾಟ್ಗೆ ಸಿಕ್ಕ ಧಾರಾವಾಹಿಯೇ ''ಸಂಘರ್ಷ''. ಇದೇ ಧಾರಾವಾಹಿಯ ನಾಯಕಿ ಆಗಿದ್ದವರು ತೇಜಸ್ವಿನಿ. ಇವರ ಪ್ರೇಮಕಥೆಗೆ ಈ ''ಸಂಘರ್ಷ'' ಧಾರಾವಾಹಿಯೇ ಬುನಾದಿ.

''ಸಂಘರ್ಷ'' ಸೀರಿಯಲ್ನಲ್ಲಿ ಜೊತೆಯಾಗಿ ಅಭಿನಯಿಸಿದ್ದ ಇವರಿಬ್ಬರ ನಡುವೆ ಕಾಲ ಕ್ರಮೇಣ ಸ್ನೇಹ ಚಿಗುರೊಡೆದಿತ್ತು. ಆ ನಂತರ ''ರಾಧಿಕಾ'' ಧಾರಾವಾಹಿಯಲ್ಲಿ ಮತ್ತೆ ಇಬ್ಬರು ಜೊತೆಯಾದರು. ಈ ಸಮಯದಲ್ಲಿ ಆ ಸ್ನೇಹ ಪ್ರೀತಿಯ ಸ್ವರೂಪ ಪಡೆಯಿತು.
ಇನ್ನು ಕೇವಲ ಕನ್ನಡ ಮಾತ್ರವಲ್ಲದೇ ತೆಲುಗು ಮತ್ತು ತಮಿಳಿನಲ್ಲಿ ಕೂಡ ತೇಜಸ್ವಿನಿ ಮತ್ತು ವಿರಾಟ್ ತಮ್ಮ ಛಾಪು ಮೂಡಿಸಿದ್ದಾರೆ. ಇಂಥಾ ತೇಜಸ್ವಿನಿ ಮತ್ತು ವಿರಾಟ್ ಸದ್ಯ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ. ಫೆಬ್ರವರಿ 8ರಂದು ಮದುವೆಯಾಗಲಿದ್ದಾರೆ.
ಈ ವಿಚಾರವನ್ನು ಖುದ್ದು ತೇಜಸ್ವಿನಿ ಮತ್ತು ವಿರಾಟ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸುಂದರವಾದ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಈ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಅಂದ್ಹಾಗೇ ಇವರ ಮದುವೆ ದಾವಣಗೆರೆಯಲ್ಲಿ ನಡೆಯಲಿದೆ.
ಸದ್ಯ ಇವರಿಬ್ಬರ ಅಭಿಮಾನಿಗಳು ಇಬ್ಬರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ. ಕಿರುತೆರೆಯ ಕಲಾವಿದರು ಕೂಡ ಕಿರುತೆರೆಯ ಈ ಜೋಡಿ ಹಕ್ಕಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.


Click it and Unblock the Notifications











