'ಆಸೆ' ಧಾರಾವಾಹಿಯ ಅಮೃತಾ ರಾಮಮೂರ್ತಿ ಅವರ ನಟನಾ ಪಯಣ ಶುರುವಾಗಿದ್ದು ಹೇಗೆ ಗೊತ್ತಾ?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಆಸೆ' ಧಾರಾವಾಹಿಯೂ ಒಂದು. ಸ್ಯಾಂಡಲ್ವುಡ್ನ ಜನಪ್ರಿಯ ನಟ ರಮೇಶ್ ಅರವಿಂದ್ ಅವರ ನಿರ್ಮಾಣದಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯಲ್ಲಿ ನಾಯಕ ಸೂರ್ಯ ಆಗಿ ನಿನಾದ್ ಹರಿತ್ಸ ನಟಿಸುತ್ತಿದ್ದರೆ ನಾಯಕಿ ಮೀನಾಳಾಗಿ ಬಣ್ಣ ಹಚ್ಚುತ್ತಿದ್ದಾರೆ ನಟಿ ಪ್ರಿಯಾಂಕಾ. ಇದರ ಹೊರತಾಗಿ ಉಳಿದೆಲ್ಲಾ ಪಾತ್ರಗಳು ಕಿರುತೆರೆ ವೀಕ್ಷಕರ ಮನ ಸೆಳೆದಿದೆ.
'ಆಸೆ' ಧಾರಾವಾಹಿಯಲ್ಲಿ ನಾಯಕ ಸೂರ್ಯನ ಅಣ್ಣ ಮನೋಜ್ ನ ಹೆಂಡತಿ ರೋಹಿಣಿ ಆಗಿ ನಟಿಸುತ್ತಿರುವ ನಟಿಯ ಹೆಸರು ಅಮೃತಾ ರಾಮಮೂರ್ತಿ. ಮುದ್ದಾದ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ಅಮೃತಾ ರಾಮಮೂರ್ತಿ 'ಆಸೆ' ಧಾರಾವಾಹಿ ಶುರುವಾಗಲೇ ರೋಹಿಣಿಯಾಗಿ ಕಾಣಿಸಿಕೊಂಡವರಲ್ಲ. ಬದಲಿಗೆ 'ಆಸೆ' ಧಾರಾವಾಹಿ ಆರಂಭವಾದಾಗ ನಯನಾ ವೆಂಕಟೇಶ್ ಅವರು ರೋಹಿಣಿಯಾಗಿ ನಟಿಸುತ್ತಿದ್ದರು.

ಮುಂದೆ ಕಾರಣಾಂತರಗಳಿಂದ ನಯನಾ ವೆಂಕಟೇಶ್ ಅವರು ರೋಹಿಣಿ ಪಾತ್ರದಿಂದ ಹೊರಬಂದಾಗ ಆ ಜಾಗಕ್ಕೆ ನಟಿ ಚಂದನಾ ರಾಘವೇಂದ್ರ ಅವರು ಆಯ್ಕೆಯಾದರು. ಒಂದಷ್ಟು ಸಂಚಿಕೆಗಳ ನಂತರ ಚಂದನಾ ಅವರು ಕೂಡಾ ಆಸೆ ಧಾರಾವಾಹಿಯಿಂದ, ರೋಹಿಣಿ ಪಾತ್ರದಿಂದ ಹೊರ ಬರಬೇಕಾಯಿತು. ಆ ಸಮಯದಲ್ಲಿ ರೋಹಿಣಿಯಾಗಿ ಸ್ಟಾರ್ ಪರಿವಾರ ಸೇರಿದ ಅಮೃತಾ ರಾಮಮೂರ್ತಿ ತಮ್ಮ ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿದ್ದಾರೆ.
ಅಂದ ಹಾಗೇ ಅಮೃತಾ ರಾಮಮೂರ್ತಿ ಅವರ ಕಿರುತೆರೆ ಪಯಣ ಶುರುವಾಗಿದ್ದು ಕೂಡಾ ಇದೇ ಸ್ಟಾರ್ ಸುವರ್ಣ ವಾಹಿನಿಯಿಂದ ಎಂಬುದು ಅಚ್ಚರಿಯ ಸಂಗತಿ. ದಶಕಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರಸ್ವತಿ - ಲಕ್ಷ್ಮಿ ಪ್ರಿಯೆ' ಧಾರಾವಾಹಿಯಲ್ಲಿ ನಾಯಕಿ ಲಕ್ಷ್ಮಿಯಾಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಅಮೃತಾ ರಾಮಮೂರ್ತಿ ಮತ್ತೆ ಹಿಂತಿರುಗಿ ನೋಡಿದ್ದಿಲ್ಲ.
ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮೇಘ ಮಯೂರಿ' ಧಾರಾವಾಹಿಯಲ್ಲಿ ಮಯೂರಿಯ ಪಾತ್ರಕ್ಕೆ ಜೀವ ತುಂಬಿ ಸೈ ಎನಿಸಿಕೊಂಡ ಈಕೆ ನಂತರ ಬದಲಾದುದು ಐಶ್ವರ್ಯಳಾಗಿ. ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಿಸ್ಟರ್ ಆ್ಯಂಡ್ ಮಿಸೆಸ್ ರಂಗೇಗೌಡ' ಧಾರಾವಾಹಿಯಲ್ಲಿ ಐಶ್ವರ್ಯ ಳಾಗಿ ಈಕೆ ನಟಿಸಿದರು. ಮುಂದೆ ಇದೇ ಧಾರಾವಾಹಿಯಲ್ಲಿ ನಾಯಕ ರಂಗೇಗೌಡ ನಾಗಿ ನಟಿಸಿದ ರಘು ಗೌಡ ಅವರನ್ನು ಈಕೆ ಪ್ರೀತಿಸಿ, ವಿವಾಹವಾಗಿದ್ದು ರೀಲ್ ನಲ್ಲಿ ಮಾತ್ರವಲ್ಲದೇ ರಿಯಲ್ ಲೈಫ್ ನಲ್ಲೂ ಈ ಜೋಡಿ ಒಂದಾಗಿದ್ದಾರೆ. ಅಷ್ಟೇ ಅಲ್ಲದೇ ಈ ಜೋಡಿಗೆ ಧೃತಿ ಎಂಬ ಹೆಸರಿನ ಮುದ್ದು ಮಗಳಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದೇ ಇದೆ.
'ಮಿಸ್ಟರ್ ಆ್ಯಂಡ್ ಮಿಸೆಸ್ ರಂಗೇಗೌಡ' ಧಾರಾವಾಹಿಯ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಲವಧು' ಧಾರಾವಾಹಿಯಲ್ಲಿ ಈಕೆ ವಚನಾ ಆಗಿ ಬಣ್ಣ ಹಚ್ಚಿದ್ದರು. ಒಂದರ್ಥದಲ್ಲಿ ಇದು ನೆಗೆಟಿವ್ ಛಾಯೆಯಿರುವ ಪಾತ್ರ ಆಗಿತ್ತು. ಅಂದ ಹಾಗೇ ಕುಲವಧು ಧಾರಾವಾಹಿಯಲ್ಲಿಯೂ ಅಷ್ಟೇ, ಆರಂಭದಲ್ಲಿ ಸಂಜನಾ ಚಿದಾನಂದ್ ಹಾಗೂ ನಂತರ ದಿಶಾ ಮದನ್ ಅವರು ವಚನಾ ಆಗಿ ಕಾಣಿಸಿಕೊಂಡಿದ್ದರು. ಅವರಿಬ್ಬರೂ ಧಾರಾವಾಹಿಯಿಂದ ಹೊರಬಂದ ಬಳಿಕ ಆ ಜಾಗಕ್ಕೆ ಬಂದ ಅಮೃತಾ ರಾಮಮೂರ್ತಿ ಧಾರಾವಾಹಿ ಮುಕ್ತಾಯಗೊಳ್ಳುವ ತನಕ ಆ ಪಾತ್ರಕ್ಕೆ ಜೀವ ತುಂಬಿದ್ದರು.
'ಕುಲವಧು' ಧಾರಾವಾಹಿಯ ನಂತರ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿ ನಾಯಕಿ ಮೃದುಲಾ ಆಗಿ ಈಕೆ ಬಣ್ಣ ಹಚ್ಚಿದ್ದರು. ನಂತರ ಆ ಧಾರಾವಾಹಿಯಿಂದ ಹೊರಬರಬೇಕಾದ ಅನಿವಾರ್ಯತೆ ಬಂದಾಗ ಪಾತ್ರದ ಬದಲಾವಣೆಯಾಗದೇ, ಪಾತ್ರವನ್ನೇ ಕೊನೆಗೊಳಿಸಿದ್ದರು. ನಂತರ ಮಗಳ ಸಲುವಾಗಿ ನಟನೆಯಿಂದ ಎರಡು ವರ್ಷಗಳ ಕಾಲ ಬ್ರೇಕ್ ಪಡೆದುಕೊಂಡಿದ್ದ ಈಕೆ 'ಕೆಂಡಸಂಪಿಗೆ' ಧಾರಾವಾಹಿಯ ಸಾಧನಾಳಾಗಿ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದರು.
ಸಾಧನಾ ಎಂಬ ಖಳನಾಯಕಿಯಾಗಿ ಕಿರುತೆರೆಯತ್ತ ಮುಖ ಮಾಡಿದ ಅಮೃತಾ ರಾಮಮೂರ್ತಿ ನೆಗೆಟಿವ್ ಪಾತ್ರದ ಮೂಲಕವೂ ಕಿರುತೆರೆ ವೀಕ್ಷಕರ ಮನ ಸೆಳೆದರು. ಇದೀಗ ರೋಹಿಣಿಯಾಗಿ ಅಭಿನಯಿಸುತ್ತಿರುವ ಈಕೆ ತೆಲುಗಿನ 'ಪುಟ್ಟಿಂಚಿ ಪಟ್ಟುಚೀರ', 'ಗೌರವಂ' ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ನಟನಾ ಕಂಪನ್ನು ಪಸರಿಸಿದ್ದಾರೆ.


Click it and Unblock the Notifications











