'ನೂರು ಜನ್ಮಕೂ' ಎಂದು ಕಿರುತೆರೆಗೆ ಕಮ್ಬ್ಯಾಕ್ ಮಾಡಿದ ಧನುಷ್ ಗೌಡ: ಧಾರಾವಾಹಿ ವಿಶೇಷತೆ ಏನು?
ವಿಭಿನ್ನ ರೀತಿಯ ಧಾರಾವಾಹಿಗಳ ಜೊತೆಗೆ ವಿನೂತನ ರಿಯಾಲಿಟಿ ಶೋ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ವಾಹಿನಿಗಳ ಪೈಕಿ ಕಲರ್ಸ್ ಕನ್ನಡವೂ ಒಂದು. ಇತ್ತೀಚೆಗಷ್ಟೇ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ಆರಂಭವಾಗಿದೆ. ಇದರ ಬೆನ್ನಲ್ಲೇ ಹೊಸದೊಂದು ಧಾರಾವಾಹಿಯು ಅತೀ ಶೀಘ್ರದಲ್ಲಿ ಶುರುವಾಗಲಿದೆ.
ಹೌದು, ಹಾರರ್ ಕಥಾ ಹಂದರವನ್ನೊಳಗೊಂಡ ಹೊಸ ಧಾರಾವಾಹಿ 'ನೂರು ಜನ್ಮಕೂ' ಶೀಘ್ರದಲ್ಲಿ ಪ್ರಸಾರ ಕಾಣಲಿದೆ. ಈಗಾಗಲೇ ವಾಹಿನಿಯೂ ಪ್ರೋಮೊವೊಂದನ್ನು ರಿಲೀಸ್ ಮಾಡಿದ್ದು ಅದು ಸಖತ್ ಸದ್ದು ಮಾಡುತ್ತಿದೆ. ಪ್ರೀತ್ಸೋ ಜೀವಗಳ ಜೊತೆ ಇಡೀ ಪ್ರಪಂಚಾನೇ ನಿಂತಿದ್ರೆ, ಅದೇ ಪ್ರೀತಿನಾ ದ್ವಂಸ ಮಾಡೋಕೆ ಒಂದು ಆತ್ಮ ಕಾಯ್ತಿದೆ ಎನ್ನುವ ಅಡಿಬರಹ ಈ ಪ್ರೋಮೋದ ಕೆಳಗೆ ಇದ್ದು ಪಕ್ಕಾ ಹಾರರ್ ಧಾರಾವಾಹಿಯೇ ಇದು ಎಂದು ಅನಿಸುತ್ತದೆ.

ಇನ್ನು ಈ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಮೂಲಕ ಮತ್ತೆ ಕಲರ್ಸ್ ಕನ್ನಡ ಕುಟುಂಬಕ್ಕೆ ಕಂ ಬ್ಯಾಕ್ ಆಗುತ್ತಿದ್ದಾರೆ ಧನುಷ್ ಗೌಡ. ಹೌದು, ಈ ಮೊದಲು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗೀತಾ' ಧಾರಾವಾಹಿಯಲ್ಲಿ ನಾಯಕ ವಿಜಯ್ ಆಗಿ ನಟಿಸಿದ್ದ ಧನುಷ್ ಗೌಡ ಇದೀಗ 'ನೂರು ಜನ್ಮಕೂ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಲಿದ್ದಾರೆ.
ಹೊಸ ಧಾರಾವಾಹಿಯ ಪ್ರೋಮೋವನ್ನು ಹಂಚಿಕೊಂಡಿರುವ ಧನುಷ್ ಗೌಡ "ನನ್ನ ಪ್ರೀತಿಯ ವೀಕ್ಷಕರೇ, ನಿಮ್ಮ ಆಶೀರ್ವಾದದೊಂದಿಗೆ ನೂರು ಜನ್ಮಕೂ ಎಂಬ ಹೊಸ ಧಾರಾವಾಹಿಯೊಂದಿಗೆ ನಿಮ್ಮನ್ನು ರಂಜಿಸಲು ಮತ್ತೊಮ್ಮೆ ಬಂದಿದ್ದೇನೆ. ನಿಮ್ಮ ಬೆಂಬಲ ಮತ್ತು ಆಶೀರ್ವಾದ ಸದಾ ನನ್ನ ಮೇಲಿರಲಿ" ಎಂದು ಬರೆದುಕೊಂಡಿದ್ದಾರೆ.
ಅಂದ ಹಾಗೇ ಇತ್ತೀಚೆಗಷ್ಟೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗೌರಿಶಂಕರ' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದರು ಧನುಷ್ ಗೌಡ. ಪರಿಚಯ್ ಎನ್ನುವ ಲಾಯರ್ ಪಾತ್ರದಲ್ಲಿ ಇವರು ಕಾಣಿಸಿಕೊಂಡಿದ್ದು ಇವರ ಪಾತ್ರದಿಂದ ಧಾರಾವಾಹಿಯ ಕಥೆಗೆ ಟ್ವಿಸ್ಟ್ ಸಿಕ್ಕಿತ್ತು. ಇದೀಗ ಮತ್ತೊಮ್ಮೆ ನಾಯಕನಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿರುವ ಧನುಷ್ ಗೌಡ ಆಕಸ್ಮಿಕವಾಗಿ ನಟನೆಯ ನಂಟು ಬೆಳೆಸಿಕೊಂಡವರು.

ಇಂಜಿನಿಯರಿಂಗ್ ಪದವೀಧರರಾಗಿರುವ ಧನುಷ್ ಗೌಡ ಅವರು ನಟನಾಗಲು ಮಾವ ಮತ್ತು ತಮ್ಮನೇ ಕಾರಣ. ನೀನ್ಯಾಕೆ ನಟನಾಗಬಾರದು ಎಂಬ ಅವರ ಮಾತು ಕೇಳಿದ ಧನುಷ್ ಕೂಡಾ ನಾನ್ಯಾಕೆ ನಟನಾಗಬಾರದು ಅಂದು ಯೋಚಿಸಿದರು. ಯಾವಾಗ ನಟನಾಗಬೇಕು ಎಂದು ಬಯಸಿದರೋ ಆಗ ನಟನೆಯ ಕುರಿತು ಕೊಂಚ ತರಬೇತಿ ಪಡೆಯುವ ನಿರ್ಧಾರ ಮಾಡಿದರು.
ಅದರಂತೆ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಸೇರಿದ ಧನುಷ್ ನಟನೆಯ ರೀತಿನೀತಿಗಳನ್ನು ತಿಳಿದುಕೊಂಡರು. ಎಲ್ಲವನ್ನು ಹಂತಹಂತವಾಗಿ ತಿಳಿದುಕೊಂಡ ಧನುಷ್ ಮತ್ತೆ ಕಿರುತೆರೆಯತ್ತ ಮುಖ ಮಾಡಿದರು. ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ
ನಟಿಸುವ ಸುವರ್ಣಾವಕಾಶವನ್ನು ಧನುಷ್ ಗೌಡ ಪಡೆದುಕೊಂಡರು.
ನಾಲ್ಕು ವರ್ಷಗಳ ಕಾಲ ವಿಜಯ್ ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸಿರುವ ಧನುಷ್ ಗೌಡ 2022 ರ ಅನುಬಂಧ ಅವಾರ್ಡ್ಸ್ ನಲ್ಲಿ ಮನೆ ಮೆಚ್ಚಿದ ಅಳಿಯ ಪ್ರಶಸ್ತಿಯನ್ನು ಕೂಡಾ ಪಡೆದುಕೊಂಡಿದ್ದರು. ಇದೀಗ ಸಣ್ಣ ಬ್ರೇಕ್ ನ ನಂತರ 'ನೂರು ಜನ್ಮಕೂ' ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳಲಿದ್ದಾರೆ.


Click it and Unblock the Notifications










