ಕಿರುತೆರೆ ಮೂಲಕ ನಟನೆಗೆ ಕಾಲಿಟ್ಟ ದೀಕ್ಷಿತ್ ಈಗ ಚಿತ್ರರಂಗದಲ್ಲಿ ಬ್ಯುಸಿ
ಬದಲಾಗುತ್ತಿದ್ದ ಕನ್ನಡ ಚಲನಚಿತ್ರರಂಗದ ತಿರುವಿನಲ್ಲಿ ತೆರೆಕಂಡ ಸಿನಿಮಾ 'ದಿಯಾ'. ಪ್ರೇಕ್ಷಕರ ಮನ ಗೆಲ್ಲುವುದರೊಂದಿಗೆ ಕಲಾವಿದರಿಗೆ ಹೊಸ ಮಣೆಯನ್ನು ಹಾಕಿಕೊಟ್ಟ ಶ್ರೇಯಸ್ಸು ಈ ಚಿತ್ರಕ್ಕಿದೆ.
ಇದರ ತಾರಾಗಣದಲ್ಲಿದ್ದವರ ಪೈಕಿ ದೀಕ್ಷಿತ್ ಶೆಟ್ಟಿ ಕೂಡ ಒಬ್ಬರು.
'ದಿಯಾ' ಸಿನಿಮಾದಲ್ಲಿ ನಾಯಕ ರೋಹಿತ್ ಆಗಿ ನಟಿಸುವ ಮೂಲಕ ಬೆಳ್ಳಿತೆರೆಯಲ್ಲಿ ತಮ್ಮ ಜಾದೂವನ್ನು ಪ್ರದರ್ಶಿಸಿದವರು ದೀಕ್ಷಿತ್ ಶೆಟ್ಟಿ. ಮೂಲತಃ ಕುಂದಾಪುರದ ಹುಡುಗ ದೀಕ್ಷಿತ್ ಶೆಟ್ಟಿ ಅವರ ನಟನಾ ಪಯಣಕ್ಕೆ ಮುನ್ನುಡಿ ಬರೆದುದು ಕಿರುತೆರೆ. 'ನಾಗಿಣಿ' ಧಾರಾವಾಹಿಯಲ್ಲಿ ನಾಯಕ ಅರ್ಜುನ್ ಆಗಿ ನಟಿಸಿದ್ದ ದೀಕ್ಷಿತ್ ಮುದ್ದಾದ ನಟನೆಯ ಮೂಲಕ ಎಲ್ಲರ ಮನ ಗೆದ್ದಿದ್ದರು.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪ್ರೀತಿ ಎಂದರೇನು' ಧಾರಾವಾಹಿಯ ಮೂಲಕ ನಟನೆಗೆ ಕಾಲಿಟ್ಟ ದೀಕ್ಷಿತ್ ಮೊದಲ ಬಾರಿ ಕಾಣಿಸಿಕೊಂಡಿದ್ದು ವಿಲನ್ ಆಗಿ. ತದ ನಂತರ ನಾಯಕನಾಗಿ ಭಡ್ತಿ ಪಡೆದ ಕುಂದಾಪುರದ ಕುವರ ದೀಕ್ಷಿತ್ ಶೆಟ್ಟಿ ಇದೀಗ ಹಿರಿತೆರೆಯಲ್ಲಿ ಬ್ಯುಸಿ.

ಕಿರುತೆರೆ ನಂತರ ಹಿರಿತೆರೆಯಲ್ಲಿ ಬ್ಯುಸಿ
ಸೂಪರ್ ನ್ಯಾಚುರಲ್ ಧಾರಾವಾಹಿ 'ನಾಗಿಣಿ' ನಂತರ ಕಿರುತೆರೆಯಲ್ಲಿ ಎಲ್ಲೂ ಕಾಣಿಸಿಕೊಂಡಿರದ ದೀಕ್ಷಿತ್ ಶೆಟ್ಟಿ ಹಿರಿತೆರೆಯಲ್ಲಿ ಸಕತ್ ಬ್ಯುಸಿಯಾಗಿದ್ದಾರೆ. 'ದಿಯಾ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಹ್ಯಾಂಡ್ ಸಮ್ ಹುಡುಗ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ! 'ಬ್ಲಿಂಕ್', 'ಕೆಟಿಎಂ, 'ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು' ಹಾಗೂ 'ಸ್ಟಾಬೆರಿ' ಸಿನಿಮಾಗಳಲ್ಲಿ ಅಭಿನಯಿಸಿರುವ ದೀಕ್ಷಿತ್ ಶೆಟ್ಟಿ, ಪರಭಾಷೆಯ ಸಿನಿರಂಗದಲ್ಲಿಯೂ ನಟನಾ ಛಾಪನ್ನು ಮೂಡಿಸಿದ್ದಾರೆ.

ನಾನಿ ಜೊತೆ 'ದಸರಾ' ಚಿತ್ರದಲ್ಲಿ ನಟನೆ
'ಮುಗ್ಗುರು ಮೊನಗಲ್ಲು' ಎನ್ನುವ ತೆಲುಗು ಸಿನಿಮಾದ ಮೂಲಕ ಪರಭಾಷೆಯ ಸಿನಿಮಾದಲ್ಲಿ ಮಿಂಚಿದ ದೀಕ್ಷಿತ್ ಶೆಟ್ಟಿ ಮುಂದೆ 'ದಿ ರೋಸ್ ವಿಲ್ಲಾ' ಹಾಗೂ 'ಮೀಟ್ ಕ್ಯೂಟ್' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೆ ನಾನಿ ಅಭಿನಯದ 'ದಸರಾ' ಎನ್ನುವ ತೆಲುಗು ಸಿನಿಮಾದಲ್ಲಿಯೂ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ದೀಕ್ಷಿತ್ ಅದರಲ್ಲಿ ರಗಡ್ ಅವತಾರದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಈ ಚಿತ್ರ ಕನ್ನಡಕ್ಕೂ ಡಬ್ ಆಗಿ ಬರ್ತಿದೆ.

ತೆಲುಗು ನಟ ನಾನಿ ಮನಗೆದ್ದ ದೀಕ್ಷಿತ್
ನಾನಿ ಬ್ಯಾನರ್ನ ಮೀಟ್ ಕ್ಯೂಟ್' ಸಿನಿಮಾದಲ್ಲಿ ದೀಕ್ಷಿತ್ ಶೆಟ್ಟಿ ನಟಿಸಿದ್ದರು. ಆ ಸಿನಿಮಾದಲ್ಲಿನ ದೀಕ್ಷಿತ್ ಅವರ ಅಭಿನಯವನ್ನು ಕಂಡ ನಾನಿ ಮುಂದಿನ ಸಿನಿಮಾ 'ದಸರಾ'ದಲ್ಲಿ ನಟಿಸುವ ಆಫರ್ ನೀಡಿದರು. ಅಂದ ಹಾಗೇ ಇದರಲ್ಲಿ ದೀಕ್ಷಿತ್ ಶೆಟ್ಟಿ ಹಾಗೂ ನಾನಿ ಜೊತೆಗೆ ಕೀರ್ತಿ ಸುರೇಶ್ ಅಭಿನಯಿಸಲಿದ್ದಾರೆ. ಇದರ ಜೊತೆಗೆ ಲಾಕ್ ಡೌನ್ ಸಮಯದಲ್ಲಿ ತೆರೆಕಂಡ ವಿದ್ಯಾ ಬಿ ರೆಡ್ಡಿ ನಿರ್ದೇಶನದ 'ಓ ಫಿಶ್' ಎನ್ನುವ ಕಿರುಚಿತ್ರವೊಂದರಲ್ಲಿ ದೀಕ್ಷಿತ್ ಶೆಟ್ಟಿ ನಟಿಸಿದ್ದಾರೆ.

'ನಾಗಿಣಿ' ಅರ್ಜುನ್ ಎಂದೇ ಮನೆಮಾತು
"ನನ್ನ ನಟನೆಯ ನಾಗಿಣಿ ಧಾರಾವಾಹಿಯು ಸಾವಿರ ಸಂಚಿಕೆ ಪೂರೈಸಿದ್ದು ನನಗೆ ನಿಜವಾಗಿಯೂ ಸಂತೋಷವಾಗಿದೆ. ಅದೊಂದು ಸುಂದರವಾದ ಪಯಣ. ಜನ ಇಂದಿಗೂ ನನ್ನನ್ನು 'ನಾಗಿಣಿ'ಯ ಅರ್ಜುನ್ ಎಂದೇ ಗುರುತಿಸುವಾಗ ಖುಷಿ ತರುತ್ತದೆ. ಮಾತ್ರವಲ್ಲ ನಾನು ನಟನೆಯಲ್ಲಿ ಪಳಗಿದ್ದೇನೆ, ಇಂದು ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ 'ನಾಗಿಣಿ' ಧಾರಾವಾಹಿಯೇ ಕಾರಣ" ಎಂದು ಹೇಳುತ್ತಾರೆ ದೀಕ್ಷಿತ್.


Click it and Unblock the Notifications











