ನೂರು ಸಂಚಿಕೆ ಪೂರೈಸಿದ 'ಅವನು ಮತ್ತು ಶ್ರಾವಣಿ ಧಾರಾವಾಹಿ'; ಸಂತಸ ಹಂಚಿಕೊಂಡ ಸ್ಕಂದ ಅಶೋಕ್ ಹೇಳಿದ್ದೇನು?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಅವನು ಮತ್ತು ಶ್ರಾವಣಿ' ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದೆ. ಇತ್ತೀಚೆಗಷ್ಟೇ ಈ ಧಾರಾವಾಹಿಯು ಯಶಸ್ವಿ ನೂರು ಸಂಚಿಕೆ ಪೂರೈಸಿದೆ. ಸ್ಕಂದ ಅಶೋಕ್ ಮತ್ತು ಅನುಷಾ ರಮೇಶ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಈ ಧಾರಾವಾಹಿಯು ಸ್ಟಾರ್ ಸುವರ್ಣ ವಾಹಿನಿಯ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನೇ ಉಣಬಡಿಸುತ್ತಿದೆ.
ಇದರ ಜೊತೆಗೆ ಈ ಧಾರಾವಾಹಿಯಲ್ಲಿ ಕೊಂಚ ಬದಲಾವಣೆಯೂ ಆಗಿದೆ. ನಾಯಕಿ ಶ್ರಾವಣಿ ಆಗಿ ಅಭಿನಯಿಸುತ್ತಿದ್ದ ಅನುಷಾ ರಮೇಶ್ ಸ್ವಇಚ್ಛೆಯಿಂದ ಪಾತ್ರದಿಂದ ಹೊರಬಂದಿದ್ದು ಈಗಾಗಲೇ ಈಶಿಕಾ ಶೆಟ್ಟಿಗಾರ್ ಎನ್ನುವ ಹೊಸ ನಟಿಯ ಆಗಮನವೂ ಆಗಿದೆ.

ಇನ್ನು 'ಅವನು ಮತ್ತು ಶ್ರಾವಣಿ' ಧಾರಾವಾಹಿಯು ಯಶಸ್ವಿ ನೂರು ಸಂಚಿಕೆ ಪೂರೈಸಿರುವುದಕ್ಕೆ ಸ್ಕಂದ ಅಶೋಕ್ ಸಂತಸ ವ್ಯಕ್ತಪಡಿಸಿದ್ದಾರೆ. ಧಾರಾವಾಹಿಯಲ್ಲಿ ನಾಯಕ ಅಭಿಮನ್ಯು ಆಗಿ ನಟಿಸುತ್ತಿರುವ ನಟ ಸ್ಕಂದ ಅಶೋಕ್ "ನಿಮ್ಮ ಪ್ರೀತಿಯೊಂದಿಗೆ ನಮ್ಮ ಅವಳು ಮತ್ತು ಶ್ರಾವಣಿ ತಂಡ ನೂರು ಸಂಚಿಕೆಯನ್ನು ಖುಷಿ ಖುಷಿಯಾಗಿ ಕಂಪ್ಲೀಟ್ ಮಾಡಿದ್ದೇವೆ. ಹೀಗೆ ನಿಮ್ಮ ಸಪೋರ್ಟ್ ನಮ್ಮೊಂದಿಗೆ ಇರಲಿ. ನಿಮ್ಮ ಪ್ರೀತಿ, ಪ್ರೋತ್ಸಾಹದಿಂದ ಈ ಧಾರಾವಾಹಿಯು ಐನ್ನೂರು, ಸಾವಿರ ಸಂಚಿಕೆಗಳನ್ನು ಪೂರೈಸುವಂತಾಗಲಿ" ಎಂದು ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
"ಎಲ್ಲಾ ಧಾರಾವಾಹಿಗಳಲ್ಲೂ ಕಥೆಗಳು ತುಂಬಾ ಯೂನಿಕ್ ಆಗಿರುತ್ತದೆ. ಅವನು ಮತ್ತು ಶ್ರಾವಣಿಯಲ್ಲಿ ನಾವು ಒಂದು ಶ್ವಾನವನ್ನು ಪಾತ್ರಧಾರಿಯನ್ನಾಗಿ ಆಯ್ಕೆ ಮಾಡಿದ್ದೇವೆ. ಚೀಕುವನ್ನು ಮುಖ್ಯ ಪಾತ್ರಧಾರಿಯನ್ನಾಗಿ ಮಾಡಿ ಅವನಿಂದ ಆ್ಯಕ್ಟಿಂಗ್ ಮಾಡಿಸುತ್ತಿದ್ದೇವೆ. ಡೈರೆಕ್ಟರ್ಸ್, ಟೆಕ್ನಿಶಿಯನ್ಸ್ ಹಾಗೂ ಇಡೀ ತಂಡ ಎಲ್ಲರೂ ಕಷ್ಟಪಡುತ್ತಿದ್ದಾರೆ. ಕಷ್ಟ ಆದರೂ ಇದು ಒಂದು ಖುಷಿಯ ವಿಚಾರವಾಗಿದೆ" ಎಂದು ಇನ್ಸ್ಟಾಗ್ರಾಂನಲ್ಲಿ ಸ್ಕಂದ ಅಶೋಕ್ ಹಂಚಿಕೊಂಡಿದ್ದಾರೆ .
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ಹಿಂದೆ ಪ್ರಸಾರವಾಗುತ್ತಿದ್ದ 'ಸರಸು' ಧಾರಾವಾಹಿಯಲ್ಲಿ ನಾಯಕ ಅರವಿಂದ ಆಗಿ ಸ್ಕಂದ ಅಶೋಕ್ ಅಭಿನಯಿಸಿದ್ದರು. ಮುಂದೆ ಕಾರಣಾಂತರಗಳಿಂದ ಆ ಧಾರಾವಾಹಿ ಮುಕ್ತಾಯವಾದ ಬಳಿಕ ಕಿರುತೆರೆಯಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ಸ್ಕಂದ ಮರಳಿ ಬಂದಿದ್ದು ಅಭಿಮನ್ಯು ಆಗಿ. ಅಂದ ಹಾಗೇ ಸ್ಕಂದ ಅವರ ಕಿರುತೆರೆ ಪಯಣ ಶುರುವಾಗಿದ್ದು 'ರಾಧಾ ರಮಣ' ಧಾರಾವಾಹಿಯ ಮೂಲಕ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ'ದಲ್ಲಿ ನಾಯಕ ರಮಣ್ ಆಗಿ ನಟಿಸಿದ್ದರು ಸ್ಕಂದ. ನಂತರ ಕಿರುತೆರೆಯಿಂದ ಕೊಂಚ ಗ್ಯಾಪ್ ಪಡೆದುಕೊಂಡಿದ್ದ ಸ್ಕಂದ ಸ್ಟಾರ್ ಸುವರ್ಣ ವಾಹಿನಿಯ 'ರಾಧೆ ಶ್ಯಾಮ್'ನಲ್ಲಿ ಅತಿಥಿ ಪಾತ್ರದ ಮೂಲಕ ಗಮನ ಸೆಳೆದಿದ್ದರು.

ಅಸಲಿಗೆ ಸ್ಕಂದ ಅಶೋಕ್ ಅವರ ನಟನಾ ಪಯಣ ಶುರುವಾಗಿದ್ದು ಬೆಳ್ಳಿತೆರೆಯ ಮೂಲಕ. ಮಲಯಾಳಂನ 'ನೋಟ್ ಬುಕ್' ಸಿನಿಮಾದ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿರುವ ಸ್ಕಂದ ತಮ್ಮ ಮೊದಲ ಸಿನಿಮಾಕ್ಕೆ ಏಷಿಯನೆಟ್ ಫಿಲಂ ನೀಡುವ ಹೊಸ ಮುಖ ಅವಾರ್ಡ್ ಪಡೆದುಕೊಂಡಿದ್ದರು. ನಂತರ ಮಲಯಾಳಂನ 'ಪಾಸಿಟಿವ್', 'ಎಲೆಕ್ಟ್ರಾ', ತೆಲುಗಿನ 'ಮಲ್ಲಿ ಮಲ್ಲಿ', ತಮಿಳಿನ 'ಅಂಗುಸಂ', 'ಮುಪ್ಪರಿಮಾನಂ' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.
'ಚಾರುಲತಾ' ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟ ಸ್ಕಂದ ಮುಂದೆ 'ಯೂ ಟರ್ನ್', 'ಕಾನೂರಾಯನ', 'ಜಿಗ್ರಿ ದೋಸ್ತ್', 'ದೇವಯಾನಿ', 'ಭೈರಾದೇವಿ', 'ರಣಾಂಗಣ', 'ಫ್ಲಾಟ್ ನಂ 9', 'ಬರ್ಬರಿಕಾ' ಸಿನಿಮಾಗಳಲ್ಲಿ ನಟಿಸಿದ ಹ್ಯಾಂಡ್ ಸಮ್ ಹುಡುಗ.


Click it and Unblock the Notifications











