ಮಾಡಲಿಂಗ್ನಿಂದ ನಿರೂಪಣೆ, ಬಳಿಕ ನಟನೆಯವರೆಗೆ ರಶ್ಮಿ ಜರ್ನಿ ಹೇಗಿತ್ತು ಗೊತ್ತೆ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸತ್ಯ' ಧಾರಾವಾಹಿಯಲ್ಲಿ ಖಳನಾಯಕಿ ಕೀರ್ತನಾ ಆಗಿ ಅಭಿನಯಿಸುತ್ತಿರುವ ರಶ್ಮಿ ನಿರೂಪಕಿಯಾಗಿ ಕಿರುತೆರೆಗೆ ಪರಿಚಿತರಾದರು. ಮುಂದೆ ನಟನೆಗೆ ಪಾದಾರ್ಪಣೆ ಮಾಡಿದ ನಟಿ, ಪಾಸಿಟಿವ್ ಮಾತ್ರವಲ್ಲದೇ ನೆಗೆಟಿವ್ ಪಾತ್ರಗಳ ಮೂಲಕವೂ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ.
ಕಾಲೇಜು ವಿದ್ಯಾರ್ಥಿನಿಯಾಗಿದ್ದಾಗಲೇ ಮಾಡೆಲಿಂಗ್ ಜಗತ್ತಿನತ್ತ ರಶ್ಮಿ ಮುಖ ಮಾಡಿದರು. ಮುಂದೆ ಅದರಲ್ಲಿ ಮುಂದುವರಿಯುವ ನಿರ್ಧಾರ ಮಾಡಿರುವ ಆಕೆ ಪ್ರಸಾದ್ ಬಿದ್ದಪ್ಪ, ರಮೇಶ್ ದೆಂಬ್ಲಾ ಅವರೊಂದಿಗೆ ಫ್ಯಾಶನ್ ಶೋಗಳಲ್ಲಿ ಕಾಣಿಸಿಕೊಂಡರು. ವಿಪುಲ್ ಮಿಸ್ ಬೆಂಗಳೂರು 2014 ವಿನ್ನರ್, ಪ್ರಿನ್ಸೆಸ್ ಕರ್ನಾಟಕ ಫಸ್ಟ್ ರನ್ನರ್ ಅಪ್ 2015 ಹೀಗೆ ಅನೇಕ ಫ್ಯಾಷನ್ ಶೋಗಳಲ್ಲಿ ಆಕೆ ರ್ಯಾಂಪ್ ವಾಕ್ ಮಾಡಿ ಸೈ ಎನಿಸಿಕೊಂಡ ಬೆಡಗಿ.

ಮಾಡೆಲಿಂಗ್ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳುತ್ತಿರುವಾಗಲೇ ಅದಕ್ಕೆ ವಿದಾಯ ಹೇಳಿ ವಿದ್ಯಾಭ್ಯಾಸದ ಕಡೆಗೆ ಸಂಪೂರ್ಣ ಚಿತ್ತ ಹರಿಸಿದ ಈಕೆ ಪದವಿಯ ನಂತರ ಕೆಲಸಕ್ಕೆ ಸೇರಿದರು. ಬರೋಬ್ಬರಿ ಏಳು ವರ್ಷಗಳ ಕಾಲ ಎಂಎನ್ಸಿಯಲ್ಲಿ ಕೆಲಸ ಮಾಡಿದ ನಟಿ ರಶ್ಮಿ ಮುಂದೆ ನಟನೆಯಲ್ಲಿ ಮುಂದುವರಿಯುವ ನಿರ್ಧಾರ ಮಾಡಿದರು. ಉದಯ ವಾಹಿನಿಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಬಳಿಕ ಹಿಂತಿರುಗಿ ನೋಡಿದ್ದಿಲ್ಲ.
ಉದಯ ವಾಹಿನಿಯಲ್ಲಿನ ಧಾರಾವಾಹಿಯೊಂದರ ಆಡಿಶನ್ಗೆ ತೆರಳಿದ ರಶ್ಮಿ ಆಯ್ಕೆಯೂ ಆದರು. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಂದಿನಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಈಕೆ ನಂತರ ಹಿಂತಿರುಗಿ ನೋಡಿದ್ದಿಲ್ಲ. ಮೊದಲ ಧಾರಾವಾಹಿಯಲ್ಲಿಯೇ ನೀಲಿ ಎಂಬ ಖಳನಾಯಕಿಯ ಪಾತ್ರದಲ್ಲಿ ನಟಿಸಿದ್ದ ರಶ್ಮಿ ನಂತರ ನಟಿಸಿದ್ದು 'ನಾಗಿಣಿ 2' ಧಾರಾವಾಹಿಯಲ್ಲಿ.

ಸೂಪರ್ ನ್ಯಾಚುರಲ್ ಧಾರಾವಾಹಿ 'ನಾಗಿಣಿ 2'ರಲ್ಲಿ ನಾಯಕಿ, ನಾಗಲೋಕದ ರಾಜಕುಮಾರಿ ಶಿವಾನಿ ಸ್ನೇಹಿತೆ ನೀಲಿಯಾಗಿ ನಟಿಸಿದ್ದರು ರಶ್ಮಿ. ಮುಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷಣ' ಧಾರಾವಾಹಿಯಲ್ಲಿ ನಾಯಕನ ಅತ್ತಿಗೆಯಾಗಿ ನಟಿಸಿದ ಈಕೆ ಆ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದರು.
'ಸತ್ಯ' ಧಾರಾವಾಹಿಯಲ್ಲಿ ಕೀರ್ತನಾ ಆಗಿ ನಟಿಸಿದ್ದ ಅನು ಜನಾರ್ಧನ್ ಅವರು ಕಾರಣಾಂತರಗಳಿಂದ ಧಾರಾವಾಹಿಯ ಪಾತ್ರದಿಂದ ಹೊರಬಂದಾಗ ಆ ಜಾಗಕ್ಕೆ ಬಂದವರು ರಶ್ಮಿ. ತಮ್ಮ ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ಈಕೆ ಸ್ಟಾರ್ ಸುವರ್ಣ ವಾಹಿನಿಯ 'ಲಕ್ಷ್ಮಿ ಟಿಫನ್ ರೂಂ' ನಲ್ಲಿ ನಾಯಕಿಯ ಅಕ್ಕನಾಗಿ ಮೋಡಿ ಮಾಡುತ್ತಿದ್ದಾರೆ.


Click it and Unblock the Notifications











