"ನನ್ನ ತಾಯಿಗೆ ತಂಗಿಗೆ ಹಿಂದಿಯಲ್ಲಿ ಕೆಟ್ಟ ಪದಗಳಿಂದ ಬೈಯುತ್ತಿದ್ರು"; 'ಭಾಗ್ಯಲಕ್ಷ್ಮಿ' ನಟ ಸುದರ್ಶನ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಭಾಗ್ಯಲಕ್ಷ್ಮಿ' ಧಾರಾವಾಹಿಯ ನಟ ಸುದರ್ಶನ್ ರಂಗಪ್ರಸಾದ್ ಎಲ್ಲರಿಗೂ ಗೊತ್ತು. ಇನ್ನು ಇವರ ನಟನೆಗೆ ಬಹಳ ದೊಡ್ಡ ಫ್ಯಾನ್ ಬೇಸನ್ನು ಪಡೆದಿದ್ದಲ್ಲದೆ ಕಿರುತೆರೆಯಲ್ಲಿ ಜನಪ್ರಿಯ ನಟನಾಗಿದ್ದಾರೆ.
ಇಂತಹ ನಟ ಅವರ ನಟನಾ ಜರ್ನಿಯ ಒಂದಷ್ಟು ವಿಚಾರಗಳನ್ನು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಹೌದು, ತಮ್ಮ ನಟನಾ ಜರ್ನಿ ಬಗ್ಗೆ ಮಾತನಾಡಿದ ನಟ ಸುದರ್ಶನ್ ರಂಗಪ್ರಸಾದ್ 'ಭಾಗ್ಯಲಕ್ಷ್ಮಿ' ಧಾರಾವಾಹಿಗೂ ಮುನ್ನ ಅವರಿಗೆ ಆದ ಅವಮಾನ ಹಾಗೂ ಬೇಸರದ ಬಗ್ಗೆ ಮಾತನಾಡಿದ್ದಾರೆ.

ನಟ ಸುದರ್ಶನ್ ರಂಗಪ್ರಸಾದ್ ಅವರು ಮೂಲತಃ ರಂಗಭೂಮಿ ಕಲಾವಿದರು. ಅದರಲ್ಲೂ ಇಂಗ್ಲಿಷ್ ಥಿಯೇಟರ್ನಲ್ಲಿ ಬಹಳಷ್ಟು ಆ್ಯಕ್ಟಿವ್ ಇದ್ದ ಇವರು, ನಟನೆಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡು ಜನರನ್ನು ತಲುಪಬೇಕೆಂಬ ಆಸೆ ಹೊತ್ತವರು. ಹೀಗಾಗಿ ಮೊದಲಿನಿಂದಲೂ ಹಲವಾರು ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುವ ಪ್ರಯತ್ನ ಮಾಡಿದ್ದರು.
ಕೆಲವು ವರ್ಷಗಳ ಹಿಂದೆ 'ಸೀತೆ' ಎಂಬ ಧಾರಾವಾಹಿ ಬಹಳ ಪಾಪ್ಯುಲರ್ ಆಗಿತ್ತು. ಆ ಧಾರಾವಾಹಿಯಲ್ಲಿ ನಟ ಸುದರ್ಶನ್ ರಂಗಪ್ರಸಾದ್ ಅವರಿಗೆ ಇಂದ್ರನ ಪಾತ್ರ ಸಿಕ್ಕಿತ್ತು. ಬಹಳ ಖುಷಿಯಿಂದಲೇ ಆ ಪಾತ್ರವನ್ನು ಒಪ್ಪಿಕೊಂಡ ನಟ ಸುದರ್ಶನ್ ರಂಗಪ್ರಸಾದ್ ಅವರು ಧಾರಾವಾಹಿ ನಿರ್ದೇಶಕರಿಂದ ಬಹಳಷ್ಟು ಬೈಗುಳಗಳನ್ನು ಕೇಳಬೇಕಾಯಿತಂತೆ.
ಹೌದು, ಇಂಗ್ಲಿಷ್ ಥಿಯೇಟರ್ನಲ್ಲಿ ಬಹಳಷ್ಟು ಆ್ಯಕ್ಟಿವ್ ಇದ್ದ ನಟ ಸುದರ್ಶನ್ ರಂಗಪ್ರಸಾದ್ ಅವರಿಗೆ ಕನ್ನಡ ಅದರಲ್ಲೂ ಪೌರಾಣಿಕ ಕನ್ನಡದ ಡೈಲಾಗ್ಗಳನ್ನು ಹೇಳಲು ಸ್ವಲ್ಪ ಕಷ್ಟವಾಗುತ್ತಿತ್ತಂತೆ. ಎಲ್ಲರಿಗೂ ತಿಳಿದಿರುವಂತೆ ಸಾಮಾನ್ಯ ಜನರು ಮಾತನಾಡುವ ಕನ್ನಡಕ್ಕೂ ಪೌರಾಣಿಕ ನಾಟಕ ಅಥವಾ ಸಿನಿಮಾಗಳಲ್ಲಿ ಮಾತನಾಡುವ ಕನ್ನಡಕ್ಕೂ ಬಹಳ ವ್ಯತ್ಯಾಸವಿದೆ. ಇದೇ ವ್ಯತ್ಯಾಸವನ್ನು ಗುರುತಿಸಿ ಅದರಂತೆ ಮಾತನಾಡಲು ಹೆಣಗುತ್ತಿದ್ದ ನಟ ಸುದರ್ಶನ್ ರಂಗಪ್ರಸಾದ್ ಅವರನ್ನು ಹಿಗ್ಗಾಮುಗ್ಗ ಬೈದಿದ್ದರಂತೆ ಸೀತೆ ಧಾರಾವಾಹಿಯ ನಿರ್ದೇಶಕರು.

ಈ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ನಟ ಸುದರ್ಶನ್ ರಂಗಪ್ರಸಾದ್ "ನನಗೆ ಸೀತೆ ಧಾರಾವಾಹಿಯಲ್ಲಿ ಇಂದ್ರನ ಪಾತ್ರ ಸಿಕ್ಕಾಗ ಬಹಳ ಸಂತೋಷವಾಗಿತ್ತು. ಆದರೆ, ಇಂಗ್ಲಿಷ್ ಥಿಯೇಟರ್ನಲ್ಲಿ ಹೆಚ್ಚು ಆಕ್ಟಿವ್ ಇದ್ದ ನನಗೆ ಪೌರಾಣಿಕ ಕನ್ನಡ ಡೈಲಾಗ್ಗಳನ್ನು ಹೇಳಲು ತುಸು ಕಷ್ಟವಾಗುತ್ತಿತ್ತು. ಈ ಕಾರಣಕ್ಕೆ ಬಹಳಷ್ಟು ಟೇಕ್ಗಳನ್ನು ತೆಗೆದುಕೊಳ್ಳುವ ಸಂದರ್ಭಗಳು ಬಂದಿದ್ದವು.
'ಸೀತೆ' ಧಾರಾವಾಹಿಯ ಜವಾಬ್ದಾರಿಯನ್ನು ಮುಂಬೈನವರು ವಹಿಸಿಕೊಂಡಿದ್ದರು. ಮುಂಬೈ ತಂಡದವರಾದ್ದರಿಂದ ಅವರಿಗೂ ಕನ್ನಡ ಅಷ್ಟಾಗಿ ಬರುತ್ತಿರಲಿಲ್ಲ. ಅದರಲ್ಲೂ ಆ ನಿರ್ದೇಶಕರು ಹಿಂದಿಯವರಾಗಿದ್ದರು. ಕನ್ನಡದವನಾದ ನನಗೆ ಹಿಂದಿ ನಿರ್ದೇಶಕರಿಂದ ಪ್ರತಿ ದಿನ ಬೈಸಿಕೊಳ್ಳುವುದು ಬಹಳ ಕಷ್ಟವಾಗಿತ್ತು. ನನ್ನ ತಾಯಿಗೆ ತಂಗಿಗೆ ಹಿಂದಿಯಲ್ಲಿ ಕೆಟ್ಟ ಅವಾಚ್ಯ ಪದಗಳಿಂದ ಬೈಯುತ್ತಿದ್ದರು. ಆಗೆಲ್ಲ ಮನಸ್ಸಿಗೆ ಬಹಳ ಬೇಸರವಾಗುತ್ತಿತ್ತು" ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ನಟನೆ ಹಾಗೂ ರಂಗಭೂಮಿಯ ಹಿನ್ನೆಲೆ ಇದ್ದ ನಟ ಸುದರ್ಶನ್ ರಂಗಪ್ರಸಾದ್ ಅವರು ಧಾರಾವಾಹಿಯಲ್ಲಿ ಮಿಂಚಬೇಕೆಂದು ಬಹಳಷ್ಟು ಕನಸು ಹೊತ್ತಿದ್ದರು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗದಾಗಲಿಲ್ಲ. ನಂತರ ಎಂಬಿಎ ಮಾಡುವುದಕ್ಕೆ ವಿದೇಶಕ್ಕೆ ತೆರಳಿದರು. ಎಂಬಿಎ ನಂತರ ಕೆಲ ವರ್ಷಗಳ ಕಾಲ ಅಲ್ಲೇ ವೃತ್ತಿ ಜೀವನವನ್ನು ಆರಂಭಿಸಿದ ನಟ ಸುದರ್ಶನ್ ಅವರು, ಈಗ ಕೆಲವು ವರ್ಷಗಳ ಹಿಂದೆ ಅಷ್ಟೆ ಭಾರತಕ್ಕೆ ಮರಳಿದ್ದಾರೆ.
ಸದ್ಯಕ್ಕೆ 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ತಾಂಡವ್ ಪಾತ್ರವನ್ನು ಮಾಡುತ್ತಾ ಬಹಳಷ್ಟು ಯಶಸ್ಸು ಗಳಿಸಿದ್ದಾರೆ. ಆ ಪಾತ್ರಕ್ಕೆ ಸರಿಯಾದ ಹಾವಭಾವ ಭಾಷೆ ನೀಡಿ ಜೀವ ತುಂಬಿದ್ದಾರೆ. ಇವರ ಅದ್ಭುತ ನಟನೆಗೆ ಜನರ ಪ್ರೀತಿ ಹಾಗೂ ಮೆಚ್ಚುಗೆಯೇ ಸಾಕ್ಷಿ.


Click it and Unblock the Notifications











