'ಜೀ ಕನ್ನಡ' ವಾಹಿನಿಯಲ್ಲಿ 'ನಾಗಿಣಿ' ವಿವಾಹ ಮಹೋತ್ಸವ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ನಾಗಿಣಿ' ಕೂಡ ಒಂದು. ಆರಂಭದಿಂದಲೂ ಹೆಚ್ಚು ಟಿ.ಆರ್.ಪಿ ಗಿಟ್ಟಿಸುತ್ತಿರುವ 'ನಾಗಿಣಿ' ಧಾರಾವಾಹಿಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಮನಸ್ಸು ಮಾಡಿರುವ ಜೀ ಕನ್ನಡ ವಾಹಿನಿ, 'ನಾಗಿಣಿ' ಕಲ್ಯಾಣೋತ್ಸವದ ವಿಶೇಷ ಸಂಚಿಕೆಗಳನ್ನು ಇದೇ ಸೋಮವಾರದಿಂದ 3 ವಾರಗಳ ಕಾಲ ಪ್ರಸಾರ ಮಾಡಲಿದೆ.
ಈವರೆಗೆ ಮನುಷ್ಯದ ದುರಾಸೆ, ಅಹಂಕಾರ, ನಿರ್ಲಕ್ಷ್ಯ ಹಾಗೂ ಇದೆಲ್ಲದರಿಂದ ಅನುಭವಿಸುವ ನೋವನ್ನು ಹೇಳುವ ಪ್ರಯತ್ನ ಈ ಧಾರಾವಾಹಿ ಮೂಲಕ ಮಾಡಲಾಗಿದ್ದು, ಮುಂದಿನ ಸಂಚಿಕೆಗಳಲ್ಲಿ ಹಾವೊಂದು ಕುಟುಂಬದ ಸೊಸೆಯಾಗಿ ಆ ಮನೆಗೆ ಹೋದಾಗ ನಡೆಯುವಂಥ ಘಟನೆಗಳನ್ನು ಕೌತುಕವಾಗಿ, ಮನರಂಜನಾತ್ಮಕವಾಗಿ 'ಜೀ ಕನ್ನಡ' ತಮ್ಮ ವೀಕ್ಷಕರಿಗೆ ತೋರಿಸಲಿದೆ.

ವೈಭವದ ಕಲ್ಯಾಣೋತ್ಸವ
'ನಾಗಿಣಿ' ಧಾರಾವಾಹಿಯ ಬಹುತೇಕ ಕಲಾವಿದರು ಈ ಸಂಚಿಕೆಗಳಲ್ಲಿ ಭಾಗವಹಿಸಿದ್ದು, 'ನಾಗಿಣಿ' ಮದುವೆಯ ಸಂಚಿಕೆಗಳು ವೈಭವಯುತಯಾಗಿ ಮೂಡಿಬರುವಲ್ಲಿ ಸಹಕರಿಸಿದ್ದಾರೆ.

ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ
ಹಿಂದು ಸಂಪ್ರದಾಯದಲ್ಲಿ ನಡೆಯುವ ಮದುವೆಯ ಎಲ್ಲಾ ವಿಧಿ-ವಿಧಾನಗಳನ್ನು ಈ ಮದುವೆಯ ಸಂಚಿಕೆಗಳಲ್ಲಿ ಅಳವಡಿಸಲಾಗಿದ್ದು, ಪ್ರೇಕ್ಷಕರಿಗೆ ಈ ಸಂಚಿಕೆಗಳು ಒಂದು ಹೊಸ ಅನುಭವವನ್ನು ನೀಡಲಿವೆ.

ಹಸೆಮಣೆ ಏರೋದು ಯಾರು?
ಹಸೆಮಣೆಯಲ್ಲಿ ಕೂರುವವರು ಯಾರು? ಅಮೃತಾನಾ? ಮಯೂರಿನಾ?...ಅರ್ಜುನ್ ಜೊತೆಗೆ ಹಸೆಮಣೆ ಏರೋದು ನಾನೇ ಎಂದು ಚಾಲೆಂಜ್ ಮಾಡಿ ಮನೆಯಿಂದ ಹೊರಬಂದಿರುವ ಮಯೂರಿ, ಈ ಮದುವೆಗೆ ತಂದಿಡುವ ಸಮಸ್ಯೆಗಳಾದರೂ ಏನು? ಮಂತ್ರವಾದಿ ಭೈರವ, ಅಮೃತಾಳ ಬಗ್ಗೆ ಅನುಮಾನಗೊಂಡು ಮದುವೆ ಮನೆಗೆ ಬಂದಾಗ ಆಗುವ ಘಟನೆಗಳೇನು?...ಈ ಎಲ್ಲಾ ಪ್ರಶ್ನೆಗಳಿಗೂ ಸೋಮವಾರದಿಂದ ಆರಂಭವಾಗುವ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ.

ಶಾಸ್ತ್ರೋಕ್ತವಾಗಿ ನಡೆಯುವ 'ನಾಗಿಣಿ' ವಿವಾಹ
ಮದುವೆಯ ಚಪ್ಪರದ ಶಾಸ್ತ್ರ, ಅರಿಶಿನ ಕುಂಕುಮ, ಕಾಶೀಯಾತ್ರೆ, ತಾಳಿಪೂಜೆ, ಅರುಂಧತಿ ನಕ್ಷತ್ರ...ಹೀಗೆ ಮದುವೆಯ ಎಲ್ಲಾ ವಿಶೇಷ ಶಾಸ್ತ್ರಗಳನ್ನು 'ನಾಗಿಣಿ'ಯ ವಿಶೇಷ ಸಂಚಿಕೆಗಳಲ್ಲಿ ಅಳವಡಿಸಲಾಗಿದೆ.

'ನಾಗಿಣಿ' ಕಲ್ಯಾಣೋತ್ಸವದ ನಂತರ...
'ನಾಗಿಣಿ' ಕಲ್ಯಾಣೋತ್ಸವದ ನಂತರ ಪ್ರೀತಿ ಮತ್ತು ಸೇಡಿನ ಕಥಾ ಹಂದರವನ್ನು ಹೊಂದಿದ್ದು, ಅರ್ಜುನ್ ಪ್ರೀತಿ ಗೆಲ್ಲುತ್ತಾ ಅಥವಾ ನಾಗಿಣಿ-ಅಮೃತಾಳ ಸೇಡು ಗೆಲ್ಲುತ್ತಾ ಎನ್ನುವುದರ ಮೇಲೆ ಕಥೆ ಹೆಣೆಯಲಾಗಿದೆ.


Click it and Unblock the Notifications











