'ಆಕಾಶ ದೀಪ' ಧಾರಾವಾಹಿ ನಟಿ ದಿವ್ಯಾ ಮೇಲೆ ಹಲ್ಲೆ: ಪತಿ ವಿರುದ್ಧ ದೂರು
ಕನ್ನಡದ 'ಆಕಾಶ ದೀಪ' ಸೇರಿದಂತೆ ಕೆಲವು ಧಾರಾವಾಹಿಗಳಲ್ಲಿ ನಟಿಸಿರುವವ ನಟಿ ದಿವ್ಯಾ ಶ್ರೀಧರ್ ಹಲ್ಲೆಗೆ ಒಳಗಾಗಿದ್ದು ಪ್ರಸ್ತುತ ಆಸ್ಪತ್ರೆಯಲ್ಲಿದ್ದಾರೆ.
ನಟಿ ದಿವ್ಯಾ ಶ್ರೀಧರ್ ಮೇಲೆ ಪತಿ ಅಮ್ಜದ್ ಖಾನ್ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ದಿವ್ಯಾ ತಮ್ಮ ವಕೀಲರ ಮೂಲಕ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ದಿವ್ಯಾ ಶ್ರೀಧರ್ ಹಾಗೂ ಅಮ್ಜದ್ ಖಾನ್ 2015 ರಲ್ಲಿ ಒಟ್ಟಿಗೆ ತಮಿಳಿನ ಧಾರಾವಾಹಿಯಲ್ಲಿ ನಟಿಸಿದ್ದರು. 2017 ರಿಂದಲೂ ಈ ಜೋಡಿ ಪ್ರೀತಿಯಲ್ಲಿತ್ತು. ಮೊದಲ ಲಾಕ್ಡೌನ್ ಬಳಿಕ ಈ ಜೋಡಿ ಪರಸ್ಪರ ವಿವಾಹವಾಗಿ ಚೆನ್ನೈನಲ್ಲಿ ನೆಲೆಸಿತ್ತು. ಆದರೆ ಮದುವೆಯಾದ ಕೆಲವೇ ತಿಂಗಳ ಬಳಿಕ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿದೆ.
ದಿವ್ಯಾ ಶ್ರೀಧರ್, ಗರ್ಭಿಣಿ ಆಗಿದ್ದರು ಆಕೆಯ ಮೇಲೆ ಅಮ್ಜದ್ ಹಲ್ಲೆ ಮಾಡಿದ್ದಾನೆ, ಹೊಟ್ಟೆಗೆ ಒದ್ದಿದ್ದಾನೆ ಎಂದು ನಟಿಯ ವಕೀಲರು ಹೇಳಿದ್ದಾರೆ. ''ನೀನು ಕನ್ನಡದ ನಟಿ, ಇದು ಚೆನ್ನೈ, ಇಲ್ಲಿ ನನಗೆ ಬೇಕಾದ ಹೆಚ್ಚು ಮಂದಿ ಜನರಿದ್ದಾರೆ, ನಿನಗೆ ಗತಿ ಕಾಣಿಸುತ್ತೇನೆ ಎಂದು ಆವಾಜ್ ಸಹ ಹಾಕಿದ್ದಾರಂತೆ ಅಮ್ಜದ್, ಹೀಗೆಂದು ದಿವ್ಯಾ ಪರ ವಕೀಲರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಹಲ್ಲೆಗೆ ಒಳಗಾಗಿರುವ ದಿವ್ಯಾ ಶ್ರೀಧರ್ಗೆ ಗಾಯಗಳಾಗಿವೆ, ಗರ್ಭಿಣಿ ಸಹ ಆಗಿರುವ ಕಾರಣ ಪ್ರಸ್ತುತ ಚೆನ್ನೈನ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮ್ಜದ್ ಖಾನ್ ವಿರುದ್ಧ ಚೆನ್ನೈನಲ್ಲಿ ದೂರು ದಾಖಲಾಗಿದ್ದು, ಆತನ ಬಂಧನ ಆಗುವ ಸಾಧ್ಯತೆ ಇದೆ.


Click it and Unblock the Notifications











