Kubera OTT: ಧನುಷ್ 'ಕುಬೇರ' ಓಟಿಟಿಗೆ; ಕನ್ನಡಕ್ಕೂ ಡಬ್ ಆಗಿ ಸ್ಟ್ರೀಮಿಂಗ್
ತೆಲುಗು ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿದ್ದ 'ಕುಬೇರ' ಸಿನಿಮಾ ಹಿಟ್ ಲಿಸ್ಟ್ ಸೇರಿತ್ತು. ತಮಿಳಿನಲ್ಲಿ ಚಿತ್ರಕ್ಕೆ ದೊಡ್ಡಮಟ್ಟದಲ್ಲಿ ರೆಸ್ಪಾನ್ಸ್ ಸಿಗದಿದ್ದರೂ ತೆಲುಗಿನಲ್ಲಿ ಹಿಟ್ ಎನಿಸಿಕೊಂಡಿತ್ತು. 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಗೆದ್ದಿತ್ತು.
ಚಿತ್ರದಲ್ಲಿ ಮುಖ್ಯವಾಗಿ ಭಿಕ್ಷುಕನ ಪಾತ್ರದಲ್ಲಿ ಧನುಷ್ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾ ನೋಡಿದವರು ಅವರ ನಟನೆಗೆ ರಾಷ್ಟ್ರಪ್ರಶಸ್ತಿ ಸಿಗುತ್ತದೆ ಎಂದು ಕಾಮೆಂಟ್ ಮಾಡಿದ್ದರು. ಶೇಖರ್ ಕಮ್ಮುಲ ನಿರ್ದೇಶನದ ಚಿತ್ರದಲ್ಲಿ ನಾಗಾರ್ಜುನ ಹಾಗೂ ರಶ್ಮಿಕಾ ಮಂದಣ್ಣ ಕೂಡ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಅವರಿಬ್ಬರ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ 'ಕುಬೇರ' ಸಿನಿಮಾ ತೆರೆಗೆ ಬಂದಿತ್ತು. ಇದೀಗ ಸಿನಿಮಾ ಓಟಿಟಿ ರಿಲೀಸ್ ಡೇಟ್ ಘೋಷಣೆಯಾಗಿದೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಜೂನ್ 20ರಂದು ತೆರೆಗೆ ಬಂದಿದ್ದ ಸಿನಿಮಾ ಇದೀಗ ತಿಂಗಳಿಗೂ ಮುನ್ನ ಓಟಿಟಿ ವೇದಿಕೆಗೆ ಬರ್ತಿದೆ. ಸುನೀಲ್ ನಾರಂಗ್, ಪುಸ್ಕುರ್ ರಾಮ್ ಮೋಹನ್ ರಾವ್ ಹಾಗೂ ಅಜಯ್ ಕೈಕಳ ನಿರ್ಮಾಣದ ಚಿತ್ರಕ್ಕೆ ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಜುಲೈ 18ಕ್ಕೆ 'ಕುಬೇರ' ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ಸಾಕಷ್ಟು ಜನ ಓಟಿಟಿಯಲ್ಲಿ ಈ ಕ್ರೈಂ ಡ್ರಾಮಾ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಸಿಂಪಲ್ ಕಥೆಯನ್ನು ಬಹಳ ವಿಭಿನ್ನವಾಗಿ ಶೇಖರ್ ಕಮ್ಮುಲ ಕಟ್ಟಿಕೊಟ್ಟಿದ್ದಾರೆ. ರಶ್ಮಿಕಾ ಮಂದಣ್ಣ ಡೀ ಗ್ಲಾಮರಸ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಮಾಜಿ ಸಿಬಿಐ ಆಫೀಸರ್ ಪಾತ್ರದಲ್ಲಿ ನಾಗಾರ್ಜುನ ಒಳ್ಳೆ ಅಂಕ ಗಿಟ್ಟಿಸಿದ್ದಾರೆ.
ಸರ್ಕಾರದ ಕಣ್ಣು ತಪ್ಪಿಸಿ ಒಂದು ದೊಡ್ಡ ಪ್ರಾಜೆಕ್ಟ್ಗೆ ಖ್ಯಾತ ಉದ್ಯಮಿ ನೀರಜ್ ಮಿತ್ರ (ಜಿಮ್ ಸರ್ಬ್) ಮುಂದಾಗುತ್ತಾನೆ. ಅದಕ್ಕಾಗಿ ಅಧಿಕಾರದಲ್ಲಿರುವ ಕೆಲವರೊಂದಿಗೆ ಕೊಂಡುಕೊಳ್ಳಬೇಕಾಗುತ್ತದೆ. ಅದಕ್ಕಾಗಿ 1 ಲಕ್ಷ ಕೋಟಿ ರೂ. ಹಣವನ್ನು ಸಚಿವರ ಬೇನಾಮಿ ಖಾತೆಗಳಿಗೆ ಬೇನಾಮಿಗಳ ಖಾತೆಯಿಂದ ವರ್ಗಾವಣೆ ಮಾಡಬೇಕಾಗುತ್ತದೆ. ಅದಕ್ಕಾಗಿ ಜೈಲಿನಲ್ಲಿರುವ ಮಾಜಿ ಸಿಬಿಐ ಅಧಿಕಾರಿ ದೀಪಕ್ ತೇಜ್(ನಾಗಾರ್ಜುನಾ) ಸಹಾಯ ಕೇಳುತ್ತಾನೆ.
ಉದ್ಯಮಿ ನೀರಜ್ ಮಿತ್ರ ನೀಡಿದ ಟಾಸ್ಕ್ ಪೂರೈಸಲು ದೀಪಕ್ ನಾಲ್ವರು ಭಿಕ್ಷುಕರನ್ನು ಹುಡುಕಿ ಕರೆತರ್ತಾನೆ. ಅವರ ಹೆಸರಿನಲ್ಲಿ ಬೇನಾಮಿ ಖಾತೆ ಸೃಷ್ಟಿಸಿ ತಲಾ 10 ಸಾವಿರ ಕೋಟಿ ರೂ. ಜಮಾ ಮಾಡುತ್ತಾನೆ. ಅಲ್ಲಿಂದ ಸಚಿವರ ಖಾತೆಗಳಿಗೆ ವರ್ಗಾಯಿಸಲು ಪ್ರಯತ್ನ ಮಾಡುತ್ತಾರೆ. ಹೀಗೆ ಕರೆದುಕೊಂಡು ಬಂದ ನಾಲ್ವರು ಭಿಕ್ಷುಕರಲ್ಲಿ ದೇವಾ(ಧನುಷ್) ಕೂಡ ಒಬ್ಬ. ಸತ್ಯ ತಿಳಿದುಕೊಂಡ ದೇವಾ ತಪ್ಪಿಸಿಕೊಳ್ಳುತ್ತಾನೆ. ಮುಂದೇನು? ಎನ್ನುವುದು ಇನ್ನುಳಿದ ಕಥೆ.
ಸಣ್ಣಪುಟ್ಟ ತಪ್ಪುಗಳ ಹೊರತಾಗಿ 'ಕುಬೇರ' ಒಂದೊಳ್ಳೆ ಕ್ರೈಂ ಥ್ರಿಲ್ಲರ್ ಸಿನಿಮಾ. ಒಳ್ಳೆ ಸಂದೇಶವನ್ನು ಕೂಡ ಸಿನಿಮಾ ಹೊತ್ತು ಬಂದಿದೆ. ಮುಖ್ಯವಾಗಿ ಧನುಷ್, ನಾಗಾರ್ಜುನಾ ಹಾಗೂ ರಶ್ಮಿಕಾ ನಟನೆ ಚಿತ್ರದ ಪ್ಲಸ್ ಪಾಯಿಂಟ್. ಅದರಲ್ಲೂ ಮುಖ್ಯವಾಗಿ ಬೇನಾಮಿ ವ್ಯವಸ್ಥೆಯ ಬಗ್ಗೆ ಚಿತ್ರದಲ್ಲಿ ಬೆಳಕು ಚೆಲ್ಲಲಾಗಿದೆ. ಆದರೆ ಚಿತ್ರದ ಕಾಲಾವಧಿ ಹೆಚ್ಚಾಗಿದ್ದು ಹಿನ್ನಡೆಯಾಗಿತ್ತು. ಅರ್ಧ ಗಂಟೆ ಚಿತ್ರಕ್ಕೆ ಕತ್ತರಿ ಹಾಕಿದ್ದರೆ ಮತ್ತಷ್ಟು ಮಜಾ ಬರ್ತಿತ್ತು.
ಹಣ ಮೇಲೆ ಯಾವುದೇ ವ್ಯಾಮೋಹ ಇಲ್ಲದ, ಭಿಕ್ಷುಕರು ಕಷ್ಟ ಪಡಬಾರದು ಎಂದು ಆಲೋಚಿಸುವ ಭಿಕ್ಷುಕ, ಒಬ್ಬ ನಿಷ್ಠಾವಂತ ಅಧಿಕಾರಿ ಹಾಗೂ ಪ್ರಪಂಚದಲ್ಲಿರುವ ಹಣವೆಲ್ಲಾ ನನಗೆ ಬೇಕು ಎನ್ನುವ ಉದ್ಯಮಿ ಹೀಗೆ 3 ವಿಭಿನ್ನ ಪಾತ್ರಗಳ ಸುತ್ತಾ 'ಕುಬೇರ' ಕಥೆಯನ್ನು ಕಟ್ಟಿಕೊಡಲಾಗಿದೆ. ಆರಂಭದಲ್ಲಿ ನನಗೆ ನಯಾಪೈಸೆ ಬೇಡ ಎನ್ನುವ ಭಿಕ್ಷುಕ ಕೊನೆಗೆ 10 ಸಾವಿರ ಕೋಟಿ ರೂ. ನನಗೆ ಬೇಕು ಎಂದು ಪಟ್ಟು ಹಿಡಿದು ಕೂರುತ್ತಾನೆ. ಅದು ಯಾಕೆ ಎನ್ನುವುದನ್ನು ಸಿನಿಮಾದಲ್ಲೇ ನೋಡಬೇಕು.


Click it and Unblock the Notifications











