Aishwarya Salimath:ಮಹಾಸತಿಯಿಂದ ರಾಮಾಚಾರಿವರೆಗೂ ಕಿರುತೆರೆ ನಟಿ ಐಶ್ವರ್ಯಾ ಜರ್ನಿ ಹೇಗಿದೆ ಗೊತ್ತೇ?
ಧಾರಾವಾಹಿಯಲ್ಲಿ ನಾಯಕ, ನಾಯಕಿಗೆ ಅದೆಷ್ಟೋ ಪ್ರಾಮುಖ್ಯತೆ ಇರುತ್ತದೋ ಅಷ್ಟೇ ಪ್ರಾಮುಖ್ಯತೆ ಇರುವ ಮಗದೊಂದು ಪಾತ್ರವೆಂದರೆ ಅದು ನೆಗೆಟಿವ್ ರೋಲ್. ಹೌದು, ಅಭಿನಯಕ್ಕೆ ಅವಕಾಶ ಇರುವ ಪಾತ್ರಗಳ ಪೈಕಿ ಖಳನಾಯಕ/ನಾಯಕಿ ಪಾತ್ರವೂ ಒಂದು. ಅಂದ ಹಾಗೇ ನಾವಿಂದು ಮಾತನಾಡುತ್ತಿರುವುದು ಖಳನಾಯಕಿಯ ಬಗ್ಗೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಮಾಚಾರಿ' ಧಾರಾವಾಹಿಯಲ್ಲಿ ನಾಯಕ ರಾಮಾಚಾರಿಯ ಅತ್ತಿಗೆ ವೈಶಾಖ ಪಾತ್ರದಲ್ಲಿ ನಟಿಸುತ್ತಿರುವ ಬೆಡಗಿಯ ಹೆಸರು ಐಶ್ವರ್ಯ ಸಾಲಿಮಠ್. ನೆಗೆಟಿವ್ ರೋಲ್ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ಐಶ್ವರ್ಯ, ಮನೆ ಒಡೆಯುವ ಕೆಲಸ ಮಾಡುತ್ತಿರುತ್ತಾಳೆ.

ರಾಮಾಚಾರಿಯ ಅಣ್ಣ ಕೋದಂಡನ ಎರಡನೇ ಹೆಂಡತಿಯಾಗಿರುವ ವೈಶಾಖಾಗೆ ರಾಮಾಚಾರಿ ಮನೆಯವರ ಮೇಲೆ ಹಳೆಯ ದ್ವೇಷ ಇರುತ್ತದೆ. ಆ ಸೇಡನ್ನು ತೀರಿಸುವ ಸಲುವಾಗಿ ಆಕೆ ಕೋದಂಡನನ್ನು ಮದುವೆಯಾಗಿರುತ್ತಾಳೆ. ಏನಾದರಾಗಲಿ, ರಾಮಾಚಾರಿ ಮನೆಯರವನ್ನು ನಾಶ ಮಾಡಬೇಕೆಂಬುದೇ ವೈಶಾಖಾಳ ಮುಖ್ಯ ಉದ್ದೇಶ.
ನೆಗೆಟಿವ್ ರೋಲ್ನಲ್ಲಿ ಅತ್ಯದ್ಭುತವಾಗಿ ಅಭಿನಯಿಸುತ್ತಿರುವ ಐಶ್ವರ್ಯ ಸಾಲಿಮಠ್ ಅವರು ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೇವಂತಿ' ಧಾರಾವಾಹಿಯಲ್ಲಿ ಪ್ರಿಯಾ ಆಗಿ ನಟಿಸುತ್ತಿದ್ದಾರೆ. ಆಶ್ಚರ್ಯ ಎಂದರೆ ಅದು ಕೂಡಾ ನೆಗೆಟಿವ್ ರೋಲ್! ಏಕಕಾಲಕ್ಕೆ ಎರಡು ಬೇರೆ ಬೇರೆ ಧಾರಾವಾಹಿಗಳಲ್ಲಿ ಖಳನಾಯಕಿಯಾಗಿ ಅಬ್ಬರಿಸುತ್ತಿರುವ ಐಶ್ವರ್ಯಾ ಅವರ ನಟನಾ ಪಯಣ ಶುರುವಾಗಿದ್ದು 'ಮಹಾಸತಿ' ಧಾರಾವಾಹಿಯ ಮೂಲಕ.
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಹಾಸತಿ' ಧಾರಾವಾಹಿಯಲ್ಲಿ ಎರಡನೇ ನಾಯಕಿಯಾಗಿ ನಟಿಸಿರುವ ಐಶ್ವರ್ಯ ಡಿಪ್ಲೋಮಾ ಪದವೀಧರೆ ಕೂಡ ಹೌದು. ಆಕಸ್ಮಿಕವಾಗಿ ಬಣ್ಣದ ಜಗತ್ತಿಗೆ ಕಾಲಿಟ್ಟ ಈಕೆ ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆದುಬಿಟ್ಟರು. ಮುಂದೆ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರಯೂ' ಧಾರಾವಾಹಿಯಲ್ಲಿಯೂ ನಟಿಸುವ ಅವಕಾಶ ಪಡೆದುಕೊಂಡ ಈಕೆಗೆ ಜನಪ್ರಿಯತೆ ನೀಡಿದ್ದು 'ಅಗ್ನಿಸಾಕ್ಷಿ' ಧಾರಾವಾಹಿ.
'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಾಯಕಿ ಸನ್ನಿಧಿಯ ತಂಗಿ ತನು ಆಗಿ ಅಭಿನಯಿಸಿದ ಐಶ್ವರ್ಯಾಗೆ ಆ ಪಾತ್ರ ಸಾಕಷ್ಟು ಜನಪ್ರಿಯತೆಯನ್ನು ನೀಡಿತ್ತು. ಅಸಲಿಗೆ ಐಶ್ವರ್ಯಾ ಅವರು ಧಾರಾವಾಹಿ ಆರಂಭದ ದಿನಗಳಲ್ಲಿ ತನು ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಬದಲಿಗೆ ಅರ್ಧದಲ್ಲಿ ಧಾರಾವಾಹಿ ತಂಡವನ್ನು ಸೇರಿದರು. ತನು ಪಾತ್ರಕ್ಕೆ ಜೀವ ತುಂಬುತ್ತಿದ್ದ ಶೋಭಾ ಶೆಟ್ಟಿ ಧಾರಾವಾಹಿಯ ಪಾತ್ರದಿಂದ ಹೊರಬಂದಾಗ ಆ ಜಾಗಕ್ಕೆ ಐಶ್ವರ್ಯಾ ಸಾಲಿಮಠ್ ಆಯ್ಕೆಯಾದರು. ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.
ನಾನು ಅಗ್ನಿಸಾಕ್ಷಿ ಧಾರಾವಾಹಿಯ ಮೊದಲು ಬೇರೆ ಮೂರು ನಾಲ್ಕು ಧಾರಾವಾಹಿಗಳಲ್ಲಿ ಅಭಿನಯಿಸಿದ್ದರೂ ನನಗೆ ಜನಪ್ರಿಯತೆ ನೀಡಿದ್ದು ಮಾತ್ರ ಅಗ್ನಿಸಾಕ್ಷಿ ಧಾರಾವಾಹಿ. ಧಾರಾವಾಹಿ ಮುಗಿದು ವರ್ಷ ಕಳೆಯುತ್ತಾ ಬಂದರೂ ಜನ ಇಂದಿಗೂ ಆ ಪಾತ್ರವನ್ನು ಮರೆತಿಲ್ಲ. ಅಗ್ನಿಸಾಕ್ಷಿ ಧಾರಾವಾಹಿಯ ತನು ಎಂದೇ ಗುರುತಿಸುತ್ತಾರೆ ಎಂಬ ಖುಷಿಯನ್ನು ಈ ಹಿಂದೆ ವ್ಯಕ್ತಪಡಿಸಿದ್ದರು ಐಶ್ವರ್ಯ ಸಾಲಿಮಠ್.
ಇದೀಗ 'ಸೇವಂತಿ' ಹಾಗೂ 'ರಾಮಾಚಾರಿ' ಎನ್ನುವ ಧಾರಾವಾಹಿಯಲ್ಲಿ ನಟಿಸುತ್ತಿರುವ ಐಶ್ವರ್ಯಾ ಸಾಲಿಮಠ್ ಅವರು ತಮ್ಮ ಅದ್ಭುತ ನಟನೆಯ ಮೂಲಕ ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಿರುವಾಗ ಐಶ್ವರ್ಯಾ ಮುಂದೊಂದು ದಿನ ಸಿನಿಮಾದಲ್ಲಿ ಕಾಣಿಸಿಕೊಂಡರೆ ಆಶ್ಚರ್ಯವಿಲ್ಲ.


Click it and Unblock the Notifications











