'ದೊರೆಸಾನಿ'ಯಿಂದ ಕಿರುತೆರೆಗೆ ಎಂಟ್ರಿ ಕೊಟ್ಟ ಪೃಥ್ವಿರಾಜ್ ತಮಿಳು, ತೆಲುಗು ಸೀರಿಯಲ್ಗೆ ಹಾರಿದ್ದು ಹೇಗೆ?
ಕನ್ನಡ ಕಿರುತೆರೆಯ ಮೂಲಕ ನಟನೆಯ ನಂಟು ಬೆಳೆಸಿಕೊಂಡ ಅನೇಕ ನಟ ನಟಿಯರು ಮುಂದೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ತೀರಾ ಮಾಮೂಲಿ ಸಂಗತಿ. ಕಿಚ್ಚ ಸುದೀಪ್, ದರ್ಶನ್, ಯಶ್, ರಾಧಿಕಾ ಪಂಡಿತ್, ರಚಿತಾ ರಾಮ್, ಡಾರ್ಲಿಂಗ್ ಕೃಷ್ಣ ಹೀಗೆ ಸಿನಿಮಾದಲ್ಲಿ ಮೋಡಿ ಮಾಡುತ್ತಿರುವ ಇವರೆಲ್ಲರ ಬಣ್ಣದ ಪಯಣ ಶುರುವಾಗಿದ್ದು ಕಿರುತೆರೆಯಿಂದ.
ಇದರ ಹೊರತಾಗಿ ಇನ್ನು ಕೆಲ ನಟ ನಟಿಯರು ಕನ್ನಡ ಕಿರುತೆರೆಯ ನಂತರ ಸೀದಾ ಹಾರಿದ್ದು ಪರಭಾಷೆಯ ಕಿರುತೆರೆಗೆ. ಒಂದಷ್ಟು ಜನ ತಮಿಳು, ತೆಲುಗು ಹಾಗೂ ಮಲಯಾಳಂ ಕಿರುತೆರೆಯಲ್ಲಿ ನಟನಾ ಕಂಪನ್ನು ಪಸರಿಸುತ್ತಿದ್ದಾರೆ. ಕನ್ನಡ ಕಿರುತೆರೆ ನಟ ಪೃಥ್ವಿರಾಜ್ ಕೂಡಾ ಅಷ್ಟೇ. ಸದ್ಯ ತಮಿಳು ಹಾಗೂ ತೆಲುಗು ಕಿರುತೆರೆಯಲ್ಲಿ ತಮ್ಮನ್ನು ತಾವು ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ ಪೃಥ್ವಿರಾಜ್.

ಅಂದ ಹಾಗೇ ಪೃಥ್ವಿರಾಜ್ ಯಾರು? ಯಾವ ಧಾರಾವಾಹಿಯಲ್ಲಿ ಇವರು ನಟಿಸುತ್ತಿದ್ದರು? ಎಂಬ ಕುತೂಹಲ ಮೂಡುವುದು ಸಹಜ. 2022ರಲ್ಲಿ ಮುಕ್ತಾಯಗೊಂಡ 'ದೊರೆಸಾನಿ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದರು ಪೃಥ್ವಿರಾಜ್. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ದೊರೆಸಾನಿ' ಧಾರಾವಾಹಿಯಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು ಪೃಥ್ವಿರಾಜ್. 2021ರಲ್ಲಿ ಶುರುವಾದ ಈ ಧಾರಾವಾಹಿಯು ಕಾರಣಾಂತರಗಳಿಂದ ಕೇವಲ ಒಂದು ವರ್ಷದಲ್ಲಿಯೇ ತನ್ನ ಪ್ರಸಾರವನ್ನು ನಿಲ್ಲಿಸಿತ್ತು.
ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿರುವ ಪೃಥ್ವಿರಾಜ್ ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯೂ ಆದರು. 'ದೊರೆಸಾನಿ' ಧಾರಾವಾಹಿಯ ನಂತರ ತಮಿಳು ಕಿರುತೆರೆಗೆ ಹಾರಿದ ಪೃಥ್ವಿರಾಜ್ ಅಲ್ಲೂ ನಾಯಕನಾಗಿ ನಟಿಸಿ ಸೈ ಎನಿಸಿಕೊಂಡರು.

ಹೌದು, ಕಲರ್ಸ್ ಟಿವಿ ತಮಿಳು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಉಲ್ಲತೈ ಅಲ್ಲಿತಾ' ಎಂಬ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದರು. ಅಂದ ಹಾಗೇ ಅದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಿಥುನರಾಶಿ' ಧಾರಾವಾಹಿಯ ರಿಮೇಕ್ ಆಗಿದ್ದು, ಮಿಥುನ ರಾಶಿ ಧಾರಾವಾಹಿಯಲ್ಲಿ ನಾಯಕಿ ರಾಶಿ ಆಗಿ ನಟಿಸಿದ್ದ ವೈಷ್ಣವಿ ಅವರು ತಮಿಳು ಕಿರುತೆರೆಯಲ್ಲಿ ಪೃಥ್ವಿರಾಜ್ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡರು.
ಕನ್ನಡ, ತಮಿಳು ಧಾರಾವಾಹಿಯ ನಂತರ ಪೃಥ್ವಿರಾಜ್ ಕಾಣಿಸಿಕೊಂಡಿದ್ದು ತೆಲುಗು ಕಿರುತೆರೆಯಲ್ಲಿ. ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಾ ವಾರು ಮಾಸ್ತರು' ಧಾರಾವಾಹಿಯಲ್ಲಿ ನಾಯಕ ಗಣಪತಿ ಮಾಸ್ತರ್ ಆಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ ಪೃಥ್ವಿರಾಜ್. ಇದರ ಬೆನ್ನಲ್ಲೇ ಮಗದೊಂದು ತೆಲುಗು ಧಾರಾವಾಹಿಯಲ್ಲಿಯೂ ಇವರು ಬಣ್ಣ ಹಚ್ಚುತ್ತಿದ್ದಾರೆ.
ಹೌದು, ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಗದೊಂದು ಧಾರಾವಾಹಿ 'ಪದಮತಿ ಸಂಧ್ಯಾ ರಾಗಂ'ನಲ್ಲಿ ಶ್ರೀನು ಆಗಿ ನಟಿಸುತ್ತಿರುವ ಈ ಹ್ಯಾಂಡ್ಸಮ್ ಹುಡುಗ ಸದ್ಯ ಪರಭಾಷೆಯ ಕಿರುತೆರೆಯಲ್ಲಿಯೇ ಬ್ಯುಸಿಯಾಗಿದ್ದಾರೆ. ಕನ್ನಡ ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, ತಮಿಳು, ತೆಲುಗು ಕಿರುತೆರೆಯಲ್ಲಿ ನಟನಾ ಕಂಪನ್ನು ಪಸರಿಸುತ್ತಿರುವ ಈ ಕನ್ನಡಿಗ ಮತ್ತ್ಯಾವಾಗ ಕನ್ನಡ ಕಿರುತೆರೆಗೆ ಮರಳುತ್ತಾರೆ? ಮತ್ತೆ ಕನ್ನಡ ಧಾರಾವಾಹಿಯಲ್ಲಿ ನಟಿಸುತ್ತಾರಾ ಎಂಬುದಕ್ಕೆ ಉತ್ತರ ಸಿಗಬೇಕಿದೆ.


Click it and Unblock the Notifications











