'ಪಾರು' ಧಾರಾವಾಹಿಯ ಬಳಿಕ ಅ ನಟ ನಟಿಯರು ಈಗೇನು ಮಾಡುತ್ತಿದ್ದಾರೆ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ 'ಪಾರು' ಧಾರಾವಾಹಿಯೂ ಒಂದು. ಐಶಾರಾಮಿ ಸೆಟ್ ಹಾಗೂ ವಿಭಿನ್ನ ತಾರಾಗಣದ ಜೊತೆಗೆ ವಿನೂತನ ಕಥೆಯ ಮೂಲಕ ಜನರನ್ನು ಸೆಳೆದಿತ್ತು. ಪಾರು ಮುಗ್ಧ ಮನಸ್ಸಿನ ಹುಡುಗಿ, ಆಕೆಯ ಕಂಗಳಿಗೆ ಸೋತ ಆದಿತ್ಯ ಅವಳ ಜೀವನಕ್ಕೆ ಬಂದಮೇಲೆ ಅವರಿಬ್ಬರ ಜೀವನದ ದಿಕ್ಕೇ ಬದಲಾಗುವ ಕಥೆಯಿದು.
ಕಿರುತೆರೆಯಲ್ಲಿ ನೂರಾರು ವಾರಗಳು ಪ್ರಸಾರ ಕಂಡಿದ್ದ ಈ ಧಾರಾವಾಹಿ ವೀಕ್ಷಕರ ಮನ ಸೆಳೆದಿತ್ತು. ಮೋಕ್ಷಿತಾ ಪೈ, ಆದಿತ್ಯ, ಸಿದ್ದು ಮೂಲಿಮನಿ ಸೇರಿದಂತೆ ಹಲವು ಮಂದಿ ಇದೇ ಧಾರಾವಾಹಿಯಿಂದಲೇ ಫೇಮಸ್ ಆಗಿದ್ದರು. ಈಗ ಆ ಧಾರಾವಾಹಿ ಮುಗಿದ ಮೇಲೆ ಆ ಕಾಲವಿದರೆಲ್ಲ ಏನು ಮಾಡುತ್ತಿದ್ದಾರೆ?

ಮೋಕ್ಷಿತಾ ಪೈ
'ಪಾರು' ಧಾರಾವಾಹಿಯಲ್ಲಿ ಮುಖ್ಯ ಪಾತ್ರಧಾರಿ ಪಾರು ಪಾತ್ರದಲ್ಲಿ ಕಾಣಿಸಿಕೊಂಡಿದ್ದು ನಟಿ ಮೋಕ್ಷಿತಾ ಪೈ. ತಮ್ಮ ಅಚ್ಚುಕಟ್ಟಾದ ಅಭಿನಯದಿಂದ ಕಿರುತೆರೆಯ ಜನಮನ ಗೆದ್ದಿದ್ದಾರೆ. 'ಪಾರು' ಧಾರಾವಾಹಿ ನಂತರ ಯಾವುದೇ ಸೀರಿಯಲ್ ಅಥವಾ ಸಿನಿಮಾದಲ್ಲಿ ಕಾಣಿಸಿಕೊಳ್ಳದ ನಟಿ ಮೋಕ್ಷಿತಾ ಪೈ ಸದ್ಯಕ್ಕೆ ಬಿಗ್ಗ್ ಬಾಸ್ ಸೀಸನ್ 11 ರಲ್ಲಿ ಬೇರೆ ಸ್ಪರ್ಧಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದ್ದಾರೆ. ತಮ್ಮ ನೇರ ನಡೆ ನುಡಿಯಿಂದ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ.
ಆದಿತ್ಯ
ಆದಿತ್ಯ ಎಂಬ ನಾಯಕನ ಪಾತ್ರದಲ್ಲಿ ನಟಿಸಿದವರೇ ನಟ ಶರತ್ ಪದ್ಮನಾಭ. ಮೂಲತಃ ಚಿಕ್ಕಮಗಳೂರಿನವರಾದ ಇವರು 'ಪಾರು' ಧಾರಾವಾಹಿ ಮೂಲಕ ಬಹಳಷ್ಟು ಪಾಪ್ಯುಲರಿಟಿ ಗಳಿಸಿದರು. ಅದಾದ ಮೇಲೆ ಬೇರೆ ಯಾವುದೇ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳದ ಇವರು ಸದ್ಯ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರಂತೆ. ವರ್ಧನ ಎಂ ಎಚ್ ಅವರ ನಿರ್ದೇಶನದ 'ಅನಿಮ' ಎಂಬ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಡಲಿದ್ದಾರೆ ನಟ ಶರತ್ ಪದ್ಮನಾಭ.

ಸಿದ್ದು ಮೂಲಿಮನೆ
ಆದಿತ್ಯನ ತಮ್ಮ ಪ್ರೀತು ಎಂಬ ಪಾತ್ರದಲ್ಲಿ ನಟಿಸಿದ ನಟ ಸಿದ್ದು ಮೂಲಿಮನೆ ತಮ್ಮ ನಟನೆ ಹಾಗು ಪಾತ್ರದ ಮೂಲಕ ಗುರುತಿಸಿಕೊಂಡಿದ್ದಾರೆ. ತಮ್ಮ ತಮಾಷೆಯ ಸ್ವಭಾವದಿಂದಲೇ ಬಹುದೊಡ್ಡ ಖ್ಯಾತಿ ಗಳಿಸಿದರು. ನಾಯಕ ನಟನಾಗಿ ಕಾಣಿಸಿಕೊಳ್ಳದಿದ್ದರೂ ಪ್ರೀತು ಪಾತ್ರ ಇವರಿಗೆ ಬಹಳ ದೊಡ್ಡ ಫ್ಯಾನ್ ಫಾಲೋಯಿಂಗ್ ತಂದು ಕೊಟ್ಟಿತು. ಸಿನಿಮಾಗಳಾದ ರಂಗಿತರಂಗ, ವಿಕ್ರಾಂತ್ ರೋಣ, ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಮೂಲಕ ಬೆಳ್ಳಿತೆರೆ ಪ್ರೇಕ್ಷಕರಿಗೂ ಚೆನ್ನಾಗಿ ಪರಿಚಯವಿರುವ ಈ ನಟ ಪಾರು ಧಾರಾವಾಹಿ ನಂತರವೂ ಸಿನಿಮಾಗಳಲ್ಲೇ ಬ್ಯುಸಿ ಆಗಿದ್ದಾರೆ. ಇತ್ತೀಚಿಗಷ್ಟೇ ಇವರ ಧಮಾಕ ಎಂಬ ಸಿನಿಮಾ ಕೂಡ ತೆರೆ ಮೇಲೆ ಬಹಳಷ್ಟು ಸದ್ದು ಮಾಡಿತು. ಈ ಸಿನಿಮಾದಲ್ಲಿ ಸಿದ್ದು ಮೂಲಿಮನೆ ಅವರ ಪತ್ನಿ ಪ್ರಿಯಾ ಆಚಾರ್ ಕೂಡ ನಟಿಸಿದ್ದಾರೆ.
ಪವಿತ್ರ ಬಿ ನಾಯ್ಕ್
ಪ್ರೀತು ಪತ್ನಿ ಜನನಿಯ ಪಾತ್ರದಲ್ಲಿ ನಟಿಸಿದವರು ನಟಿ ಪವಿತ್ರ ಬಿ ನಾಯ್ಕ್. ಈಕೆ ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ ನಲ್ಲಿ ಬಹಳಷ್ಟು ಆಕ್ಟಿವ್ ಇದ್ದು 514ಸಾವಿರಕ್ಕೂ ಹೆಚ್ಚಿನ ಫಾಲ್ಲೋವರ್ಸ್ ಹೊಂದಿದ್ದಾರೆ. ಪಾರು ಧಾರಾವಾಹಿಯ ಜನನಿ ಆಗಿ ವೀಕ್ಷಕರ ಮನ ಸೆಳೆದಿರುವ ಈಕೆ ತೆಲುಗಿನ "ನುವ್ವೆ ನೇನು ಪ್ರೇಮ" ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ.
ವಿನಯಾ ಪ್ರಸಾದ್
ಈ ಪ್ರಮುಖ ಪಾತ್ರಗಳಷ್ಟೇ ಅಲ್ಲದೆ ಪಾರು ಧಾರಾವಾಹಿಯಲ್ಲಿ ಕನ್ನಡದ ಹಿರಿಯ ಕಲಾವಿದೆ ನಟಿ ವಿನಯಾ ಪ್ರಸಾದ್ ಅಖಿಲಾಡೇಶ್ವರಿ ಪಾತ್ರ ಮೂಲಕ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದರು. ಇದರ ಜೊತೆಗೆ ನಟ, ನಿರ್ದೇಶಕ ಎಸ್ ನಾರಾಯಣ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಮುದ್ದಮಂದಾರಂ" ಎಂಬ ಧಾರಾವಾಹಿ ರಿಮೇಕ್ ಪಾರು ಧಾರಾವಾಹಿಯಾಗಿದ್ದು, 2024 ಮಾರ್ಚ್ ತಿಂಗಳಲ್ಲಿ ಮುಕ್ತಾಯಗೊಂಡಿತು. ಬರೋಬ್ಬರಿ 5ವರ್ಷಕ್ಕೂ ಹೆಚ್ಚಿನ ಕಾಲ ಕಿರುತೆರೆ ಜನರನ್ನು ರಂಜಿಸಿದ ಈ ಧಾರಾವಾಹಿ ಕನ್ನಡ ಕಿರುತೆರೆ ಪ್ರೇಕ್ಷಕರ ಫೇವರಿಟ್ ಧಾರಾವಾಹಿಗಳಲ್ಲೊಂದು.


Click it and Unblock the Notifications











