Dileep Raj: "ಸ್ಟೈಲ್ ಐಕಾನ್ ಆಗುವುದು ನಿಜಕ್ಕೂ ಕಷ್ಟದ ಕೆಲಸ" ಎಂದ 'ಹಿಟ್ಲರ್ ಕಲ್ಯಾಣ'ದ ದಿಲೀಪ್ ರಾಜ್
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಹಿಟ್ಲರ್ ಕಲ್ಯಾಣ'. ಈ ಧಾರಾವಾಹಿಯಲ್ಲಿ ನಾಯಕ ಅಭಿರಾಮ್ ಜಯಶಂಕರ್ ಆಲಿಯಾಸ್ ಎಜೆ ಆಗಿ ಅಭಿನಯಿಸುತ್ತಿರುವ ದಿಲೀಪ್ ರಾಜ್ ತಮ್ಮ ನಟನೆಯ ಜೊತೆಗೆ ಸ್ಟೈಲ್ ಮೂಲಕ ಕಿರುತೆರೆ ಅಂಗಳದಲ್ಲಿ ಮನೆ ಮಾತಾದ ಹ್ಯಾಂಡ್ ಸಮ್ ನಟ. ಅದಕ್ಕೆ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಈ ನಟ ನೆಚ್ಚಿನ ಸ್ಟ್ರೈಲ್ ಐಕಾನ್ ಪ್ರಶಸ್ತಿಯೇ ಸಾಕ್ಷಿ.
"ಅವಾರ್ಡ್ ಕೈಯಲ್ಲಿ ಇದ್ದ ಮೇಲೆ ಖಂಡಿತವಾಗಿಯೂ ಖುಷಿಯಾಗುತ್ತಿದೆ ಎಂದೇ ಮೊದಲು ಹೇಳಬೇಕಾದ್ದು. ಹೆಚ್ಚಿಗೆ ಖುಷಿ ಯಾಕೆ ಆಗುತ್ತಿದೆ ಎಂದರೆ ಹೊಸ ತರದ ಕೆಟಗರಿಯಲ್ಲಿ ನಾನು ಪ್ರಶಸ್ತಿ ಪಡೆದಿದ್ದೇನೆ. ಅದು ಸ್ಟೈಲ್ ಐಕಾನ್ ಪ್ರಶಸ್ತಿ. ಸ್ಟೈಲ್ ಐಕಾನ್ ಆಗುವುದೆಂದರೆ ನಿಜಕ್ಕೂ ತುಂಬಾ ಕಷ್ಟದ ಕೆಲಸ. ಅದಕ್ಕೆ ತುಂಬಾ ಎಫರ್ಟ್ಸ್ ಇರುತ್ತದೆ. ತುಂಬಾ ಜನರ ಕೆಲಸ ಇರುತ್ತದೆ" ಎಂದು ಹೇಳಿದ್ದಾರೆ ದಿಲೀಪ್ ರಾಜ್.

"ನನ್ನ ಎಫರ್ಟ್ ಏನು ಅಂದ್ರೆ ನಾನು ನನ್ನ ಫಿಟ್ನೆಸ್ ಮೈನ್ ಟೈನ್ ಮಾಡಬೇಕು. ನನಗೆ ಯಾರು ಬಟ್ಟೆ ಹಾಕುತ್ತಾರೆ ಅವರು ಚೆನ್ನಾಗಿ ಡಿಸೈನ್ ಮಾಡಬೇಕು. ಆ ಡಿಸೈನ್ ಮಾಡುವುದಕ್ಕೆ ಇನ್ಯಾರೋ ತುಂಬಾ ಚೆನ್ನಾಗಿ ಕನಸು ಕಾಣಬೇಕು. ಅದು ಇವನು ಚೆನ್ನಾಗಿ ಕಾಣಿಸಬೇಕು ಅಂತ. ಇಷ್ಟೆಲ್ಲಾ ಆದಾಗ ಅದಕ್ಕೆ ಚೆನ್ನಾಗಿ ಪಾತ್ರ ಸಿಗಬೇಕು. ಹಾಗಾಗಿ ಇದನ್ನೆಲ್ಲಾ ಗಣನೆಗೆ ತೆಗೆದುಕೊಂಡು ನನಗೆ ಈ ಅವಾರ್ಡ್ ಕೊಟ್ಟಿದ್ದಾರೆ" ಎಂದು ದಿಲೀಪ್ ರಾಜ್ ಸಂತಸ ಹಂಚಿಕೊಂಡಿದ್ದಾರೆ.
"ಹಿಟ್ಲರ್ ಕಲ್ಯಾಣದಲ್ಲಿ ನಾನು ಸಾಕಷ್ಟು ಸೂಟ್ಗಳನ್ನು ಹಾಕಿದ್ದೇನೆ. ನಿಜವಾಗಿ ನನ್ನ ಲೈಫ್ನಲ್ಲಿ ನಾನು ಫಾರ್ಮಲ್ಸ್ ಹಾಕುತ್ತಿರಲಿಲ್ಲ. ಯಾಕೆಂದರೆ ನಾನು ಕ್ಯಾಶುವೆಲ್ಸ್ನಲ್ಲಿ ತುಂಬಾ ಕಂಫರ್ಟೆಬಲ್ ಆಗಿರುತ್ತೇನೆ. ಆದರೆ ಇವತ್ತು ಆ ಸೂಟ್ಗೆ, ಸೂಟ್ ಹಾಕಿರುವಂತಹ ಕ್ಯಾರೆಕ್ಟರ್ಗೆ ಈ ಅವಾರ್ಡ್ ಕೊಟ್ಟಿದ್ದಾರೆ. ಇದಕ್ಕೆ ಧನ್ಯವಾದಗಳು. ಈ ಅವಾರ್ಡ್ ಅನ್ನು ನಾನು ಸ್ಪೆಷಲ್ ಆಗಿ ಸಾಗರ್ ಹಾಗೂ ನನ್ನ ಹೆಂಡತಿ ಶ್ರೀವಿದ್ಯಾ ಹಾಗೂ ಶ್ರೀನಿವಾಸ್ ಮಾಸ್ಟ್ರು ನನ್ನ ಫಿಟ್ ನೆಸ್ ಕೋಚ್ ಇವರಿಗೆ ಡೆಡಿಕೇಟ್ ಮಾಡುತ್ತೇನೆ" ಎಂದು ದಿಲೀಪ್ ರಾಜ್ ಹೇಳಿಕೊಂಡಿದ್ದಾರೆ.

ಪೋಷಕ ಪಾತ್ರಗಳ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡಿರುವ ದಿಲೀಪ್ ರಾಜ್ ಅವರು ಇದೀಗ ನಿರ್ದೇಶಕರಾಗಿ ಅಲ್ಲದೇ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. 'ಜನನಿ', 'ಅರ್ಧಸತ್ಯ', 'ರಂಗೋಲಿ', 'ಕುಂಕುಮ ಭಾಗ್ಯ', 'ಮಾಂಗಲ್ಯ', 'ಮಳೆಬಿಲ್ಲು', 'ಪ್ರೀತಿಗಾಗಿ', 'ರಥಸಪ್ತಮಿ', 'ಪುರುಷೋತ್ತಮ' ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರುವ ದಿಲೀಪ್ ರಾಜ್ ಪೋಷಕ ಪಾತ್ರಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿಯೂ ಮೋಡಿ ಮಾಡಿದ್ದಾರೆ.
'ಬಾಯ್ ಫ್ರೆಂಡ್' ಸಿನಿಮಾದ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ ದಿಲೀಪ್ ರಾಜ್ 'ಮಿಲನ', 'ಲವ್ ಗುರು', 'ಗಾನ ಬಜಾನ', 'ಸುಗ್ರೀವ', 'ಟೋನಿ', 'ಯೂ ಟರ್ನ್' ಸೇರಿದಂತೆ 20ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಿರುವ ದಿಲೀಪ್ ರಾಜ್ ಕಂಠದಾನ ಕಲಾವಿದರು ಹೌದು. 'ಆ ದಿನಗಳು' ಸಿನಿಮಾದಲ್ಲಿ ಚೇತನ್ಗೆ ಧ್ವನಿ ನೀಡಿರುವ ಇವರು 'ಅಂತು ಇಂತು ಪ್ರೀತಿ ಬಂತು' ಸಿನಿಮಾದಲ್ಲಿ ಆದಿತ್ಯ ಬಾಬು ಅವರಿಗೂ ದನಿ ನೀಡಿದ್ದಾರೆ.
ನಟನೆಯ ಮೂಲಕ ಕಿರುತೆರೆಯಲ್ಲಿ ಮಿಂಚುತ್ತಿರುವ ಅವರು ಈ ಮೊದಲು ಪ್ರಸಾರವಾಗುತ್ತಿದ್ದ 'ವಿದ್ಯಾ ವಿನಾಯಕ', ಈಗ ಪ್ರಸಾರವಾಗುತ್ತಿರುವ 'ಪಾರು' ಹಾಗೂ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯ ನಿರ್ಮಾಪಕರಾಗಿಯೂ ದಿಲೀಪ್ ರಾಜ್ ಬ್ಯುಸಿಯಾಗಿದ್ದಾರೆ.


Click it and Unblock the Notifications











