14 ವರ್ಷದ ದಾಂಪತ್ಯ ಮುರಿದು ಬಿದ್ದಿದೆ ಅಷ್ಟೇ, ಆದರೆ ನನ್ನ ಮಾಜಿ ಗಂಡ ಈಗಲೂ ನನಗೆ ಆಪ್ತ ಸ್ನೇಹಿತ
ಪ್ರೀತಿ ಅಂದರೆ ಅದು ಪ್ರೀತಿಯಷ್ಟೇ ಅಲ್ಲ .. ಪ್ರೀತಿ ಅಂದರೆ ಬದುಕು, ಭವಿಷ್ಯ, ಭಾಷೆ, ಕನಸು, ನಗು, ಇನ್ನೂ ಏನೆಲ್ಲಾ ! ಇಂಥಾ ಪ್ರೀತಿಯನ್ನು ಬದುಕಿರುವ ತನಕ ಜಿನುಗುವ, ಪ್ರೇಮಸೆಲೆಯಾಗಿ ಬೆಳೆಸುವ -ಉಳಿಸುವ ವೃತವೇ ದಾಂಪತ್ಯ. ಆದರೆ ಈಗೀಗ ಪ್ರೀತಿ ಮತ್ತು ದಾಂಪತ್ಯದ ಅರ್ಥ ಎರಡು ಬದಲಾಗಿದೆ. ಅದರಲ್ಲಿಯೂ ರಂಗೀನ್ ಲೋಕದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ.
ಇಲ್ಲಿ ದಿನ ಬೆಳಗಾದರೆ ಅನೇಕರು ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳುತ್ತಾರೆ. ಮದುವೆಯ ಬಂಧನದಿಂದ ಹೊರ ಬರುತ್ತಾರೆ. ವಿಚ್ಛೇದನ ಪಡೆಯುತ್ತಾರೆ. ವಿಶೇಷ ಅಂದರೆ ವಿಚ್ಛೇದನ ಪಡೆದ ಮೇಲೆ ಕೂಡ ಇಲ್ಲಿ ಅನೇಕರು ದಿಕ್ಕು ಬದಲಿಸುವುದಿಲ್ಲ.

ಬದಲಿಗೆ ನಾವು ಈಗ ಗಂಡ-ಹೆಂಡ್ತಿಯಲ್ಲ ಕೇವಲ ಸ್ನೇಹಿತರು ಮಾತ್ರ ಎಂದು ಹೇಳುತ್ತಲೇ ಜೊತೆ ಜೊತೆಯಾಗಿ ಓಡಾಡುತ್ತಾರೆ. ವೇದಿಕೆಗಳಲ್ಲಿ ಒಬ್ಬರನ್ನೊಬ್ಬರು ಬಾಯ್ತುಂಬ ಹೊಗಳುತ್ತಾರೆ. ಉದಾಹರಣೆಗೆ ಮಹಿ ವಿಜ್ ಅವರನ್ನೇ ತೆಗೆದುಕೊಳ್ಳಿ.
ಹೌದು, ಮಹಿ ವಿಜ್ ಹಿಂದಿ ಕಿರುತೆರೆಯ ಪ್ರಖ್ಯಾತ ಹೆಸರು. ''ಲಾಗಿ ತುಜಸೇ ಲಗನ್''.. ''ಬಾಲಿಕಾ ವಧು''.. ಧಾರಾವಾಹಿಗಳ ಮೂಲಕ ಜನ ಮನ ಗೆದ್ದ ಮಹಿ ವಿಜ್, ''ನಚ್ ಬಲಿಯೇ ಸೀಸನ್ 5''ರ ವಿನ್ನರ್ ಕೂಡ ಹೌದು. ''ಜಲಕ್ ದಿಖಲಾ ಜಾ''.. ''ಖತ್ರೋನ್ ಕೆ ಖಿಲಾಡಿ'' ಅಂತಹ ರಿಯಾಲಿಟಿ ಶೋನಲ್ಲಿ ಕೂಡ ಇವರು ಕಾಣಿಸಿಕೊಂಡಿದ್ದಾರೆ.
ಇಂಥಾ ಮಹಿ ವಿಜ್ ಮನಸಾರೆ ಮೆಚ್ಚಿ ಹಿಂದಿ ಕಿರುತೆರೆಯ ಖ್ಯಾತ ನಿರೂಪಕ ಜೈ ಭಾನುಶಾಲಿ ಅವರನ್ನು ಮದುವೆಯಾಗಿದ್ದರು. 2010-11ರ ಆಸು ಪಾಸು ತಮ್ಮ ಕೆಲವೇ ಕೆಲ ಅತ್ಯಾಪ್ತ ಸ್ನೇಹಿತರು ಮತ್ತು ಮನೆಯ ಸದಸ್ಯರ ಎದುರು ಸಪ್ತಪದಿ ತುಳಿದಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅಂದರೆ ಕಳೆದ ವರ್ಷದವರೆಗೆ ಇಬ್ಬರು ಅನೋನ್ಯವಾಗಿಯೇ ಇದ್ದರು. ಇವರ ಇಬ್ಬರ ಅಭಿಮಾನಿಗಳು ಕೂಡ ಆದರ್ಶ ದಂಪತಿಗಳೆಂದೇ ಕರೆಯುತ್ತಿದ್ದರು.
ಆದರೆ, ಅದೇನಾಯ್ತೋ..? ಈ ವರ್ಷದ ಆರಂಭದಲ್ಲಿಯೇ ಇಬ್ಬರು ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದರು. ಇನ್ಮುಂದೆ ನಾವು ಇಬ್ಬರು ದೂರ ಎಂಬ ಸಂದೇಶವನ್ನು ತಮ್ಮ ತಮ್ಮ ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾ ಮೂಲಕ ರವಾನೆ ಮಾಡಿದರು. ಈ ಸುದ್ದಿ ಕೇಳಿ ಅಭಿಮಾನಿಗಳು ಬೇಸರಗೊಂಡಿದ್ದರು.

ಆದರೆ, ಎಲ್ಲರಿಗೆ ಗೊತ್ತಿರುವಂತೆ ಕಾಲ ಈಗ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪ್ರೀತಿಯನ್ನು ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ. ದಾಂಪತ್ಯ ಮುರಿದು ಬಿದ್ದ ನೋವಾಗಲಿ.. ಪ್ರೀತಿಯಲ್ಲಿ ಅನುಭವಿಸಿದ ನೋವಾಗಲಿ.. ಯಾವ ಲವಲೇಶವೂ ಕೂಡ ಮುಖದಲ್ಲಿ ಕಾಣಿಸುವುದಿಲ್ಲ.
ಇದಕ್ಕೆ ಕೈಗನ್ನಡಿ ಎಂಬಂತೆ ಮಹಿ ವಿಜ್ ನಮ್ಮ ದಾಂಪತ್ಯ ಜೀವನ ಮುರಿದು ಬಿದ್ದಿದೆ ಅಷ್ಟೇ, ಆದರೆ ನನ್ನ ಮಾಜಿ ಗಂಡ ಇವತ್ತು ಕೂಡ ನನ್ನ ಆಪ್ತ ಸ್ನೇಹಿತ ಎಂದು ಹೇಳಿದ್ಧಾರೆ.
ಹೌದು, ಸಾಮಾನ್ಯವಾಗಿ ಡಿವೋರ್ಸ್ ಆದ ತಕ್ಷಣ ಎರಡೂ ಕುಟುಂಬಗಳ ನಡುವಿನ ಸಂಬಂಧಕ್ಕೆ ಎಳ್ಳು-ನೀರು ಹಲವರು ಬಿಡುತ್ತಾರೆ. ಆದರೆ ಮಹಿ ಇದಕ್ಕೆ ತದ್ವಿರುದ್ದ. ಕೇವಲ ಮಹಿ ಮಾತ್ರ ಅಲ್ಲ ಇಂದಿಗೂ ತಮ್ಮ ಮಾಜಿ ಅಳಿಯ ಜೈ ಭಾನುಶಾಲಿ ಜೊತೆ ಅಷ್ಟೇ ಆಪ್ತವಾಗಿದ್ದಾರೆ ಮಹಿ ಅವರ ತಂದೆ.
ಈ ಕುರಿತು ಬಾಲಿವುಡ್ನ ಸುರಸುಂದರ ರಾಜೀವ್ ಖಂಡೇಲ್ವಾಲ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ''ತುಮ್ ಹೋ ನಾ'' ಕಾರ್ಯಕ್ರಮದಲ್ಲಿ ಮಾತನಾಡಿರುವ ಮಹಿ ವಿಜ್, ವಿಚ್ಚೇದನದ ಪ್ರಕ್ರಿಯೆ ತುಂಬಾ ಕಠಿಣವಾಗಿತ್ತು, ಆದರೆ ಈ ಸಮಯದಲ್ಲಿ ನನ್ನ ತಂದೆ ಬಹುದೊಡ್ಡ ಬೆಂಬಲವನ್ನು ನನಗೆ ನೀಡಿದರು ಎಂದು ಹೇಳಿದ್ದಾರೆ. ನಮ್ಮ ದಾಂಪತ್ಯದ ಕುರಿತು ಯಾವ ಪ್ರಶ್ನೆಯನ್ನು ಕೂಡ ಕೇಳಿಲ್ಲ ಎಂದಿದ್ದಾರೆ.
ಮುಂದುವರೆದು ಜೈ ಭಾನುಶಾಲಿ ಇವತ್ತು ಕೂಡ ನನ್ನ ಆಪ್ತ ಸ್ನೇಹಿತ ಎಂದು ಹೇಳಿರುವ ಮಹಿ ವಿಜ್, ನನ್ನ ತಂದೆ ಈಗಲೂ ಅವನನ್ನು ಭೇಟಿ ಮಾಡುತ್ತಾರೆ, ಇಬ್ಬರು ಕುಳಿತು ಚಹಾ ಕುಡಿಯುತ್ತಾರೆ ಎಂದಿದ್ದಾರೆ.
ನಮ್ಮ ನಡುವೆ ಯಾವುದೇ ದ್ವೇಷ ಇಲ್ಲ, ಮಗಳ ದಾಂಪತ್ಯ ಜೀವನ ಹೀಗಾಯ್ತಲ್ಲ ಎಂದು ನನ್ನ ತಂದೆಗೂ ಕೂಡ ಬೇಸರ ಇಲ್ಲ ಎಂದು ಸ್ಪಷ್ಟ ಪಡಿಸಿರುವ ಮಹಿ ವಿಜ್, ನಾವು ಈಗಲೂ ಕೂಡ ಒಂದೇ ಫ್ಯಾಮಿಲಿ ಅವರಂತೆ ಇದ್ದೇವೆ ಎಂದಿದ್ದಾರೆ.
ಇದೇ ಸಮಯದಲ್ಲಿ ಸಮಾಜ ಮಹಿಳೆಯರ ಮೇಲೆ ಹೇರುವ ಒತ್ತಡದ ಬಗ್ಗೆ ಕುರಿತು ಮಾತನಾಡಿರುವ ಮಹಿ, ಮದುವೆಯಲ್ಲಿ ಹೊಂದಿಕೊಂಡು ಹೋಗುವಂತೆ ಮಹಿಳೆಯರಿಗೆ ಹೆಚ್ಚಿನ ಸಲಹೆ ನೀಡಲಾಗುತ್ತೆ, ಮಗಳು ವೈಯಕ್ತಿಕ ಕಾರಣಕ್ಕೆ ಮರಳಿ ಮನೆಗೆ ಬಂದರೆ ಸಮಾಜ ಪ್ರಶ್ನೆ ಮಾಡುತ್ತೆ, ಆದರೆ ನನ್ನ ತಂದೆ ನನಗೆ ಯಾವುದೇ ಪ್ರಶ್ನೆಗಳನ್ನು ಕೇಳಲಿಲ್ಲ ಎಂದಿದ್ದಾರೆ. ಸದ್ಯ ಮಹಿ ವಿಜ್ ಅವರ ಈ ಮಾತುಗಳ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಗ್ರಾಸವಾಗುತ್ತಿವೆ.


Click it and Unblock the Notifications