ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದ ಬೀದಿ ನಾಯಿ: ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ ಶೈನ್ ಶೆಟ್ಟಿ
ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿ ನಾಯಿಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿತ್ತು. ರಸ್ತೆ ಮಧ್ಯೆನೇ ನೋವಿನಿಂದ ನರಳಾಡುತ್ತಿತ್ತು. ಇದನ್ನು ಗಮನಿಸಿದ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಬೀದಿ ನಾಯಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
'ಕಾಂತಾರ' ನಟ ಹಾಗೂ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಕುಟುಂಬ ಸಮೇತ ಧರ್ಮಸ್ಥಳಕ್ಕೆ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ಅಪಘಾತದಿಂದ ಬೀದಿ ನಾಯಿ ಗಾಯಗೊಂಡಿತ್ತು. ಬೀದಿ ನಾಯಿಯ ಕಾಲು, ಕುತ್ತಿಗೆ ಹಾಗೂ ದೇಹಕ್ಕೆ ತೀವ್ರ ಗಾಯವಾಗಿ ರಕ್ತಸ್ರಾವದಿಂದ ರಸ್ತೆ ಬಿದ್ದು ನರಳಾಡುತ್ತಿತ್ತು.
ಇದೇ ಮಾರ್ಗದಲ್ಲಿ ಧರ್ಮಸ್ಥಳ ಹೋಗುತ್ತಿದ್ದ ನಟ ಶೈನ್ ಶೆಟ್ಟಿ ಬೀದಿನಾಯಿಯನ್ನು ಬಣಕಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಆ ನಾಯಿಗೆ ಚಿಕಿತ್ಸೆ ಕೊಡಿಸಿ ಎಲ್ಲಿ ಅಪಘಾತಕ್ಕೀಡಾಗಿತ್ತೋ ಅಲ್ಲಿಗೆ ಬಿಟ್ಟಿದ್ದಾರೆ. ಸ್ಥಳಿಯರ ಬಳಿ ನಂಬರ್ ತೆಗೆದುಕೊಂಡು ಬಣಕಲ್ ಪಶು ಆಸ್ಪತ್ರೆಯ ವೈದ್ಯ ಅಜೀಜ್ ಅಹಮದ್ಗೆ ಕರೆ ಮಾಡಿದ್ದಾರೆ. ಕೂಡಲೇ ಕೆಲಸ ನಿಮಿತ್ತ ಹಳ್ಳಿಗೆ ಹೋಗಿದ್ದ ಅಜೀಜ್ ಅಹಮದ್ ಬಂದು ನಾಯಿಗೆ ಚಿಕಿತ್ಸೆ ನೀಡಿದ್ದಾರೆ.

ನಾಯಿಗೆ ಚಿಕಿತ್ಸೆ ಕೊಡಿಸಿ, ಎಲ್ಲಿ ಅಪಘಾತವಾಗಿತ್ತೋ ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಬಳಿಕ ಎಲ್ಲಾ ವಾಹನ ಸವಾರರಿಗೆ ಮನವಿ ಮಾಡಿದ್ದಾರೆ.
"ವಾಹನಗಳನ್ನು ಓಡಿಸುವಾಗ ನೋಡಿಕೊಂಡು ಓಡಿಸಿ. ಅಚಾನಕ್ಕಾಗಿ ಅಡ್ಡ ಬಂದರೆ ಏನೂ ಮಾಡಲು ಆಗಲ್ಲ. ಆದರೆ, ನೋಡಿ ವಾಹನ ಚಾಲನೆ ಮಾಡಿ. ಒಂದು ವೇಳೆ ಅಪಘಾತವಾಯಿತು ಎಂದರೆ ಕೂಡಲೇ ಕೆಳಗಡೆ ಇಳಿದು ಪ್ರಾಣಿಯ ಪರಿಸ್ಥಿತಿ ನೋಡಿ. ಚಿಕಿತ್ಸೆ ಕೊಡಿಸಿದರೆ ಬದುಕುತ್ತೆ ಎಂದರೆ ಚಿಕಿತ್ಸೆ ಕೊಡಿಸಿ. ಒಂದು ಜೀವ ಉಳಿಯುತ್ತದೆ" ಎಂದು ವಾಹನ ಸವಾರರಲ್ಲಿ ಮನವಿ ಮಾಡಿದ್ದಾರೆ.


Click it and Unblock the Notifications











