'ಮಹಾಸತಿ'ಯ ನಟಿ ದೀಪಾ ಜಗದೀಶ್ ನಟನಾ ಪಯಣ ಶುರುವಾಗಿದ್ದು ಹೇಗೆ ಗೊತ್ತಾ?
ಕನ್ನಡ ಕಿರುತೆರೆಯ ಮೂಲಕ ನಟನೆಗೆ ಕಾಲಿಟ್ಟ ಅನೇಕರು ಮುಂದೆ ಪರಭಾಷೆಯ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವುದು ತೀರಾ ಮಾಮೂಲಿ ಸಂಗತಿ. ಆ ಸಾಲಿಗೆ ಸೇರಿದ್ದಾರೆ ನಟಿ ದೀಪಾ ಜಗದೀಶ್. ತೆಲುಗಿನ ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಲ್ಲಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ದೀಪಾ ಜಗದೀಶ್. ಪೋಷಕ ಪಾತ್ರಗಳ ಮೂಲಕ ಕಿರುತೆರೆಯ ನಂಟು ಬೆಳೆಸಿಕೊಂಡ ದೀಪಾ ಜಗದೀಶ್ ಇದೀಗ ನಾಯಕಿಯಾಗಿ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದ್ದಾರೆ.
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಹಾಸತಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ದೀಪಾ ಜಗದೀಶ್ ಮತ್ತೆ ಹಿಂತಿರುಗಿ ನೋಡಿದ್ದಿಲ್ಲ. ಹೌದು, 'ಮಹಾಸತಿ' ಧಾರಾವಾಹಿಯಲ್ಲಿ ನಾಯಕನ ತಂಗಿಯಾಗಿ ಕಿರುತೆರೆಗೆ ಪಾದಾರ್ಪಣೆ ಮಾಡಿದ ದೀಪಾ ಜಗದೀಶ್ ನಂತರ ನಟಿಸಿದ್ದು 'ವಾರಸ್ದಾರ' ಧಾರಾವಾಹಿಯಲ್ಲಿ.

'ವಾರಸ್ಧಾರ' ಧಾರಾವಾಹಿಯಲ್ಲಿ ಪ್ರೀತಿಯಾಗಿ ಕಾಣಿಸಿಕೊಂಡ ದೀಪಾ ಜಗದೀಶ್ ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬ್ರಹ್ಮಾಸ್ತ್ರ' ಧಾರಾವಾಹಿಯಲ್ಲಿ ನಾಯಕಿ ಶಿವರಂಜನಿಯಗಿ ಅಭಿನಯಿಸಿ, ಕಿರುತೆರೆ ವೀಕ್ಷಕರ ಮನ ಸೆಳೆದರು. ತದ ನಂತರ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾವ್ಯಾಂಜಲಿ' ಧಾರಾವಾಹಿಯಲ್ಲಿ ಅಂಜಲಿಯಾಗಿ ನಟಿಸಿದರು. ಅಂದ ಹಾಗೇ ದೀಪಾ ಅವರು 'ಕಾವ್ಯಾಂಜಲಿ' ಧಾರಾವಾಹಿ ಆರಂಭವಾದಾಗ ನಟಿಸುತ್ತಿರಲಿಲ್ಲ.
ಬದಲಿಗೆ ಆ ಧಾರಾವಾಹಿಯಲ್ಲಿ ಅಂಜಲಿಯಾಗಿ ನಟಿಸುತ್ತಿದ್ದ ಸುಶ್ಮಿತಾ ಭಟ್ ಅವರು ಇದ್ದಕ್ಕಿದ್ದಂತೆ ಧಾರಾವಾಹಿಯಿಂದ ಹೊರಬಂದಾಗ ಆ ಜಾಗಕ್ಕೆ ದೀಪಾ ಅವರು ಆಯ್ಕೆಯಾದರು. ಆದರೆ ಮುಂದೆ ಕಾರಣಾಂತರಗಳಿಂದ ಆ ಧಾರಾವಾಹಿಯಿಂದ ಹೊರಬಂದ ಈಕೆ ಮುಂದೆ ನಟಿಸಿದ್ದು ಕೂಡಾ ಉದಯ ವಾಹಿನಿಯಲ್ಲಿ.
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಆನಂದರಾಗ' ಧಾರಾವಾಹಿಯಲ್ಲಿ ನಾಯಕಿ ದುರ್ಗಾಳಾಗಿ ಅಭಿನಯಿಸಿದ್ದ ದೀಪಾ ಜಗದೀಶ್ ಸದ್ಯ ಪರಭಾಷೆಯ ಕಿರುತೆರೆಯಲ್ಲಿ ನಟನಾ ಕಂಪನ್ನು ಪಸರಿಸುತ್ತಿದ್ದಾರೆ. ತಮ್ಮ ನಟನೆಯ ಮೂಲಕ ಕನ್ನಡ ಮಾತ್ರವಲ್ಲದೇ ಪರಭಾಷೆಯ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ದೀಪಾ ಜಗದೀಶ್ ಎಲ್ಎಲ್ಬಿ ಪದವೀಧರೆ ಎಂಬ ವಿಚಾರ ಅನೇಕರಿಗೆ ತಿಳಿದಿರಲಿಕ್ಕಿಲ್ಲ.

ಹೌದು, ಎಲ್ಎಲ್ಬಿ ಪದವಿಯನ್ನು ಪಡೆದಿರುವ ದೀಪಾ ಜಗದೀಶ್ ಅವರಿಗೆ ಮೊದಲಿನಿಂದಲೂ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಬಯಕೆಯಿತ್ತು. ಅದೇ ಕಾರಣದಿಂದ ನಟನೆಯ ನಂಟು ಬೆಳೆಸಿಕೊಂಡ ಈಕೆ ಹಿರಿತೆರೆಗೂ ಕಾಲಿಟ್ಟಾಗಿದೆ. 'ಕ್ರಿಟಿಕಲ್ ಕೀರ್ತನೆಗಳು' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಈಕೆ ನಟನೆಯ ಮೂಲಕ ವೀಕ್ಷಕರ ಮನ ಸೆಳೆದಿರುವ ಬೆಡಗಿ.


Click it and Unblock the Notifications











