ಕೊಲ್ಕತ್ತಾ ವೈದ್ಯೆ ಅತ್ಯಾಚಾರ ಪ್ರಕರಣ; ಅತ್ಯಾಚಾರಿ ವಿರುದ್ಧ ಗುಡುಗಿದ ಬಿಗ್ ಬಾಸ್ ಸ್ಪರ್ಧಿ ಶೈನ್ ಶೆಟ್ಟಿ
ಸ್ತ್ರೀ ಸಬಲೀಕರಣದ ವಿಚಾರವಾಗಿ ಇಂದು ಭಾರತದೆಲ್ಲೆಡೆ ತೀವ್ರ ಪ್ರತಿಭಟನೆಗಳಾಗುತ್ತಿದೆ. ಕೊಲ್ಕತ್ತಾ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಅತ್ಯಾಚಾರದ ಕುರಿತು ಆಗುತ್ತಿರುವ ಈ ಪ್ರತಿಭಟನೆಗಳು ಭಾರತ್ ಬಂದ್ ಸೇರಿದಂತೆ ಹಲವು ರೂಪುಗಳನ್ನು ಪಡೆಯುತ್ತಿವೆ. ಸೋಶಿಯಲ್ ಮೀಡಿಯಾದಲ್ಲೂ ಹಲವಾರು ಮಂದಿ ತಮ್ಮ ತೀವ್ರ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಹಲವಾರು ಸೆಲೆಬ್ರಿಟಿಗಳು ಈ ಅತ್ಯಾಚಾರ ಹಾಗೂ ಅನ್ಯಾಯದ ವಿರುದ್ಧ ಸೋಶಿಯಲ್ ಮೀಡಿಯಾ ತಮ್ಮ ಧ್ವನಿ ಎತ್ತಿದ್ದಾರೆ.
ಕೊಲ್ಕತ್ತಾದ ಆರ್ಜಿ ಕರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ ಭಾರತದಾದ್ಯಂತ ಹಲವಾರು ಆಸ್ಪತ್ರೆಗಳ ವೈದ್ಯರು, ಹೆಣ್ಣು ಮಕ್ಕಳು, ಸೆಲೆಬ್ರಿಟಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೇ ವಿಷಯದ ಕುರಿತು ಕನ್ನಡದ ಖ್ಯಾತ ನಟ, ಕನ್ನಡ ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಶೈನ್ ಶೆಟ್ಟಿ ಇವರು ತಮ್ಮ ಸೋಶಿಯಲ್ ಮೀಡಿಯಾ ಪೇಜ್ನಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

"ಹೆಣ್ಣು ಮಕ್ಕಳನ್ನು ಭೂಮಿ ತಾಯಿ ಲಕ್ಷ್ಮಿ, ಸರಸ್ವತಿ, ದುರ್ಗೆ, ಎಂದು ಪೂಜಿಸುವವರು ನಾವು. ಇಂತಹ ಅಮಾನವೀಯ ಕೃತ್ಯವನ್ನು ಎಸೆಗಿದ ಆತ್ಯಾಚಾರಿಯ ವಿರುದ್ಧ ಯಾಕೆ ಇನ್ನೂ ಯಾವ ಕ್ರಮವನ್ನೂ ಕೈಗೊಂಡಿಲ್ಲ" ಎಂದು ಪ್ರಶ್ನಿಸಿದ್ದಾರೆ. "ಸ್ವಾತಂತ್ರ ದಿನಾಚರಣೆಯ ಹಿಂದಿನ ದಿನದಂದು ನಡೆದ ಈ ಘಟನೆಯ ನಂತರವೂ ನಾವು ಸ್ವಾತಂತ್ರ್ಯ ದೊರಕಿದೆಯೇ ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳುವಂತಾಗಿದೆ" ಎಂದು ಶೈನ್ ಶೆಟ್ಟಿ ಬರೆದುಕೊಂಡಿದ್ದಾರೆ.
ಮೂರು ವರ್ಷದ ಮಗುವಿನಿಂದ ಹಿಡಿದು ಎಪ್ಪತ್ತಾರು ವರ್ಷದ ಮುದುಕಿಯವರೆಗೂ ಅತ್ಯಾಚಾರ ಎಸಗಿದ್ದಾರೆ. ಆದರೆ ಇದರ ಕುರಿತು ಯಾವ ಕ್ರಮವನ್ನು ಕೈಗೊಳ್ಳದೆ ಕುಳಿತಿರುವುದು ಪ್ರಶ್ನಾರ್ಹವಾಗಿದೆ. ಇಂತಹ ಘನ ಘೋರ ಕೃತ್ಯಗಳನ್ನು ಎಸಗಿದ ಮನುಷ್ಯರನ್ನು ಇನ್ನು ಯಾಕೆ ಉಳಿಸಿದ್ದೀರಿ? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

"ಭಾರತದಲ್ಲಿನ ಕಾನೂನುಗಳನ್ನು ಶಾಸನಾತ್ಮಕ ತಿದ್ದುಪಡಿಯ ಮೂಲಕ ಮತ್ತು ಸಾಂವಿಧಾನಿಕ ಸವಾಲಿನ ಮೂಲಕ ಎರಡು ರೀತಿಯಲ್ಲಿ ಬದಲಾಯಿಸಬಹುದು. ಭಾರತ ಕಾನೂನು ತಿದ್ದುಪಡಿಯಾಗಲೇಬೇಕು. ಇನ್ನಾದರೂ ಸರಿ ಪಡಿಸಿಕೊಳ್ಳುವ ಅವಕಾಶ ನಮಗಿದೆ. ಮಹಿಳೆಯನ್ನು ಲಕ್ಷ್ಮಿ, ಸರಸ್ವತಿ, ದುರ್ಗಾ ಮಾತೆ ಎಂದು ಪೂಜಿಸುವಾಗ , ಅಂತಹ ಹೆಣ್ಣು ಮಕ್ಕಳಿಗೆ ಆಗುತ್ತಿರುವ ಅತ್ಯಾಚಾರವನ್ನು ಕೇಳಿದ ಮೇಲೆಯೂ ತಮ್ಮ ತಮ್ಮ ಮನೆಗಳಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡಿ ಪ್ರಯೋಜನವಾದರೂ ಏನು?" ಎಂದು ದುಃಖ ವ್ಯಕ್ತಪಡಿಸಿದ್ದಾರೆ ಶೈನ್ ಶೆಟ್ಟಿ
"ಇನ್ನು ಎಷ್ಟು ಇಂತಹ ಅತ್ಯಾಚಾರಗಳು ಕೊಲೆ ಘಟನೆಗಳಿಗೆ ಕಾಯುತ್ತಿದ್ದೇವೆ? ಇನ್ನಾದರೂ ಇದಕ್ಕೊಂದು ಫುಲ್ ಸ್ಟಾಪ್ ನೀಡೋಣ. ಇನ್ನು ಯಾರೇ ಇಂತಹ ಕ್ರೌರ್ಯವನ್ನು ಎಸಗುವ ಮುನ್ನ ಸಾವಿರ ಬಾರಿ ಯೋಚಿಸುವಂತೆ ಈ ಕೇಸ್ ಅನ್ನು ಹಾಕೋಣ ಮತ್ತು ಉದಾಹರಣೆಯಾಗಿ ನೀಡೋಣ. ಯಾವುದಕ್ಕಾಗಿ ನೀವಿನ್ನೂ ಕಾಯುತ್ತಾ ಕುಳಿತಿದ್ದೀರಿ? ಇನ್ನೆಷ್ಟು ಹೆಣ್ಣು ಮಕ್ಕಳು ಇದಕ್ಕಾಗಿ ಬಲಿಯಾಗಬೇಕು? ಶ್ರೀಮಂತ ಮನೆತನದ ಮಕ್ಕಳಿಗೆ, ನಿಮ್ಮ ಮನೆಯ ಮಕ್ಕಳಿಗೆ ಹೀಗಾಗುವವರೆಗೂ ಕಾಯುತ್ತ ಕುಳಿತಿದ್ದೀರಾ? ಎಂದು ಶೈನ್ ಶೆಟ್ಟಿ ವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ.


Click it and Unblock the Notifications











