BBK 11: ಸುದೀಪ್ ವೀಕೆಂಡ್ ಪಂಚಾಯ್ತಿಗೆ ಮೊದಲು ಗೈರಾಗಿದ್ದು ಯಾವಾಗ?
ಸ್ಯಾಂಡಲ್ವುಡ್ ಬಿಗ್ಬಾಸ್ ಯಾರು ಅಂದ್ರೆ ಸುದೀಪ್ ಎನ್ನುವ ಉತ್ತರ ಬರುತ್ತದೆ. ಅಷ್ಟರಮಟ್ಟಿಗೆ ಸುದೀಪ್ ಅಂದ್ರೆ ಬಿಗ್ಬಾಸ್, ಬಿಗ್ಬಾಸ್ ಅಂದ್ರೆ ಸುದೀಪ್ ಎನ್ನುವಂತಾಗಿದೆ. ಸತತ 11 ವರ್ಷಗಳಿಂದ ಕಿಚ್ಚ ಬಿಗ್ಬಾಸ್ ಶೋ ನಿರೂಪಣೆ ಮಾಡುತ್ತಾ ಬರ್ತಿದ್ದಾರೆ. ಇದೇ ಕೊನೆ ಸೀಸನ್ ಮುಂದೆ ನಾನು ಶೋ ಹೋಸ್ಟ್ ಮಾಡಲ್ಲ ಎಂದು ಸುದೀಪ್ ಘೋಷಣೆ ಮಾಡಿದ್ದಾರೆ.
ಹಿಂದಿಯಲ್ಲಿ ಶುರುವಾಗಿದ್ದ ಬಿಗ್ಬಾಸ್ ಶೋ ಬಳಿಕ ಕನ್ನಡಕ್ಕೆ ಕಾಲಿಟ್ಟಿತ್ತು. 2013ರಲ್ಲಿ ಬಿಗ್ಬಾಸ್ ಕನ್ನಡ ಸೀಸನ್-1 ಶುರುವಾಗಿತ್ತು. ಬಳಿಕ ಪ್ರತಿ ವರ್ಷ ಶೋ ನಡೆಯುತ್ತಾ ಬಂದಿದೆ. ಎಲ್ಲಾ ಶೋಗಳ ಓಪನಿಂಗ್, ಗ್ರಾಂಡ್ ಫಿನಾಲೆ ಹಾಗೂ ವೀಕೆಂಡ್ ಎಪಿಸೋಡ್ಗಳನ್ನು ಸುದೀಪ್ ನಿರೂಪಣೆ ಮಾಡಿದ್ದಾರೆ. ತಮ್ಮ ಮಾತಿನ ಮೂಲಕ ಸ್ಪರ್ಧಿಗಳನ್ನು ಎಚ್ಚರಿಸಿದ್ದಾರೆ, ಕೌಂಟರ್ ಕೊಟ್ಟಿದ್ದಾರೆ, ತಿಳಿ ಹೇಳಿದ್ದಾರೆ.

ಕನ್ನಡದಲ್ಲಿ ಸುದೀಪ್ ಬಿಟ್ಟರೆ ಮತ್ಯಾರೂ ಕೂಡ ಇಷ್ಟು ಚೆನ್ನಾಗಿ ಬಿಗ್ಬಾಸ್ ಶೋ ನಿರೂಪಣೆ ಮಾಡಲು ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ಗಮನ ಸೆಳೆದಿದ್ದಾರೆ. ಅದೇ ಕಾರಣಕ್ಕೆ ಸುದೀಪ್ ಕೇಳಿದಷ್ಟು ಸಂಭಾವನೆ ಕೊಟ್ಟು ಆಯೋಜಕರು ಪ್ರತಿವರ್ಷ ಅವರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ತಮ್ಮ ಜವಾಬ್ದಾರಿಯನ್ನು ತಪ್ಪದೇ ಸುದೀಪ್ ಪಾಲಿಸುತ್ತಿದ್ದಾರೆ. ತಮ್ಮ ಬ್ಯುಸಿ ಸಿನಿಮಾ ಶೆಡ್ಯೂಲ್ ನಡುವೆಯೂ ಶನಿವಾರ, ಭಾನುವಾರ ವೇದಿಕೆ ಏರಿ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.
ಕಳೆದ ವರ್ಷ 'ಮ್ಯಾಕ್ಸ್' ಸಿನಿಮಾ ಚಿತ್ರೀಕರಣದ ನಡುವೆಯೂ ಒಂದು ಎಪಿಸೋಡ್ ಬಿಡದೇ ಸುದೀಪ್ ಎಲ್ಲಾ ವೀಕೆಂಡ್ಗಳಲ್ಲಿ ಬಿಗ್ಬಾಸ್ ಪಂಚಾಯ್ತಿ ನಡೆಸಿದ್ದರು. ಅದಕ್ಕಾಗಿ ಬೆಂಗಳೂರು, ಚೆನ್ನೈ ಫ್ಲೈಟ್ ಏರಿ ಸುತ್ತಾಡುತ್ತಿದ್ದರು. ಕಾರಣ ಚೆನ್ನೈನಲ್ಲಿ ಸೆಟ್ ಹಾಕಿ 'ಮ್ಯಾಕ್ಸ್' ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ. ಕಳೆದ ವೀಕೆಂಡ್ ಸುದೀಪ್ ಶೋ ನಡೆಸಿಕೊಡಲಿಲ್ಲ. ತಾಯಿಯ ಅಗಲಿಕೆ ನೋವಿನಲ್ಲಿರುವ ಕಿಚ್ಚ ಚಿತ್ರೀಕರಣಕ್ಕೆ ಬಂದಿಲ್ಲ. ಸುದೀಪ್ ಅನುಪಸ್ಥಿತಿಯಲ್ಲಿ ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಟ ಸೃಜನ್ ಮನೆ ಒಳಗೆ ಹೋಗಿದ್ದರು.

ಹಾಗ್ ನೋಡಿದರೆ ಸುದೀಪ್ ವೀಕೆಂಡ್ ಪಂಚಾಯ್ತಿಗೆ ತಪ್ಪಿಸಿಕೊಂಡಿದ್ದು ಬಹಳ ಕಮ್ಮಿ. ಒಂದೆರಡು ಬಾರಿ ಮಾತ್ರ ಅವರು ಗೈರಾಗಿದ್ದರು. ಅದಕ್ಕೆ ಗಂಭೀರ ಕಾರಣಗಳಿತ್ತು. ಎರಡು ವರ್ಷಗಳ ಹಿಂದೆ ಅನಾರೋಗ್ಯದಿಂದ ಸುದೀಪ್ ಬಳಲುತ್ತಿದ್ದರು. ವೈದ್ಯರು ವಿಶ್ರಾಂತಿ ಪಡೆಯುವಂತೆ ಹೇಳಿದ್ದರು. ಆಗ ಒಮ್ಮೆ ಸುದೀಪ್ ಅನುಪಸ್ಥಿತಿಯಲ್ಲಿ ಶೋ ಮುಂದುವರೆದಿತ್ತು. ಇನ್ನುಳಿದಂತೆ ಕಳೆದ 10 ವರ್ಷಗಳಲ್ಲಿ ಎಂದೂ ಕೂಡ ವೀಕೆಂಡ್ ಬಿಗ್ಬಾಸ್ ವೇದಿಕೆಗೆ ಬರುವುದನ್ನು ತಪ್ಪಿಸಿರಲಿಲ್ಲ.
ಕಳೆದ ವೀಕೆಂಡ್ ತಾಯಿ ಅಗಲಿಕೆ ನೋವಿನಿಂದ ಸುದೀಪ್ ಬಿಗ್ಬಾಸ್ ವೇದಿಕೆ ಏರಲಿಲ್ಲ. ಬಿಗ್ಬಾಸ್ ಸೀಸನ್ 6ರಲ್ಲಿ ಒಂದು ವೀಕೆಂಡ್ ಕೂಡ ಇಂಥದ್ದೇ ಸನ್ನಿವೇಶ ಎದುರಾಗಿತ್ತು. ಅಂದು ರೆಬಲ್ ಸ್ಟಾರ್ ಅಂಬರೀಶ್ ಅಗಲಿಕೆಯ ನೋವಿನಿಂದ ಹೊರಬಾರದ ಸುದೀಪ್, ಬಿಗ್ಬಾಸ್ ಚಿತ್ರೀಕರಣದಲ್ಲಿ ಭಾಗಿ ಆಗಿರಲಿಲ್ಲ.
ಅವತ್ತು ಶನಿವಾರ. ಸುದೀಪ್ ಬಿಗ್ಬಾಸ್ ಮನೆಯಲ್ಲಿ ಇದ್ದರು. ಅದೇ ಸಮಯದಲ್ಲಿ ಅಂಬಿ ಇನ್ನಿಲ್ಲ ಎನ್ನುವ ಸುದ್ದಿ ಬಂದಿತ್ತು. ಅದನ್ನು ಕೇಳಿ ಬಹಳ ಆಘಾತವಾಗಿತ್ತು. ಕ್ಯಾಮರಾ ಎದುರಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ. ಅವತ್ತು ಶೂಟಿಂಗ್ ನಿಲ್ಲಿಸಿಬಿಟ್ಟೆ ಎಂದು ಸುದೀಪ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. 10 ದಿನಗಳ ಹಿಂದೆ ಕೂಡ ಸುದೀಪ್ ಅವರ ತಾಯಿ ಸರೋಜಾ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆ ನೋವಿನ ನಡುವೆಯೂ ಶೋ ನಡೆಸಿಕೊಟ್ಟಿದ್ದರು. ಕಳೆದ ಶನಿವಾರ ಅವರು ಬರಲಿಲ್ಲ. ಸ್ಪರ್ಧಿಗಳು ಮಾತ್ರವಲ್ಲ ವೀಕ್ಷಕರು ಕೂಡ ವೇದಿಕೆಯಲ್ಲಿ ಸುದೀಪ್ ಅವರನ್ನು ಬಹಳ ಮಿಸ್ ಮಾಡಿಕೊಂಡಿದ್ದಾರೆ.


Click it and Unblock the Notifications











