ಮೃತ ಬಾಲಕಲಾವಿದೆ ಸಮನ್ವಿ ನಿವಾಸಕ್ಕೆ ಡಿ.ಕೆ.ಶಿವಕುಮಾರ್ ಭೇಟಿ: ಕುಟುಂಬಕ್ಕೆ ಸಾಂತ್ವನ
ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಬಾಲಕಲಾವಿದೆ, ನಟಿ ಅಮೃತಾ ಅವರ ಪುತ್ರಿ, ಖ್ಯಾತ ಹರಿಕಥಾ ವಿದ್ವಾಂಸ ಗುರುರಾಜಲುನಾಯ್ಡು ಅವರ ಮರಿ ಮೊಮ್ಮಗಳು ಸಮನ್ವಿಯ ಗುಬ್ಬಲಾಳ ಸಮೀಪದ ಮನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಭೇಟಿ ನೀಡಿ, ಆಕೆಯ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಭೇಟಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ''ಸಮನ್ವಿ ಚಿಕ್ಕ ವಯಸ್ಸಿನಲ್ಲೇ ಸಾಂಸ್ಕೃತಿಕ ಕ್ಷೇತ್ರದಿಂದ ಜನರ ಮನಗೆದ್ದು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಳು. ಚಿಕ್ಕ ವಯಸ್ಸಿನಲ್ಲಿ ಇಂತಹ ಪ್ರತಿಭೆ ಎಲ್ಲರಿಗೂ ಸಿಗುವುದಿಲ್ಲ. ಆಕೆಗೆ ಇಷ್ಟು ಸಣ್ಣ ವಯಸ್ಸಿನಲ್ಲೇ ಈ ರೀತಿ ಆಗಬಾರದಿತ್ತು. ಯಮ ನಿಷ್ಕರುಣಿ'' ಎಂದಿದ್ದಾರೆ.
''ಸಮನ್ವಿಯ ತಂದೆ ನನಗೆ ತುಂಬಾ ಪರಿಚಯ. ನಾವೆಲ್ಲ ವಿದ್ಯಾರ್ಥಿ ಕಾಲದಿಂದಲೂ ಪರಿಚಿತರು. ಈ ಸಮಯದಲ್ಲಿ ವೈಯಕ್ತಿಕವಾಗಿ ಹಾಗೂ ಪಕ್ಷದ ಅಧ್ಯಕ್ಷನಾಗಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಚಿಕ್ಕ ವಯಸ್ಸಿನಲ್ಲೇ ಅದ್ಭುತ ಪ್ರತಿಭೆಯೊಂದು ಮಾಯವಾಗಿದೆ. ಆಕೆಯ ತಂದೆ, ತಾಯಿ ಬಹಳ ನೋವಿನಲ್ಲಿದ್ದು, ಧೈರ್ಯ ಕಳೆದುಕೊಳ್ಳಬೇಡಿ ಎಂದು ಹೇಳಿದ್ದೇನೆ. ಇದು ಬಹಳ ದುಃಖಕರ ಸಮಯ. ಅವರಿಗೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ' ಎಂದರು.

'ನಮ್ಮಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದ ಸಮನ್ವಿ ತನ್ನ ತಾಯಿಯೊಡನೆ ಸ್ಕೂಟರ್ನಲ್ಲಿ ಬರುವಾಗ ಹಿಂದಿನಿಂದ ಬಂದ ಲಾರಿಯೊಂದು ಗುದ್ದಿದ ಪರಿಣಾಮ ಬಿದ್ದು ಲಾರಿಯಡಿ ಸಿಕ್ಕಿ ಪ್ರಾಣ ಕಳೆದುಕೊಂಡಳು. ಘಟನೆಯು ಕನ್ನಡ ಕಿರುತೆರೆ ಲೋಕದಲ್ಲಿ ತೀವ್ರ ಶೋಕವನ್ನು ಬಿತ್ತಿತ್ತು. ಎರಡು ದಿನದ ಹಿಂದಷ್ಟೆ ಸಮನ್ವಿಯ ಅಸ್ಥಿಯನ್ನು ಕಾವೇರಿಯಲ್ಲಿ ವಿಸರ್ಜನೆ ಮಾಡಲಾಯ್ತು.
ಸಮನ್ವಿಯ ಅಕಾಲಿಕ ನಿಧನಕ್ಕೆ ಕಿರುತೆರೆ ಸೆಲೆಬ್ರಿಟಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. 'ನಮ್ಮಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋ ಜಡ್ಜ್ ಸೃಜನ್ ಲೋಕೇಶ್, ''ದೇವರು ನಿಜವಾಗಿಯೂ ದೇವರ? ಅಥವ ದೇವರು ಇದ್ದಾನ? ಇಲ್ಲ ದೇವರನ್ನ ನಂಬಲೇಬೇಕಾ ? ಈ ಪ್ರಶ್ನೆಗಳು ಆಗಾಗ ಮೂಡಿ ಬರುತ್ತಿದೆ. ಇವತ್ತು ನಿಜವಾಗಲೂ ಈ ಘಟನೆಯ ನಂತರ ದೇವರು ಇದ್ದಾನೋ ಇಲ್ಲವೋ ಅನ್ನೋ ಪ್ರಶ್ನೆ ಮನಸ್ಸಿಗೆ ತುಂಬಾ ಗಾಢವಾಗಿ ಕಾಡುತ್ತಿದೆ. ಪುಟ್ಟ ಕಂದ ಸಮನ್ವಿ ಮಿಸ್ ಯು, ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
''ಸಮನ್ವಿ ಅಂತೂ ಬಹಳ ಪ್ರತಿಭಾವಂತ ಮಗು. ಆಕೆ ನಡೆಯುವುದು, ನಿಲ್ಲುವುದು, ಮಾತನಾಡುವುದು ಎಲ್ಲವೂ ಒಂದು ರೀತಿ ವಿಭಿನ್ನ'' ಎಂದ ತಾರಾ, ''ಅದೇನೋ ಗೊತ್ತಿಲ್ಲ ಎಲ್ಲ ಮಕ್ಕಳು ನನ್ನೊಂದಿಗೆ ಬಹಳ ಆತ್ಮೀಯವಾಗಿರುತ್ತಿದ್ದರು. ಸೃಜನ್ ಲೋಕೇಶ್ ಸದಾ ರೇಗಿಸುತ್ತಿರುತ್ತಾನೆ. ಎಲ್ಲ ಮಕ್ಕಳು ನಿಮ್ಮ ಮನೆಗೆ ಬಂದು ಬಿಡುತ್ತಾವೆ, ನೀನೆ ಅವರಿಗೆ ತಾಯಿ ಆಗಿಬಿಟ್ಟಿದ್ದೀಯ ಎನ್ನುತ್ತಿರುತ್ತಾನೆ ಸಮನ್ವಿ ಇನ್ನಿಲ್ಲ ಎಂಬುದು ನನಗೆ ನಂಬಲು ಸಾಧ್ಯವೇ ಆಗಲಿಲ್ಲ. ಏಳು-ಎಂಟು ವಾರ ಆ ಬಾಲಕಿ ನಮ್ಮ ಜೊತೆ ಇದ್ದಳು. 'ನಮ್ಮಮ್ಮ ಸೂಪರ್ ಸ್ಟಾರ್' ಶೋನಲ್ಲಿ 12 ತಾಯಂದಿರು, 12 ಮಕ್ಕಳು ಇದ್ದರು. ನನಗೆ ಎಲ್ಲ ಮಕ್ಕಳೊಂದಿಗೂ ಆಪ್ತತೆ ಪ್ರಾರಂಭವಾಗಿಬಿಟ್ಟಿತ್ತು. ಆ ಶೋನ ಎಲ್ಲರೂ ನನಗೆ ಕುಟುಂಬ ಸದಸ್ಯರಿದ್ದಂತೆ. ಈಗ ಸಮನ್ವಿ ಹೋಗಿರುವುದು ನಮ್ಮ ಕುಟುಂಬ ಸದಸ್ಯೆ ಹೋದಂತೆ ಆಗಿದೆ'' ಎಂದಿದ್ದಾರೆ ತಾರಾ.


Click it and Unblock the Notifications











