ನೆನಪಿದೆಯೇ ಟಿ ಎನ್ ಸೀತಾರಾಮ್ ನಿರ್ದೇಶಿಸಿದ 'ಮಿಂಚು' ಧಾರಾವಾಹಿ; ಇವರನ್ನು ಗುರುತಿಸಬಲ್ಲಿರಾ?
ಒಂದೂವರೆ ದಶಕಕ್ಕೂ ಮೊದಲಿನ ವಿಚಾರವಿದು. 2006ರ ಸಮಯದಲ್ಲಿ 'ಮಿಂಚು' ಎಂಬ ಧಾರಾವಾಹಿ ಬಹಳ ಖ್ಯಾತಿ ಗಳಿಸಿತ್ತು. ಟಿ ಎನ್ ಸೀತಾರಾಮ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಈ ಧಾರಾವಾಹಿ ಬಹುದೊಡ್ಡ ತಾರಾಗಣವನ್ನೇ ಹೊಂದಿತ್ತು.
ವಿಭಿನ್ನ ಕಥಾ ಹಂದರವಿದ್ದ ಈ ಧಾರಾವಾಹಿ ಬಹಳ ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಯಿತು. ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಗಳಾಗಿ, ಹಲವು ಕಲಾವಿದರು ನಟಿಸಿದ್ದಾರೆ.

ನಟ ಜಿ. ಕೆ ಗೋವಿಂದರಾವ್
ಹಿರಿಯ ಕಲಾವಿದ ಜಿ. ಕೆ ಗೋವಿಂದರಾವ್ ಅವರು ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಮಿಂಚು' ಧಾರಾವಾಹಿಯಲ್ಲಿ ಇವರು ದಾಸ್ ಎಂಬ ಪಾತ್ರಕ್ಕೆ ಬಹಳ ಅಚ್ಚುಕಟ್ಟಾಗಿ ಜೀವ ತುಂಬಿದ್ದರು. ಇವರ ನೈಜ ನಟನೆ ಜನಮನ ಗೆದ್ದಿತ್ತು. ವೃತ್ತಿಯಲ್ಲಿ ಇಂಗ್ಲೀಷ್ ಪ್ರೊಫೆಸರ್ ಆಗಿದ್ದ ಇವರು ನಟನೆಯನ್ನು ಪ್ರವೃತ್ತಿಯಾಗಿಸಿಕೊಂಡಿದ್ದರು. 2021 ರಲ್ಲಿ 84 ವರ್ಷದ ಈ ಹಿರಿಯ ಕಲಾವಿದ ಇಹಲೋಕ ತ್ಯಜಿಸಿದರು.
ನಟಿ ಪದ್ಮ ಕುಮಟ
ನಟಿ ಪದ್ಮ ಕುಮುಟ ಅವರ ಹೆಸರು ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಎಲ್ಲಾ ಪ್ರೇಕ್ಷಕರಿಗೂ ಚೆನ್ನಾಗಿ ಪರಿಚಯವಿರುತ್ತೆ. ಡಾ. ಬಿ ವಿ ಕಾರಂತರು ನಿರ್ದೇಶಸಿದ 'ಚೋಮನ ದುಡಿ' ಸಿನಿಮಾದಲ್ಲಿ ಪ್ರಮುಖ ಪಾತ್ರ ಒಂದರಲ್ಲಿ ನಟಿಸಿ ನ್ಯಾಷನಲ್ ಅವಾರ್ಡ್ ಪಡೆದ ಕಲಾವಿದೆ ಈಕೆ. ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳಲ್ಲಿ ಬಹಳಷ್ಟು ವಿಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಮಿಂಚು' ಧಾರಾವಾಹಿಯಲ್ಲಿ ದಾಸ್ ಅವರ ಪತ್ನಿಯ ಪಾತ್ರವನ್ನು ಬಹಳ ನೈಜವಾಗಿ ನಟಿಸಿ ಜನಮನ ಗೆದ್ದಿದ್ದರು. 'ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ', 'ಜನುಮದ ಗೆಳತಿ', 'ಬಯಲು ದಾರಿ' ಮುಂತಾದ ಸಿನಿಮಾಗಳಲ್ಲಿ ನಟಿಸಿದ ಈಕೆ 'ಮಿಂಚು', 'ಪುನರ್ ವಿವಾಹ', 'ಮಂಥನ' ಮುಂತಾದ ಧಾರವಾಹಿಗಳಲ್ಲಿ ಅಭಿನಯಿಸಿದ್ದರು. 2017ರಲ್ಲಿ ಹೃದಯಘಾತದಿಂದ ದೈವಾಧೀನರಾದರು.

ನಟ ಮಂಡ್ಯ ರವಿ
ಟಿ ಎನ್ ಸೀತಾರಾಮ್ ಅವರ ಹೆಚ್ಚಿನ ಧಾರಾವಾಹಿಗಳಲ್ಲಿ ನಟ ಮಂಡ್ಯ ರವಿಯವರು ಕಾಣಿಸುತ್ತಾರೆ. ಇವರ ಸಹಜ ಹಾಗೂ ಅದ್ಭುತ ಅಭಿನಯ ಇವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿತ್ತು. 'ಮಿಂಚು' ಧಾರಾವಾಹಿಯಲ್ಲಿ ಜಗದೀಶ್ ದಾಸ್ ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ನಟ ಮಂಡ್ಯ ರವಿ. ಇವರು ಧಾರಾವಾಹಿಗಳಾದ 'ಚಿತ್ರಲೇಖ', 'ಪುಟ್ಟಗೌರಿ ಮದುವೆ ಯಶೋಧೆ', 'ನಮ್ಮನೆ ಯುವರಾಣಿ', 'ಮಗಳು ಜಾನಕಿ' ಮುಂತಾದ ಧಾರವಾಹಿಗಳಲ್ಲಿ ನಟಿಸಿದ್ದರು. 2022 ರಲ್ಲಿ ಅನಾರೋಗ್ಯದಿಂದ ವಿಧಿವಶರಾದರು.
ನಟಿ ನಂದಿನಿ ಗೌಡ
ನಟಿ ನಂದಿನಿ ಗೌಡ ಕಿರುತೆರೆ ಪ್ರೇಕ್ಷಕರ ಮನಮೆಚ್ಚಿದ ನಟಿ ಎಂದರೆ ತಪ್ಪಾಗಲ್ಲ. ಸ್ವಾವಲಂಬಿ ಹೆಣ್ಣು ಮಗಳ ಪಾತ್ರಗಳನ್ನು ಬಹಳ ಅಚ್ಚುಕಟ್ಟಾಗಿ ನಟಿಸುತ್ತಾ ಬಂದಿರುವ ನಟಿ ನಂದಿನಿ ಗೌಡ ಅವರು ಮಿಂಚು ಧಾರಾವಾಹಿಯಲ್ಲಿ ಸರಯೂ ಪಾತ್ರವನ್ನು ಮಾಡಿದ್ದಾರೆ. 'ಮಿಂಚು' ಧಾರಾವಾಹಿ ಅಷ್ಟೇ ಅಲ್ಲದೆ 'ಮುಕ್ತ', 'ಮುಕ್ತ ಮುಕ್ತ', 'ಅನಾವರಣ', 'ಮಂಥನ', 'ಚಿತ್ರಲೇಖ' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ ಈ ನಟಿಯೀಗ ಪ್ರಸ್ತುತ 'ಶ್ರೀಗೌರಿ' ಧಾರಾವಾಹಿಯಲ್ಲಿ ಬಹಳ ವಿಭಿನ್ನವಾದ ಪಾತ್ರವನ್ನು ನಿಭಾಯಿಸುತ್ತಿದ್ದಾರೆ.
ನಟಿ ಹೇಮಾ ಬೆಳ್ಳೂರ್
ನಟಿ ಹೇಮ ಬೆಳ್ಳೂರು ಮಿಂಚು ಧಾರಾವಾಹಿಯಲ್ಲಿ ಸೈಕಾಲಜಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2001ರಲ್ಲಿ ತೆರೆ ಕಂಡ ರುಸ್ತುಮ್ ಸಿನಿಮಾ ಮೂಲಕ ನಟನ ಕ್ಷೇತ್ರಕ್ಕೆ ಕಾಲಿಟ್ಟ ಈಕೆ ನಂತರ 'ಚರಣದಾಸಿ', 'ಮನ್ವಂತರ', 'ಮಳೆಬಿಲ್ಲು' ಮುಂತಾದ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ನಟಿ ಹರಿಣಿ ಚಂದ್ರ
ನಟಿ ಹರಿಣಿ 'ಮಿಂಚು' ಧಾರಾವಾಹಿಯಲ್ಲಿ ಕಾತ್ಯಾಯಿನಿ ಎಂಬ ಕುಂಟು ಹುಡುಗಿಯ ಪಾತ್ರವನ್ನು ಮಾಡಿದ್ದರು. ತಮ್ಮ ನೈಜ ಅಭಿನಯದ ಮೂಲಕ ಬಹಳಷ್ಟು ಮೆಚ್ಚುಗೆ ಪಡೆದಿದ್ದರು ಈ ನಟಿ. ಸಿನಿಮಾಗಳಲ್ಲಿ ನಟಿಸಿರುವ ಈಕೆ 'ಪತಿ ಬೇಕು.ಕಾಂ', 'ಭಜರಂಗಿ' ಮುಂತಾದ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಧಾರಾವಾಹಿಗಳಾದ 'ಪುಟ್ಟಗೌರಿ ಮದುವೆ', 'ಮಿಂಚು', 'ನಾಗಿಣಿ' ಇತ್ಯಾದಿಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ರಾಜ ರಾಣಿ ರಿಯಾಲಿಟಿ ಶೋ ನಲ್ಲಿ ತಮ್ಮ ಪತಿಯೊಂದಿಗೆ ಕಾಣಿಸಿಕೊಂಡಿದ್ದರು.


Click it and Unblock the Notifications











