'ರಾಮಾಚಾರಿ' ಧಾರಾವಾಹಿ ಹೀರೊ ತಂದೆಗೂ ರಾಷ್ಟ್ರ ಪ್ರಶಸ್ತಿಗೂ ನಂಟಿದೆ ನಿಮಗೆ ಗೊತ್ತಾ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ರಾಮಾಚಾರಿ' ಕೂಡಾ ಒಂದು. ವಿಭಿನ್ನ ಕಥಾಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ 'ರಾಮಾಚಾರಿ' ಯಶಸ್ವಿಯಾಗಿದೆ. ನಾಯಕ ರಾಮಾಚಾರಿಯಾಗಿ ನಟಿಸುತ್ತಿರುವ ನಟ ರಿತ್ವಿಕ್ ಕೃಪಾಕರ್ ಮೊದಲ ಬಾರಿಗೆ ನಾಯಕನಾಗಿ ತೆರೆಯ ಮೇಲೆ ಮೋಡಿ ಮಾಡುತ್ತಿದ್ದಾರೆ.
'ರಾಮಾಚಾರಿ' ಧಾರಾವಾಹಿಯಲ್ಲಿ ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ರಿತ್ವಿಕ್ ಕೃಪಾಕರ್ ಜನ ಮೆಚ್ಚಿದ ನಾಯಕನೂ ಹೌದು. ಹೀಗಾಗಿ ಈಗ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ನಡೆದ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ನಲ್ಲಿ 'ಜನ ಮೆಚ್ಚಿದ ನಾಯಕ' ಪ್ರಶಸ್ತಿ ಪಡೆದಿರುವ ರಿತ್ವಿಕ್ ಕೃಪಾಕರ್ ಇತ್ತೀಚೆಗಷ್ಟೇ ಜನರಿಗೆ ಪರಿಚಯವಾಗಿದ್ದಾರೆ. ಆದರೆ, ಅವರ ತಂದೆ ಪ್ರವೀಣ್ ಕೃಪಾಕರ್ ಅವರು ನ್ಯಾಷನಲ್ ಅವಾರ್ಡ್ ವಿನ್ನರ್ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.
ಹೌದು, ನಟ ರಿತ್ವಿಕ್ ಕೃಪಾಕರ್ ಪರಿಚಯ ಕನ್ನಡ ಜನರಿಗೆ ಇತ್ತೀಚೆಗಷ್ಟೇ ಆಗಿದೆ. ಆದರೆ, ಅವರ ತಂದೆ ಪ್ರವೀಣ್ ಕೃಪಾಕರ್ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬಹಳ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇವರು ಕನ್ನಡ ಸಿನಿಮಾಗಳ ನಿರ್ದೇಶಕ ಹಾಗೂ ನಿರ್ಮಾಪಕ ಕೂಡ ಹೌದು.
ಅಷ್ಟೇ ಅಲ್ಲದೆ ರಿತ್ವಿಕ್ ಕೃಪಾಕರ್ ತಂದೆ ಪ್ರವೀಣ್ ಕೃಪಾಕರ್ ನಿರ್ದೇಶಿಸಿದ 'ತಲೆದಂಡ' ಎಂಬ ಸಿನಿಮಾಗೆ 68ನೇ ಚಲನಚಿತ್ರ ಅವಾರ್ಡ್ ಕೂಡ ಬಂದಿತ್ತು. ಅತ್ಯುತ್ತಮ ಪರಿಸರ ಕಾಳಜಿಯುಳ್ಳ ಸಿನಿಮಾ ಎಂಬ ಕಾರಣಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ನೀಡಲಾಗಿತ್ತು. ಆಧುನಿಕತೆ ಹೇಗೆ ಪರಿಸರ ನಾಶಕ್ಕೆ ಕಾರಣವಾಗಿದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿತ್ತು.

ಇನ್ನು ಮಗ ರಿತ್ವಿಕ್ ಕೃಪಾಕರ್ಗೆ ನಟನೆಯನ್ನು ವೃತ್ತಿಯಾಗಿ ಆಯ್ದುಕೊಳ್ಳಲು ಅವರ ತಂದೆ ಪ್ರವೀಣ್ ಕೃಪಾಕರ್ ಅವರೇ ಸ್ಪೂರ್ತಿಯಂತೆ. ತಂದೆಯ ಪ್ರೋತ್ಸಾಹ ಬೆಂಬಲದಿಂದ ನಟನೆಗೆ ಕಾಲಿಟ್ಟಿರುವ ರಿತ್ವಿಕ್ ಕುಮಾರ್ ಕಿರುತೆರೆ ಮಾತ್ರವಲ್ಲದೇ ಸಿನಿಮಾಗೂ ಪಾದಾರ್ಪಣೆ ಮಾಡಿದ್ದಾರೆ. ಮಗ ನನಗಿಂತ ಒಳ್ಳೆಯ ತಯಾರಿಯ ಜೊತೆಗೆ ಸಿನಿಮಾಗೆ ಕಾಲಿಟ್ಟಿದ್ದಾನೆ. ಅವನಿಗೆ ಶುಭವಾಗಲಿ ಎಂದು ತಂದೆ ಪ್ರವೀಣ್ ಕೃಪಾಕರ್ ಹೇಳಿಕೊಂಡಿದ್ದರು.
ಅದೆಷ್ಟೋ ಮನೆಯಲ್ಲಿ ನಟನೆಗೆ ಕಾಲಿಡಲು ಕುಟುಂಬದವರು ಸಹಕರಿಸದೆ ಇರುವ ಸಂದರ್ಭಗಳನ್ನು ನಾವು ಹಲವಾರು ಬಾರಿ ಕೇಳಿದ್ದೇವೆ. ಆದರೆ ಇಲ್ಲಿ ತಂದೆಯೇ ಮಗನಿಗೆ ನಟಿಸಲು ಸ್ಪೂರ್ತಿಯಾಗಿರುವುದು ಬಹಳ ವಿಶೇಷವಾದ ಸಂಗತಿ.


Click it and Unblock the Notifications











