ಬೆಳ್ಳಿತೆರೆಯಲ್ಲಿ ಮೋಡಿ ಮಾಡಲು ಹೊರಟ ಕಿರುತೆರೆಯ ಮಲ್ಲಿ; 'ಅಪಾಯವಿದೆ ಎಚ್ಚರಿಕೆ'
ರಾಧಾ ಭಗವತಿ ಕಿರುತೆರೆ ವೀಕ್ಷಕರಿಗೆ ಪರಿಚಿತ ಹೆಸರಿದು ಎಂದು ಹೇಳುವುದು ಕಷ್ಟ. ಬದಲಿಗೆ ಪರಿಚಿತ ಮುಖವಿದು ಎಂದು ಹೇಳಿದರೆ ಅಕ್ಷರಶಃ ಅದು ನಿಜ. ಯಾಕೆಂದರೆ ಸದ್ಯಕ್ಕೆ ಕಿರುತೆರೆಯಲ್ಲಿ ಈಕೆ ಮಲ್ಲಿಯಾಗಿ ಮೋಡಿ ಮಾಡಿರುವ ಬೆಡಗಿ. ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ಒಂದಾಗಿರುವ 'ಅಮೃತಧಾರೆ'ಯಲ್ಲಿ ಮಲ್ಲಿಯಾಗಿ ಅಭಿನಯಿಸುತ್ತಿದ್ದಾರೆ ರಾಧಾ ಭಗವತಿ.
ಮುಗ್ಧ ಹಳ್ಳಿ ಹುಡುಗಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ರಾಧಾ ಭಗವತಿ ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲಿಯೂ ನಟನಾ ಛಾಪನ್ನು ಪಸರಿಸುತ್ತಿದ್ದಾರೆ. ರಾಧಾ ಭಗವತಿ ಅವರು 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದು ಅದು ಶೀಘ್ರದಲ್ಲಿ ತೆರೆ ಕಾಣಲಿದೆ. ಅಂದ ಹಾಗೇ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ರಾಧಾ ಭಗವತಿ ಅವರಿಗೆ ಜೋಡಿಯಾಗಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಣ್ಣಯ್ಯ' ಧಾರಾವಾಹಿಯಲ್ಲಿ ನಾಯಕ ಶಿವಣ್ಣನಾಗಿ ಅಭಿನಯಿಸುತ್ತಿರುವ ವಿಕಾಶ್ ಉತ್ತಯ್ಯ ಕಾಣಿಸಿಕೊಳ್ಳುತ್ತಿದ್ದಾರೆ.

'ಉಘೇ ಉಘೇ ಮಾದೇಶ್ವರ' ಧಾರಾವಾಹಿಯ ಮೂಲಕ ಕಿರುತೆರೆಯ ನಂಟು ಬೆಳೆಸಿಕೊಂಡ ರಾಧಾ ಭಗವತಿ ಅವರು ಅಭಿನಯಿಸಿದ್ದು ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಷ್ಟೇ ಆದರೂ ಮನೋಜ್ಞ ನಟನೆಯ ಮೂಲಕ ಗುರುತಿಸಿಕೊಂಡಿರುವ ಬೆಡಗಿ. 'ಉಘೇ ಉಘೇ ಮಾದೇಶ್ವರ' ಧಾರಾವಾಹಿಯ ನಂತರ 'ನಾಯಕಿ', 'ಸರ್ವ ಮಂಗಳ ಮಾಂಗಲ್ಯೇ', 'ಎಡೆಯೂರು ಶ್ರೀಸಿದ್ಧಲಿಂಗೇಶ್ವರ' ಧಾರಾವಾಹಿಗಳಲ್ಲಿ ಈಕೆ ಅಭಿನಯಿಸಿದ್ದರು.
'ರಾಮಾಚಾರಿ' ಧಾರಾವಾಹಿಯಲ್ಲಿ ನಾಯಕ ರಾಮಚಾರಿ ತಂಗಿ ಶ್ರುತಿಯಾಗಿ ನಟಿಸಿದ್ದ ಈಕೆ ಮುಂದೆ ಕಾರಣಾಂತರಗಳಿಂದ ಧಾರಾವಾಹಿಯ ಪಾತ್ರದಿಂದ ಹೊರಬಂದರು. ಸದ್ಯ 'ಅಮೃತಧಾರೆ' ಹಾಗೂ 'ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ' ಧಾರಾವಾಹೊಯಲ್ಲಿ ನಟಿಸುತ್ತಿರುವ ಈಕೆ ಸಿನಿಮಾ ರಂಗದಲ್ಲಿಯೂ ಮೋಡಿ ಮಾಡಿದ್ದಾರೆ.
'ಆ 90 ದಿನಗಳು' ಸಿನಿಮಾದಲ್ಲಿ ನಟಿಸುವ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ ರಾಧಾ ಭಗವತಿ 'ವಸಂತ ಕಾಲದ ಹೂಗಳು' ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಇನ್ನು 'ಅಪಾಯವಿದೆ ಎಚ್ಚರಿಕೆ' ಸಿನಿಮಾ ಬಿಡುಗಡೆಯಾಗಬೇಕಿದ್ದು, ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಹಾಗೂ 'ನಾನು ಕರ್ಣಾಕರ' ಸಿನಿಮಾದಲ್ಲಿ ಈಕೆ ನಟಿಸಿದ್ದಾರೆ.
ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ಬ್ಯುಸಿಯಾಗಿರುವ ರಾಧಾ ಭಗವತಿ ಅವರು ನಟನೆಯಾಗಲೀ, ಡಬ್ಬಿಂಗ್ ಆಗಲಿ ಯಾವುದನ್ನು ಕಲಿತವರಲ್ಲ. ಬದಲಿಗೆ ಅದನ್ನು ಅವರು ಆಸಕ್ತಿಯಿಂದಲೇ ನೋಡಿ ಕಲಿತದ್ದು. ಧಾರಾವಾಹಿಯಿಂದ ನಾನು ಸಾಕಷ್ಟು ಅನುಭವಗಳನ್ನು, ಪಾಠಗಳನ್ನು ಕಲಿತೆ ಎಂದು ಸಂತಸದಿಂದ ಹೇಳುವ ರಾಧಾ ಭಗವತಿ ಅವರು ಗಾಯಕಿಯೂ ಹೌದು.
'ಪ್ರೇಮಂ 2' ಎನ್ನುವ ಸಿನಿಮಾದ "ಈ ಜನ್ಮದಲ್ಲಿ ಎನ್ನುವ ಹಾಡಿಗೆ ದನಿಯಾಗಿರುವ ರಾಧಾ ಭಗವತಿ ಅವರು ಬಯಸಿದ್ದು ಕೂಡಾ ಗಾಯಕಿಯಾಗಬೇಕು ಎಂದೇ. ಸ್ನೇಹಿತರೊಬ್ಬರ ಒತ್ತಾಯದ ಮೇರೆಗೆ ಧಾರಾವಾಹಿಯ ಆಡಿಶನ್ ಅಟೆಂಡ್ ಮಾಡಿದ ರಾಧಾ ಭಗವತಿಗೆ ತಾನು ಆಯ್ಕೆಯಾಗುತ್ತೇನೆ ಎಂಬ ಸಣ್ಣ ಆಲೋಚನೆಯೂ ಇರಲಿಲ್ಲ. ಯಾಕೆಂದರೆ ನಟನೆಯನ್ನು ಆಕೆ ಕಲಿತಿರಲಿಲ್ಲ. ಆದರೆ ಆಡಿಶನ್ ನಲ್ಲಿ ಆಯ್ಕೆಯಾದ ಈಕೆ ಈಗ ಏಳೆಂಟು ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ.
ಅಂದ ಹಾಗೇ ರಾಧಾ ಭಗವತಿ ಅವರು ಶಾಸ್ತ್ರೋಕ್ತವಾಗಿ ನಟನೆಯನ್ನು ಕಲಿತಿರದಿದ್ದರೂ ಅವರಿಗೆ ಅದು ರಕ್ತಗತವಾಗಿ ಬಂದಿದೆ ಎಂದು ಹೇಳಿದರೆ ತಪ್ಪಾಗಲಾರದು. ಯಾಕೆಂದರೆ ಆಕೆಯ ತಾತ ರಂಗಭೂಮಿ ಕಲಾವಿದರಾಗಿದ್ದರು. ಮಾತ್ರವಲ್ಲ ಹರಿಕಥೆಗಳನ್ನು ಕೂಡಾ ಅವರು ಹೇಳುತ್ತಿದ್ದರು. ಬಹುಶಃ ಅದೇ ಕಾರಣದಿಂದ ಇಂದು ರಾಧಾ ಭಗವತಿ ಅವರು ನಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ನಟಿಸಲು ಯಾವುದೇ ಪಾತ್ರವಾದರೂ ಸರಿ, ನಟನೆ ಮಾತ್ರ ನೈಜವಾಗಿರಬೇಕು ಎಂಬುದು ರಾಧಾ ಭಗವತಿ ಅವರ ಅಂಬೋಣ. ಇದರ ಹೊರತಾಗಿ ಗ್ಲಾಮರಸ್ ಆಗಿರುವಂತಹ ಪಾತ್ರಗಳಿಗಿಂತಲೂ ಡಿ ಗ್ಲಾಮರಸ್ ಪಾತ್ರದಲ್ಲಿ ನಟಿಸಲು ಈಕೆಗಿಷ್ಟ.


Click it and Unblock the Notifications











